Tuesday, September 24, 2013

 ಚತುರ್ಥ ದತ್ತಾವತಾರಿ, ಸಕಲಮತ ಸಂಪ್ರದಾಯದ ಸ್ಥಾಪಕ ಸದ್ಗುರು ಶ್ರೀ ಮಾಣಿಕಪ್ರಭು ಮಹಾರಾಜರ ಪರಂಪರೆಯ ಆರನೇಯ ತಲೆಮಾರಿನ ವಂಶಸ್ಥರು ಹಾಗೂ ಪ್ರಸಕ್ತ  ಪೀಠಾಧಿಪತಿಗಳಾದ ಶ್ರೀ ಜ್ಞಾನರಾಜ ಮಾಣಿಕಪ್ರಭು ಮಹಾರಾಜ್ ರವರು ಮೊದಲ ಬಾರಿ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಸಂದರ್ಶನ.
 

1. ನಾಲ್ಕನೇಯ ದತ್ತಾವತಾರಿಗಳಾದ ಸದ್ಗುರು ಶ್ರೀ ಮಾಣಿಕಪ್ರಭು ಮಹಾರಾಜ್ ರವರ ಹೆಸರು ಕರ್ನಾಟಕದಲ್ಲಿ ಕೇವಲ ಕೆಲ ದತ್ತಭಕ್ತರಿಗೆ ಮಾತ್ರ ಪರಿಚಿತ. ಅವರ ಬಗ್ಗೆ ಹೇಳಿ.

# 1817 ರಲ್ಲಿ ಲಾಡವಂತಿ ಗ್ರಾಮದಲ್ಲಿ ಜನಿಸಿದ ಪ್ರಭುಗಳು ಬಾಲ್ಯದಿಂದಲೇ ಅವಧೂತ ಸ್ಥಿತಿಯಲ್ಲಿದ್ದರು. ಬಾಲ್ಯದಲ್ಲೇ ಮನೆ ತೊರೆದು ಕನ್ಯಾ ಕುಮಾರಿಯಿಂದ ಕಾಶ್ಮೀರದ ವೆರೆಗೆ ಎಲ್ಲಕಡೆಗಳಲ್ಲಿ ಸಂಚರಿಸಿ .. ಅನೇಕ ಭಾಷೆ ಹಾಗೂ ವಿದ್ಯೆಗಳನ್ನು ಕಲಿತರು. 1845 ರಲ್ಲಿ ಮತ್ತೆ ಬೀದರ್ ಜಿಲ್ಲೆಗೆ ಮರಳಿ ಬಂದು ಒಂದು ಚಿಕ್ಕ ಗುಡಿಸಲಿನಲ್ಲಿ ದತ್ತಪಾದುಕೆಗಳನ್ನು ಸ್ಥಾಪಿಸಿ ಅಲ್ಲಿಯೇ ವಾಸ ಮಾಡತೊಡಗಿದರು. ಆ ಪ್ರದೇಶವೇ ಈಗ ಮಾಣಿಕನಗರ ಎಂದು ದೇಶವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಹೈದರಾಬಾದಿನ ದೊರೆಗಳಾದ ನಿಜಾಮರು ಕೂಡ ಗುಡಿಸಲಿನಲ್ಲಿದ್ದ ಪ್ರಭುಗಳ ದರ್ಶನಕ್ಕಾಗಿ ಬರುತ್ತಿದ್ದರು. ಮಾಣಿಕ ಪ್ರಭುಗಳು ಆ ಪ್ರಾಂತ್ಯದಲ್ಲಿ ಹೆಚ್ಚುತ್ತಿದ್ದ ಪರಸ್ಪರ ಮತದ್ವೇಷವನ್ನು ಹೋಗಲಾಡಿಸಿ ''ಪರಮಾತ್ಮನು ಒಬ್ಬನೇ ಹಾಗೂ ಅಖಂಡನಾಗಿದ್ದಾನೆ'' ಎಂದು ಮನವರಿಕೆ ಮಾಡಿಸಿ ''ಸಕಲಮತ ಸಂಪ್ರದಾಯ'' ವನ್ನು ಸ್ಥಾಪಿಸಿದರು. ಅವರ ಲೀಲೆಗಳು, ಅಪಾರ ಮಹಿಮೆ ಹಾಗೂ ತತ್ವಬೋಧನೆಗಳಿಂದಾಗಿ ವೀರಶೈವರು ಮಾಣಿಕಪ್ರಭುಗಳಲ್ಲಿ ಬಸವೇಶ್ವರರನ್ನು, ಸಿಖ್ಖರು ಗುರುನಾನಕರನ್ನು, ಮುಸಲ್ಮಾನರು ಮೊಹಬೂಬ್ ಸುಬ್ಹಾನಿಯನ್ನು, ಹಾಗೂ ಹಿಂದೂಗಳು ಸಾಕ್ಷಾತ್ ದತ್ತಾತ್ರೇಯನನ್ನು ಕಾಣುತ್ತಿದ್ದರು. ದ್ವೈತ ಮತ್ತು ಅದ್ವೈತಿಗಳೇಲ್ಲರೂ ಇಲ್ಲಿ ಒಂದಾಗಿದ್ದಾರೆ. ಇಂದಿಗೂ ಕೂಡ ಈ ಎಲ್ಲ ಧರ್ಮಗಳ ಭಕ್ತರು ಮಾಣಿಕ ಪ್ರಭುಗಳ ಸಮಾಧಿಯ ದರ್ಶನಕ್ಕಾಗಿ ಬರುತ್ತಾರೆ. ಹೈದರಾಬಾದ್ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಹಾಗೂ ಗುಜರಾತ್ ಮುಂತಾದ ಪ್ರಾಂತ್ಯಗಳಲ್ಲಿರುವ ಸಾವಿರಾರು ಜನರು ಸಕಲಮತ ಸಂಪ್ರದಾಯದ ಅನುಯಾಯಿಗಳಾಗಿದ್ದಾರೆ. ಪ್ರತೀ ವರ್ಷ ನಡೆಯುವ ದತ್ತಜಯಂತಿಯ ದಿನ ಒಂದು ಲಕ್ಷಕ್ಕೂ ಹೆಚ್ಚು ಜನ ಮಾಣಿಕನಗರದಲ್ಲಿ ಸೇರುತ್ತಾರೆ. ತಲೆಮಾರುಗಳಿಂದ ಗುರುಮಂತ್ರವನ್ನು ಉಪದೇಶ ಪಡೆಯುತ್ತ ಬರುತ್ತಿರುವ ಹಾಗೂ  ಈ ಸಂಪ್ರದಾಯದ ಉಪಾಸನಾ ಪದ್ಧತಿಯನ್ನು ಪ್ರತಿದಿನ ಅನುಸರಿಸುವ ಸಾವಿರಾರು ಕುಟುಂಬಗಳು ಇವೆ.

2) ನೀವು ಈಗ ಬೆಂಗಳೂರಿಗೆ ಆಗಮಿಸುತ್ತಿರುವ ಉದ್ದೇಶವೇನು.. ಎಲ್ಲಿ ಮತ್ತು ಎಷ್ಟು ದಿನ ತಂಗಲಿದ್ದೀರಿ?
# ನಮ್ಮ ಬೀದರ್ ಜಿಲ್ಲೆಯ ಸಾವಿರಾರು ಭಕ್ತರು.. ಹಾಗೂ ಮಹಾರಾಷ್ಟ್ರದ ಸಕಲಮತ ಸಾಂಪ್ರದಾಯಿಕರು ಈ ಮಹಾನಗರದಲ್ಲಿ ನೆಲೆಸಿದ್ದಾರೆ. ಅವರೆಲ್ಲರ ಕೋರಿಕೆಯ ಮೇರೆಗೆ ಈ ಎರಡುದಿನಗಳ ಯಾತ್ರೆ ಕೈಗೊಂಡಿದ್ದೇವೆ. ಭಗವದ್ಗೀತೆಯ ಬಗೆಗೆ ಪ್ರವಚನವನ್ನು ಭಕ್ತರು ಹಮ್ಮಿಕೊಂಡಿದ್ದಾರೆ. ನಾವು ನಮ್ಮ ವೈಯಕ್ತಿಕ ಮತ್ತು ಕೌಟುಂಬಿಕ ಕಾರಣಗಳಿಗಾಗಿ ಅನೇಕಬಾರಿ ಇಲ್ಲಿಗೆ ಬಂದುಹೋಗಿದ್ದರೂ ಕೂಡ ಪೀಠಾಚಾರ್ಯರಾಗಿ ಪ್ರಭುಗಳ ಪವಿತ್ರ ಪಾದುಕೆಗಳೊಂದಿಗೆ ಬೆಂಗಳೂರಿಗೆ ಆಗಮಿಸುತ್ತಿರುವುದು ಇದೇ ಮೊದಲು.

3. ಸಕಲಮತ ಸಂಪ್ರದಾಯದ ವಾಸ್ತವಿಕ ಅರ್ಥವೇನು?  ಹಾಗೂ ಹತ್ತೊಂಭತ್ತನೇಯ ಶತಮಾನದಲ್ಲಿ ಸ್ಥಾಪಿಸಿದ ಈ ಸಂಪ್ರದಾಯ ಇಂದಿನ  ಕಾಲದಲ್ಲಿ ಎಷ್ಟು ಪ್ರಸ್ತುತ?

# ವಿಭಿನ್ನತೆಗಳಿಂದ ಕೂಡಿದ ಅನೇಕ ಸಂಪ್ರದಾಯಗಳ ಏಕನಿಷ್ಠೆಯೇ ಸಕಲಮತ ಸಂಪ್ರದಾಯದ ಮೂಲ. ಈ  ಸಂಪ್ರದಾಯ ಯಾವುದೇ ಅನ್ಯ ಸಂಪ್ರದಾಯಗಳಿಗೆ ವಿರೋಧಿಯಾಗಿಲ್ಲ. ಬದಲಾಗಿ ಉಳಿದ ಎಲ್ಲ ಸಂಪ್ರದಾಯಗಳಿಗೆ ಪೂರಕವಾಗಿಯೇ ಇದೆ. ಎಲ್ಲ ಮತಗಳಲ್ಲಿ, ಸಂಪ್ರದಾಯಗಳಲ್ಲಿ ತಮ್ಮದೇ ಆದ ವಿಶಿಷ್ಟ ಸಿದ್ಧಾಂತಗಳು ಮತ್ತು ಆಚರಣೆಗಳಿರುತ್ತವೆ. ಅವುಗಳ ಹೊರತಾಗಿ ಉಳಿದವುಗಳನ್ನೆಲ್ಲ ನಿಕೃಷ್ಟವಾಗಿ, ಅಥವಾ ವಿರೋಧಿ ತತ್ವಗಳಾಗಿ ಭಾವಿಸಲಾಗುತ್ತದೆ. ಅನ್ಯ ಮತದ  ಉಪಾಸನಾ ಸಂಪ್ರದಾಯದ ಅವಲಂಬನೆ ಅಥವಾ ಅವುಗಳ ಬಗೆಗಿನ ವಿಚಾರವನ್ನು ಕೂಡ ದೋಷವೆಂದು ಪರಿಗಣಿಸಿ ನಿಷೇಧಿಸಲಾಗಿದೆ. ಆದರೆ ಜಗತ್ತಿನ ಎಲ್ಲ ಮತ-ಸಂಪ್ರದಾಯಗಳೂ ಕೂಡ ತಮ್ಮ ತಮ್ಮ ಅನುಯಾಯಿಗಳನ್ನು  ಪರಮಾತ್ಮನ ಬಳಿಗೆ ತಲುಪಿಸುವಲ್ಲಿ ಪೂರ್ಣಪ್ರಮಾಣದಲ್ಲಿ ಸಮರ್ಥವಾಗಿಯೇ ಇವೆ. ಅವುಗಳಲ್ಲಿ ಪರಸ್ಪರ ನಿಂದನೆ ಸಲ್ಲ ಎಂಬುದು ಸಕಲಮತಾಚಾರ್ಯರಾಗಿದ್ದ ಮಾಣಿಕಪ್ರಭುಗಳ ನಂಬಿಕೆ. ಏಕೆಂದರೆ, ''ಬುದ್ಧಿ''ಯು ''ಜಡ'' ವಸ್ತು. ಜಡವಾದ ಆ ಬುದ್ಧಿಯು ಪರಮಾತ್ಮರೂಪವಾದ ಚೈತನ್ಯದ ಹೊರತಾಗಿ  ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಮತ್ತು ಯಾವುದೇ ಮತ-ಸಂಪ್ರದಾಯಗಳನ್ನು ಪ್ರತಿಪಾದಿಸಲೂ ಸಾಧ್ಯವಿಲ್ಲ. ಹೀಗೆ ವಿವಿಧ ಸಿದ್ಧಾಂತಗಳ ಪ್ರತಿಪಾದನೆ ಇದ್ಧಾಗಿಯೂ ಆ ಪ್ರತಿಪಾದನೆ ಮಾಡುವ ಬುದ್ಧಿಯ ಹಿಂದಿನ ''ಚೈತನ್ಯ'' ಎಲ್ಲರಲ್ಲಿಯೂ ಒಂದೇ ಆದಕಾರಣ ಎಲ್ಲ ಮತ-ಸಿದ್ಧಾಂತಗಳೂ ಪರಮಾತ್ಮನಿಂದಲೇ ಉತ್ಪನ್ನವಾದವುಗಳು. ಅವುಗಳಲ್ಲಿ ಶ್ರೇಷ್ಠವಾದದ್ದೂ ಹಾಗೂ ನಿಕೃಷ್ಟವಾದ್ದು ಯಾವುದೂ ಇಲ್ಲ...ಎನ್ನುವ ಸಿದ್ಧಾಂತದೊಂದಿಗೆ ಸಕಲಮತ ಸಂಪ್ರದಾಯದ ಸ್ಥಾಪನೆಯಾಗಿದೆ. ಈ ಸಂಪ್ರದಾಯದಲ್ಲಿ ಯಾವುದೇ ಮತ-ಸಂಪ್ರದಾಯಗಳನ್ನು ದೋಷಪೂರಿತ ಅಥವಾ ವಿರೋಧಿ ಎಂದು ಪರಿಗಣಿಸದೇ ಅವುಗಳಲ್ಲಿನ ತತ್ವಗಳನ್ನು ಹಾಗೂ ಆಚರಣೆಗಳಲ್ಲಿನ ಗುಣದೋಷಗಳನ್ನು ಉಪಕಾರಬುದ್ಧಿಯಿಂದ ವಿಮರ್ಶಿಸಿ ''ಗುಣ''ಗಳನ್ನು ಸ್ವೀಕರಿಸಿ 'ದೋಷ''ಗಳನ್ನು ತ್ಯಾಗ ಮಾಡಲಾಗುತ್ತದೆ.

ಇನ್ನು ಈ ಸಂಪ್ರದಾಯ ಈಗಿನ ಕಾಲಕ್ಕೆ ಹೇಗೆ ಉಪಯುಕ್ತ ಮತ್ತು ಪ್ರಸ್ತುತ ಎಂದರೆ..
ಇವತ್ತಿನ ಪರಿಸ್ಥಿತಿಯಲ್ಲಿ ಎಲ್ಲೆಡೆ, ಅಸೂಯೆ, ಪರನಿಂದೆ, ಅಸಹಿಷ್ಣುತೆ, ಮತಭೇದ ಮುಂತಾದವುಗಳು ಹೆಚ್ಚು ಹರಡಿಕೊಂಡಿವೆ. ಇವೆಲ್ಲವೂ ಅಜ್ಞಾನದ ಕಾರಣದಿಂದಾಗಿಯೇ ಉಂಟಾಗಿವೆ. ಪರಮಾತ್ಮ ಎನ್ನುವ ಯಾವ ಶಾಶ್ವತ ಸತ್ಯವಿದೆಯೋ, ಅದು ಒಂದೇ. ಆ ಪರಮಾತ್ಮನ ಕಡೆಗಿನ ದಾರಿಗಳು ಬೇರೆ ಬೇರೆ ಯಾಗಿದ್ದರೂ ಕೂಡ ಎಲ್ಲ ಗುರಿ ಒಂದೇ ಆಗಿದೆ ಎಂಬ ಅರಿವು ಹಿಂದಿಗಿಂತಲೂ ಈಗ ಹೆಚ್ಚು ಬೇಕಾಗಿದೆ. ಒಂದು ವೃತ್ತವಿದೆಯೆಂದಿಟ್ಟುಕೊಳ್ಳೋಣ. ಆ ವೃತ್ತದ ಪರಿಧಿಯಿಂದ ಮಧ್ಯದ ಕೇಂದ್ರಬಿಂದುವಿನ ಕಡೆಗೆ ಎರಡು ಗೆರೆಗಳನ್ನು ದುಂಡಾಗಿ ಎಳೆಯುತ್ತಾ ಹೋದರೆ ಪರಿಧಿಯ ಬಳಿ ಆ ಎರಡೂ ಗೆರೆಗಳ ನಡುವೆ ಅಂತರ ಹೆಚ್ಚಾಗಿರುತ್ತದೆ. ಕೇಂದ್ರದ ಕಡೆಗೆ ಹೋದಂತೆಲ್ಲ ಅವುಗಳ ನಡುವಿನ ದೂರ ಕಡಿಮೆಯಾಗುತ್ತಾ ಹೋಗಿ ಕೇಂದ್ರಬಿಂದುವಿನಲ್ಲಿ ಬಂದು ಎರಡು ಸಮಾಗಮಗೊಳ್ಳುತ್ತವೆ. ಎಲ್ಲಿ ಎರಡೂ ಗೆರೆಗಳ ಪಯಣ ಮುಗಿಯುತ್ತದೆ. ಅವುಗಳ ನಡುವಿನ ಅಂತರವೂ ಇಲ್ಲವಾಗಿರುತ್ತದೆ. ಅದೇ ರೀತಿ ಈ ವಿವಿಧ ಮತಗಳು ಮತ್ತು ಸಂಪ್ರದಾಯಗಳು ಭಗವಂತನೆಂಬ ಕೇಂದ್ರದ ಕಡೆಗಿನ ರೇಖೆಗಳು. ನಾವು ಪರಿಧಿಯ ಹೊರಗೆ ನಿಂತು ನೋಡಿದಾಗ ಅವುಗಳಲ್ಲಿ ಪರಸ್ಪರ ವಿರೋಧಾಭಾಸ ಅಥವಾ ಅಂತರ ಕಂಡು ಬರುತ್ತದೆ. ಆ ಗೆರೆಗಳನ್ನು ಅನುಸರಿಸಿ ಮುಂದುವರೆದು ಕೇಂದ್ರದ ಸಮೀಪಕ್ಕೆ ಹೋಗಿ ನೋಡಿದರೆ ಎಲ್ಲ ಮಾರ್ಗಗಳೂ ಒಂದಕ್ಕೊಂದು ಬಹಳ ಹತ್ತಿವಿರುವುದು ಅನುಭವಕ್ಕೆ ಬರುತ್ತದೆ. ಹಾಗೆಯೇ ಕೇಂದ್ರಬಿಂದುವನ್ನು ತಲುಪಿದಮೇಲಂತೂ ಮಾರ್ಗಗಳೆಲ್ಲವೂ ಅದೃಶ್ಯವಾಗಿ ಬಿಂದುವೊಂದೇ ಉಳಿದಿರುತ್ತದೆ. ಇಂದಿನ ಈ ಸಮಾಜದಲ್ಲಿ ಈ ಸತ್ಯದ ಬಗೆಗಿನ ತಿಳುವಳಿಕೆ ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಭಾರತದ ಏಕತೆ ಮತ್ತು ಸಾರ್ವಭೌಮತ್ವ ಮೊದಲಿನಂತೆ ಮರಳಿ ಪಡೆಯಬೇಕಾದರೆ ಈ ತಿಳುವಳಿಕೆ ಅನಿವಾರ್ಯವಾಗಿದೆ. ವಿಶೇಷವಾಗಿ ಮತಭೇದಗಳನ್ನು ಉದ್ದೀಪಿಸಿ ರಾಜಕೀಯ ಲಾಭ ಪಡೆಯುವ ರಾಜಕಾರಣಿಗಳು ಈ ಸತ್ಯ ಅರಿತು ನಡೆದರೆ ಸಮಾಜದ ಸ್ವರೂಪವೇ ಬದಲಾಗಿ ಹೋಗುತ್ತದೆ.
4.  ಮಾರ್ತಾಂಡ ಮಾಣಿಕಪ್ರಭುಗಳವರ ಬಗ್ಗೆ ಮತ್ತು ಅವರ ತತ್ವಪದ ರಚನೆಯ ಬಗ್ಗೆ ವೇದಾಂತಿಗಳ ವಲಯದಲ್ಲಿ ಬಹಳವೇ ಪ್ರಸಿದ್ಧಿ ಇದೆ. ಅದಕ್ಕೆ ಕಾರಣವೇನು.
ಮಾಣಿಕಪ್ರಭುಗಳ ನಂತರ ಮೂರನೆಯ ಪೀಠಾಧೀಶರಾದ ಮಾರ್ತಾಂಡ ಮಾಣಿಕಪ್ರಭುಗಳು(1861-1936) ಪೀಠಸ್ಥರಾಗಿದ್ದ ಕಾಲ ಶ್ರೀ ಪ್ರಭುಸಂಸ್ಥಾನದ ಸುವರ್ಣಯುಗವೆಂದೇ ಹೇಳಬೇಕಾಗುತ್ತದೆ. ಅವರು ಅರವತ್ತು ವರ್ಷಗಳಕಾಲ ಪೀಠದ ಮೇಲಿದ್ದರು. ಆ ಕಾಲದಲ್ಲಿ ಅವರು ಶ್ರೀಪ್ರಭುಸಂದೇಶವನ್ನು ಹಾಗೂ ಈ ಸಕಲಮತಸಂಪ್ರದಾಯವನ್ನು ಭಾರತದಾದ್ಯಂತ ಪಸರಿಸುವಂತೆ ಮಾಡಿದರು. ತಮ್ಮ ವೈಯಕ್ತಿಕ ಆಧ್ಯಾತ್ಮಿಕ ಸಾಧನೆಯ ಹೊರತಾಗಿ ಸಂಪ್ರದಾಯದ ಭಕ್ತರ ಐಹಿಕ ಏಳಿಗೆ ಮತ್ತು ಪಾರಲೌಕಿಕ ಶ್ರೇಯಸ್ಸಿಗಾಗಿ ಅವಿರತವಾಗಿ ಶ್ರಮಿಸಿದರು. ಅವರು ವೇದಾಂತಶಾಸ್ತ್ರವನ್ನು ಬಹಳ ಆಳವಾಗಿ ಅಭ್ಯಾಸ ಮಾಡಿದ್ದರು. ಮಂತ್ರ ಶಾಸ್ತ್ರ, ಸಂಗೀತ, ಸಾಹಿತ್ಯ ಮುಂತಾದ ಅನೇಕ ಸಂಗತಿಗಳಲ್ಲಿ ಅಸಾಧಾರಣ ಪ್ರಾವೀಣ್ಯ ಹೊಂದಿದ್ದರು. ಅವರು ಫಾರಸೀ, ಉರ್ದೂ, ಮರಾಠೀ ಹಿಂದೀ ಮುಂತಾದ ಆರು ಭಾಷೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹಾಡುಗಳನ್ನು, ಪದ್ಯಗಳನ್ನು ರಚಿಸಿ ಅವುಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಆ ಎಲ್ಲ ಪದ್ಯಗಳಲ್ಲಿ ವೇದಾಂತದ, ಮಂತ್ರಶಾಸ್ತ್ರದ, ಆಧ್ಯಾತ್ಮದ ಗಹನವಾದ ಸಂಗತಿಗಳನ್ನು ಸರಳ ಭಾಷೆ ಮತ್ತು ಉದಾಹರಣೆಳ ಜೊತೆಗೆ ಹೇಳಿದ್ದಾರೆ. ಅವುಗಳನ್ನೆಲ್ಲ ಜನ ಇಂದಿಗೂ ಹಾಡಿಕೊಳ್ಳುತ್ತಾರೆ. ''ಈ ತತ್ವಜ್ಞಾನ ಅಥವಾ ವೇದಾಂತದ ಸಂಗತಿಗಳು ಕಹಿಯಾದ ಔಷಧಿ ಇದ್ದಂತೆ. ಕಹಿ ಔಷಧಿ ಯಾರಿಗೂ ಇಷ್ಟವಾಗುವುದಿಲ್ಲ. ಹೀಗಾಗಿ ಕಹಿ ಔಷಧಿಯಂಥ ತತ್ವಜ್ಞಾನವನ್ನು  ಜನರಿಗೆ ಕೊಡುವಾಗ  ಆಕರ್ಷಕ ಸಂಗೀತ ಮತ್ತು ಸರಳವಾದ ಹಾಡುಗಳಂತಹ ಜೇನುತುಪ್ಪವನ್ನು ಬೆರೆಸಿಯೇ ಕೊಡಬೇಕು.  ಆಗಲೇ ಅದು ಮುಟ್ಟಬೇಕಾದವರಿಗೆ ಮುಟ್ಟುತ್ತದೆ'' ಎಂದು ಅವರು ಹೇಳುತ್ತಿದ್ದರು.
ಹೀಗೆ ಸಾಮಾನ್ಯ ಜನರಿಗಾಗಿ ಭಜನೆಗಳ, ತತ್ವಪದಗಳ ರಚನೆಯಲ್ಲದೇ ವಿದ್ವಾಂಸರಿಗಾಗಿ ''ಜ್ಞಾನಮಾರ್ತಾಂಡ''  'ಸುಧಾಂಶು'  'ರಾಜಾ ಚೆ ಘರ್ ಉನ್ಹಾತ್'  ಮುಂತಾದ ವಿದ್ವತ್ಪೂರ್ಣ ಗ್ರಂಥಗಳನ್ನು ರಚಿಸಿದರು. ಅವರ ಗ್ರಂಥಗಳಿಂದ ಉಪಕೃತರಾದ ವಿದ್ವಾಂಸರು ಕಾಶಿಯಲ್ಲಿ ಅವರಿಗೆ ಗಜಾರೋಹಣದ ಸನ್ಮಾನವನ್ನೂ ಮಾಡಿದ್ದರು. ಈ ಎಲ್ಲ ಕಾರಣಗಳಿಂದಾಗಿ ಮಾರ್ತಾಂಡಮಾಣಿಕ ಪ್ರಭುಗಳ ಪ್ರಸಿದ್ಧಿ ಎಲ್ಲೆಡೆ ಹರಡಿತ್ತು ಹಾಗೂ ಇಂದಿಗೂ ದಿನೇ ದಿನೇ ಹೆಚ್ಚುತ್ತಲೇ ಹೋಗುತ್ತಿದೆ.
5. ಇಷ್ಟು ಆಳವಾದ ತಾತ್ವಿಕ ಹಾಗೂ ವೇದಾಂತ ಶಾಸ್ತ್ರದ ವಿಷಯಗಳನ್ನು ಸಾಮಾನ್ಯ ಭಾಷೆಯ ಮೂಲಕ ಅತಿ ಸಾಮಾನ್ಯ ವ್ಯಕ್ತಿಯೂ ಹಾಡಿಕೊಳ್ಳುವಂತೆ ಮಾಡಿದ ಉದಾಹರಣೆ  ಮತ್ತೆಲ್ಲಾದರೂ ಇದೆಯೇ ಅಥವಾ ಇದು ಅನ್ಯಾದೃಶವೇ?
ಇದು ಹೇಗೆಂದರೆ, ತತ್ವಜ್ಞಾನ ಬೌದ್ಧಿಕ ಮಟ್ಟದಲ್ಲಿಯೇ ಉಳಿದಾಗ ಅದನ್ನು ಸರಳವಾಗಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಾಮಾನ್ಯರಿಗೆ ತಿಳಿಸುವುದು, ಹಾಗೂ ಅವರಿಗೆ ಅದನ್ನು ಅರ್ಥಮಾಡಿಕೊಳ್ಳವುದು ಈ ಎರಡೂ ಅತ್ಯಂತ ಕಠಿಣವಾಗುತ್ತವೆ. ಆದರೆ ಅದೇ ಗಹನವಾದ ಜ್ಞಾನವನ್ನು ಚೆನ್ನಾಗಿ ಅನುಸಂಧಾನ ಮಾಡಿಕೊಂಡ  ಮಹನೀಯರಿಗೆ ಅದು ನೀರು ಕುಡಿದಷ್ಟು ಸುಲಭದ ಕೆಲಸ. ಅವರುಗಳು ಅದನ್ನು ತಮ್ಮ ದಿನನಿತ್ಯದ ಕ್ರಿಯೆಗಳಿಂದಲೂ ಅದನ್ನು ಜನರಿಗೆ ಮನವರಿಕೆ ಮಾಡಿಕೊಡಬಲ್ಲವರಾಗಿರುತ್ತಾರೆ. ಒಂದು ಪಶುವಿನ ಮುಂದೆ ಕುಳಿತು ವೇದಾಂತ ಹೇಳಿದರೆ ಅದಕ್ಕೆ ಏನೂ ತಿಳಿಯುವುದಿಲ್ಲ. ಆದರೆ ಅದೇ ಪಶುವಿನ ಹತ್ತಿರ ಹೋಗಿ ಕುಳಿತು ಪ್ರೇಮದಿಂದ ಅದರ ಮೈದಡವಿದಕೂಡಲೇ ಆ ಪಶುವೂ ಸಹ ಈ ಮನುಷ್ಯನ ಪ್ರೇಮವನ್ನು ಅನುಭವಿಸಿ ಪ್ರತಿಕ್ರಯಿಸುತ್ತದೆ.  ಹೃದಯದ ಭಾಷೆಯನ್ನು ಮಾತಾಡಿದರೆ ಅದು ಪಶುಗಳನ್ನೂ ತಲುಪುತ್ತದೆ.  ಬುದ್ಧಿಮತ್ತೆಯ ಪ್ರದರ್ಶನದ ಮಾತುಗಳು ಅಷ್ಟು ಸುಲಭವಾಗಿ ಎಲ್ಲರಿಗೂ ತಿಳಿಯುವುದಿಲ್ಲ. ಶ್ರೀ ಮಾಣಿಕ ಪ್ರಭು ಮತ್ತು ಅವರ ನಂತರದ ನಾಲ್ಕೂ ಜನ ಪೀಠಾಧಿಪತಿಗಳು ತಾವು ಅನುಭವಿಸಿ, ಸಾಕ್ಷಾತ್ಕರಿಸಿಕೊಂಡ, ಹಾಗೂ ಅಳವಡಿಸಿಕೊಂಡ ಸಂಗತಿಗಳನ್ನು ಪ್ರೇಮದ ಭಾಷೆಯಲ್ಲಿ ತಮ್ಮ ಸ್ವಂತಕ್ಕೇ ತಮ್ಮ ಅನುಭವದ ಉದ್ಗಾರ ಎಂಬಂತೆ ವಿಷಯಗಳನ್ನು ಅಭಿವ್ಯಕ್ತ ಪಡಿಸಿದ್ದಾರೆ. ಹೀಗಾಗಿ ಅದು ಜನರನ್ನು ಸರಳವಾಗಿ ತಟ್ಟುತ್ತದೆ. ಆನಂದಿತಗೊಳಿಸುತ್ತದೆ.  ಇಂತಹ ಜ್ಞಾನದಿಂದ ಕೂಡಿದ ಭಕ್ತಿಸಾಹಿತ್ಯದ ಸೃಷ್ಟಿಯ ಉದಾಹರಣೆಗಳು ಅನ್ಯ ಕೆಲ ಭಕ್ತಿಪಂಥಗಳಲ್ಲಿ ಕಂಡು ಬರುತ್ತದಾದರೂ ಅವುಗಳ ಸಂಖ್ಯೆ ಅತಿ ವಿರಳ ಎಂದು ಹೇಳಬಹುದು.

6. ಈ ಭಜನೆ-ಕೀರ್ತನೆ ಇತ್ಯಾದಿಗಳು ಭಕ್ತಿಮಾರ್ಗದ ಪ್ರಾರಂಭಿಕ ಸಾಧನಗಳು. ವೇದಾಂತ ಶಾಸ್ತ್ರ ಜ್ಞಾನಮಾರ್ಗಿಗಳ ವಿಷಯ. ಈ ಎರಡೂ ಮಾರ್ಗಳ ಸಮನ್ವಯ ಹೇಗೆ ಸಾಧ್ಯವಾಯಿತು?
ಇಲ್ನೋಡಿ, 'ಭಕ್ತಿ' ಮತ್ತು 'ಜ್ಞಾನ' ಇವು ಎರಡೂ ಬೇರೆ ಬೇರೆ ಅಥವಾ ತದ್ವಿರುದ್ಧ ವಿಷಯಗಳು ಅಲ್ಲವೇ ಅಲ್ಲ. ಅವು ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.  ಭಕ್ತಿಯಿಲ್ಲದ ಜ್ಞಾನ ಇದ್ದೂ ಇಲ್ಲದಂತೆಯೇ. ಅದೇ ರೀತಿ ಜ್ಞಾನವಿಲ್ಲದ ಮೂಢಭಕ್ತಿಯೂ ಉಪಯೋಗಕ್ಕೆ ಬರುವುದಿಲ್ಲ. ಜ್ಞಾನಮಾರ್ಗದ ಅತ್ಯಂತ ಮಹಾನ್ ವ್ಯಾಖ್ಯಾನಕಾರರಾದ ಶ್ರೀ ಶಂಕರಾಚಾರ್ಯರು ''ಮೋಕ್ಷಸಾಧನ ಸಾಮಗ್ರ್ಯಾಂ ಭಕ್ತಿರೇವ ಗರೀಯಸೀ! ಸ್ವಸ್ವರೂಪಾನುಸಂಧಾನಂ ಭಕ್ತಿರಿತ್ಯಭಿಧೀಯತೆ!!''   ಎಂದು ಹೇಳಿದ್ದಾರೆ. ಮೋಕ್ಷಸಾಧನೆಗಿರುವ ಸಾಮಗ್ರಿಗಳಲ್ಲಿ ಭಕ್ತಿಯೇ ಅತ್ಯಂತ ಶ್ರೇಷ್ಠವಾದದ್ದು ಎಂಬುದು ನಿಃಸಂದೇಹ, ಆದರೆ ಸ್ವಸ್ವರೂಪದ ಅನುಸಂಧಾನವೇ ಭಕ್ತಿಯೆನಿಸಿಕೊಳ್ಳುತ್ತದೆ ಎನ್ನುವುದು ಆ ಮಾತಿನ ಅರ್ಥ. ಇಲ್ಲಿ ಅವರು ಭಕ್ತಿ ಮತ್ತು ಜ್ಞಾನವನ್ನು ಪರಸ್ಪರ ಪೂರಕ ಎಂದೇ ಹೇಳಿದ್ದಾರೆ. ಪರಮಾತ್ಮನ ಬಗೆಗಿನ ಪ್ರೇಮ ನಮ್ಮ ಕಣ್ಣು ತೆರೆಸಿದಾಗ ಅದು ಜ್ಞಾನವೆನಿಸಿಕೊಳ್ಳುತ್ತದೆ. ಹಾಗೆಯೇ ಪರಮಾತ್ಮನ ಬಗೆಗಿನ ಜ್ಞಾನ ಪ್ರೇಮದಿಂದ ತುಂಬಿಕೊಂಡು ತನ್ನ ಕಣ್ಣುಗಳನ್ನು ಮುಚ್ಚಿಕೊಂಡಾಗ ಅದೇ ಭಕ್ತಿಯಾಗುತ್ತದೆ. ಈ ಎರಡರಲ್ಲೂ ಭೇದವಿಲ್ಲ. ಶ್ರೀ ಪ್ರಭು ಅದನ್ನು ತಮ್ಮ ರಚನೆಗಳ ಮೂಲಕ ಮತ್ತು ತಮ್ಮ ಆಚರಣೆಯ ಮೂಲಕ ಸಾರಿ ಹೇಳಿದ್ದಾರೆ.
7. ಸಮಸ್ತ ಜೀವಿಗಳಲ್ಲೂ ಆತ್ಮ ಇದೆ.  ಮನುಷ್ಯನೂ ಕೂಡ  ಒಂದು ಪ್ರಾಣಿಯೇ. ಆದರೆ ಮಾನವನಿಗೆ ಮಾತ್ರ ಜೀವನದಲ್ಲಿ ಗುರುವಿನ ಅಗತ್ಯ ಯಾಕೆ ಇದೆ?  ಅಥವಾ,  ನಿಜವಾಗಿಯೂ ಗುರುವಿನ ಅಗತ್ಯಇದೆಯೇ.?

ನಿಜ, ನೀವು ಹೇಳಿದಂತೆ ಮನುಷ್ಯನೂ ಉಳಿದ ಜೀವಿಗಳಂತೆ ಒಂದು ಜೀವಿ. ಉಳಿದೆಲ್ಲಾ ಪ್ರಾಣಿಕೋಟಿಗಳಿಗೆ ಗುರು ಇಲ್ಲ. ಆದರೆ ಮನುಷ್ಯ ಪ್ರಾಣಿಗಳಂತೆ ಪರಿಪೂರ್ಣನಾಗಿ ಹುಟ್ಟಿರುವುದಿಲ್ಲ. ಮನುಷ್ಯ ಜನ್ಮ ಅಪೂರ್ಣ ಮನುಷ್ಯ ಜನ್ಮವಾಗಿರುತ್ತದೆ. ಹೇಗೆಂದರೆ, ಇಲ್ಲಿ ನೋಡಿ, ಆನೆಯ ಮರಿ ಹುಟ್ಟುತ್ತಲೇ ಆನೆಯಾಗಿಯೇ ಹುಟ್ಟಿರುತ್ತದೆ. ಹುಲಿಯ ಮರಿ ಹುಲಿಯ ಎಲ್ಲ ಗುಣಲಕ್ಷಣಗಳನ್ನು ಪರಿಪೂರ್ಣವಾಗಿ ಪಡೆದುಕೊಂಡೇ ಹುಟ್ಟಿರುತ್ತದೆ. ಹುಟ್ಟಿದ ಮೇಲೆ ಹುಲಿಯಾಗಲಿಕ್ಕೆ ಅದಕ್ಕೆ ಯಾವುದೇ ತರಬೇತಿಗಳನ್ನು ಕೊಡುವ ಅಗತ್ಯವಿರುವುದಿಲ್ಲ. ಮೀನಿಗೆ ಯಾರೂ ಈಜುವುದನ್ನು ಕಲಿಸಿಕೊಡುವುದಿಲ್ಲ. ಪಶುಗಳು ಜನ್ಮತಃ ಪರಿಪೂರ್ಣವಾಗಿ ಪಶುತ್ವದೊಂದಿಗೇ ಹುಟ್ಟುತ್ತವೆ. ಆದರೆ ಮನುಷ್ಯ ಹಾಗಲ್ಲ. ಅವನಿಗೆ ಆರೈಕೆಯ ಅಗತ್ಯ ಇರುತ್ತದೆ. ಶಿಕ್ಷಣದ ಅಥವಾ ತರಬೇತಿಯ ಅಗತ್ಯ ಇರುತ್ತದೆ. ಹುಟ್ಟಿದ ''ಶಿಶು'' ಮನುಷ್ಯನೂ ಅಲ್ಲದ ಪ್ರಾಣಿಯೂ ಅಲ್ಲದ ಸ್ಥಿತಿಯಲ್ಲಿರುತ್ತದೆ. ಅದಕ್ಕೆ ಹಂತಹಂತವಾಗಿ ಮನುಷ್ಯತ್ವವನ್ನು ತುಂಬಬೇಕಾಗುತ್ತದೆ. ಸಂಸ್ಕಾರ, ವಿದ್ಯೆ, ಮಾಹಿತಿ ಮುಂತಾದ ಅನೇಕ ಸಂಗತಿಗಳನ್ನು ತಲೆಯಲ್ಲಿ ತಂದುಕೊಂಡ ನಂತರ ಆ ಮಾನವತ್ವ-ಪಶುತ್ವದ ಮಧ್ಯದ ಸ್ಥಿತಿಯಲ್ಲಿದ್ದ ಜೀವಿ ಮನುಷ್ಯನಂತೆ ವರ್ತಿಸತೊಡಗುತ್ತಾನೆ. ಈ ಎಲ್ಲ ಹಂತಗಳಲ್ಲಿ ಅವನಿಗೆ ಗುರುವಿನ ಅಗತ್ಯವಿರುತ್ತದೆ. ತಾಯಿಯೇ ಅವನ ಮೊದಲ ಗುರುವಾಗಿರುತ್ತಾಳೆ. ಸೈಕಲ್ ಕಲಿಯುವುದು, ಬಟ್ಟೆ ಹಾಕಿಕೊಳ್ಳುವುದು, ಓದುವುದು, ಬರೆಯುವುದರಿಂದ ಹಿಡಿದು ಪ್ರೌಢನಾದ ಮೇಲೆ ಲೌಕಿಕದ ಉನ್ನತ ಶಿಕ್ಷಣವನ್ನು ಪಡೆದು ಉದ್ಯೋಗದ ತರಬೇತಿ ಪಡೆಯುವ ವರೆಗೆ ಎಲ್ಲೆಡೆ ಗುರು ಬೇಕಾಗುತ್ತಾನೆ. ಆದರೆ ಇಂತಹ ಗುರುವಿನ ಅವಶ್ಯಕತೆ ಪಶುಗಳಿಗೆ ಇರುವುದಿಲ್ಲ. ಗುರುವು ಇಲ್ಲದೇ ನಾವು ಭಾಷೆಯನ್ನೂ ಕಲಿಯುವುದಿಲ್ಲ. ಹೀಗಿರುವಾಗ ಮನುಷ್ಯ ತನ್ನ ಮನುಷ್ಯತ್ವಕ್ಕಿಂತ ಮೇಲ್ಮಟ್ಟಕ್ಕೆ ಏರಲಿಕ್ಕೆ ಅಂದರೆ ಆತ್ಮದ ಬಗೆಗಿನ ಚಿಂತನೆಯನ್ನು ಮಾಡಲಿಕ್ಕೆ ಗುರು ಇಲ್ಲದಿದ್ದರೆ ಹೇಗೆ ಸಾಧ್ಯ..? ಗುರುವಿಲ್ಲದೇ ಆಧ್ಯಾತ್ಮವನ್ನು ತಿಳಿಯ ಹೊರಟರೆ ಅದಕ್ಕಿಂತ ಮೂರ್ಖತೆ ಮತ್ತೊಂದಿಲ್ಲ. ಸಾಮಾನ್ಯ ಮನುಷ್ಯಜೀವನವನ್ನು ನಡೆಸಲಿಕ್ಕೆ ಅನೇಕ ರೀತಿಯ ಗುರುಗಳು ಅಥವಾ ತರಬೇತುದಾರರು ಬೇಕಾಗುತ್ತಾರೆ. ಆದರೆ ಮುಮುಕ್ಷುಗಳಿಗೆ ಅಂದರೆ ಆತ್ಮಜ್ಞಾನದ ಕಡೆಗೆ ಆಸಕ್ತಿ ಇರುವವರಿಗೆ ''ಸದ್ಗುರುವಿನ'' ಅಗತ್ಯ ಇರುತ್ತದೆ. ನಿಮ್ಮ ಜೀವನದ 'ಗುರಿ' ಏನು ಎಂಬುದರ ಮೇಲೆ ನೀವು ಎಂತಹ ಗುರುವನ್ನು ಹುಡುಕಿಕೊಳ್ಳುತ್ತೀರಿ ಎನ್ನುವುದು ಆಧಾರಪಟ್ಟಿರುತ್ತದೆ.


Monday, September 23, 2013

ಆನಂದೋಬ್ರಹ್ಮ

ಹುಟ್ಟಿದ ಹಬ್ಬದಂತಹ ಸಂದರ್ಭಗಳಲ್ಲಿ ಗೆಳೆಯ ಗೆಳತಿಯರು ''ಯಾವಾಗಲೂ ಸಂತೋಷವಾಗಿರು'' ಅಂತ ಹಾರೈಸ್ತಾರೆ. ಸಂತೋಷಪಡುವುದೇ ಜೀವನದ ಗುರಿ ಅಂತ ನಾವೆಲ್ಲ ನಂಬಿದ್ದೇವೆ. ''ಸಂತೋಷ ಪಡುವುದು ಹೇಗೆ?'' ''ಜೀವನದ ಮಾಡುವ ಕಲೆ'' ಮುಂತಾದ ವಿಷಯಗಳನ್ನು ಹೇಳಿಕೊಡಲಿಕ್ಕಾಗಿಯೇ ಅನೇಕ ಜನ ಗಡ್ಡಬಿಟ್ಟುಕೊಂಡ ಗುರೂಜೀಗಳಿದ್ದಾರೆ. ''ನಿನಗೆ ಯಾವ ಕೆಲಸದಲ್ಲಿ ಸಂತೋಷ ಸಿಗುತ್ತದೆಯೋ ಆ ಕೆಲಸವನ್ನೇ ಮಾಡು'' ಅಂತ ಬೋಧಿಸು ಮ್ಯಾನೇಜ್ ಮೆಂಟ್ ಗುರುಗಳು ಎಲ್ಲ ಕಡೆ ತುಂಬಿದ್ದಾರೆ. ಇವರೆಲ್ಲರ ಬ್ಯುಸಿನೆಸ್ ಚೆನ್ನಾಗಿಯೇ ನಡೆಯುತ್ತಿದೆ. ನಾನು ಇದನ್ನೆಲ್ಲ ನೆನಪಿಗೆ ತಂದುಕೊಂಡು ''ಏನಪ್ಪಾ ಇದು..ಸಂತೋಷಪಡುವುದನ್ನೂ ಕಲಿಯುವ ಕಾಲ ಬಂತಲ್ಲ? ಇಂತಹ ಬೋಧಕರಿಲ್ಲದ, ಇಷ್ಟು ಸಂವಹನ ಸಾಧನಗಳಿಲ್ಲದ ಕಾಲದಲ್ಲಿ ಜೀವಿಸಿದ ನಮ್ಮ ಪೂರ್ವಜರು ಸಂತೋಷವನ್ನೇ ಪಡದೇ ಸತ್ತು ಹೋದರಾ..? ಅಥವಾ ಅವರು ಪಟ್ಟ ಸಂತೋಷಕ್ಕಿಂತ, ಕಲಿತುಕೊಂಡು ಪಡುತ್ತಿರುವ ಈಗಿನ ಸಂತೋಷವೇ ಶ್ರೇಷ್ಠ ಗುಣಮಟ್ಟ ಹೊಂದಿದೆಯಾ..?'' ಅಂತ ಅಲೋಚಿಸುತ್ತಿದ್ದ ದಿನಗಳಲ್ಲಿ ಸ್ನೇಹಿತೆಯೊಬ್ಬರು ಸಂತರೊಬ್ಬರು ಬರೆದ ಒಂದಷ್ಟು ಸಾಲುಗಳನ್ನು ಹಂಚಿಕೊಂಡರು. "ಸಂತೋಷವಿರಲಿ.. ಅಥವಾ ದುಃಖವೇ ಇರಲಿ, ಎಲ್ಲವನ್ನೂ ಸಂಭ್ರಮದಿಂದ ಅನುಭವಿಸುವುದನ್ನು ರೂಢಿಸಿಕೋ'' ಎಂಬರ್ಥದ ಮಾತುಗಳವು.

ಇಂತಹ ಮಾತುಗಳು ಒಂದೇ ಏಟಿಗೆ ನಮ್ಮನ್ನು ಸೆಳೆದು ''ಹೌದಲ್ವಾ.?'' ಅಂತನ್ನಿಸುವಂತೆ ಮಾಡಿಬಿಡುತ್ತವೆ. ಅವುಗಳನ್ನು ಕಾರ್ಯರೂಪಕ್ಕೆ ತರುವ ಉಮೇದಿಯೂ ಮೂಡುತ್ತದೆ. ಆದರೆ ಅದರಲ್ಲಿ ಎಲ್ಲರೂ ಸಫಲರಾಗುವುದಿಲ್ಲ. ಅದರಲ್ಲಿ ವಿಫಲರಾದವರು ಅಥವಾ ವಿಫಲವಾಗುವ ಸೂಚನೆಯನ್ನು ಹೊಂದಿದವರು  ''ಇಂತಹ ಮಾತುಗಳು ಕೇಳಲಿಕ್ಕಷ್ಟೇ ಚೆಂದ,  ದುಃಖ ಬಂದರೂ ಸಂಭ್ರಮದಿಂದ ಅನುಭವಿಸಲಿಕ್ಕೆ ಹೇಗೆ ಸಾಧ್ಯ..?'' ಎಂಬಂತಹ ಪ್ರಶ್ನೆಗಳನ್ನು ಮುಂದಿಡುತ್ತಾರೆ. ಅಥವಾ ನಮ್ಮ ಮನಸ್ಸೇ ಅಂತಹ ಪ್ರಶ್ನೆಯನ್ನು ಕೇಳುತ್ತದೆ. ಹೀಗೇಕೆ ಅಂದರೆ,  ಇಂತಹ ಮಾತುಗಳನ್ನಾಡುವ ಸಂತರು ಅಥವಾ ಅವರಂತಹ ಅನುಭಾವಿಗಳು ಎಲ್ಲರೂ ಬೇರೆ ಯಾವುದೋ ವಿಷಯವನ್ನು ಮಂಡಿಸುವಾಗ ಪೂರಕವಾಗಿ ಇಂತಹ ಮಾತುಗಳನ್ನು ಹೇಳಿರುತ್ತಾರೆ, ಮತ್ತು ಅವರು ತಮ್ಮ ವೈಯಕ್ತಿಕ  ಅನುಭವದ ನೆಲಗಟ್ಟಿನಲ್ಲಿ ಹೇಳಿರುತ್ತಾರೆ. ಅವರು ಅಂತಹುದನ್ನು ಅನುಭವಿಸಿರುತ್ತಾರೆ. ಆದರೆ, ಅವರಂತೆ ಅನುಭವದ ಹಿನ್ನೆಲೆ ಇರದ ನಾವು, ಆ ಮಾತಿನ ಜೊತೆಗೆ ಅವರು ಹೇಳಿದ ಹಿಂದು-ಮುಂದಿನ ಸಂಗತಿಗಳನ್ನೆಲ್ಲ ಬದಿಗೊತ್ತಿ ನಮಗೆ ಆಕರ್ಷಕವಾಗಿ ಕಂಡ ಆ ಮಾತನ್ನು ಮಾತ್ರ ಎತ್ತಿಕೊಂಡು ಅದನ್ನು ಅಳವಡಿಸಿಕೊಳ್ಳುವುದೋ ಅಥವಾ ವಿಮರ್ಶೆಯನ್ನೋ ಮಾಡಿದಾಗ  ''ಇಂತಹ ಮಾತುಗಳು ಕೇಳಲಿಕ್ಕಷ್ಟೇ ಚೆಂದ'' ಅನ್ನಿಸುತ್ತೆ. ಆನಂದ ಅನ್ನೋದು ಮರೀಚಿಕೆ ಅಂತ ಮನಸಿಗೆ ಅನ್ನಿಸುತ್ತೆ. ಆದರೆ ವಾಸ್ತವವಾಗಿ ಆನಂದ ಅಥವಾ ಸಂತೋಷದ ಮೂಲವಿರುವುದು ಆತ್ಮದಲ್ಲಿ

ಪಶ್ಚಿಮದೇಶಗಳ, ಆಂಗ್ಲಭಾಷೆಯ ಮೇಲೆ ಅವಲಂಬಿತ ''ವಿಜ್ಞಾನ'' ಮನುಷ್ಯನ ದೇಹದಲ್ಲಿಯ ಆತ್ಮದ ಅಸ್ತಿತ್ವವನ್ನು ಇನ್ನೂ ಅರಿತಿಲ್ಲ, ಹೀಗಾಗಿ ಆತ್ಮದ ಮರುಹುಟ್ಟಿನ ವಿಷಯದಲ್ಲೂ ಆ ವಿಜ್ಞಾನ ಇನ್ನೂ ಅಜ್ಞಾನಿಯೇ. ಆದರೆ ''ಧೃವಂ ಜನ್ಮ ಮೃತಸ್ಯ ಚ'' ಎಂಬ, ಅಂದರೆ ''ಯಾವುದು ಸಾಯುತ್ತದೆಯೋ ಅದರ ಮರುಹುಟ್ಟು ಖಚಿತ'' ಎಂಬ ''ವಾಸ್ತವ'' ವನ್ನು ಹಿಮಾಲಯದ ಇಳಿಜಾರಿನಿಂದ ದಂಡಕಾರಣ್ಯದವರೆಗೆ ವಾಸಿಸುತ್ತಿದ್ದ ಜನರು ಸಾವಿರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು. ಅವರೆಲ್ಲರೂ ''ಚೈತನ್ಯ''ದ ಮೂಲಸ್ವಭಾವಕ್ಕೆ ಮರಳುವ ನಿಟ್ಟಿನಲ್ಲಿ ಶ್ರಮಿಸತೊಡಗಿದರು. ಹೀಗಾಗಿ ಅವರು ತಾವು ವಾಸಿಸುವ ಪ್ರದೇಶಕ್ಕೆ ''ಭಾರತ'' ಅನ್ನುವ ಹೆಸರು ಇಟ್ಟುಕೊಂಡಿದ್ದರು. 
"ಭಾಃ''
ಅಂದರೆ ಬೆಳಕು. ಬೆಳಕು ಕೊಡೋ ಸೂರ್ಯನಿಗೆ ನಾವು ''ಭಾಸ್ಕರ'' ಅಂತೀವಲ್ಲಾ.. ಅದು ಇದೇ ಕಾರಣಕ್ಕೆ. ಹಾಗೆಯೇ ಸೃಷ್ಟಿಯ ಮೂಲಚೈತನ್ಯವಾದ ಆತ್ಮದ ಸ್ವರೂಪವೂ ಬೆಳಕು. ಆ ಬೆಳಕನ್ನು ಪಡೆಯುವುದರಲ್ಲಿ  ನಿರತವಾಗಿರುವ ಅಥವಾ ಆಸಕ್ತವಾಗಿದ್ದ ಜನರು ತಮ್ಮನ್ನು ತಾವು ''ಭಾರತೀಯರು'' ಅಂತ ಕರೆದುಕೊಂಡರು. ''ಭಾಸಿ, ಭಾಯಾಂ ವಾ ರತಃ ಭಾರತಃ''  ಮತ್ತು ''ಭಾರೂಪಂ ಪರಂ ಬ್ರಹ್ಮ, ತಸ್ಮಿನ್ ಭಾರೂಪೇ ಬ್ರಹ್ಮಣಿ ರತಃ, ಸಕ್ತಃ = ಭಾರತಃ"!  ಎಂಬೆರಡು ವ್ಯುತ್ಪತ್ತಿಗಳು ಭಾರತ ಶಬ್ದದ ಅರ್ಥವನ್ನು ಸ್ಪಷ್ಟಪಡಿಸುತ್ತವೆ. 

ಹೀಗೆ ಹುಟ್ಟು ಸಾವಿನ ಚಕ್ರಲ್ಲಿರುವ ಆತ್ಮನಿಗೆ ''ಮನುಷ್ಯದೇಹ'' ಬರುವುದು ಹುಟ್ಟಸಾವಿನ ಚಕ್ರದಿಂದ ಬಿಡುಗಡೆಗಿರುವ ಏಕೈಕ ಅವಕಾಶ, ಹೀಗಾಗಿ ''ಆ ನಿಟ್ಟಿನ ಪ್ರಯಾಸವೇ ಮನುಷ್ಯಜೀವನದ ಧ್ಯೇಯೋಧ್ಯೇಶಗಳಾಗಿರಬೇಕು'' ಅನ್ನೋದು ಭಾರತೀಯ ತತ್ವಶಾಸ್ತ್ರಗಳ ಸಾರಾಂಶವಾಗಿದ್ದರೂ ಕೂಡ  ಆ ತತ್ವ ಎಲ್ಲರ ಗಮನಕ್ಕೆ ಬರುವುದೇ ಇಲ್ಲ.  ಗಮನಕ್ಕೆ ಬಂದರೂ ತಕ್ಷಣ ಮರೆತು ಹೋಗುವಷ್ಟು ಜಗತ್ತು ಭ್ರಾಮಕತೆಯ ಸೆಳೆತಕ್ಕೆ ಎಳೆದುಕೊಂಡಿರುತ್ತದೆ. ಹೀಗಾಗಿ ಸಂತೋಷದ ಹುಡುಕಾಟದಲ್ಲಿ ಮನುಷ್ಯ ಊರಿನಿಂದ ಊರಿಗೆ, ಸಂಬಂಧಗಳಿಂದ ಸಂಬಂಧಗಳಿಗೆ, ಕೆಲಸಗಳಿಂದ ಕೆಲಸಕ್ಕೆ ಅಲೆಯುತ್ತಾ ತಾತ್ಕಾಲಿಕ engagement ಗಳಲ್ಲಿ ಮನಸ್ಸನ್ನು ದುಡಿಸುತ್ತಾ ಆಯುಷ್ಯ ಕಳೆಯುತ್ತಾನೆ. ಹೀಗಾಗಿ ಒಳ್ಳೆಯ ಜೀವನ ಅಂದ್ರೆ ಏನು ಅಂತ ಇಲ್ಲಿಯ ವರೆಗೂ ಯಾರಿಗೂ ಸರಿಯಾಗಿ ಹೇಳಲಿಕ್ಕೆ ಸಾಧ್ಯವಾಗಿಲ್ಲ.

ವಾಸ್ತವವಾಗಿ ಆನಂದ ಅಥವಾ ಸಂತೋಷದ ಮೂಲವಿರುವುದು ಆತ್ಮದಲ್ಲಿ. ಈ ಆತ್ಮವನ್ನೇ ಅಥವಾ ಆತ್ಮದ ಅಸ್ತಿತ್ವವನ್ನೇ ''ಅಹಂ'' ಅಥವಾ ''ನಾನು'' ಎಂದು ಕರೆಯೋದು. ಕರ್ಮಗಳನ್ನು ಮಾಡುವುದು ಮತ್ತು ಅವುಗಳ ಫಲವನ್ನು ಅಪೇಷ್ಕಿಸುವುದು ''ನಾನು'' ಅಲ್ಲ.  ಈ ಎರಡೂ ಕೆಲಸಗಳನ್ನು ಮಾಡುವುದು ಮನಸ್ಸು ಮತ್ತು ಬುದ್ಧಿ. ಈ "ನಾನು'' ಎನ್ನುವುದು ಮನಸ್ಸು, ದೇಹ, ಬುದ್ಧಿ ಮತ್ತು ಚಿತ್ತಗಳಿಗೆ ಹೊರತಾದದ್ದು. ಸ್ಡಲ್ಪ ಗಮನಿಸಿ ನೋಡಿ. ನನ್ನ ದೇಹ, ನನ್ನ ಮನಸ್ಸು, ನನ್ನ ಬುದ್ಧಿ.. ನನ್ನ ಚಿತ್ತ ಹೀಗೆ ನಾವು ಹೇಳುತ್ತೇವೆ. ''ನಾನು'' ಎನ್ನುವುದು ಎಲ್ಲದಕ್ಕೂ ಸಾಕ್ಷಿ. ಅದು ಏನೂ ಮಾಡುವುದಿಲ್ಲ. ಮನಸ್ಸು, ದೇಹ, ಬುದ್ಧಿ ಮತ್ತು ಚಿತ್ತಗಳಿಗೆ ಹೊರತಾದ ಒಂದು ಅಸ್ತಿತ್ವ ನಮ್ಮಲ್ಲಿದೆ. ನಾವು ಥೇಟರಿನಲ್ಲಿ ಕುಳಿತು ಸಿನೆಮಾ ನೋಡುವಂತೆ ಆ ಅಸ್ತಿತ್ವ(existence) ನಮ್ಮ ಮನಸಿನ, ಬುಧ್ಧಿಯ ವೃತ್ತಿಗಳನ್ನು ಗಮನಿಸುತ್ತಿರುತ್ತದೆ. ಅದು ನಮ್ಮ ಅನುಭವಕ್ಕೆ ಯಾಕೆ ಬರುವುದಿಲ್ಲವೆಂದರೆ, ನಮ್ಮ ಮನಸ್ಸು ಬುದ್ಧಿ ಮುಂತಾದವುಗಳು ಸದಾಕಾಲ active ಆಗಿರುತ್ತವೆ. ಅವುಗಳೆಲ್ಲವನ್ನೂ deactivate ಮಾಡಿದರೆ ಅಥವಾ ಸ್ತಬ್ಧಗೊಳಿಸಿದರೆ ಆ ಆತ್ಮದ ಅಸ್ತಿತ್ವದ ಅನುಭವವಾಗುತ್ತದೆ. ಆ ಅನುಭವವೇ  ಬ್ರಮ್ಹಾನಂದ. ಆ ಬ್ರಮ್ಹಾನಂದದ ಒಂದು ಸಣ್ಣ sample ನಮ್ಮ ಸುಷುಪ್ತಿ( ಕನಸುಗಳಿಲ್ಲದ ಗಾಢ ನಿದ್ರೆ) ಅವಸ್ಥೆ. ಆದರೆ ಆ ಅವಸ್ಥೆ ನಮ್ಮ ಹಿಡಿತದಲ್ಲಿಲ್ಲ. ಅದು ತನ್ನಿಂತಾನೆ ಶುರುವಾಗುತ್ತದೆ ಮತ್ತು ತನ್ನಷ್ಟಕ್ಕೇ ಮುಗಿದು ಹೋಗುತ್ತದೆ. ಆ ಸ್ಥಿತಿಯನ್ನು ಮುಂದುವರೆಸಿಕೊಂಡು ಹೋಗಲು ನಮ್ಮಿಂದಾಗುವುದಿಲ್ಲ.

ಆ ಆತ್ಮ ಯಾವಾಗಲೂ ಅನಂದದಿಂದ ಇರುತ್ತದೆ. ಈ ಸುಖ- ದುಃಖ ಅನ್ನೋದು ಮನಸಿನ ಒಂದು ಪ್ರವೃತ್ತಿಯಷ್ಟೇ. ಸಂಸ್ಕೃತದಲ್ಲಿ "ಖ'' ಅಂದರೆ ಇಂದ್ರಿಯ. ''ಸುಖ'' ಅಂದರೆ ಇಂದ್ರಿಯಗಳಿಗೆ ಸಹ್ಯವಾದದ್ದು, ಒಗ್ಗುವಂಥದ್ದು ಅಥವಾ ಬೇಕಾದದ್ದು. ಅದೇ ರೀತಿ ''ದುಃಖ'' ಇಂದ್ರಿಯಗಳಿಗೆ ಬೇಡವಾದದ್ದು ಅಥವಾ ಅಸಹ್ಯವಾದದ್ದು. ಮನಸ್ಸು ಕೂಡ ಒಂದು ಇಂದ್ರಿಯವೆಂದೇ ಹೇಳಲಾಗಿದೆ. ಸತ್ವ, ರಜ ಮತ್ತು ತಮ ಈ ಮೂರು ಪ್ರಕೃತಿದತ್ತ ಗುಣಗಳಿಗೆ ಅನುಗುಣವಾಗಿ ಈ ಮನಸ್ಸೆಂಬ ಇಂದ್ರಿಯ ಕೆಲಸ ಮಾಡುತ್ತೆ. ಈ ಮೂರು ಗುಣಗಳಲ್ಲಿ ಯಾವ ಗುಣವನ್ನು ಹೆಚ್ಚಿಕೊಳ್ಳಬೇಕು, ಯಾವುದನ್ನು ಕಡಿಮೆ ಮಾಡಿಕೊಳ್ಳಬೇಕೆಂಬುದನ್ನು ನಮ್ಮ ಬುದ್ಧಿಯಿಂದ ಚಿಂತಿಸಿ ಅದರ ಅನುಗುಣವಾಗಿ ಅವುಗಳಲ್ಲಿ ಏರು ಪೇರು ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ಆದರೆ ಮನಸ್ಸನ್ನು ಕೆಲಸ ಮಾಡದಂತೆ ತಡೆಯುವುದು ಬುದ್ಧಿಗೆ ಅಸಾಧ್ಯ. ಆತ್ಮ ಈ ಎಲ್ಲ ವ್ಯವಹಾರಗಳಲ್ಲಿ ತಲೆ ತೂರಿಸುವುದೇ ಇಲ್ಲ. ಅದು ''ಸಾಕ್ಷೀ, ಚೇತಾ, ಕೇವಲೋ ನಿರ್ಗುಣಶ್ಚ''. ಅದು ಕೇವಲ ಸಾಕ್ಷಿ, ಚೈತನ್ಯ, ಕೇವಲ ಮತ್ತು ನಿರ್ಗುಣ. ಅದಕ್ಕೆ ಸಾತ್ವಿಕ, ರಾಜಸಿಕ, ತಾಮಸಿಕ ಗುಣಗಳಿಲ್ಲ. ಅದೇ ಎಲ್ಲದರ ಮೂಲ ಚೈತನ್ಯ. ಅದನ್ನೇ ಸಚ್ಚಿದಾನಂದ ಅನ್ನೋದು. ಸತ್+ ಚಿತ್ + ಆನಂದ = ಸಚ್ಚಿದಾನಂದ. 
 ಸತ್ = ಯಾವಾಗಲೂ ಇರುವುದು. ಚಿತ್ = ಬೆಳಕಿನ ರೂಪದಲ್ಲಿರುವುದು. ಆನಂದ= ಆನಂದವೇ ತಾನಾಗಿರುವುದು.
ಇವು ಮೂರು ಆತ್ಮದ ಗುಣ, ಸ್ವರೂಪ ಮತ್ತು ಸ್ವಭಾವಗಳು. ಅದರ ''ಗುಣ'' ಅನಂತವಾದರೆ, ಚಿತ್ ಅದರ ''ಸ್ವರೂಪ'' ಮತ್ತು ಅದರ ''ಸ್ವಭಾವ'' ಆನಂದ.

ಆತ್ಮದ ಮೂಲಸ್ವಭಾವೇ ಆನಂದವಾಗಿರುವಾಗ ನಮಗೆ ಯಾಕೆ ಯಾವಾಗಲೂ ಆನಂದದ ಅನುಭೂತಿಯಾಗುವುದಿಲ್ಲ? ಅನ್ನುವ ಪ್ರಶ್ನೆ ಇಲ್ಲಿ ಹುಟ್ಟುತ್ತೆ.
ಹದಿನೆಂಟನೇ ಶತಮಾನದ ದಾರ್ಶನಿಕರೊಬ್ಬರು ತಮ್ಮ ಸರಳವಾದ ಪದ್ಯದ ಮೂಲಕ ಈ ಪ್ರಶ್ನೆಗೆ ಉತ್ತರಿಸಿದ್ದಾರೆ.  
ಮನ ಕಂಜಾಲ್  ಹೈ ಚೇತನ ಜಲ ಕಾ
ಜಲ ಕೀ ನ ಲಾಭ ನ ಹಾನಿ ಹೈ ತಿನಕಾ

ಒಂದು ದೊಡ್ಡ ಸರೋವರದಲ್ಲಿ ನೀರಿನ ಮೇಲೆ ಜಮೆಯಾಗಿರುವ ಕಸ, ಕಡ್ಡಿ, ಪಾಚಿ ಮುಂತಾದವುಗಳಿಂದ ಒಂದು ತೆಳುವಾದ ಪದರ ನಿರ್ಮಾಣವಾಗಿರ್ತದೆ. ದಂಡೆಯ ಮೇಲೆ ನಿಂತು ನೋಡುವವನಿಗೆ ಅದು ಸಮತಟ್ಟಾದ ಪಾಚಿಯ ಅಥವಾ ಕಸದ ರಾಶಿಯಂತೆಯೇ ಕಾಣುತ್ತದೆ. ಆದರೆ ಆ ಕಸದ ಪರದೆಯ ಕೆಳಗೆ ಆಳವಾದ, ಶುದ್ಧವಾದ, ನಿರ್ಮಲವಾದ ನೀರು ತುಂಬಿರ್ತದೆ. ಈ ದಾರ್ಶನಿಕರು ಆತ್ಮವನ್ನು ಆಳವಾದ ಸರೋವರದ ನೀರಿಗೆ ಮತ್ತು ಆ ಕಸದ ಮೇಲ್ಪರದೆಯನ್ನು ಮನಸ್ಸಿಗೆಹೋಲಿಸಿದ್ದಾರೆ. ಅವರು ಮುಂದುವರೆದು, ''ಜಲ ಕಿ ನ ಲಾಭ ನ ಹಾನಿ ಹೈ ತಿನಕಾ'' ಈ ಕಸದ ಮೇಲ್ಪರದೆಯಿಂದ ಆ ನೀರಿಗೆ ಯಾವುದೇ ಲಾಭವಿಲ್ಲ ಮತ್ತು ಯಾವುದೇ ಹಾನಿಯೂ ಇಲ್ಲ ಅಂದಿದ್ದಾರೆ. ನೀರು ತನ್ನ ಮೇಲೆ ಯಾವುದೇ ಕಸವನ್ನು ಬಯಸುವುದಿಲ್ಲ, ಮತ್ತು ಅದಾಗಿಯೇ ಬಂದು ಬಿದ್ದರೂ ಕೂಡ ಮುಳುಗುವಂಥದ್ದನ್ನು ಮುಳುಗಿಸಿ, ತೇಲುವಂಥದ್ದನ್ನು ತೇಲಿಸಿ ನೀರು ತನ್ನ ಶುಧ್ಧತೆಗೆ ತಾನು ಮರಳಿ ತನ್ನ ಅಸ್ತಿತ್ವದಲ್ಲಿ ತಾನಿರುತ್ತದೆ. ಒಂದುವೇಳೆ ಮೇಲಿನ ಕಸದ ಪರದೆ ಹೊರಟುಹೋಗಿ ಬಿಸಿಲು ಬಿದ್ದರೆ ಆ ನೀರು ಆವಿಯಾಗಿ ಮತ್ತೊಂದು ಕಡೆ ಹೂಗುತ್ತದೆಯೇ ಹೊರತು ಆ ನೀರಿನ ಅಸ್ತಿತ್ವಕ್ಕ ಭಂಗ ಎಂದಿಗೂ ಬರುವುದಿಲ್ಲ. ಬೇರೆ ಬೇರೆ ರೂಪಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ಆ ನೀರು ಸಂಚರಿಸುತ್ತಲೇ ಇರುತ್ತದೆ. ಆದರೆ ಆ ನೀರು ಎಂದಿಗೂ ''ಇಲ್ಲ'' ಅಂತಾಗುವುದಿಲ್ಲ. ಅದು ಯಾವಾಗಲೂ ''ಇರುತ್ತದೆ''.  ಅಂತಹ ಅಸ್ತಿತ್ವವೇ ಆದ ಆನಂದರೂಪಿಯಾದ ಆತ್ಮದ ಮೇಲೆ ಈ ''ಕಂಜಾಲ್'' ಅಂದರೆ ಕಸಕಡ್ಡಿಯಿಂದ ನಿರ್ಮಿತವಾದ ''ಮನಸ್ಸೆಂಬ ಮೇಲ್ಪದರ'' ಇರುವುದರಿಂದಾಗಿ ''ನಾನು'' ಅಂದರೆ ''ನನ್ನ ಮನಸ್ಸು'' ಎನ್ನುವ ಭ್ರಮೆಯನ್ನು ಉಂಟಾಗಿರ್ತದೆ. ಆ ಮನಸ್ಸೆಂಬ ''ಕಂಜಾಲ್'' ಅಂದರೆ ಕಸದಂತಹ ಮೇಲ್ಪರದೆಯನ್ನು  ಸರಿಸಿ ಇಣುಕಿ ಹಾಕಿದರೆ ಶುದ್ಧವಾದ ಆಳ ನೀರಿನಂತಹ ಆತ್ಮದ ಅನುಭವ ಉಂಟಾಗ್ತದೆ.
ಪ್ರಕೃತಿಯಿಂದ ಗ್ರಹಿಸಿದ ಮೂರು ಗುಣಗಳ ಆಧಾರದ ಮೇಲೆ ಕೆಲಸ ಮಾಡುವ ಮನಸ್ಸು ಜಾಗೃತಿ ಮತ್ತು ಸ್ವಪ್ನ ಈ ಎರಡೂ ಅವಸ್ಥೆಗಳಲ್ಲಿ ನಿರಂತರವಾಗಿ ಕಾರ್ಯಶೀಲವಾಗಿರುತ್ತದೆ. ಲೋಕದ ಸಂಗತಿಗಳ, ವಿಷಯಗಳ ಸಂಪರ್ಕಕ್ಕೊಳಗಾಗುತ್ತಿದ್ದಂತೆಯೇ ಮೂರರಲ್ಲಿ ಯಾವ ಗುಣ ಪ್ರಬಲವಾಗಿದೆಯೋ ಅದಕ್ಕೆ ತಕ್ಕಂತೆ ಆ ವಿಷಯ-ವಸ್ತುವನ್ನು ಬಯಸುತ್ತದೆ. ಮನಸಿನ ಬಯಕೆಯನ್ನು ಬುದ್ಧಿ ಪರಾಮರ್ಶಿಸುತ್ತದೆ. ಬುದ್ಧಿಯ ಪರಾಮರ್ಶೆಯನ್ನು ಗಮನಿಸಿದ ಚಿತ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ಚಿತ್ತದ ನಿರ್ಧಾರಕ್ಕೆ ಅನುಗುಣವಾಗಿ ಅಂಗಾಂಗಗಳು ಕೆಲಸ ಮಾಡಲು, ಪ್ರತಿಕ್ರಯಿಸಲು ಶುರು ಮಾಡುತ್ತವೆ.ಅಂಗಾಂಗಗಳ ಕ್ರಿಯೆಗೆ ಸಿಗುವ ಪ್ರತಿಕ್ರಿಯೆಯನ್ನು ಗಮನಿಸಿದ ಮನಸ್ಸು ತನ್ನ ಮುಂದಿನ ಬಯಕೆಯನ್ನು ಮುಂದಿಡುತ್ತದೆ. ಬುದ್ಧಿ ಮತ್ತೆ ಪರಾಮರ್ಶಿಸುತ್ತದೆ..  ಇವೆಲ್ಲಾ ಕ್ಷಣಾರ್ಧಕ್ಕಿಂತಲೂ ವೇಗವಾಗಿ ನಡೆದು ಹೋಗುತ್ತವೆ. ಹೀಗೆ ಮನಸ್ಸು, ಬುದ್ಧಿ, ಚಿತ್ತ ಮತ್ತು ಶರೀರ ಇವೆಲ್ಲ ನಿರಂತರವಾಗಿ ಬಿಡುವಿಲ್ಲದೇ ಕಾರ್ಯಪ್ರವೃತ್ತವಾಗಿರುತ್ತವೆ. ಈ ಮನಸು-ದೇಹಗಳ  ಚಟುವಟಿಕೆ ವೃತ್ತದಂತೆ ತಿರುಗುತ್ತಲೇ ಇರುತ್ತದೆ.  ವಿಷಯದಿಂದ ವಿಷಯಕ್ಕೆ, ದೃಶ್ಯದಿಂದ ದೃಶ್ಯಕ್ಕೆ ಮನಸ್ಸು ಹಾರುತ್ತಲೇ ಇರುತ್ತದೆ.

ಆನಂದರೂಪಿಯಾದ ಆತ್ಮ ಎನ್ನುವುದು ಹುಣ್ಣಿಮೆ ಚಂದ್ರನಂತಾದರೆ ಈ ಮನಸ್ಸು ಒಂದು ಪಾತ್ರೆಯಲ್ಲಿರುವ ನೀರಿನಂತೆ. ಪಾತ್ರೆಯಲ್ಲಿರುವ ನೀರು ಯಾವುದೇ ಚಲನೆಯಿಲ್ಲದೇ ಶಾಂತವಾದಾಗ ಚಂದ್ರನಂತಹ ಆತ್ಮದ ಪ್ರತಿಬಿಂಬ ಆ ನೀರಿನ ಪಾತ್ರೆಯಲ್ಲಿ ಮೂಡುತ್ತದೆ. ''ಅಂದರೆ ಯಾವಾಗಲೂ ಇರುವ ಆನಂದವನ್ನು  ಸ್ವಲ್ಪ  ಹೊತ್ತಿನ ಮಟ್ಟಿಗೆ ಮನಸ್ಸು ಪ್ರತಿಫಲಿಸುತ್ತದೆ.'' ಮನಸ್ಸು ಪಾತ್ರೆಯಲ್ಲಿರುವ ನೀರಿನಂತೆ ಹೋಯ್ದಾಡುವಾಗ ಆ ಪ್ರತಿಬಿಂಬ ಕಾಣಿಸುವುದಿಲ್ಲ. ಆದರೆ ಆ ಚಂದ್ರ ಯಾವಾಗಲೂ ಅಲ್ಲಿಯೇ ಇರುತ್ತಾನೆ. ಮನಸ್ಸೆಂಬ ನೀರು ಸ್ಥಿರವಾದಕೂಡಲೇ ಬಿಂಬ ಕಾಣಿಸುತ್ತದೆ. ನೀರಿನಲ್ಲಿ ತೆರೆಗಳು ಮೂಡಿದ ಕೂಡಲೇ ಬಿಂಬ ಕಾಣಿಸುವುದಿಲ್ಲ. ಮನಸ್ಸಿನಲ್ಲಿನ ಪ್ರೀತಿ, ಕರುಣೆ, ಕೋಪ ಮುಂತಾದ ಭಾವನೆಗಳು ಎಂಬ ವಿಭಾಗ ಕೂಡ ಗುಣಗಳನ್ನು ಆಧರಿಸಿದ್ದು. (ಈ  emotion ಗಳ ಪ್ರಮಾಣವನ್ನು ಅಳೆಯುವ ವಿಧಾನವನ್ನು ಆಧುನಿಕ ವಿಜ್ಞಾನ ಕಂಡುಕೊಂಡಿದೆ) ಮನಸ್ಸನ್ನು ಹೇಗೆ ಚೆನ್ನಾಗಿ ಇಟ್ಟುಕೊಳ್ಳಬೇಕು, ಮನಸ್ಸಿನ ಬೆಳವಣಿಗೆ ಹೇಗಾಗುತ್ತದೆ, ಮನಸ್ಸಿನ ಸ್ವಭಾವವೇನು, ಎಂತಹ ಘಟನೆಗೆ ಮನಸ್ಸು ಹೇಗೆ ಪ್ರತಿಕ್ರಯಿಸುತ್ತದೆ..?  ಮುಂತಾದ ಸಂಗತಿಗಳನ್ನು ಮನಃಶಾಸ್ತ್ರ ತಿಳಿಸಿಕೊಡುತ್ತದೆಯಾದರೂ ಮನಸ್ಸಿಗೆ ಸಂತೋಷವಾಗಲು ಕಾರಣವಾಗುವ ''ಮೂಲ'' ವಸ್ತುನ್ನು ಗುರುತಿಸುವಲ್ಲಿ ಅದೂ ಕೂಡ ವಿಫಲವಾಗುತ್ತದೆ.
ಈ ಮನಸ್ಸಿನ ಭಾವನೆಗಳು ತರಂಗಗಳಂತೆ ಏಳುತ್ತ ಶಾಂತವಾಗುತ್ತ ಇರುವಾಗ ನಡು ನಡುವೆ ಅಸ್ಪಷ್ಟವಾದ ಆನಂದದ ಅನುಭೂತಿ ಎಲ್ಲ ಜೀವಿಗಳಿಗೂ ಆಗುತ್ತಲೇ ಇರುತ್ತದೆ. ಜೀವನದಲ್ಲಿ ಎಷ್ಟೇ ಕಷ್ಟಗಳಿಂದ ಬೇಸತ್ತು ಹೋಗಿದ್ದರೂ, ಅನಾರೋಗ್ಯ ಅಥವಾ ಅಪಘಾತದಿಂದ ಹಾಸಿಗೆ ಹಿಡಿದು ಪರಾಧೀನವಾಗಿ, ಶರೀರ ಸಂಪೂರ್ಣವಾಗಿ ಜೀರ್ಣವಾಗಿ ಹೋಗಿದ್ದರೂ ಮನುಷ್ಯನಲ್ಲಿ  ಆ ಅನಂದದ ಅನುಭೂತಿಯಿಂದಾಗಿಯೇ ''ಜಿಜೀವಿಷಾ'' ಅಂದರೆ ಜೀವಿಸುವ ಆಸೆ ಉಳಿದುಕೊಂಡಿರುತ್ತದೆ. ಮನುಷ್ಯ ಏನೇ ಆದರೂ ಸಾಯಲು ಇಚ್ಛೆ ಪಡುವುದಿಲ್ಲ. ಯಾಕೆಂದರೆ ಜೀವನದಲ್ಲಿ ಎಷ್ಟೇ ಕಷ್ಟವಿದ್ದರೂ ಮನಸ್ಸಿನಲ್ಲಿ ಆಗಾಗ ಆಗುವ ಆತ್ಮದ ಪ್ರತಿಫಲದ ಆನಂದ ಮನುಷ್ಯನನ್ನು ಬದುಕಿರುವಂತೆ ಮಾಡುತ್ತಿರುತ್ತದೆ. ಮನಸ್ಸು ಸಂಪೂರ್ಣವಾಗಿ ನಿಷ್ಕ್ರಿಯವಾಗಿರದ ಕಾರಣ ''ಪೂರ್ಣಾನಂದ'' ಅಥವಾ ಬ್ರಹ್ಮಾನಂದದ ಅನುಭವವಾಗುವುದಿಲ್ಲ ಅಷ್ಟೇ. (ಅತಿಯಾಗಿ ಉದ್ರೇಕಗೊಂಡ ಮನಸ್ಥಿತಿಯಲ್ಲಿ ಆತ್ಮಹತ್ಯೆ ಸಂಭವಿಸುತ್ತದೆ, ಆದರೆ ಆ ಉದ್ರೇಕವನ್ನು ಸ್ವಲ್ಪ ನಿಯಂತ್ರಿಸಿದರೆ ಸಾಕು, ಒಂದೆರಡು ಕ್ಷಣಗಳಲ್ಲಿ  ಮತ್ತೆ ಜಿಜೀವಿಷಾ ಶುರುವಾಗುತ್ತದೆ.)
ಮನಸ್ಸಿನ emotion ಗಳನ್ನೇ ನಾವು ಜೀವನದ ''ಸುಖ'' ಎನ್ನುವ ಅಭಿಪ್ರಾಯ ಹೊಂದಿರುವುದುರಿಂದ ಕೇವಲ ಮನಸ್ಸನ್ನು ಕೇಂದ್ರದಲ್ಲಿಟ್ಟುಕೊಂಡು ನಮ್ಮ ಜೀವನವನ್ನು ನಡೆಸುತ್ತಿದ್ದೇವೆ. man is nothing but mind ಅನ್ನುವುದು ಪಶ್ಚಿಮದ ಆಲೋಚನೆ. ಭಾರತದ ಆಲೋಚನೆ ಮತ್ತು ಸಂಶೋಧನೆ ಅದಕ್ಕಿಂತ ಎಷ್ಟೋ ಮುಂದಿದೆ. ಆದರೂ ನಾವು ನಮ್ಮವರ ವಿಚಾರಗಳಿಂದ disconnect ಆಗಿದ್ದೇವೆ.
 '' ಪ್ರಪಂಚದಲ್ಲಿ ಮೊದಲು ಪೂರ್ವದ ಚಿಂತನೆ, ಪಶ್ಚಿಮದ ಚಿಂತನೆ ಎನ್ನುವ ಎರಡು ವಿಭಿನ್ನ ವರ್ಗಗಳಿದ್ದವು. ಆದರೆ ಈಗೆ ಎಲ್ಲಾ ಒಂದೇ ಆಗಿದೆ. ಪೂರ್ವವೂ ಕೂಡ ಪಶ್ಚಿಮವೇ ಆಗಿ ಹೋಗಿದೆ. ಪಶ್ಚಿಮವೇ ಎಲ್ಲ ದಿಕ್ಕಿಗೂ ಹರಡಿದೆ'' ಅನ್ನುವ ಮಾತನ್ನು ಓಶೋ ಮೂವತ್ತು ವರ್ಷಗಳ ಹಿಂದೆಯೇ ಹೇಳಿಯಾಗಿದೆ. ಇಂತಹ ಪಶ್ಚಿಮದ ಪ್ರಭಾವದ, ಶಿಕ್ಷಣ, ಮಾಹಿತಿ ಮತ್ತು ಪ್ರೇರಣೆಗಳನ್ನು ಪಡೆಯುತ್ತಲೇ ಬೆಳೆಯುವ ವ್ಯಕ್ತಿ ''ಪೂರ್ವ''ದ ಚಿಂತನೆಯ ತಲೆ-ಬುಡ ಅರ್ಥ ಮಾಡಿಕೊಳ್ಳುವಲ್ಲಿ ವಿಫಲನಾಗುತ್ತಿದ್ದಾನೆ. it's completely foreign for us now.
ಈ ಮೊಬೈಲ್ ಫೋನಿನ ಮೆಮೊರಿ ಕಾರ್ಡನ್ನು Format ಮಾಡುವಂತೆ ನಮ್ಮ ಮುಂಚಿನ ಗ್ರಹಿಕೆ, ಶಿಕ್ಷಣದ ಪ್ರಭಾವ ಮುಂತಾದವುಗಳನ್ನೆಲ್ಲ ಅಳಿಸಿ ಹಾಕಿ Unlearn ಮಾಡಿಕೊಂಡು ಹೊಸದಾಗಿ ನಾವು ಪೂರ್ವದ ಚಿಂತನೆಯ ಪರಿಚಯ ಮಾಡಿಕೊಂಡರೆ ಈ ಆತ್ಮ ಮತ್ತು ಆತ್ಮಾನಂದದ ಸಂಗತಿಗಳೆಲ್ಲ ಸ್ವಲ್ಪ ಮಟ್ಟಿಗೆ ತಿಳಿದಾವು.

ಇನ್ನು ಸಂತೋಷ ಅಥವಾ ನೆಮ್ಮದಿಯ ವಿಷಯಕ್ಕೆ ಮರಳುವುದಾದರೆ ಈ ದುಃಖ, ಸುಖ ಇವುಗಳೆಲ್ಲ ಕೇವಲ ಇಂದ್ರಿಯಗಳಿಗೆ ಸಂಬಂಧಿಸಿದ್ದು, ''ನಾನು'' ಈ ಇಂದ್ರಿಯಗಳಿಗೆ ಮತ್ತು ಮನಸ್ಸಿಗೆ ಹೊರತಾದ ಅಸ್ತಿತ್ವ ಎನ್ನುವ ಅನುಸಂಧಾನವನ್ನು ಬುದ್ಧಿಗೆ ಮನದಟ್ಟು ಮಾಡಿಸಿ ಚಿತ್ತವನ್ನು ಪಳಗಿಸಿಟ್ಟುಕೊಂಡರೆ  ನಮ್ಮದೇ ಶರೀರದ ಸುಖ-ದುಃಖ ಮತ್ತು ನಮ್ಮದೇ ಮನಸ್ಸಿನ emotion ಗಳನ್ನು ಥೇಟರಿನಲ್ಲಿ ಕುಳಿತು ಪರದೆಯ ಮೇಲಿನ ಚಿತ್ರಗಳನ್ನು ನಿರ್ಲಿಪ್ತವಾಗಿ ನಾವು ಹೇಗೆ ನೋಡಿ ಆನಂದಿಸುತ್ತೇವೆಯೋ ಹಾಗೆ ನಿರ್ಲಿಪ್ತವಾಗಿಯೇ ಉಳಿದು ಆನಂದಿಸಬಹುದು.

Friday, September 6, 2013

ರಾಮ ಬರುತ್ತಿದ್ದಾನೆ


ಅವತ್ತು ರಾತ್ರಿ ಅಯೋಧ್ಯೆಯೇ ನಿಃಶಬ್ದವನ್ನು ಹೊದ್ದು ಮಲಗಿದಂತಿದೆ. ಆದರೆ ಶ್ರೀಹಿತನಿಗೆ ಮಾತ್ರ ಕಣ್ಣು ಮುಚ್ಚಿಲಿಕ್ಕಾಗುತ್ತಿಲ್ಲ. ಮೆತ್ತಗಿನ ಹಾಸಿಗೆಯಲ್ಲಿದ್ದರೂ ಅದು  ಮುಳ್ಳಿನಿಂದ ಕೂಡಿದೆಯೇನೋ ಏಂಬಂತೆ ಹೊರಳಾಡುತ್ತಿದ್ದಾನೆ. ನಿದ್ರಿಸುವ ಪ್ರಯತ್ನಗಳೆಲ್ಲ ವಿಫಲವಾಗಿ ಎದ್ದು ಕುಳಿತುಕೊಳ್ಳುತ್ತಾನೆ. ಅಷ್ಟರಲ್ಲೇ ದೂರದಲ್ಲಿ ಯಾರೋ ರೋದಿಸುತ್ತಿರುವ ಶಬ್ದ ಕೇಳಿಬಂತು. ಮಂಚ ಇಳಿದು ಆ ಧ್ವನಿ ಬಂದ ಕಡೆಗೆ ಹೋಗಿ ನೋಡಿದರೆ ಒಬ್ಬ ಸ್ತ್ರೀ ಸರಯೂ ನದಿಯ ದಂಡೆಯ ಮೇಲೆ ಕುಳಿತು ಅಳುತ್ತಿದ್ದದ್ದು ಕಾಣಿಸಿತು.  “ಯಾರಮ್ಮ ನೀನು? ಯಾಕೆ ಅಳುತ್ತಿದ್ದೀ’’ ಅಂತ ಕೇಳಿದ.  “ನಾನು ನಿದ್ರಾದೇವಿ..  ನಿನ್ನನ್ನು ಸಮೀಪಸಲಿಕ್ಕೆ ಸಾಧ್ಯವಾಗದೇ ಅವಮಾನಭಾರದಿಂದ ಅಳುತ್ತಿದ್ದೇನೆ’’ ಅಂದಳು.  ಅವಳ ಅಳುವಿಗೆ ಸರಯೂ ನದಿಯ ಗಲಗಲ ಶಬ್ದ ಉಪಶೃತಿಯಂತೆ ಕೇಳುತ್ತಿದೆ. ಶ್ರೀಹಿತನಿಗೆ ಏನು ಹೇಳಬೇಕೆಂದು ತೋಚದೇ ನಿಂತುಬಿಟ್ಟ.  ಅಷ್ಟರಲ್ಲೇ ಅವನಿಗೆ ಎಚ್ಚರವಾಯಿತು. ತಾನು ತನ್ನ ಹಾಸಿಗೆಯಲ್ಲೇ ಇರುವುದು ಹಾಗೂ ಅಲ್ಲಿಯವರೆಗಿನದ್ದೆಲ್ಲಾ ಕನಸೆಂದು ಮನವರಿಕೆಯಾಯಿತು. ಆದರೆ ಅಷ್ಟರಲ್ಲೇ ಒಂದು ಅನುಮಾನ. ನಿದ್ರೆ ಬರದೇಹೋದರೆ ಕನಸೇ ಬೀಳುವುದಿಲ್ಲವಲ್ಲ? ಹಾಗಾದರೆ ಅದು ನಿಜವಾಗಿಯೂ ಕನಸಾಗಿತ್ತಾ ?ಅಥವಾ ಅದು ತನ್ನದೇ ಭಾವಾವೇಶದಿಂದ ಉಂಟಾದ ಭ್ರಮೆಯಾ? ಎಲ್ಲವೂ ಸಂದಿಗ್ಧವಾಗಿದೆ. ಈ ಸಂದಿಗ್ಧತೆ ಎಚ್ಚರದಿಂದುಂಟಾದದ್ದು. ಸಂದಿಗ್ಧತೆಯಿಂದಾಗಿ ಯಾವ ಕ್ರಿಯೆಯನ್ನೂ ಸರಿಯಾಗಿ ಮಾಡಲಾಗುತ್ತಿಲ್ಲ. ಕಾಲು ಒಂದುಕಡೆ ನಿಲ್ಲುತ್ತಿಲ್ಲ. ಕಾಲು ನಿಂತರೂ ಮನಸು ನಿಲ್ಲುತ್ತಿಲ್ಲ.  ಹೌದು ಮತ್ತೆ.... ಅವನ ಆ ಹೊಯ್ದಾಟಕ್ಕೆ ಕಾರಣವಿದೆ.  ರಾಮ ಬರುತ್ತಿದ್ದಾನಂತೆ. ಸೀತಾ-ಲಷ್ಮಣ ಸಮೇತನಾಗಿ ಪುಷ್ಪಕವಿಮಾನವೇರಿ ಬರುತ್ತಿದ್ದಾನಂತೆ. ರಾವಣಸಂಹಾರ ಮಾಡಿ, ವನವಾಸ ಮುಗಿಸಿಕೊಂಡು ಅಯೋಧ್ಯೆಗೆ ಮರಳಿ ಬರುತ್ತಿದ್ದಾನಂತೆ.                                            

                                                ******************** 

ಶ್ರೀಹಿತನಿಗೆ ಈಗ ಇಪ್ಪತ್ತರ ಹರೆಯ. ಅವನ ತಾಯಿ ಕೈಕೇಯಿ ಮಹಾರಾಣಿಯ ಅಂತಃಪುರದ ಪ್ರಮುಖ ಪರಿಚಾರಕಿ. ತಂದೆ ಅರಮನೆಯ ರಥ ಓಡಿಸುವವ. ರಾಮ ಕಾಡಿಗೆ ಹೊರಟಾಗ ಇವನಿಗೆ ಆರು ವರ್ಷ ವಯಸ್ಸು. ಅರಮನೆ ದಾಸಿಯರ ಜೊತೆ ಗುಳಿಮಣೆ ಆಟ ಹಾಗೂ ಅವರ ಮಕ್ಕಳ ಜೊತೆ ಮರಕೋತಿಯಾಟ ಆಡಿ ದಣಿದು ಮಲಗುತ್ತಿದ್ದ. ಅವನಿಗೆ ಚೆನ್ನಾಗಿ ನೆನಪಿದೆ. ಆ ದಿನ ಅವನ ಜೊತೆಗೆ ಆಟಕ್ಕೆ ಯಾರೂ ಬರಲಿಲ್ಲ. ಇವನು ಕರೆದರೂ ಕೂಡ ಯಾರೂ ಇವನನ್ನು ಮಾತಾಡಿಸಲೂ ಇಲ್ಲ. ಎಲ್ಲರೂ ದುಃಖದಲ್ಲಿ ಮುಳುಗಿದ್ದಾರೆ. ಆಟಕ್ಕೆ ಯಾರೂ ಬಾರದ್ದರಿಂದ ಅವನಿಗೆ ತಡೆಯಲಾಗದಷ್ಟು ಕೋಪ. ಯಾರ ಮೇಲೋ ತಿಳಿಯದ ಆಕ್ರೋಷ. ಬಿಕ್ಕುತ್ತ ಅಮ್ಮನ ಕೋಣೆಗೆ ಹೋದ. ಅಲ್ಲಿ ಒಂದು ಮೂಲೆಯಲ್ಲಿ ಕುಳಿತು ಅಮ್ಮ ಕೂಡ ಅಳುತ್ತಿದ್ದಳು. ಅಮ್ಮನನ್ನು ಮಾತಾಡಿಸಬೇಕಂಬಷ್ಟರಲ್ಲಿ ಅಂತಃಪುರದ ವೀಧಿಯಿಂದ ಎನೋ ಕಲರವ ಕೇಳಿಬಂತು. ಕುತೂಹಲದಿಂದ ಓಡುತ್ತಾ ಹೊರಬಂದ. ಅಲ್ಲಿ ಕಂಡ ದೃಶ್ಯವನ್ನು ಅವನು ತನ್ನ ಜೀವನದಲ್ಲಿ ಮುಂದೆಂದೂ ಮರೆತಿಲ್ಲ.  ನಾರುಬಟ್ಟೆಗಳನ್ನುಟ್ಟ ರಾಮ ಸೀತೆಯ ಜೊತೆ ನಡೆದು ಬರುತ್ತಿದ್ದಾನೆ. ಲಕ್ಷ್ಮಣ ಅವರನ್ನು ಅನುಸರಿಸುತ್ತಿದ್ದಾನೆ. ಇಡೀ ಅಯೋಧ್ಯೆಯೇ ಆ ಮೂವರನ್ನು ಹಿಂಬಾಲಿಸುತ್ತಿದೆ.  ಶ್ರೀಹಿತ ಕಣ್ಣುಗಳನ್ನು ದೊಡ್ಡವು ಮಾಡಿ ನೋಡಿದ. ಅವನ ಎಳೆಯ ಮನಸಿಗೆ ಅರ್ಥವಾಗಲಿಲ್ಲ. ಹಿಂತಿರುಗಿ ಓಡಿ ಅಮ್ಮನ ಬಳಿ ಸೇರಿ “ ಅಮ್ಮಾ.. ಎಲ್ರೂ ಊರು ಬಿಟ್ಟು ಹೋಗ್ತಾ ಇದಾರೆ.. ನೋಡೇ” ಅಂದ.  ಅವನ ಅಮ್ಮ ಅವನನ್ನು ಬಾಚಿ ತಬ್ಬಿ ಭೋರೆಂದು ಅಳತೊಡಗಿದಳು.ಅವಳ ಅಳುವಿಗೆ ಇನ್ನೂ ಒಂದು ಕಾರಣವಿದೆ.
ಇಡೀ ಅಯೋಧ್ಯೆಯಲ್ಲಿ ಕೈಕೇಯಿಯನ್ನು ಬಯ್ಯದವರಿಲ್ಲ. ಅಂತಹ ಕೈಕೇಯಿಯ ಪ್ರಮುಖ ಪರಿಚಾರಕಿ ಆದ್ದರಿಂದ ಶ್ರೀಹಿತನ ಅಮ್ಮನಿಗೂ ಅನೇಕರಿಂದ ಅಪಮಾನವಾಗಿತ್ತು. ಶ್ರೀಹಿತನಿಗೆ ಅಮ್ಮನ ದುಃಖಕ್ಕೆ ಕಾರಣ ತಿಳಿಯಲಿಲ್ಲ. ಯಾಕೆ, ಏನು? ಒಂದೂ ತಿಳಿಯದೇ ಅಮ್ಮನ ಜೊತೆಗೂಡಿ ತಾನೂ ಧ್ವನಿಯೆತ್ತಿ ಅಳತೊಡಗಿದ.

ಆ ಘಟನೆ ನಡೆದ ಮೇಲೆ ಹದಿನಾಲ್ಕು ವರ್ಷಗಳು ಉರುಳಿ ಹೋಗಿವೆ ಈಗ. ಶ್ರೀಹಿತ ಈಗ ಬಾಲಕನಾಗಿ ಉಳಿದಿಲ್ಲ. ಆದರೆ ಕಳೆದ ಆ ಹದಿನಾಲ್ಕು ವರ್ಷಗಳಲ್ಲಿ ರಾಮನ ಬಗೆಗಿನ ಕಥೆಗಳನ್ನೆಲ್ಲ ಕೇಳುತ್ತ ಪುಳಕಗೊಳ್ಳುತ್ತಲೇ ಬೆಳೆದಿದ್ದಾನೆ. ಊಹೆ ವಾಸ್ತವಕ್ಕಿಂತಲೂ ಹೆಚ್ಚು ಸುಂದರವಲ್ಲವೇ..? ಹೀಗಾಗಿ ಕೇಳಿದ ಕಥೆಗಳಿಗಿಂತ ಸುಂದರವಾದ ಕಲ್ಪನೆಗಳನ್ನು ಕಣ್ತುಂಬಿಸಿಕೊಂಡಿದ್ದಾನೆ.
ರಾಮ ಕಲ್ಲನ್ನು ಅಹಲ್ಯೆಯಾಗಿಸಿದ ಕಥೆಯನ್ನು ಬಾಯಿಬಿಟ್ಟುಕೊಂಡು ಕೇಳಿದ್ದ. ಗುಂಪು ಗುಂಪಾಗಿ ಬರುವ ಅಸುರರನ್ನು ಚೆಂಡಾಡುತ್ತಿರುವ ಧೀರ ರಾಮನನ್ನು ತನ್ನ ಕಣ್ತುಂಬ ಊಹಿಸಿಕೊಂಡು ನಿದ್ರೆಗೆಟ್ಟಿದ್ದ. ಹೀಗೆ ಶ್ರೀಹಿತನ ವಯಸ್ಸಿನ ಜೊತೆಯೇ ರಾಮನೂ ಕೂಡ ಅವನ ಮನಸ್ಸಿನಲ್ಲಿ ಬೆಳೆದು ತುಂಬ ಔನ್ನತ್ಯದಲ್ಲಿ ನಿಂತಿದ್ದಾನೆ. ಅಂತಹ ರಾಮ ನಾಳೆ ಅಯೋಧ್ಯೆಗೆ ಮರಳಿ ಬರುತ್ತಿದ್ದಾನಂತೆ. ಇವನಿಗೆ ನಿದ್ದೆಯಾದರೂ ಹೇಗೆ ಬಂದೀತು..?   ಅವನು ಹಾಸಿಗೆಯಿಂದೆದ್ದು ಹೊರಬಂದ
                                                              ********************

ಶ್ರೀಹಿತನಿಗೆ ಅಯೋಧ್ಯೆಯ ಮೇಲೆ ತುಂಬಾ ಕೋಪ ಬರುತ್ತಿದೆ. ರಾಮ ಬರಲಿರುವ ಹಿಂದಿನ ರಾತ್ರಿಯೂ ಕೂಡ ಎಲ್ಲರೂ ಎಷ್ಟು ಆರಾಮಾಗಿ ನಿದ್ರಿಸುತ್ತಿದ್ದಾರಲ್ಲ ಅನ್ನೋದು ಅವನ ಕೋಪಕ್ಕೆ ಕಾರಣ. ರಾಮ ಬರುವುದು ವಿಳಂಬವಾದ ಕಾರಣಕ್ಕೆ ಭರತ ಹಿಂದಿನ ದಿನವೇ ಅಗ್ನಿಪ್ರವೇಶ ಮಾಡಹೊಟಿದ್ದ. ಅಷ್ಟರಲ್ಲಿಯೇ ಹನುಮಂತ ಹಾರಿಬಂದು ಭರತನನ್ನು ತಡೆದು ರಾಮಾಗಮನದ ಸಂದೇಶವನ್ನು ತಿಳಿಸಿ ಅಯೋಧ್ಯೆಯನ್ನು ಹರ್ಷದಲ್ಲಿ ಮುಳುಗಿಸಿದ್ದ.
ಆ ಕ್ಷಣದಿಂದಲೇ ಅಯೋಧ್ಯೆಯಲ್ಲಿ ಯಾರಿಗೂ ನಿದ್ರಾಹಾರಗಳ ಪರಿವೇ ಇಲ್ಲ. ಎಲ್ಲರೂ ಸೇರಿ ನಗರವನ್ನು ಸಿಂಗರಿಸುದರಲ್ಲಿ ಮಗ್ನರಾಗಿದ್ದರು.
ಕೌಸಲ್ಯೆಯ ಕಣ್ಣಲ್ಲಿ ಹನಿಮುತ್ತುಗಳ ಸಾಲು, ಸುಮಿತ್ರೆಯ ಕಣ್ಣುಗಳಲ್ಲಿ ಮಣಿದೀಪಗಳು ಬೆಳಗುತ್ತಿದ್ದರೆ, ಕೈಕೇಯಿಯ ಮೈಯೆಲ್ಲ ಕಣ್ಣಾಗಿ ಹೋಗಿದೆ. ಮೂರೂ ಜನ ತಾಯಂದಿರು ತಮ್ಮ ಕಣ್ಣುಗಳ ದೀಪಗಳ ಬೆಳಕಿನಿಂದ ರಾಮ ಬರಲಿರುವ ದಾರಿಯನ್ನು ಬೆಳಗತೊಡಗಿದ್ದರು. 
ಭವನಗಳಿಗೆ ಸುಣ್ಣ ಬಣ್ಣ ಬಳಿಯಲಾಯಿತು. ರಸ್ತೆಗಳನ್ನೆಲ್ಲ ತೊಳೆದು ರಂಗೋಲಿಯ ಚಿತ್ತಾರಗಳಿದ ಸಿಂಗರಿಸಿದರು. ಒಂದೇ ಮಾತಿನಲ್ಲಿ ಹೇಳುವುದಾದರೆ ರಾಮನಾಗಿ ಅವತರಿಸಿದ ವಿಷ್ಣುವನ್ನು ಬಿಟ್ಟಿರಲಾರದ ಆದಿಶೇಷ ಅಯೋಧ್ಯೆಗೆ ಬಂದು ತನ್ನ ಶರೀರವನ್ನು ಕೋಟೆಯಾಗಿಯೂ, ಹೆಡೆಗಳನ್ನು ರಾಜಸೌಧಗಳನ್ನಾಗಿಯೂ ಮಾಡಿಕೊಂಡು ನಿಂತಿರುವಂತೆಯೂ ಅಯೋಧ್ಯಾ ನಗರ ಇತ್ತು. ಆದರೆ ಆ ಆದಿಶೇಷನ ಒಡೆಯನಾದ ರಾಮ ಮಾತ್ರ ನಗರ ಬಿಟ್ಟು ಕಾಡಿಗೆ ಹೊರಟು ಹೋಗಿದ್ದ. ಅಂದು ಹತಾಶನಾಗಿದ್ದ ಆದಿಶೇಷನೂ ಕೂಡ ಇಂದು ರಾಮಾಗಮನ ವಾರ್ತೆಯನ್ನು ಕೇಳಿ ಮೈಕೊಡವಿ ಪೊರೆ ಬಿಟ್ಟು ಮತ್ತೆ ಮಿರಿಮಿರಿ ಮಿಂಚುತ್ತಿರುವಂತಿದೆ. ಭವನಗಳ ದೀಪಗಳು ಆದಿಶೇಷನ ಹೆಡೆಯಲ್ಲಿನ ಮಣಿಗಳಂತೆ ಕಂಗೊಳಿಸುತ್ತಿವೆ.
ಎಲ್ಲಿ ನೋಡಿದರಲ್ಲಿ ಮಕರ ತೋರಣಗಳೂ, ಗಂಧ ಸೂಸುವ ಮಾಲೆಗಳೂ, ಕಸ್ತೂರಿ ಬೆರೆಸಿದ ನೀರಿನಿಂದ ಸಾರಿಸಿದ ಅಂಗಳಗಳೂ, ಅವುಗಳಲ್ಲಿನ ಮುತ್ತಿನ ರಂಗೋಲಿಗಳೂ ಶೋಭಿಸುತ್ತಿವೆ. ಸಡಗರದ ಕೆಲಸಗಳಿಗೆ ಅಡ್ಡ ಬರುತ್ತಾರೆ ಅನ್ನುವ ಕಾರಣಕ್ಕೆ ತಾಯಂದಿರು ತಮ್ಮ ತಮ್ಮ ಚಿಕ್ಕ ಮಕ್ಕಳಿಗೆ ಬೇಗನೇ ಸ್ತನ್ಯ ಕೊಟ್ಟು ಮಲಗಿಸುವ ಭರದಲ್ಲಿ  ''ಲಾಲೀ..ಲಾಲೀ.. ಮೇಘಶ್ಯಾಮ ಲಾಲೀ..ತಾಮರಸನಯನಾ ಲಾಲೀ..  ದಶರಥ ನಂದನ ಲಾಲೀ.. ರಾಮ ಲಾಲೀ'' ಅಂತ ಹಾಡತೊಡಗಿದರು. ನಿಧಾನವಾಗಿ ನಿದ್ರೆಗೆ ಜಾರುತ್ತಿದ್ದ ಕಂದಮ್ಮಗಳು ಲಾಲಿಹಾಡಿನಲ್ಲಿ ''ರಾಮ'' ಶಬ್ದ ಕಿವಿಗೆ ಬಿದ್ದಕೂಡಲೇ ಬೆಚ್ಚಿದಂತೆ ಕಣ್ಣುಗಳನ್ನು ತೆಗೆದು ಎದ್ದು ಕೂರುತ್ತಿದ್ದಾರೆ. ತಾಯಂದಿರೂ ಕೂಡ ರಾಮಮನನ್ನು ಕಾಣಲೋಸುಗ ಕಾತರರಾಗಿದ್ದಾರೆ. ಹೀಗೆಯೇ ಇದು ಕಳೆದೆರಡು ದಿನಗಳಿಂದ ಇಡೀ ಅಯೋಧ್ಯೆಯಲ್ಲಿ ನಡೆಯುತ್ತಿದೆ.
ಹೀಗೆ ಅಯೋಧ್ಯೆಯನ್ನಲಂಕರಿಸಿದ ಪ್ರಜೆಗಳೆಲ್ಲರೂ ಈಗ ಗಾಢನಿದ್ರೆಗೆ ಜಾರಿರುವಂತೆ ತೋರುತ್ತಿದೆ.  ಪುರವೀಧಿಗಳೆಲ್ಲ ಬಿಕೋ ಎನ್ನುತ್ತಿವೆ. ಆ ನಿರ್ಜನ ವೀಧಿಗಳಲ್ಲಿ ಹಾದು ಬಂದ ಮಧ್ಯರಾತ್ರಿಯ ತಂಗಾಳಿ ಶ್ರೀಹಿತನಿಗೆ ಸೋಕಿ ಮುಂದೆ ಹೋಗುತ್ತಿದೆ. ಆ ಗಾಳಿ ದಕ್ಷಿಣದಿಂದ ಬರುತ್ತಿದೆ. ಎಷ್ಟೋ ಯೋಜನಗಳ ದೂರದಲ್ಲಿರುವ ರಾಮನನ್ನು ಕೂಡ ತಾಕಕೊಂಡು ಬಂದ ಗಾಳಿ ಇದಾಗಿರಬಹುದು ಎಂಬ ಆಲೋಚನೆ ಮನಸಿನಲ್ಲಿ ಮೂಡಿತು. ಆ ಆಲೋಚನೆಯಿಂದಲೇ ಶ್ರೀಹಿತನಿಗೆ ಶರೀರ ಕಂಪಿಸಿದಂತಾಗಿ ರೋಮಾಂಚವಾಯಿತು.


ಅವನಿಗೆ ಆಗ ಒಂಟಿಕಾಲಿನ ಬೀರನ ನೆನಪಾಯಿತು. ವೀರೇಶ ಎಂಬ ಅವನ ಹೆಸರು ಅಪಭ್ರಂಶವವಾಗಿ ''ಬೀರ'' ಅಂತಾಗಿತ್ತು.   ರಾಮನೆಂದರೆ ಬೀರನಿಗೆ ಎಲ್ಲಿಲ್ಲದ ಭಕ್ತಿ. ಮರದ ಮೇಲೆ ಹತ್ತಿಕುಳಿತು  ಸುತ್ತಲೂ ಗೆಳೆಯರನ್ನು ಕೂರಿಸಿಕೊಂಡು ಶಿವಧನುಸ್ಸನ್ನು ರಾಮ ಮುರಿದ ಕಥೆಯನ್ನು ಅಭಿನಯಪೂರ್ವಕವಾಗಿ ಹೇಳುವಾಗ ಮರದಿಂದ ಧೊಪ್ಪನೆ ಬಿದ್ದಾಗ ಅವನದೊಂದು ಕಾಲು ಮುರಿದಿತ್ತು.  ಅಂದಿನಿಂದ ಗೆಳೆಯರೆಲ್ಲ ಅವನನ್ನು ಕುಂಟಬೀರ ಅಂತಲೇ ಕರೆಯುತ್ತಿದ್ದರು. ಅದರಲ್ಲಿಯೂ ಕೂಡ ಅವನು ಸಂತೋಷ ಕಾಣುತ್ತಿದ್ದ. ಕುರುಡು ಕಾಗೆಗಿಂತ ತಾನು ಎಷ್ಟೋ ಭಾಗ್ಯವಂತ ಅನ್ನುತ್ತ ಕುಂಟಿಕೊಂಡೇ ಓಡಾಡುತ್ತಿದ್ದ. ಅವನೂ ಕೂಡ ಈಗ ಮಲಗಿ ನಿದ್ರಿಸಿರುವಂತೆ ತೋರುತ್ತಿದೆ.  ನಿನ್ನೆ ಸಂಜೆ ಮೊಳಗಿದ ಭೇರಿ ವಾದ್ಯಗಳೂ, ಮಗಳವಾದ್ಯಗಳೂ ವಿಶ್ರಾಂತಿ ಪಡೆಯುತ್ತಿವೆ.
ಶ್ರೀಹಿತ ಆಕಾಶದ ಕಡೆಗೆ ನೋಡಿದ. ಚಂದ್ರ ಕಾಣುತ್ತಿಲ್ಲ. ಮೇಘಗಳು ಮಾತ್ರ ಮಸುಕಾಗಿ ಗೋಚರವಾಗುತ್ತಿವೆ. ಅಷ್ಟರಲ್ಲೇ ಅವನಿಗೆ ಶುಭ್ರ ಬಿಳುಪಿನ ಚಂದ್ರನ ಮೇಲೆ ಕಪ್ಪು ಮಚ್ಚೆ ಹೇಗುಂಟಾಯಿತು ಅನ್ನುವ ಬಗ್ಗೆ ಬೀರ ಹೇಳಿದ ಮಾತು ನೆನಪಾಯಿತು. ರಾಮನ ಜೈತ್ರಯಾತ್ರೆ ಲಂಕೆಗೆ ಹೊಟಾಗ ವಾನರ ಸೈನ್ಯದ ಕಾಲಿನ ಧೂಳು ಚಂದ್ರನ ಮೇಲೆ ಕಪ್ಪು ಮಚ್ಚೆಯನ್ನು ಉಂಟುಮಾಡಿತಂತೆ.
ಆ ಮಾತು ಕೇಳಿದ ಶ್ರೀಹಿತನಿಗೆ ಅನುಮಾನ ಉಂಟಾಯಿತು. ಚಂದ್ರ ಮೊದಲು ಹುಟ್ಟಿದನಾ?.. ರಾಮಚಂದ್ರ ಮೊದಲು ಹುಟ್ಟಿದನಾ?   ರಾಮ ಶಿಶುವಾಗಿದ್ದಾಗ ಚಂದ್ರ ಬೇಕೆಂದು ಹಟ ಹಿಡಿದಾಗ ಅವನ ತಾಯಿ ಕೌಸಲ್ಯೆ ''ಆ ಚಂದ್ರ ನಿನಗಿಂತ ಏನು ಹೆಚ್ಚು ಸುಂದರನಲ್ಲ.. ಹೋಗಲಿ ಬಿಡು'' ಎಂದು ರಮಿಸುತ್ತಿದ್ದ ಸಂಗತಿ ಇವನಿಗೆ ತನ್ನ ತಾಯಿ ಹೇಳಿದ್ದಳು.  ಅದರ ಆಧಾರದ ಮೇಲೆ ಇವನ ಸಂಶಯ ನಿರ್ಣಯವಾಗಿ ಬದಲಾದೊಡೆ ಮನಸು  ತಡೆಯಲಾರದೇ ಬೀರನನ್ನು ಕೇಳಿಯೇಬಿಟ್ಟ.
ಇವನ ಪ್ರಶ್ನೆ ಕೇಳಿ ಒಂದೇ ಕಾಲಿನಲ್ಲಿ ಛಂಗನೆ ಜಿಗಿದು ಮೇಲೇರಿ ಬಂದಿದ್ದ ಬೀರ. ಭಕ್ತಿ ಇರುವಲ್ಲಿ ಅನುಮಾನವಿರಬಾರದೆಂದು ಬೋಧಿಸಿದ್ದ. ಆ ರೀತಿಯ  ಅನುಮಾನ ಬಂದದಕ್ಕಾಗಿ ಇಬ್ಬರೂ ಸೇರಿ ಕೆನ್ನೆ ತಟ್ಟಿಕೊಂಡು ಪ್ರಾಯಶ್ಚಿತ್ತ ಮಾಡಿಕೊಂಡಿದ್ದರು.
ಅಂತಹ ಬೀರ ಕೂಡ ಇವತ್ತು ಮಲಗಿಬಿಟ್ಟನೇ..? ಅವನಿಗೆ ನಿದ್ರೆಯಾದರೂ ಹೇಗೆ ಬಂದಿದ್ದೀತು..?


ಶ್ರೀಹಿತ ತನ್ನ ನಡಿಗೆಯನ್ನು ಮುಂದುವರೆಸಿದ. ಬೀದಿಗಳಲ್ಲಿ ನಾಯಿಗಳ ಸುಳಿವೂ ಇಲ್ಲ.  ಎಲ್ಲರೂ ಸೇರಿ ನಿದ್ರಿಸುತ್ತಿರುವಂತಿದೆ. ಎಲ್ಲರೂ ಮಲಗಿದ್ದಾರೆ ಸರಿ.. ಈ ಜನಕ ಮಹಾರಾಜನಿಗೇನಾಯಿತು..?  ಮಗಳು ರಾಕ್ಷಸಸೆರೆಯಲ್ಲಿ ನಾನಾ ಕಷ್ಟಗಳನ್ನು ಕಂಡು, ಅಗ್ನಿಯಿಂದ ಪುನೀತಳೆನಿಸಿಕೊಂಡು ಬರುತ್ತಿದ್ದಾಳಲ್ಲ..  ಕಲಶಕನ್ನಡಿಗಳನ್ನು, ಮುತ್ತಿನಾರತಿಗಳನ್ನು ಎತ್ತಿ ಸ್ವಾಗತಿಸಬೇಕಾದ ಮಹಿಳೆಯರು ದಣಿದು ಮಲಗಿರಬಹುದು. ಆದರೆ ಜನಕರಿಗೇನಾಗಿದೆ? ಎದುರುಗೊಳ್ಲಲು ಕಾದು ನಿಲ್ಲಬಹುದಲ್ಲ.? ನೆಲ ಉಳುವಾಗ ಸಿಕ್ಕ ಹುಡುಗಿಯಲ್ಲವೇ. ಅದಕ್ಕೇ ಹೀಗೆ. ರಕ್ತ ಹಂಚಿಕೊಂಡ ಮಗಳಾಗಿದ್ದರೆ  ಹೀಗೆ ನಿಶ್ಚಿಂತೆಯಾಗಿ ನಿದ್ರಿಸುತ್ತಿದ್ದರೇ.?
ಶ್ರೀಹಿತನಿಗೆ ಅಯೋಧ್ಯೆಯ ಮೇಲೆ ಅಸಹ್ಯ ಉಂಟಾಯಿತು.
''ರಾಮ ವನವಾಸಕ್ಕೆ ಹೊರಟಾಗ ಭೂಮಿ ಆಕಾಶ ಒಂದಾಗುವಂತೆ ರೋದಿಸಿದವರು ಇವರೇನಾ?''  ಅಂದುಕೊಂಡ ಆಕ್ರೋಷದಿಂದ.
ಲಾಲಿಹಾಡುಗಳಲ್ಲಿನ ರಾಮನಾಮವನ್ನು ಕೇಳಿ ಏಳುತ್ತಿದ್ದ ಮಕ್ಕಳೂ ಕೂಡ ಹಾಲು ಮುಗಿದಿದ್ದರೂ ಬೆಲ್ಲ ಸವರಿದ ಮೊಲೆಚೀಪಿ ಮಲಗಿದಂತಿದೆ. 
ಮನುಷ್ಯರೆಲ್ಲಾ ಮಲಗಿದ್ದಾರೆ ಸರಿ. ಸ್ವಾರ್ಥಿಗಳಾದ ಮಾನವರು ಮರೆಯುವುದು ಸಹಜ. ಆದರೆ ಪ್ರಾಣಿಗಳಿಗೂ, ಪಕ್ಷಿಗಳಿಗೂ ಏನಾಗಿದೆ.. ಇಂದು?  ಒಂದು ಪಾರಿವಾಳವೂ ಕೂಡ ರಾಮನ ಬರುವಿಗಾಗಿ ''ಕುವಕುವ''ಗುಡುತ್ತಿಲ್ಲ. ಗಜಶಾಲೆಯಿಂದ ಒಂದೂ ಘೀಳಿಡುವ ಶಬ್ದಗಳಿಲ್ಲ. ಮಲಗಿದ ಜಿಂಕೆಗಳು ಬೆದರಿ ಏಳುವ ಸದ್ದಿಲ್ಲ. ಹಸುವಿನ ಅಂಬಾ ಎಂಬ ಕರೆಗಳಿಲ್ಲ.

ತಾನೆಂಥ ಹುಚ್ಚ.? ಊರ್ಮಿಳೆಯೊಬ್ಬಳನ್ನು ಬಿಟ್ಟು, ಅವಳ ಸಾಕು ಮೊಲವೂ ಸೇರಿದಂತೆ ಇಡೀ ಅಯೋಧ್ಯೆಯೇ ರಾಮನ ಬರುವಿಕೆಗೆ  ರಾತ್ರಿಯಿಡೀ ಜಾಗಾರ ಮಾಡಿ ಕಾಯುತ್ತದೆಯೆಂದುಕೊಂಡಿದ್ದ.
''ಹೇ ನಿದ್ರಾದೇವಿ.. ನೀನು ನಿಜವಾಗಿಯೂ ಮಹಿಮೆಯುಳ್ಳವಳು.  ಹದಿನಾಲ್ಕು ವರ್ಷಗಳಿಂದ ಕಣ್ಣು ಮುಚ್ಚಿದರೂ, ತೆರೆದರೂ ರಾಮನ ಪಾದಪದ್ಮಗಳನ್ನೇ ದರ್ಶಿಸುತ್ತ, ರಾಮನನ್ನು ಸ್ಮರಿಸುತ್ತ ಕಾಯುತ್ತಿದ್ದವರನ್ನೆಲ್ಲ ನಿನ್ನ ಮಾಯೆಯಿಂದ ಅಲುಗಾಡದಂತೆ ಮಾಡಿ ನಿನ್ನ ತೆಕ್ಕೆಗೆ ತೆಗೆದುಕೊಂಡಿಬಿಟ್ಟಿದ್ದೀಯಲ್ಲ.. ?  ಸರಯೂನದಿಯ ಗಲಗಲ ಶಬ್ದವನ್ನು ನಿನ್ನ ವಿಜಯಕ್ಕೆ ಸಿಗುತ್ತಿರುವ ಮಂಗಳಧ್ವನಿಗಳೆಂದು ಭಾವಿಸಬೇಡ. ಅಯೋಧ್ಯೆಯ ಮೇಲಿನ ನಿನ್ನ ವಿಜಯಕ್ಕೆ ಅಸ್ತಿತ್ವವಿಲ್ಲದಂತೆ ಮಾಡಲು ನಾನು ಇದೋ..   ರಾಮನನ್ನು ನನ್ನ ಕಣ್ಣುಗಳಲ್ಲಿ, ಉಸಿರಿನಲ್ಲಿ, ರಕ್ತದಲ್ಲಿ ತುಂಬಿಕೊಳ್ಳಲು ಅನಿಮೇಷನಾಗಿ ಹೊರಟಿದ್ದೇನೆ.'' ಅಂದುಕೊಂಡ.
ಅದಕ್ಕೆ ಪ್ರತಿಯಾಗಿ ''ಜಯೋಸ್ತು'' ಎಂಬಂತೆ  ಮಳೆಹನಿಗಳು ಬೀಳತೊಡಗಿದವು.
ಅವನ ಶರೀರ ಪುಳಕಿಸಿತು.  ತಲೆಯೆತ್ತಿ ಆಕಾಶದ ಕಡೆಗೆ ನೋಡಿದ. ಮಳೆ ಏಕೆ ಬೀಳುತ್ತಿದೆಯೆಂಬುದು ತನಗೆ ಅರ್ಥವಾದಂತೆ ಮುಗುಳ್ನಕ್ಕ.
ಭೂದೇವಿಗೆ ಸಿಟ್ಟು ಬಂದಿದೆ.
ಬಾರದೇ ಇರುತ್ತದೆಯೇ ಮತ್ತೇ..?
ಅವಳು ಅಂದುಕೊಡಿರಬಹುದು ''ವನವಾಸಕ್ಕೆ ಹೋಗುವಾಗ ಅಳಿಯ ನನ್ನನ್ನು ಸ್ಪರ್ಶಿಸುತ್ತ, ಗಿರಿಗಳನ್ನೂ, ಝರಿಗಳನ್ನೂ ದಾಟಿಕೊಂಡು ನ..ಡೆ..ಯು..ತ್ತ  ಹೋಗಿದ್ದ.  ಪಟ್ಟಾಭಿಷೇಕವಾಗಲಿದೆ ಎಂದಕೂಡಲೇ ಗಾಳಿಯಲ್ಲಿ ಹಾರಿಕೊಂಡು ಬರುತ್ತಿದ್ದಾನೆ. ಪುಷ್ಪಕ ವಿಮಾನವೇರಿ ಗಾಳಿಯ ಜೊತೆಗೆ, ಮೇಘಗಳ ಜೊತೆಗೆ ಸರಸವಾಡುತ್ತ ಬರುತ್ತಿದ್ದಾನೆ. ಅಳಿಯನನ್ನು ಎಂದಿಗೂ ನಂಬಬಾರದು'' ಎನ್ನುವ ಮಾತು ಲೋಕದಲ್ಲಿ ಚಾಲ್ತಿಯಲ್ಲಿರುವುದು ಇದಕ್ಕಾಗಿಯೇ'' ಅಂದುಕೊಂಡು ವ್ಯಗ್ರಗೊಂಡ ಭೂದೇವಿಯನ್ನು ಸಂತೈಸಲು ಮೇಘಗಳು ಮಳೆಹನಿಗಳ ರೂಪದಲ್ಲಿ ರಾಯಭಾರವನ್ನು ಕಳಿಸಿವೆ. ''ತಾಯೀ.. ನಿನ್ನ ಮಗಳೂ, ಅಳಿಯನೂ ಎಂದಿಗೂ ನಿನ್ನ ಜೊತೆಗಿರುವವರೇ ಅಲ್ಲವೇ..? ಸ್ವಲ್ಪ ಸಮಯವಾದರೂ ನಮ್ಮ ಜೊತೆಗಿರಲಿಕ್ಕ ಬಿಡು'' ಎಂದು.

ಇದೇ ರೀತಿ ಗುಹನೂ ಕೂಡ ಬೇಸರಿಸಿಕೊಂಡಿರಬಹುದಲ್ಲವೇ..? ಅವನ ಬೇಸರವೂ ಕೂಡ ಸಹೇತುಕವೇ. ಅವನನ್ನು ಈ ಮೇಘಗಳು ಹೇಗೆ ಸಂತೈಸುತ್ತವಯೋ.. ಎನೋ. ?'' ಎಂದುಕೊಳ್ಳುತ್ತಾ ಆಕಾಶದ ಕಡೆಗೆ ನೋಡತೊಡಗಿದ. ಅಲ್ಲೆಲ್ಲಿಯೂ  ಚಂದ್ರನ ಸುಳಿವಿಲ್ಲ.   ವಿಜಯದಶಮಿಯಂದು ರಾವಣ ವಧೆಯಾಗಿದೆ.  ರಾಮ ಅಮವಾಸ್ಯೆಗೆ ಅಯೋಧ್ಯೆಗೆ ಬಂದು ಸೇರಲಿದ್ದಾನೆ. ಆದರೆ ಶ್ರೀಹಿತ ಹಾಗಂದುಕೊಳ್ಳಲಿಲ್ಲ. '' ಎನಯ್ಯಾ.. ಚಂದ್ರಯ್ಯಾ.. ಅಮ್ಮನವರ ಸೋದರಾ.. ಭಾವನವರನ್ನು ಎದುರುಗೊಳ್ಳಲಿಕ್ಕೆ ಹೋಗಿರುವೆಯಾ'' ಅಂದುಕೊಂಡ.

ಪೂರ್ವಕ್ಕೆ ತಿರುಗಿ ರಾಜಮಾರ್ಗವನ್ನು ಪ್ರವೇಶಿಸಿದ. ಅದರ ಇಕ್ಕೆಲಗಳಲ್ಲಿನ ಅಶೋಕವೃಕ್ಷಗಳು ಗಾಳಿಗೆ ತಲೆಯಾಡಿಸುತ್ತಿವೆ. ಅವನಿಗೆ ಹನುಮಂತನು ಹೇಳಿದ ''ಸೀತಾದೇವಿ ಅಶೋಕವೃಕ್ಷದ ಕೆಳಗೆ ಕುಳಿತು ದುಃಖಿಸುತ್ತಿದ್ದಳೆಂಬ'' ಸಂಗತಿ ಸ್ಮೃತಿಗೆ ಬಂದಿತು. ಆರ್ದ್ರವಾಗಿ ಆ ಮರಗಳ ಕಡೆಗೆ ನೋಡತೊಡಗಿದ.
''ಲೋಕಪಾವನಿಗೆ ನೆರಳು ನೀಡಿದ ಪುಣ್ಯತರುವು ನೀನು, ಅದಕ್ಕೇ ಭೂದೇವಿ ತನ್ನ ಮಗಳಿಗೆ ನೀನು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಯಾವ ಋತುವಿನಲ್ಲೂ ಕೂಡ ಎಲೆಗಳು ಉದುರದಂತೆ ನಿತ್ಯವಸಂತದ ವರವನ್ನು ನಿನಗೆ ನೀಡಿದ್ದಾಳಲ್ಲವೇ'' ಅಂದ. ನಾಲ್ಕಾರು ಹೆಜ್ಜೆ ಮುಂದೆ ಹೋಗುವಷ್ಟರಲ್ಲೇ ಅಂತಃಪುರದ ಕಡೆಯಿಂದ ಕಸ್ತೂರಿ ಹಾಗೂ ಮೃಗಮದ ಬೆರೆಸಿದ ಸುಗಂಧ ನಾಸಿಕಾಪುಟಗಳನ್ನು ಸೋಕಿತು.  ಆ ಸುಗಂಧದಿಂದ  ಶ್ರೀಹಿತನಿಗೆ ಆ ದಿನ ಮುಂಜಾನೆ ತನ್ನ ಅಮ್ಮ ಪಕ್ಕದ ಮನೆಯಾಕೆಗೆ ಹೇಳುತ್ತಿದ್ದ ಮಾತುಗಳು ನೆನಪಿಗೆ ಬಂದವು.
''ಸೀತಾ ರಾಮ ಲಕ್ಷ್ಮಣರು ವನವಾಸದಿಂದ ಬಂದಕೂಡಲೇ ನಾಲ್ಕೂ ಜನ ಅಣ್ಣ-ತಮ್ಮಂದಿರಿಗೆ ನಿಷೇಕದ ಮುಹೂರ್ತವಂತೆ''
ಅವನಮ್ಮ ಕೈಕೇಯಿಯ ಪರಿಚಾರಕಿಯಾದ್ದರಿಂದ ಅದು ಅವಳಿಗೆ ತಿಳಿದಿತ್ತು. ಈ ನಿಷೇಕದ ಏರ್ಪಾಟಿನ ಜವಾಬ್ದಾರಿಯೆಲ್ಲ ಕೈಕೇಯಿದಾದರೆ, ಓಡಾಡಿ ದುಡಿಯುವುದೆಲ್ಲ ಇವನಮ್ಮನೇ. ಆದ್ದರಿಂದಲೇ ಈಗಲೇ ನಡೆಯುತ್ತಿರುವ ಏರ್ಪಾಟುಗಳನ್ನ ಬಣ್ಣಿಸಿದ್ದಳು.
ಶ್ರೀಹಿತನದ್ದು ಇಪ್ಫತ್ತೇ ವರ್ಷಗಳ ವಯಸ್ಸು. ಈಗಲಷ್ಟೇ ಕಾಲಿಟ್ಟಿರುವ ಯೌವನ. ಕುತೂಹಲದಿಂದ ಮರೆಯಲ್ಲಿ ನಿಂತು ಅಮ್ಮ ಹೇಳುತ್ತಿದ್ದನಿಷೇಕದ ಬಗೆಗಿನ ಮಾತುಗಳನ್ನೆಲ್ಲ ಕೇಳಿಸಿಕೊಂಡಿದ್ದ. ಭಗವಂತನ ಬಗೆಗಿನ ಎಲ್ಲವನ್ನೂ ಭಕ್ತನು ಅಲೋಚಿಸಬಹುದು. ಅದರಲ್ಲೇನು ತಪ್ಪು?  ಹೀಗಾಗಿ ಅದನ್ನೂ ಊಹಿಸಿಕೊಂಡ.
ಸೀತಾಪತಿ ಅರ್ಧಾಂಗಿಗೆ ಮೊದಲಚುಂಬನವನ್ನು ಎಲ್ಲಿಗೆ ನೀಡುತ್ತಾನೆ..?
''ಸಿರಿ'' ಅಂದರೆ ಎಲ್ಲರಿಗೂ ಇಷ್ಟವಲ್ಲವೇ.   ಶ್ರೀಕಾರವನ್ನು ನಾಚಿಸುವಂತಿರುವ ಅವಳ ಕಿವಿಗಳದ್ದಾ  ಆ ಅದೃಷ್ಟ..?
ಶಂಖಚಕ್ರಗಳು ವಿಷ್ಣುವಿನ ಭೂಷಣಗಳು. ಅವುಗಳಲ್ಲಿ ಶಂಖವಾದರೆ ಕಂಠದ್ದೇ ಪ್ರಥಮಚುಂಬನ ಭಾಗ್ಯ, ಚಕ್ರವಾದಲ್ಲಿ ಮನ್ಮಥನ ರಥಚಕ್ರಗಳಂತಿರುವ ಅವಳ ನಿತಂಬಗಳದ್ದೇ ಆ ಪುಣ್ಯ. ಅಥವಾ ರಾಮ ಕೌಮೋದಕೀಧಾರಿಯಾದ್ದರಿಂದ ಅವಳ ಊರುಗಳದ್ದಾ ಆ ಭಾಗ್ಯ..?
ವನವಾಸ ಸಮಯದಲ್ಲಿ ಶಬರಿ ಸಮರ್ಪಿಸಿದ ಮಧುರಫಲಗಳನ್ನು ಇಷ್ಟದಿಂದ ಸೇವಿಸಿದನಂತೆ ರಾಮ. ಹೀಗಾಗಿ ಮಧುರ ಬಿಂಬಾಧರಗಳನ್ನು ಚುಂಬಿಸುತ್ತಾನೋ, ಇಲ್ಲವೇ ಕೋದಂಡಪಾಣಿಯದ್ದರಿಂದ ಬಿಲ್ಲನ್ನು ಪರಿಹಾಸ ಮಾಡುವ ಅವಳ ನಡುವನ್ನು ಮೊದಲು ಚುಂಬಿಸುತ್ತಾನಾ?
''ಅಮೃತಂ ತ್ವಮಂಗೇ'' ಅನ್ನುತ್ತಿದ್ದಾನೆ ರಾಮ. ಅವನ ಶರೀರಕ್ಕೆ ಅವಳೇ ಅಮೃತವಂತೆ.
''ತ್ವಂ ನಯನಯೋಃ ಕೌಮುದೀ'' ಎನ್ನುತ್ತಿದ್ದಾಳೆ ಮೈಥಿಲಿ. ಅವಳ ಕಣ್ಣಿಗೆ ಅವನೇ ಬೆಳದಿಂಗಳಂತೆ.

ಈ ವಿಧವಾಗಿ ಆಲೋಚಿಸುತ್ತ ಸಾಗುತ್ತಿದ್ದ ಶ್ರೀಹಿತನು ಕವಿತಾವೇಶದಿಂದ ಹೊರಬಂದು ನೋಡುವಷ್ಟರಲ್ಲೇ ಸರಯೂ ತೀರವನ್ನು ತಲುಪಿಬಿಟ್ಟಿದ್ದ. ಪ್ರಕೃತಿ ನಿಃಶಬ್ದದ ಜೊತೆ ಸ್ನೇಹ ಮಾಡಿದಂತಿದೆ. ಸರಯೂ ಮಾಡುತ್ತಿರುವ ಶಬ್ದದ ಹೊರತಾಗಿ ಎಲ್ಲವೂ ನಿಃಶಬ್ದವಾಗಿದೆ.

ನಿಃಶಬ್ದದಿಂದಾಗಿ ಅವನಿಗೆ ದಿಗಿಲಾಯಿತು. ಸ್ವಪುರವಾಸಿಗಳ ಮೇಲೆ ಮತ್ತೆ ಮತ್ತೆ ಕೋಪ ಬರುತ್ತಿದೆ. ಕನಸಿನಲ್ಲಿ ಕಾಣಿಸಿದ ನಿದ್ರಾದೇವಿ ಸರಯೂ ದಂಡೆಯಲ್ಲಿಲ್ಲ.
ಯಾಕಿರುತ್ತಾಳೆ..?  ಅಯೋಧ್ಯೆಯ ಪ್ರಜೆಗಳ ಕಣ್ ರೆಪ್ಪೆಗಳ ಮೇಲೆ ನರ್ತಿಸುತ್ತಿದ್ದಾಳಲ್ಲವೇ?
ಅಯೋಧ್ಯಾವಾಸಿಗಳ . ಮೇಲಿನ ಆಕ್ರೋಷವೋ, ರಾಮನನ್ನು ತಾನೇ ಮೊದಲು ನೋಡಬೇಕೆಂಬ ಆತುರವೋ.. ತನಗೇ ತಿಳಿಯುವಷ್ಟರಲ್ಲಿ ಉತ್ತರೀಯವನ್ನು ಸೊಂಟಕ್ಕೆ ಬಿಗಿದು ನೀರಿಗೆ ಹಾರಿ ಈಜತೊಡಗಿದ.
ದೇಹದಲ್ಲಿ ಭೂತಸಂಚಾರವಾದಂತೆ ಉದ್ರೇಕಕ್ಕೊಳಗಾಗಿದ್ದರಿಂದ ಈಜುವ ಆಯಾಸ ತಿಳಿಯುವ ಮುನ್ನವೇ ಆಚೆಯ ದಡವನ್ನು ತಲುಪಿಬಿಟ್ಟಿದ್ದ.   ಅಲ್ಲಿ......
''ರಾಮನನ್ನು ಸೇರುವುದು ಅಷ್ಟು ಸುಲಭವೇ..?" ಎಂದು ಅಣಕಿಸುತ್ತಿರುವಂತೆ ಪರ್ವತವೊಂದು ಎದೆ ಸೆಟೆಸಿಕೊಂಡು ಅಡ್ಡ ನಿಂತಿದೆ.
ಅವನ ಕಾಲುಗಳು ನಿಲ್ಲಲಿಲ್ಲ. ತಾನೊಬ್ಬನೇ..  ರಾಮದರ್ಶನಾಮೃತವನ್ನೆಲ್ಲ ತಾನೊಬ್ಬನೇ ಸವಿಯಬೇಕೆಂಬ ತರಾತುರಿಯಲ್ಲಿರುವಂತೆ, ತನ್ನ ಬೆನ್ನ ಹಿಂದಿರುವ ಅಯೋಧ್ಯೆಯ ಕಡೆಗೆ ನಿಕೃಷ್ಟಭಾವದ ನೋಟ ಬೀರುತ್ತ ಆ ಪರ್ವತವನ್ನು ಧಾವಂತದಲ್ಲಿ ಏರತೊಡಗಿದ.
ಶಿಖರದ ತುದಿಯ ಆಚೆಯಿಂದ ಪ್ರಜ್ವಲವಾದ ಬೆಳಕೊಂದು ಕಾಣಿಸುತ್ತಿದೆ. ''ಬರುತ್ತಿದ್ದಾನೆ.. ರಾಮ ಬರುತ್ತಿದ್ದಾನೆ.. ಪುಷ್ಪಕವಿಮಾನ ಇದೋ ಬಂತು.. ''
ಎಂದೆನಿಸಿ ಶಿಖರದ ಕಡೆಗೆ ಓಟದಂತಹ ನಡಿಗೆಯಲ್ಲಿ ಏರತೊಡಗಿದ. ಕೆಲವೇ ಕ್ಷಣಗಳಲ್ಲಿ ಆ ನಡಿಗೆ ಓಟವೇ ಆಯಿತು.
''ಪಾಹಿಮಾಂ.. ರಾಜರಾಜೇಶ್ವರಿ.. ನಮ್ಮನನುಗ್ರಹಿಸು..''
''ರಾಮನಿಗೆ ಸ್ವಾಗತವನೂ ಮಾಡದ ನಮ್ಮೂರಿನವರ ಅಜ್ಞಾನವನ್ನು ಮನ್ನಿಸು ತಾಯೇ..''
ನಮ್ಮವರ ಅಮರ್ಯಾದೆಯನ್ನು ಕ್ಷಮಿಸು.. ವಾಹಿನಿ..ದಯಾಪ್ರವಾಹಿನಿ.. ಭಂಡ ಚಂಡ ನಿಮಹಿಷಭಂಜಿನಿ.. ನಿರಂಜನಿ..ಜನರಂಜನಿ ಪಾಹಿಮಾಂ.''
ಎಂದು ಆವೇಶದಲ್ಲಿ ಪ್ರಾರ್ಥಿಸಿಕೊಳ್ಳುತ್ತ.. ಪ್ರಯಾಸದಿಂದ ಓಡೋಡಿ.. ಶಿಖರವನ್ನು ತಲುಪಿದ.

ಶಿಖರದ ಮೇಲಿನ ದಿಬ್ಬದ ಆಚೆಗಿನ ದೃಶ್ಯವನ್ನು ನೋಡಿ ನಂಬದಾದ.

ಆಶ್ಚರ್ಯದಿಂದ ದಿಕ್ಕೆಟ್ಟಂತಾಗಿ ಕಂಬದಂತೆ ನಿಂತುಬಿಟ್ಟ.

ಏನಿದೆ ಅಲ್ಲಿ..?

ಇಡೀ ಅಯೋಧ್ಯೆಯೇ ಅಲ್ಲಿದೆ. ಕೂಸು-ಕುನ್ನಿಗಳ ಸಮೇತ. ಪ್ರಾಣಿ ಪಕ್ಷಿಸಹಿತರಾಗಿ ಸಮಸ್ತ ಅಯೋಧ್ಯಾವಾಸಿಗಳು ಅಲ್ಲಿ ಸೇರಿ ಕೈಗಳಲ್ಲಿ ದೀವಿಗೆಗಳನ್ನು ಹಿಡಿದು.. ಆಕಾಶದ ಕಡೆಗೆ ದೃಷ್ಟಿ ನೆಟ್ಟು ಕುಳಿತಿದ್ದಾರೆ. ಅನಿಮೇಷತ್ವದಿಂದ ರಾಮನನ್ನು ನಿರೀಕ್ಷಿಸುತ್ತಿದ್ದಾರೆ.
ಎಲ್ಲರಿಗಿಂತ ದೂರದಲ್ಲಿ ಒಂದು ಬಂಡೆಯ ಮೇಲೆ ಕುಳಿತಿದ್ದ ಕುಂಟ ಬೀರ ಇವನನ್ನು ''ಈಗ ಬಂದೆಯಾ..? ಎಲ್ಲಿ ಹಾಳಾಗಿ ಹೋಗಿದ್ದೆ?'' ಎನ್ನುವಂತೆ ನೋಡಿದ.










ತೀರ್ಥ ಯಾತ್ರೆ (ಪೂಜೆ ಎಂದರೇನು )

ತೀರ್ಥ ಯಾತ್ರೆ (''ಪೂಜೆ ಎಂದರೇನು'' ಪುಸ್ತಕದ ಒಂದಿಷ್ಟು ಸಾಲುಗಳು )

ಜೀವನ ಪೂರ್ತಿ ನ್ಯಾಯ ನೀತಿ ಧರ್ಮ.. ದೇವರು ಎಲ್ಲ ಬಿಟ್ಟು .. ಶಿಕ್ಷಣ, ಕೆಲಸ, ಮದುವೆ, ಸಂಸಾರ, ಮಕ್ಕಳು ಆಸ್ತಿ ... ಎಲ್ಲ ಮುಗಿದ ಮೇಲೆ ಪುಣ್ಯ ಸಂಪಾದನೆ ಮಾಡ್ತೀವಿ, ತೀರ್ಥ ಕ್ಷೇತ್ರ ನೋಡ್ತೀವಿ ... ದೇವರು ಎಲ್ಲ ಪಾಪ ನಾಶ ಮಾಡ್ತಾನೆ ಅನ್ನೋ ಭಾವನೆಯೇ ಮೂರ್ಖತನದಿಂದ ಕೂಡಿದ್ದು. ಆ ಮೂರ್ಖರನ್ನು ಆ ವ್ಯಾಪಾರಿಗಳು ಮತ್ತು ಟ್ರಾವೆಲ್ ಏಜೆಂಟರು ಸುಲಿದು ಹಾಕುವುದರಲ್ಲಿ ಯಾವುದೇ ಅಸಹಜತೆ ಇಲ್ಲ

ತೀರ್ಥಕ್ಷೇತ್ರಗಳಿಗೆ ಹೋದರೆ ಪುಣ್ಯ ಅಂತ ಪುರಾಣಗಳಲ್ಲಿ ಉಲ್ಲೇಖ ಇದೆ ನಿಜ. ಆದರೆ ತೀರ್ಥಕ್ಷೇತ್ರಗಳಿಗೆ ಹೋಗುವ ವಿಧಾನ ಬೇರೆ ಇದೆ. ಒಂದು ಸಮಾನ ಮನಸ್ಕ ಗುಂಪು ಕಾಲ್ನಡಿಗೆಯಿಂದ ದಾರಿಯುದ್ದಕ್ಕೂ ದೇವರ ನಾಮಸ್ಮರಣೆ ಮಾಡುತ್ತಾ .. ಮಧ್ಯೆ ಮಧ್ಯೆ ಸಿಗುವ ಊರುಗಳಲ್ಲಿ ಭಿಕ್ಷೆ ಸ್ವೀಕರಿಸಿ ಅದರಿಂದ ಹೊಟ್ಟೆ ತುಂಬಿಸಿಕೊಂಡು ತಿಂಗಳುಗಟ್ಟಲೆ ಪ್ರಯಾಣ ಮಾಡಿ ಅಲ್ಲಿ ಆ ದೇವರ ಕ್ಷೇತ್ರವನ್ನು ತಲುಪುವ ಹೊತ್ತಿಗೆ ಸಂಪೂರ್ಣವಾಗಿ ಬೇರೆಯದೇ ರೀತಿಯ ಮನುಷ್ಯರಾಗಿ ಪರಿವರ್ತಿತಗೊಂಡಿರುತ್ತಾರೆ. ಸಮಯ, ಆರೋಗ್ಯ ಸ್ವಪ್ರತಿಷ್ಥೆ, ಅಹಂಕಾರ ಎಲ್ಲವನ್ನು ಕಳೆದುಕೊಂಡು ಜ್ಞಾನ ವನ್ನು ಮಾತ್ರ ಪಡೆದು ದೇವರ ಮುಂದೆ ಶರಣಾಗಲು ಸಿದ್ಧವಾಗಿರುತ್ತಾರೆ . ಪ್ರಕೃತಿಯ ಆಗಾಧತೆ, ಲೋಕದ ವಿಲಕ್ಷಣತೆ ಮಾನವನ ಅಸಹಾಯಕೆತೆ ಇವೆಲ್ಲವುಗಳನ್ನು ಅನುಭವದಿಂದ ಗಳಿಸಿರುತ್ತಾರೆ. ಆ ಮಟ್ಟಕ್ಕೆ ಬೆಳೆಯಲು ಆ ತೀರ್ಥಯಾತ್ರೆಯೆ ಕಾರಣ . ಹಾಗಾಗಿ ತೀರ್ಥ ಯಾತ್ರೆಗೆ ಅಷ್ಟು ಮಹತ್ವ ಇತ್ತು. ಆ ದೇವಸ್ಥಾನದಲ್ಲಿ ಏನು ವಿಶೇಷ ಇರುವುದಿಲ್ಲ. ಯಾತ್ರೆಯ ಅನುಭವ ... ದಾರಿಯಲ್ಲಿ ಕಥಾಶ್ರವಣ, ನಾಮಸ್ಮರಣೆ ಮತ್ತು ಸ್ವಾಭಾವಿಕವಾಗಿ ಆಗುವ ಜೇವನದ realizationನಿಜವಾದ ಫಲ.

ನಾಳೆಯ ಊಟದ ಮತ್ತು ವಾಸದ ವ್ಯಸ್ಥೆಯ ಬಗ್ಗೆ ಚಿಂತೆಯನ್ನು ಬಿಟ್ಟು ಮುಂದುವರೆದರೆ ಅದು ತೀರ್ಥ ಯಾತ್ರೆ. ನನಗೆ ಗೊತ್ತಿರುವ ಒಬ್ಬರು ಅವಧೂತರ . ಕೇವಲ ಇಬ್ಬರು ಸ್ನೇಹಿತರನ್ನು ಜೊತೆಗೆ ಇಟ್ಟುಕೊಂಡು ಒಂದು ಪೈಸೆ ದುಡ್ಡು ಕೈಯಲ್ಲ್ಲಿ ಇಲ್ಲದೆ ಎರಡು ಜೊತೆ ಬಟ್ಟೆ ಇಟ್ಟುಕೊಂಡು ಗೋದಾವರಿ ನದಿಯನ್ನು ಪೂರ್ತಿಯಾಗಿ ಪ್ರದಕ್ಷಿಣೆ ಮಾಡಿ ಬಂದಿದ್ದಾರೆ. ಕಾಲ್ನಡಿ ಗೆ.. ಬಿಕ್ಷೆ ಮತ್ತು ನಾಮಸ್ಮರಣೆ... ಈ ಮೂರರ ಸಹಾಯದಿಂದ ಯಾತ್ರೆ ಮುಗಿಸಿದ್ದಾರೆ. ಅದು ನಿಜವಾದ ತೀರ್ಥಯಾತ್ರೆ