Wednesday, March 5, 2014

ಮಾರ್ಕೆಟಿಂಗ್ ಮಾರ್ಕೆಟಿಂಗ್

(ಕಳೆದ ವರ್ಷದ ಬೇಸಿಗೆಯಲ್ಲಿ ಹೈದರಾಬಾದ್ ಗೆ ಹೋದಾಗ ರಾತ್ರಿಯ ಹೊತ್ತು ಮನೆಯ ತಾರಸಿಯ ಮೇಲೆ ಚಾಪೆ ಹಾಸಿಕೊಂಡು ಮಲಗಿ ಗೆಳೆಯರೆಲ್ಲ  ನರೇಂದ್ರ ಕಾಪರೇ ಅವರ ಅಧ್ಯಕ್ಷತೆಯಲ್ಲಿ ಹರಟೆ ಹೊಡೆಯುತ್ತಿದ್ದೆವು. ಬಟ್ಟೆಗಳನ್ನು ಒದ್ದೆ ಮಾಡಿ ಎದೆಯ ಮೇಲೆ ಹಾಕಿಕೊಂಡು ಮಲಗಿದರೂ ಸೆಕೆ ಕಡಿಮೆ ಆಗ್ತಿರಲಿಲ್ಲ. ನಿದ್ದೆ ಬರ್ತಿರಲಿಲ್ಲ.  ನರೇಂದ್ರ ಕಾಪರೇ ಅವರು ಇಡೀ ಆಂಧ್ರಪ್ರದೇಶವೇ ಗೌರವಿಸುವಂಥ ಸಂಸ್ಕೃತ ವಿದ್ವಾಂಸರಾಗಿದ್ದೂ ಕೂಡ ನಮ್ಮಂಥ ಸಾಮಾನ್ಯ ಹುಡುಗರ ಜೊತೆ ಸೇರಿ ಹುಡುಗರಾಗಿಯೇ ಬೆರೆಯುತ್ತಾರೆ. ಅವರು ಯಾವ ಸಂದರ್ಭದಲ್ಲಿ ಏನು ಮಾತಾಡಿದರೂ ಅದರಲ್ಲಿ ಒಂದು ಕಲಿಕೆ ಇರುತ್ತದೆ. ಅವರು ಎಕಾಂತದಲ್ಲಿರುವಾಗ ಹೇಗೆ ಮಾತಾಡುತ್ತಾರೋ, ತಮ್ಮ ಹೆಂಡತಿ ಮಕ್ಕಳ ಜೊತೆಗೆ ಮಾತಾಡುವಾಗ ಹೇಗೆ ಮಾತಾಡುತ್ತಾರೋ, ಸಭೆಗಳಲ್ಲಿ ಮಾತಾಡುವಾಗಲೂ ಕೂಡ ಅದೇ ಶೈಲಿ, ಭಾಷೆ, ಸರಳತೆ ಅವರ ಮಾತುಗಳಲ್ಲಿ ಇರುತ್ತವೆ. ವೇದಿಕೆ ಏರಿದಕೂಡಲೇ ಅಥವಾ ಮೈಕು ಹಿಡಿದ ಕೂಡಲೇ ಅನೇಕರಲ್ಲಿ ಕಂಡು ಬರುವ ಬದಲಾವಣೆಯನ್ನು ನಾನು ಕಾಪ್ರೆಯವರಲ್ಲಿ ಎಂದೂ ಕಂಡಿಲ್ಲ. (ಅದರ ಅರ್ಥ ಅವರು ವೇದಿಕೆಗಳಲ್ಲಿ ಮಾತಾಡುವಾಗಿನ ಸುಸಂಕೃತತೆ, ಸಭ್ಯತೆ, ಮತ್ತು ಶಿಷ್ಟಾಚಾರಗಳನ್ನು  ತಮ್ಮ ಇಡಿಯ ಜೀವನದಲ್ಲಿ ರೂಢಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಕೈಯಲ್ಲಿ ಮೈಕು  ಹಿಡಿದಕೂಡಲೇ ಬದಲಾಗುವ ಅಗತ್ಯವಿಲ್ಲ ಅನ್ನುವುದನ್ನು ನಾನು ಗಮನಿಸಿದ್ದೇನೆ. ) ಹೀಗೆಯೇ ಅವತ್ತಿನ ನಮ್ಮ ನಿದ್ದೆಬಾರದ ಮಧ್ಯರಾತ್ರಿ ಕೂಡ ಅವರು ತಮ್ಮ ಸಹಜ ಸರಳ ಹರಟೆಯಲ್ಲೂ ಕೂಡ ಗಹನ ವಿಷಯಗಳನ್ನು ಮಾತಾಡುತ್ತಿದ್ದರು.  ಮಧ್ಯರಾತ್ರಿ ದಾಟುವವರೆಗೂ ಏನೇನೋ ವಿಷಯಗಳನ್ನು ಸುತ್ತಿ ಹಾಕಿ ಬಂದಮೇಲೆ ಕೊನೆಯಲ್ಲಿ ಮಾರ್ಕೆಟಿಂಗ್ ಬಗ್ಗೆ ಮಾತಾಡುವಾಗ ನಾನು ನನ್ನ ಮೊಬೈಲ್ ಫೋನ್ ನಲ್ಲಿ voice recorder ಅನ್ನು On ಮಾಡಿದ್ದೆ. ಅಲ್ಲಿಯ ವರೆಗೂ ನನಗೆ ಹಾಗೆ ಮಾಡುವ ಯೋಚನೇ ಬಾರದೇ ಇದ್ದುದಕ್ಕೆ ನನ್ನನ್ನೇ ಹಳಿದುಕೊಂಡಿದ್ದೆ. ಇವತ್ತು ಬೆಳಿಗ್ಗೆ ನನ್ನ ಮೋಬೈಲ್ ನ ಮೆಮೋರಿಯನ್ನು format ಮಾಡುವ ಮುನ್ನ ಎಲ್ಲ ಆಡಿಯೋ ಕ್ಲಿಪ್ ಗಳನ್ನು ಚೆಕ್ ಮಾಡುತ್ತಿದ್ದಾಗ ಆ ಕ್ಲಿಪ್ ಕೂಡ ಸಿಕ್ತು. ಅದರಲ್ಲಿದ್ದ ತೆಲುಗು ಹರಟೆ-ಮಾತುಕತೆಯನ್ನು ಕನ್ನಡಕ್ಕಿಳಿಸಿದ್ದೇನೆ..ಇಲ್ಲಿದೋ..! )

# ಮಾರ್ಕೆಟಿಂಗ್ ಮಾರ್ಕೆಟಿಂಗ್ #


ಮನುಷ್ಯರಲ್ಲಿ ಒಬ್ಬರನ್ನು ತುಳಿದು ಇನ್ನೊಬ್ಬರು ಮೇಲೆ ಬರಲಿಕ್ಕೆ ಕಾರಣ ಈ ಮಾರ್ಕೆಟಿಂಗ್. ಎಲ್ಲಿ ನೋಡಿದ್ರೂ ಮಾರ್ಕೆಟಿಂಗ್. ಸರ್ಕಾರದವರೂ ಮಾರ್ಕೆಟಿಂಗ್ ಮಾಡ್ತಾರೆ. ನಲವತ್ತು ವರ್ಷಗಳ ಹಿಂದೆ government sector ನಲ್ಲಿ ಮಾರ್ಕೆಟಿಂಗ್ ಇತ್ತಾ.? ಈಗ ಸರ್ಕಾರವೇ ಎಲ್ಲರಿಗಿಂತ ಹೆಚ್ಚು ಅದನ್ನು ಮಾಡ್ತಾ ಇದೆ. ಆದರೆ ಸರ್ಕಾರ ಮಾಡುವ ಮಾರ್ಕೆಟಿಂಗ್ ನ ಸ್ವರೂಪ ಬೇರೆ. ಅದರ ಉದ್ದೇಶ ಬೇರೆ. ವೋಟು ಪಡೆಯಲಿಕ್ಕಾಗಿ ಅಷ್ಟೇ. ಈಗ ಈ ''ಅಮ್ಮ ಹಸ್ತಂ'' (ಆಂಧ್ರದ ಅನ್ನಭಾಗ್ಯ) ಅನ್ನೋ ಸ್ಕೀಮ್ ಬಂದಿದೆ. ಇದೆಲ್ಲಾ ಏನು.? ಮಾರ್ಕೆಟಿಂಗೇ ತಾನೇ..? ಒಂದು ರೂಪಾಯಿಗೆ ಕಿಲೋ ಅಕ್ಕಿ.. ಎಲ್ಲಿಂದ ಕೊಡ್ತಾ ಇದೀರಾ..? ಇದು ಸರ್ಕಾರ ಮಾಡಬೇಕಾಗಿರೋ ಕೆಲಸ ನಾ..?  
ಸರಿ. ನೀವು ಬಡವರಿಗೆ ಉಪಕಾರ ಮಾಡ್ತಾ ಇದ್ದೀರ. ಆದರೆ ಅದರಿಂದಾಗಿ ಎಷ್ಟು ಜನರಿಗೆ ಅಪಕಾರ ಆಗ್ತಾ ಇದೆ..?  ಸಮಾಜದ ಒಂದು ವರ್ಗವನ್ನು ಓಲೈಸಲಿಕ್ಕೆ, ಅವರಿಗೆ ಉಪಕಾರ ಮಾಡಲಿಕ್ಕೆ ಹೋಗಿ ಅದಕ್ಕಿಂತ ಹೆಚ್ಚು ಜನರಿಗೆ ಅಪಕಾರ ಆಗೋದಿಲ್ವಾ..? ಏಲ್ಲಾ ಕಡೆ ಮಾರ್ಕೆಟಿಂಗ್.  ಆಶ್ರಮಗಳಿಗೆ ಹೋಗಿ ನೋಡ್ರಿ.. ಮಾರ್ಕೆಟಿಂಗ್.  ಮಠಗಳಿಗೆ ಹೋದ್ರೆ.. ಮಾರ್ಕೆಟಿಂಗ್. ಯೂನಿವರ್ಸಿಟಿಗಳಲ್ಲಿ , UGC ಯಲ್ಲಿ ನೋಡಿ ಮಾರ್ಕೆಟಿಂಗ್. UGC ನಲ್ಲಿ ಮಾರ್ಕೆಟಿಂಗ್ ಅಗತ್ಯ ಇದೆಯಾ..? ಈ ಮಾರ್ಕೆಟಿಂಗ್ ಇಲ್ಲದ ಯಾವ ಕ್ಷೇತ್ರವೂ ಉಳಿದಿಲ್ಲ. ಗಂಡ ಹೆಂಡತಿಯರ ಸಂಬಂಧದ ನಡುವೆಯೂ ಮಾರ್ಕೆಟಿಂಗ್ ಬಂದುಬಿಟ್ಟಿದೆ. ತಾಯಿ-ಮಕ್ಕಳ ಸಂಬಂಧವೂ ಸಹಜವಾಗಿ ಉಳಿದಿಲ್ಲ. ಪರಿಸ್ಥಿತಿ ಘೋರವಾಗಿದೆ.  

ಸರಿ.. ನಾವೆಲ್ಲಾ  ಭಾರತೀಯರು.. ನಮ್ಮದು ಸನಾತನ ಧರ್ಮ.. ಹಾಗೆ ಹೀಗೆ ಅಂತೆಲ್ಲಾ ಬೊಗಳೇ ಬಿಡ್ತೀವಿ.  ಆದರೆ ನಮ್ಮ  ಈಗಿನ ಜೀವನದಲ್ಲಿ ಭಾರತೀಯ ಸನಾತನ ಧರ್ಮಕ್ಕಿಂತ ಕ್ರೈಸ್ತ ಮತದ ಪ್ರಭಾವ ಹೆಚ್ಚು ಇದೆ. ಹ್ಯಾಗೆ ಅಂದ್ರೆ.. ಈ ಮಾರ್ಕೆಟಿಂಗ್ ಅನ್ನೋದು ಕ್ರೈಸ್ತಮತದ ದೇಶಗಳಿಂದ ಬಂದದ್ದು. ಅವರ ದೇಶಗಳಲ್ಲಿ ಹೆಚ್ಚು ದುಡ್ಡು ಸಂಗ್ರಹಿಸಿರುವ ವ್ಯಕ್ತಿಯನ್ನು ಹೆಚ್ಚು ''ಯಶಸ್ವಿ'' ಅಥವಾ ಶ್ರೀಮಂತ ಅಂತ ಪರಿಗಣಿಸ್ತಾರೆ. ನಮ್ಮಲ್ಲಿ ಹಾಗಿರಲಿಲ್ಲ. ''ಶ್ರೀಮಂತ'' ಅನ್ನುವ ಶಬ್ದಕ್ಕೆ ನಮ್ಮ ದೇಶದಲ್ಲಿದ್ದ ಅರ್ಥವೇ ಬೇರೆ ಆಗಿತ್ತು.  ಈಗ ನಮ್ಮ ಶಬ್ದಗಳ ಅರ್ಥಗಳೂ ಕೂಡ ಕ್ರೈಸ್ತದೇಶದವರ ಅರ್ಥಗಳಿಗೆ ಸಮಾನವಾಗಿಬಿಟ್ಟಿವೆ. 

ನಮ್ಮಲ್ಲಿ ಈ ಮಾರ್ಕೆಟಿಂಗ್ ಮತ್ತು ಅದರ ಮೂಲಕ ಹೇಗಾದರೂ ಮಾಡಿ ''ಲಾಭ'' ಮಾಡಬೇಕು ಅನ್ನೋ ಪ್ರವೃತ್ತಿ ಇರಲಿಲ್ಲ. ಯಾಕೆಂದರೆ  ನಮ್ಮದೇಶದಲ್ಲಿ ''ನೀನು ಏನೇ ಮಾಡಿದರೂ, ಅದರ ಫಲವನ್ನು ನೀನೇ ಅನುಭವಿಸಬೇಕಾಗ್ತದೆ. ಅದನ್ನು ಇವತ್ತು ಅನುಭವಿಸು, ಅಥವಾ ವರ್ಷಗಳ ನಂತರ ಅನುಭವಿಸು, ನೂರುವರ್ಷಗಳ ನಂತರ ಅಥವಾ ನೂರು ಜನ್ಮಗಳ ನಂತರವಾದರೂ ನೀನು ಮಾಡಿದ ಕರ್ಮಗಳ ಫಲವನ್ನು ನೀನೇ ಅನುಭವಿಸಬೇಕು.'' ಅನ್ನುವ ಕರ್ಮಸಿದ್ಧಾಂತ ಭಾರತದಲ್ಲಿ ಅನಕ್ಷರಸ್ಥರಿಗೂ ಗೊತ್ತಿತ್ತು.  ''ನಾsಭುಕ್ತಂ ಕ್ಷೀಯತೆ ಕರ್ಮ ಕಲ್ಪಕೋಟಿ ಶತೈರಪಿ''  ಅನ್ನುವ ಸತ್ಯದ ಅರಿವಿನಿಂದಾಗಿ ಭಾರತೀಯರು ಏನು ಮಾಡಬೇಕಾದರೂ ಅದರಿಂದ ಉಂಟಾಗುವ ಫಲದ ಬಗ್ಗೆ ಭಯ ಹೊಂದಿದ್ದರಿಂದ ಭಾರತೀಯರಲ್ಲಿ ನೈತಿಕತೆ ಸಹಜವಾಗಿಯೇ ಮೈಗೂಡಿ ಹೋಗಿರುತ್ತಿತ್ತು. ಆದ್ದರಿಂದ ಸಮಾಜಕ್ಕೆ ಕಾನೂನಿನ ಅಗತ್ಯವೂ ಅತೀ ಕಡಿಮೆಯಾಗಿತ್ತು. ಆದರೆ ಈ ಕ್ರೈಸ್ತ ದೇಶಗಳಲ್ಲಿ ಹಾಗಿಲ್ಲ. ಪುನರ್ಜನ್ಮ ಅನ್ನೋದೇ ಇಲ್ಲ. ಈಗಿರುವ ಈ ಜೀವನದಲ್ಲಿ ಸುಖ ಪಡೆಯೋದಷ್ಟೇ  ಅವರ ಬದುಕಿನ ಮುಖ್ಯ ಗುರಿ. ಎಷ್ಟು ಅಧರ್ಮ ಮಾಡಿದರೂ, ಅನೈತಿಕ ಜೀವನ ನಡೆಸಿದ್ರೂ.. ಭಾನುವಾರ ಚರ್ಚಿಗೆ ಹೋಗಿ Oh God ... ಅಂತ ಕ್ಷಮೆ ಕೇಳಿಬಿಟ್ರೆ ದೇವರು ಎಲ್ಲಾ ಕ್ಷಮಿಸಿಬಿಡ್ತಾನೆ. all is well. 

ಹೀಗೆ ಅವರಲ್ಲಿ ಮತ್ತೆ ಹುಟ್ಟು ಅನ್ನೋದೇ ಇಲ್ಲ. ಕರ್ಮಫಲವೇ ಇಲ್ಲ... ಆದ್ದರಿಂದ ಅವರಿಗೆ  ಜೀವನದಲ್ಲಿ ''ಉನ್ನತ ಸ್ತರ'' ಅನ್ನೋ ಪರಿಕಲ್ಪನೆಯೂ ಇಲ್ಲ.   ನಮ್ಮಲ್ಲಿ ಜೀವನದ ''ಉನ್ನತ ಸ್ತರ ಅಥವಾ ಉನ್ನತ ಸ್ಥಿತಿ '' ಅಂತ ಒಂದಿದೆ.  ಸಾಮಾನ್ಯ ಸ್ತರ, ಮಧ್ಯಮ ಸ್ತರ, ಉನ್ನತ ಸ್ತರ ಅನ್ನುವ ಈ ಮೂರು ವಿಭಜನೆಗಳು ಭಾರತೀಯ ಜೀವನದಲ್ಲಿ ಇವೆ. ಈ ಉನ್ನತ ಸ್ಥಿತಿ ಅಂದ್ರೆ ಏನು..?  

ನಾವು ಅವಲಿಯಾ.. ಅಂತೀವಿ, ಅವಧೂತರು ಅಂತೀವಿ.. ಅಥವಾ ಪರಮಹಂಸರು ಅಂತ ಗುರ್ತಿಸ್ತೀವಿ. ಅದು ಜೀವನದ ಉನ್ನತ ಸ್ತರ. ಅಂದ್ರೆ.. ಸುಖ-ದುಃಖಗಳು ಬಂದರೂ, ಹರ್ಷ-ಶೋಕಗಳು ಬಂದರೂ, ರಾಗ-ದ್ವೇಷಗಳಿದ್ದರೂ ಛಳಿ-ಸೆಕೆಗಳಿದ್ದರೂ ಎಲ್ಲ ಸಮಯದಲ್ಲೂ ಒಂದೇ ರೀತಿ ಇರುವ, ಎಲ್ಲರನ್ನೂ, ಎಲ್ಲವನ್ನೂ  ಸಮಾನವಾಗಿ ಕಾಣುವ ಜನ ಅವರು. ಆದರೆ ಜೀವನದಲ್ಲಿಯ ಈ ''ಉನ್ನತ ಸ್ಥಿತಿ'' ಗೆ ಆಧಾರ ಶರೀರ ಅಲ್ಲ. ಹುಟ್ಟಿನ ವರ್ಣ ಅಥವಾ ಜಾತಿ ಅಲ್ಲ. ಕುಲ ಅಲ್ಲ. ಮತ ಅಲ್ಲ. ದೇಶ ಅಲ್ಲ.  ಭಾಷೆ ಅಲ್ಲ. ವಿದ್ಯೆ ಅಲ್ಲ. ಇದ್ಯಾವುದೂ ಅಲ್ಲ. ಉನ್ನತಸ್ಥಿತಿಯ ಜಿವನಕ್ಕೆ ಆಧಾರ ಏನಂದ್ರೆ.. ಆತ್ಮಬಲ, ಮತ್ತು ಆತ್ಮಜ್ಞಾನ.

ಅಂದ್ರೆ ''ನಾನು'' ಅಂದರೆ ಯಾರು ಅಥವಾ ಏನು ಅನ್ನುವುದರ ಬಗ್ಗೆ ಒಂದು ಸ್ಪಷ್ಟವಾದ, ಅನುಭವಸಿದ್ಧವಾದ ತಿಳುವಳಿಕೆ ಅಷ್ಟೇ. ಅದರ ಸಹಜ ಸ್ಥಿತಿಯಲ್ಲಿರಲು ಮಾಡುವ ಪ್ರಯತ್ನ, ಮತ್ತು ಬಾಹ್ಯ ವಿಷಯಗಳನ್ನು ಆಧರಿಸದೇ ತನ್ನಲ್ಲಿ ತಾನು  ಆನಂದ ಪಡೆಯೋದು. ಇವಿಷ್ಟೇ ಜೀವನದ ಉನ್ನತ ಸ್ಥತಿಗೆ  ಆಧಾರಗಳು. ಈಗಿನ ಕಾಲದಲ್ಲಿ ಪುರಾತನ  ನಾಲ್ಕು ವರ್ಣಗಳ ವ್ಯವಸ್ಥೆಯಂತೂ ಸಂಪೂರ್ಣವಾಗಿ ನಾಶ ಆಗಿದೆ. ಜೊತೆಗೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಅನ್ನೋ ಈ ನಾಲ್ಕೂ ಆಶ್ರಮಗಳೂ ಸಂಪೂರ್ಣವಾಗಿ ಅಳಿದು ಹೋಗಿವೆ.  ಆದರೆ ಈ ವರ್ಣ ಮತ್ತು ಆಶ್ರಮ ವ್ಯವಸ್ಥೆಯ ಪಳಿಯುಳಿಕೆಗಳು, ಮತ್ತು ಅದರ ಬಗೆಗಿನ ಹುಸಿ ಅಭಿಮಾನಗಳು ಮಾತ್ರ ಜನರಲ್ಲಿ ಉಳಿದುಕೊಂಡಿವೆ. ಆ ಹುಸಿ ಅಭಿಮಾನವೇ ದುರಭಿಮಾನ ಆದಾಗ ಈ ಜಾತಿಯ ಸಮಸ್ಯೆ ಹುಟ್ಟಿಕೊಂಡಿದೆ.

ನಮ್ಮಲ್ಲಿ ಉಪನಿಷತ್ತುಗಳಲ್ಲಿ ಈ ಆನಂದದ ಸ್ತರಗಳನ್ನು ಮತ್ತು ಗುಣಮಟ್ಟಗಳನ್ನು ಹೇಳಿದ್ದಾರೆ. ತೈತ್ತಿರೀಯ ಉಪನಿಷತ್ತಿನಲ್ಲಿ ಆನಂದದ ವಿವರಣೆ.. ಇದೆಯಲ್ಲ..  ?   ಇಡೀ ಜಗತ್ತಿನ ವಿತ್ತವನ್ನೆಲ್ಲ ಒಬ್ಬ ವ್ಯಕ್ತಿ ಹೊಂದಿದರೆ ಎಷ್ಟು ಆನಂದ ಉಂಟಾಗ್ತದೋ.. ಅದು ಮನುಷ್ಯಾನಂದ. ಅದರ ನೂರು ಪಟ್ಟು.. ವಿದ್ಯಾನಂದ, ಆಮೇಲೆ ವಿಷಯಾನಂದ, ವಾಸನಾನಂದ, ಯೋಗಾನಂದ, ಸಹಜಾನಂದ,  ಪಿತೃಗಳ ಆನಂದ.. ಗಂಧರ್ವಾನಂದ.. ಬೃಹಸ್ಪತಿಯ  ಆನಂದ.. ಪ್ರಜಾಪತಿಯ ಆನಂದ..ಇಂದ್ರಾನಂದ, ಬ್ರಹ್ಮಾನಂದ..ಅಥವಾ ಪೂರ್ಣಾನಂದ ಹೀಗೆಲ್ಲಾ ಇದೆಯಲ್ಲಾ.? ಇವೆಲ್ಲ ಕೂಡ ವಿಷಯ-ವಸ್ತುಗಳನ್ನು ಆಧರಿಸಿದ ಆನಂದಗಳಲ್ಲ.

ಆದರೆ ಈಗಿನ ಕಾಲದಲ್ಲಿ ಆನಂದವನ್ನು ಅಳೆಯುವ ಸಾಧನಗಳೇನು..? ನಿಮ್ಮ ಹತ್ತಿರ ಎಷ್ಟು ಸಾಮಗ್ರಿ ಇದೆ. ಎಷ್ಟು ಬ್ಯಾಂಕ್ ಬ್ಯಾಲೆನ್ಸ್ ಇದೆ. ಎಷ್ಟು ಪ್ರಖ್ಯಾತಿ ಸಮಾಜದಲ್ಲಿ ಇದೆ. ನೀವು ಎಷ್ಟು ಸುಂದರವಾಗಿದೀರಿ.. ಎಂಥಾ ಬಟ್ಟೆ ಹಾಕ್ತೀರಿ ..  ಇಂಥಾ ಸಂಗತಿಗಳ ಆದಾರದ ಮೇಲೆ ನಾವು ನಮ್ಮ ಆನಂದವನ್ನು ಲೆಕ್ಕ ಹಾಕ್ತಾ ಇದ್ದೀವಿ. ಆದರೆ ಅದು ಸರಿಯಾದ ಅಳತೆಗೋಲಾ..?

ನಮ್ಮ ಗುರುಗಳು ಹೇಳ್ತಾ ಇದ್ರು.. ಏನಂದ್ರೆ,  ಬ್ರಾಹ್ಮಣರಿಗೆ ವಿದ್ಯಾನಂದ ಇರಬೇಕು.  ಬ್ರಾಹ್ಮಣನಾದವನಿಗೆ ಆನಂದ ಪಡಿಯಲಿಕ್ಕಾಗಿ ಹೆಸರು, ಪ್ರಸಿದ್ಧಿ, ದುಡ್ಡು, ಮತ್ತೊಂದು.. ಮಗದೊಂದು.. ಇವೆಲ್ಲವುಗಳೆಲ್ಲದರ ಅಗತ್ಯವಿರಬಾರದು. ಬಂದರೆ ಒಕೆ. ಆದರೆ ಬ್ರಾಹ್ಮಣನಾದವನು ಅವುಗಳನ್ನು ಪಡೆಯಲಿಕ್ಕೆ ಪ್ರಯತ್ನ ಮಾಡಬಾದು. ಅವನಲ್ಲಿ ವಿದ್ಯೆ ಇರಬೇಕು. ಆ ವಿದ್ಯೆಯ ಸ್ವಾಧ್ಯಾಯದಲ್ಲಿಯೇ ಅವನು ಆನಂದವನ್ನು ಹುಟ್ಟಿಸಿಕೊಳ್ಳಬೇಕು. ಸ್ವಾಧ್ಯಾಯದಲ್ಲಿಯೇ ಆನಂದ ಹುಟ್ಟಿಸಿಕೊಳ್ಳುವುದು ಯಾವಾಗ ಸಾಧ್ಯ ಆಗ್ತದೆ..?  ನೀವೇ ಯೋಚನೇ ಮಾಡಿ..
ಅದೇ ರೀತಿ ಉಳಿದ ವರ್ಣದವರೂ ಅವರವರ ಕರ್ಮಗಳು ಏನೇ ಆಗಿದ್ದರೂ ಆನಂದ ಅನ್ನೋದು ಅವರವರ ಸ್ವಭಾವದಲ್ಲಿಯೇ ಇರಬೇಕು. ಸ್ವಭಾವ ಅಂದರೆ ಸ್ವಚಾರಿತ್ರ್ಯ. ...  ಮತ್ತು ಎಲ್ಲರೂ ತಮ್ಮ ಆನಂದದ ಸ್ತರಗಳನ್ನು ಹೆಚ್ಚಿಸಿಕೊಳ್ಳಲಿಕ್ಕೆ ಆಂತರಿಕವಾಗಿ ಪ್ರಯತ್ನ ಮಾಡಬೇಕು. ಆನಂದದ ಅಂತಿಮ ಸ್ತರ ನಮ್ಮ ಟಾರ್ಗೆಟ್ ಆಯ್ತು ಅಂತಾದರೆ ಆಗ  ಮಾರ್ಕೆಟಿಂಗ್ ಬೇಕಾಗುವುದಿಲ್ಲ.
ಅದನ್ನು ಮಾಡಿದ್ರೆ ಸಂತೋಷ ಸಿಗುತ್ತೆ, ಇದನ್ನು ಮಾಡಿದ್ರೆ ಸಂತೋಷ ಸಿಗುತ್ತೆ... ಅದನ್ನು ಖರೀದಿಸಿದ್ರೆ ಆನಂದ ಆಗುತ್ತೆ.. ಆ ಊರಿಗೆ ಹೋದ್ರೆ ಆನಂದ ಸಿಗುತ್ತೆ.. ಇಂಥಾ ಹೊಟೆಲ್ ನಲ್ಲಿ ಇದ್ರೆ ಸಂತೋಷ ಸಿಗುತ್ತೆ..  ಮುಂತಾದ ಭ್ರಮೆಗಳು ಹೋಗ್ತವೆ. ಆನಂದದ ಉತ್ಪತ್ತಿಯನ್ನು ಕುಳಿತಲ್ಲಿಯೇ ಮಾಡಿಕೊಳ್ಳೋದೇ ಆದ್ರೆ, ಅದರ ಹುಡುಕಾಟಕ್ಕಾಗಿ ಈ ಮಾರ್ಕೆಟಿಂಗ್ ಜಾಲದಲ್ಲಿ ಬೀಳೋದು ತಪ್ಪುತ್ತೆ.  ಜೀವನದಲ್ಲಿ ಮತ್ತು ಸಮಾಜದಲ್ಲಿ ಭ್ರಷ್ಟತೆ ತಾನಾಗಿಯೇ ಕಡಿಮೆಯಾಗುತ್ತೆ. ಈ ಆನಂದದ ಹುಡುಕಾಟದಲ್ಲಿಯೇ ಮನುಷ್ಯ ಹೆಚ್ಚಿನ ವಸ್ತುಗಳು-ದುಡ್ಡು ಮುಂತಾದವುಗಳನ್ನು ಶೇಖರಣೆ ಮಾಡಲಿಕ್ಕೆ ಪ್ರಾರಂಭ ಮಾಡ್ತಾನೆ. ಆ ಶೇಖರಣೆ ಮಾಡುವ ಆಸೆಯೇ ಭ್ರಷ್ಟಾಚಾರದ ಮೂಲ ಅಲ್ವಾ..?  ಹೆಚ್ಚು ಶೇಖರಣೆ ಮಾಡಿದರೆ ಹೆಚ್ಚು ಆನಂದ ಸಿಗ್ತದೆ ಅನ್ನುವ ಭ್ರಮೆ ಇದೆ.. ಆ ಭ್ರಮೆನೇ ಚಿಕ್ಕ ಚಿಕ್ಕ ಭ್ರಷ್ಟಾಚಾರಗಳಿಂದ ಹಿಡಿದು ರಾಷ್ಟ್ರಮಟ್ಟದ ಭ್ರಷ್ಟಾಚಾರಗಳಿಗೆ ಕಾರಣ ಆಗೋದು.
ಎರಡನೇಯದಾಗಿ ಏನಪ್ಪಾ ಅಂದ್ರೆ...
ನಾನು ಏನು ಮಾಡಿದರೂ.. ಈ ದೇಹ ಹೊರಟುಹೋದರೂ  ಮತ್ತೆ ನಾನು ಹುಟ್ಟಬೇಕಾದ್ದೇ.. ಮತ್ತು ಮಾಡಿದ ಕರ್ಮಗಳಿಗೆ ತಕ್ಕ ಫಲ ಅನುಭವಿಸಬೇಕಾದದ್ದೇ .. ಆದ್ದರಿಂದ ನಾನು ಈಗ ಅಧರ್ಮ ಮಾಡೋದಿಲ್ಲ..  ಇದು ತಪ್ಪು.  ಅದರಲ್ಲಿ ಎಷ್ಟೇ ಲಾಭ ಕಾಣಿಸಿದರೂ ನಾನು ಮಾಡೋದಿಲ್ಲ. ಯಾಕಂದರೆ ಅದು ತಪ್ಪು.  ಅದು ಇವತ್ತು ತಪ್ಪು, ನಾಳೆ ತಪ್ಪು, ನಾಡಿದ್ದ ತಪ್ಪು, ಯಾವಾಗಲೂ ತಪ್ಪು, ನನಗೆ ತಪ್ಪು, ಅವನಿಗೆ ತಪ್ಪು, ಇವನಿಗೆ ತಪ್ಪು.. ಎಲ್ಲರಿಗೂ ಅದು ತಪ್ಪು..  ಆದ್ದರಿಂದ ಅದನ್ನು ನಾನು ಮಾಡೋದಿಲ್ಲ. ಬೇರೆಯವರೂ ಮಾಡದಂತೆ ಸಾಧ್ಯವಾದಷ್ಟೂ ತಡೀತೀನಿ .. ಅನ್ನೋ ಎಚ್ಚರಿಕೆ ವ್ಯಕ್ತಿತ್ವದಲ್ಲಿಯೇ/ಚಾರಿತ್ರ್ಯದಲ್ಲಿಯೇ  ಬಂದಾಗ ಸಹಜವಾಗಿಯೇ ಅವನು ಧರ್ಮದ ದಾರಿಯಲ್ಲಿ ನಡೀತಾನೆ. ಆದರೆ ಅಂಥಾ ಎಚ್ಚರಿಕೆ ಈಗಿನ ನಮ್ಮ ಜೀವನದಲ್ಲಿ ನಾಶವಾಗಿ ಹೋಗಿದೆ.  ಕಾನೂನಿನ ಚೌಕಟ್ಟಿನಲ್ಲಿಯೇ ಇದ್ದುಕೊಂಡು ಎಷ್ಟು ಬೇಕಾದರೂ ಅಧರ್ಮಗಳನ್ನು ನಾವು ಪ್ರತಿ ನಿತ್ಯ ಮಾಡ್ತಾನೆ ಇದೀವಿ. ಕಾನೂನಿನ ಚೌಕಟ್ಟು ದಾಟಿದಾಗ ಮಾತ್ರ.. ಮತ್ತು ಆ ತಪ್ಪು ಸಾಬೀತಾದಾಗ ಮಾತ್ರ ಅದಕ್ಕೆ ಶಿಕ್ಷೆ ಆಗ್ತದೆ ಅನ್ನೋದನ್ನು ಬಿಟ್ರೆ .. ಚಾರಿತ್ರ್ಯದಲ್ಲಿಯೇ ಇರಬೇಕಾದ ಧರ್ಮದ ಎಚ್ಚರಿಕೆ ಇಲ್ಲ.

ಚಾರಿತ್ರ್ಯದಲ್ಲಿಯೇ, ಸ್ವಧರ್ಮದಲ್ಲಿಯೇ ಆನಂದ ಸಿಗದೇ ಹೋದಾಗ  ಈ ಮಾರ್ಕೆಟಿಂಗ್ ನವರು ತೋರಿಸುವ ಸುಂದರ ಜೀವನದ ಕನಸುಗಳು ನಮ್ಮ ಚಾರಿತ್ರ್ಯ ಹರಣ ಮಾಡಿ ನಮ್ಮನ್ನು ಹಾದಿ ತಪ್ಪಿಸ್ತವೆ. ಈ ಮಾರ್ಕೆಟಿಂಗ್ ಅನ್ನೋದು ಒಂದು ಮಹಾ ಮಾರಿ...   ಸುಳ್ಳು ಸುಖದ  ಆಮಿಷ ತೋರಿಸಿ ಲಾಭ ಮಾಡಿಕೊಳ್ಳೋ ಈ ಮಾರ್ಕೆಟಿಂಗ್ ಎಲ್ಲಿಯವರೆಗೂ ನಿಲ್ಲೋದಿಲ್ಲವೂ ಅಲ್ಲಿಯ ವರೆಗೆ ಮನುಷ್ಯ ಸುಖಕ್ಕಾಗಿ ಹೊರಗಿನ ವಿಷಯ-ವಸ್ತುಗಳ ಹಿಂದೆ ಓಡ್ತಾನೇ ಇರ್ತಾನೆ. ತನ್ನ ಧರ್ಮವನ್ನು ಬಿಡ್ತಾನೇ ಇರ್ತಾನೆ.
ಇದೆಲ್ಲಾ ಇರಲಿ.. ಜೀವನದ ಆನಂದ ಅಂದರೆ ಏನು ಅಂತ ತಿಳಿಸಿಕೊಡ್ತೀವಿ ಅಂತ ಪೊಳ್ಳು ಭರವಸೆ ನೀಡಿ ಶ್ರೀಮಂತ ಜನಾಂಗವನ್ನು ಸುಲಿಯುವ ಆಧ್ಯಾತ್ಮಿಕ ಸಂಸ್ಥೆಗಳೂ ಕೂಡ ಮಾರ್ಕೆಟಿಂಗ್ ಅನ್ನು ಜೋರಾಗಿ ಮಾಡ್ತಾರೆ. ಅದರ ಪ್ರಭಾವಕ್ಕೊಳಗಾಗಿ ಅವರ ಬಳಿ ಹೋಗುವ ಜನ ಅದನ್ನೇ ಆನಂದ ಅಂದ್ಕೋತಾರೆ.  ಈಗೀಗ ಭಕ್ತಿಯಲ್ಲೂ ಮಾರ್ಕೆಟಿಂಗ್ ಬಂದಿದೆ. ದೋರ್ಭಲ ಪ್ರಭಾಕರ ಶರ್ಮಾ ಅವರಂತೂ ತುಂಬಾ ದುಃಖಪಟ್ಕೊಂಡು ಈ ವಿಷಯದ ಬಗ್ಗೆನೇ ಯಾವಾಗಲೂ ಮಾತಾಡ್ತಿರ್ತಾರೆ. ಪ್ರತೀ ವಿಷಯದಲ್ಲೂ ಮಾರ್ಕಟಿಂಗ್ ಅಗತ್ಯ ಇದೆಯಾ..?  ಆರ್ಥಿಕ ಲಾಭ ಮಾಡೋದೇ ಜೀವನದ ಪರಮೋದ್ದೇಶವಾ..? ಇದೇ ದಾರಿಯಲ್ಲಿ ಹೋದ್ರೆ ಎಲ್ಲಿಗೆ ಹೋಗಿ ಮುಟ್ತೀವಿ ನಾವು ..?
ಕೆಲವೊಂದು ವಿಷಯಗಳಲ್ಲಿ ಭಾರತ ಚೆನ್ನಾಗೇ ಡೆವಲಪ್ ಆಗ್ತಾ ಇದೆ. ನಿಜ. ಆದರೆ ಫೌಂಢೇಷನ್ ನಲ್ಲಿಯೇ ಸ್ಟ್ಟಾಂಗ್ ನೆಸ್ ಕಡಿಮೆ ಆಗಿದೆ.
(ನಮ್ಮ ಹರಟೆಯ ಮಧ್ಯದಲ್ಲಿ ಗೆಳೆಯ ಪ್ರಸನ್ನ ಎದ್ದು ಹೋಗಿ ಒಂದಿಷ್ಟು ತಂಪಾದ ಹಣ್ಣು- ಐಸ್ ಕ್ರೀಮ್ ಗಳನ್ನು ತಂದು ಎಲ್ಲರಿಗೂ ಹಂಚಿದ.)
ನೋಡಿ ಈ ಹಣ್ಣುಗಳು ನೋಡಲಿಕ್ಕೆ ಎಷ್ಟು ಚೆನ್ನಾಗಿವೆ. ರುಚಿಯಾಗಿಯೂ ಇವೆ. ಆದರೆ ಇವು ನಿಜವಾದ ಹಣ್ಣಗಳಲ್ಲ.  ನಾವು ಚಿಕ್ಕವರಿದ್ದಾಗ ಇಷ್ಟೆಲ್ಲ ಹಣ್ಣುಗಳನ್ನು ನೋಡಿಯೇ ಇರಲಿಲ್ಲ ಅಲ್ವಾ..? ಬಾಳೇ ಹಣ್ಣು ಒಂದನ್ನು ಬಿಟ್ಟು ಉಳಿದೆಲ್ಲ ಹಣ್ಣುಗಳು ಸೀಜನ್ ಗಳಲ್ಲಿ ಮಾತ್ರವೇ ಸಿಗ್ತಾ ಇದ್ವು. ತರಕಾರಿಗಳೂ ಅಷ್ಟೇ. ನಮ್ಮ ನಮ್ಮ ಊರುಗಳಲ್ಲಿ ಯಾವ ತರಕಾರಿ ಬೆಳೆಯುತ್ತವೋ ಅವುಗಳನ್ನು ಮಾತ್ರ ತಿಂತಾ ಇದ್ವಿ. ಕೆಲವೊಂದು ಸೀಜನ್ ಗಳಲ್ಲಿ ತರಕಾರಿಗಳೇ ಇರ್ತಿರಲಿಲ್ಲ. ಹಾಗೇಯೇ ಜನ ಊಟ ಮಾಡ್ತಾ ಇದ್ರು. ಆದರೆ ಈಗ ಈ ಹೈದರಾಬಾದ್ ನಂತಹ ಊರುಗಳಲ್ಲಿ ವಿದೇಶಗಳಲ್ಲಿ ಬೆಳೆಯುವ ಹಣ್ಣು-ತರಕಾರಿಗಳೂ ಎಲ್ಲಾ ಸೀಜನ್ ಗಳಲ್ಲಿ ಸಿಗ್ತವೆ. ಇಷ್ಟೆಲ್ಲಾ ತರಕಾರಿ.. ಹಣ್ಣುಗಳೂ ಮಾರ್ಕೆಟ್ ನಲ್ಲಿ ಲಭ್ಯವಿದ್ರೂ.. ಅವುಗಳಲ್ಲಿ ಸಹಜವಾಗಿ ಇರಬೇಕಾದ ಸತ್ವವೇ ಇಲ್ಲ. ಅವುಗಳೆಲ್ಲಾ ಬರೀ ನೋಡಲಿಕ್ಕೆ ತರಕಾರಿಗಳು.. ಅಷ್ಟೇ ಅಲ್ವಾ..? ಮೂಲ ರುಚಿಯೂ ಇಲ್ಲ.. ಸತ್ವವೂ ಇಲ್ಲ.
ಈ ಸೀಡ್ ಲೆಸ್ ದ್ರಾಕ್ಷಿ ನೂಡು ಇದನ್ನ. ಪ್ರಕೃತಿ ಸಹಜವಾದ ದ್ರಾಕ್ಷಿಗೆ ಇದ್ದಂತೆ ಬೀಜಗಳಿಲ್ಲ.. ಬಣ್ಣವಿಲ್ಲ. ರುಚಿಯಿಲ್ಲ.. ಸತ್ವವಿಲ್ಲ. ಆದರೂ ಸಹಜ ದ್ರಾಕ್ಷಿಗಿಂತ ಆಕರ್ಷಕ.. ಮತ್ತು ಕ್ವಾಂಟಿಟಿಯೂ ಹೆಚ್ಚು ಮತ್ತು ಎಲ್ಲಾ ಸೀಜನ್ ಗಳಲ್ಲಿ ಸಿಗುತ್ತೆ. ನಮ್ಮ ಜೀವನವೂ ಹೀಗೇ ಆಗಿದೆ. ಮೇಲ್ನೋಟಕ್ಕೆ ಎಲ್ಲಾ ಸುಸಜ್ಜಿತ, ಆಕರ್ಷಕ..ಹಾಗೂ ಕೃತಕವಾಗಿ ತನ್ನ ಮೂಲ ಸತ್ವವನ್ನೇ ಬಿಟ್ಟು ಹೋಗ್ತಾ ಇದೆ.

(ಅಷ್ಟರಲ್ಲೇ ನನ್ನ ಫೋನಿನ ಬ್ಯಾಟರೀ ಡೆಡ್ ಆಗಿ ರೆಕಾರ್ಡಿಂಗ್ ನಿಂತಿತ್ತು. ಈ ಮೇಲಿನ ಮಾತುಕತೆಯನ್ನು ಸುಮ್ಮನೇ ನಾನು ನನ್ನ ವೈಯಕ್ತಿಕ ದಾಖಲೆಗಾಗಿ ವಾಲ್ ನಲ್ಲಿ ಹಾಕಿಕೊಳ್ಳುತ್ತಿದ್ದೇನೆ. ಕಾಪರೇ ಅವರು ಅನೇಕ ವಿಷಯಗಳನ್ನು ಕ್ಲುಪ್ತವಾಗಿ ಸೂಚ್ಯವಾಗಿ ಹೇಳಿ ಮುಂದೆ ಮತ್ತೊಂದು ವಿಷಯಕ್ಕೆ ಹೋಗಿ ಮಾತಾಡಿದ್ದಾರೆ. ಹೀಗಾಗಿ ಎಲ್ಲವೂ ಎಲ್ಲರಿಗೂ ಅರ್ಥವಾಗುವುದಿಲ್ಲ, ಮತ್ತು ಅನೇಕರಿಗೆ ಇಷ್ಟವೂ ಆಗುವುದಿಲ್ಲ ಅನ್ನುವ ಅರಿವು ನನಗಿದೆ. ಅವರು ಕ್ಲುಪ್ತವಾಗಿ ಹೇಳಿ ಬಿಟ್ಟು ಬಿಟ್ಟ ಅನೇಕ ಸಂಗತಿಗಳ ಪೂರ್ವಾಪರಗಳನ್ನು ಸಮಗ್ರವಾಗಿ ವಿವವರಿಸಿ ಬರೆಯಹೊರಟರೆ ಅದು ಒಂದು ಪುಸ್ತಕವೇ ಆಗುತ್ತದೆ. ಇನ್ನು ಇವು ಅವರ ವೈಯಕ್ತಿಕ ಮಾತುಗಳಾದ್ದರಿಂದ ಅವರ ಈ ಮಾತುಗಳಗೆ ಎದುರಾಗುವ ಆಕ್ಷೇಪಗಳಿಗೆ, ಸಂಶಯಗಳಿಗೆ ನಾನು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ನನ್ನ ಸ್ನೇಹಿತರಲ್ಲಿ ಕೆಲವರಿಗೆ ಈ ಮೇಲಿನ ಸಾಲುಗಳಲ್ಲಿ ಕೆಲ ಉಪಯುಕ್ತ ಹೊಳಹುಗಳು ದಕ್ಕುವ ಸಾಧ್ಯತೆ ಇರುವುದರಿಂದ ಇದನ್ನು ಹೀಗೆ ಬಹಿರಂಗವಾಗಿ ಹಾಕುತ್ತಿದ್ದೇನೆ # - ದತ್ತು )