Tuesday, December 31, 2013

ತ್ಯಾಗದಿಂದ ಸಾಧನೆ


ಭಾರತೀಯ ಶಾಸ್ತ್ರ, ಸಾಹಿತ್ಯ, ಜಾನಪದ ಮುಂತಾದ ಎಲ್ಲ ಕಡೆಗಳಲ್ಲಿ ಆಧ್ಯಾತ್ಮಿಕ ಸಾಧನೆಯ ಅಂತಿಮ ಪಯೋಜನವಾದ "ಬಿಡುಗಡ" ಯನ್ನು ಮುಕ್ತಿ, ಭಗತ್ಪ್ರಾಪ್ತಿ, ನಿರ್ವಾಣ, ಮೋಕ್ಷ, ಕೈವಲ್ಯ  ಮುಂತಾದ ಅನೇಕ ಹೆಸರುಗಳಲ್ಲಿ ವಿವಿಧ ಪ್ರಕಾರಗಳಲ್ಲಿ ಹೇಳಿದ್ದಾರೆ. ಅಂತಹ ಮುಕ್ತಿಯನ್ನು ಪಡೆಯಬೇಕಾದರೆ ಸಾಮಾಜಿಕ ಮತ್ತು ಸಾಂಸಾರಿಕ ಜೀವನವನ್ನು ಬಿಟ್ಟು ಕಾಡಿಗೆ ಹೋಗಿ  ಮೂಗು ಹಿಡ್ಕೊಂಡು ಕುಳಿತು ಏನೇನೋ ಮಾಡಬೇಕು, ತಪಸ್ಸು ಮಾಡಬೇಕು.. ಹಾಗೆ .. ಹೀಗೆ ಅನ್ನುವ ಅಭಿಪ್ರಾಯ ಸಾಮಾನ್ಯ ಜನಮಾನಸದಲ್ಲಿ ಇದೆ. ಆದರೆ ತಪಸ್ಸು ಅಂದರೆ ಏನು..?  ಅನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ನಮ್ಮಲ್ಲಿ ಯಾರಿಗೂ ಸರಿಯಾಗಿ ತಿಳಿದಿಲ್ಲ. ಮುಕ್ತಿ ಅಂದರೆ ಏನು ಅನ್ನುವುದರ ಬಗ್ಗೆಯೂ ಕೂಡ ನಮ್ಮಲ್ಲಿ ಸ್ಪಷ್ಟತೆ  ಇಲ್ಲ. 
ವಾಸ್ತವವಾಗಿ ಸಂಪೂರ್ಣವಾಗಿ ಲೌಕಿಕ ಜೀವನದಲ್ಲಿ ಇದ್ದುಕೊಂಡು ಎಲ್ಲರಂತೆ ಸಾಮಾನ್ಯ ಜೀವನ ನಡೆಸಿಕೊಂಡೇ ಆ ಪರಮಾತ್ಮ ಸಾಕ್ಷಾತ್ಕಾರವನ್ನು ಅಥವಾ ಮುಕ್ತಿಯನ್ನು ಪಡೆಯಲಿಕ್ಕೆ ಸಾಧ್ಯ ಇದೆ. ತ್ಯಾಗವೇ ಆ ನಿಟ್ಟಿನ ಮುಖ್ಯ ಸಾಧನವಾಗಿದೆ. ಇಲ್ಲಿ ತ್ಯಾಗವೆಂದರೆ ಮತ್ತೆ ಅದೇ ಸಾಮ್ಸಾರಿಕ ಜೀವನದ ತ್ಯಾಗ ಅಥವಾ ಸನ್ಯಾಸ ಪಡೆಯುವುದು .. ಇತ್ಯಾದಿಗಳು ಅಲ್ಲ.  ನಮ್ಮ ಆಧ್ಯಾತ್ಮ ಶಾಸ್ತ್ರದಲ್ಲಿ ತ್ಯಾಗವನ್ನು ಏಳು ಪ್ರಕಾರಗಳಲ್ಲಿ ವಿಂಗಡಿಸಿದ್ದಾರೆ. ಆ ಎಳು ತ್ಯಾಗಗಳನ್ನು ಪ್ರಪಂಚದ ಪ್ರತಿಯೊಬ್ಬರೂ ಸಹ ಆಚರಿಸಬಹುದಾಗಿದೆ ಹಾಗೂ ತನ್ಮೂಲಕ ಮಾನವ ಜೀವನದ ಸರ್ವೋಚ್ಚ ಪ್ರಯೋಜನವಾದ ಮೋಕ್ಷವನ್ನು ಪಡೆಯಬಹುದಾಗಿದೆ.

೧. ನಿಷಿದ್ಧ ಕರ್ಮಗಳ ಸಂಪೂರ್ಣ ತ್ಯಾಗ. 
ಕಳ್ಳತನ, ವ್ಯಭಿಚಾರ, ಸುಳ್ಳು, ಕಪಟ, ಹಠ, ಬಲಾತ್ಕಾರ, ಹಿಂಸೆ, ಅಭಕ್ಷ್ಯ-ಭೋಜನ ಮತ್ತು ಪ್ರಮಾದ ಮುಂತಾದ ನಿಷಿದ್ಧ ಕರ್ಮಗಳನ್ನು ಕಾಯಾ-ವಾಚಾ-ಮನಸಾ ಈ ಮೂರರಲ್ಲಿ ಯಾವ ರೀತಿಯಿಂದಲೂ ಸಹ ಮಾಡದೇ ಇರುವುದು ಮೊದಲನೇ ಶ್ರೇಣಿಯ ತ್ಯಾಗವಾಗಿದೆ.

೨. ಸಕಾಮ  ಕರ್ಮಗಳ ತ್ಯಾಗ 
ಹೆಂಡತಿ/ಗಂಡಮಕ್ಕಳು, ವಿದ್ಯೆ, ಉದ್ಯೋಗ, ಆಸ್ತಿ ಪಾಸ್ತಿ ಮುಂತಾದ  ಪ್ರಿಯ ವಸ್ತುಗಳನ್ನು ಪಡೆಯುವ ಉದ್ದೇಶದಿಂದ ಮತ್ತು ರೋಗ ರುಜಿನಾದಿಗಳಿಂದ ಪಾರಾಗುವ ಉದ್ದೇಶದಿಂದ ಮಾಡಲಾಗುವ ಪೂಜೆ, ಹೋಮ, ದಾನ, ಉಪಾಸನೆ, ಪ್ರಾರ್ಥನೆ, ದೇವರಲ್ಲಿ ಬೇಡಿಕೆಗಳನ್ನು ಸಲ್ಲಿಸುವುದು, ಹರಕೆ ಹೊತ್ತುಕೊಳ್ಳುವುದು, ದೇವರು ಒಳ್ಳೇದು ಮಾಡಲಿ ಅನ್ನುವ ಆಸೆಯಿಂದ ದೇವಸ್ಥಾನಗಳಿಗೆ ಹೋಗುವುದು ಇತ್ಯಾದಿ  ''ಸಕಾಮ'' ಅಂದರೆ ಫಲ ಪಡೆಯುವ ಕಾಮನೆಯನ್ನು ಇಟ್ಟುಕೊಂಡು ಮಾಡುವ ಕರ್ಮಗಳನ್ನು  ಆಚರಿಸದೇ ಇರುವುದು* ಎರಡನೇಯ ಶ್ರೇಣಿಯ ತ್ಯಾಗವಾಗಿದೆ.
(*ಲೌಕಿಕ ಅಥವಾ ಶಾಸ್ತ್ರೀಯವಾದ ಕರ್ಮವು, ಅದು ಸ್ವರೂಪತಃ ಸಕಾಮವಾಗಿದ್ದರೂ ಸಹ, ಅಂತಹ ಕರ್ಮ ಮಾಡಲೇಬೇಕಾಗಿ ಬಂದರೆ/ಅದನ್ನು ಮಾಡದೇ ಬಿಟ್ಟಲ್ಲಿ ಇತರರಿಗೆ ತೊಂದರೆಯಾಗಬಹುದಾದ ಸನ್ನಿವೇಶ ಇದ್ದಲ್ಲಿ ಅಥವಾ ಕರ್ಮೊಪಾಸನೆಯ ಪರಂಪರೆಗೆ ಭಂಗ ಬರುವಂತಿದ್ದರೆ, ತನ್ನ ಸ್ವಾರ್ಥವನ್ನು ಬಿಟ್ಟು ಲೋಕಹಿತಕ್ಕಾಗಿ ಅದನ್ನು ಮಾಡುವುದು ಸಕಾಮವಾಗುವುದಿಲ್ಲ.)

೩. ದುರಾಸೆಯ ಪೂರ್ಣ ತ್ಯಾಗ 
ಗೌರವ, ಹೊಗಳಿಕೆ, ಪ್ರತಿಷ್ಥೆ, ಉದ್ಯೋಗ, ಹೆಂಡತಿ/ಗಂಡ ಮಕ್ಕಳು ಐಶ್ವರ್ಯ ಮುಂತಾದವುಗಳು ಪ್ರಾರಬ್ಧಕ್ಕೆ ತಕ್ಕಂತೆ ಪ್ರಾಪ್ತವಾಗಿರುತ್ತವೆ. ಅವುಗಳನ್ನು ಹೆಚ್ಚಿಸಿಕೊಳ್ಳುವ ಅಸೆ ಮತ್ತು ತನ್ಮೂಲಕ ಅಡ್ಡದಾರಿ ಹಿಡಿಯುವಿಕೆ ''ದುರಾಸೆಯೇ'' ಆಗಿದೆ. ಅಂತಹ ದುರಾಸೆಯನ್ನು ತ್ಯಾಗ ಮಾಡುವುದು ಮೂರನೆಯ ಶ್ರೇಣಿಯ ತ್ಯಾಗವಾಗಿದೆ.

೪. ಸ್ವಾರ್ಥಕ್ಕಾಗಿ ಇತರರಿಂದ ಸೇವೆ ಮಾಡಿಸಿಕೊಳ್ಳುವುದರ ತ್ಯಾಗ 
ತನ್ನ ಶಾರೀರಿಕ ಹಾಗೂ ಮಾನಸಿಕ ಸುಖಕ್ಕಾಗಿ ಬೇರೆಯವರಿಂದ ಹಣ ಮುಂತಾದ ಪದಾರ್ಥಗಳನ್ನು ಯಾಚಿಸುವುದು, ಅಥವಾ ಸೇವೆ ಮಾಡುವಂತೆ ಯಾಚಿಸುವುದು, ಯಾಚಿಸದೇ ಇದ್ದರೂ ಅನಾಯಾಸವಾಗಿ ದೊರೆತ ಪದಾರ್ಥಗಳನ್ನು/ಉಡುಗೊರೆಗಳನ್ನು ಸ್ವೀಕರಿಸುವುದು, ಅನಾಯಾಸವಾಗಿ ಒದಗಿ ಬಂಡ ಸೇವೆ/ಉಪಚಾರ ಮುಂತಾದವುಗಳನ್ನು ಮಾಡಿಸಿಕೊಳ್ಳುವುದು, ಬೇರೆಯವರಿಂದ ತನಗೆ ಉಪಯೋಗವಾಗಬಹುದು ಎಂಬ ಉದ್ದೇಶವನ್ನು ಮನಸ್ಸಿನಲ್ಲಿ ಹೊಂದಿರುವುದು ಇವೆಲ್ಲವುಗಳ ತ್ಯಾಗ* ಮಾಡುವುದು ನಾಲ್ಕನೆಯ ಹಂತದ ತ್ಯಾಗವಾಗಿದೆ.
(* ಶರೀರ ಸಂಬಂಧೀ ಸೇವೆ ಅಥವಾ ಭೊಜನಾದಿ  ಪದಾರ್ಥಗಳನ್ನು ಸ್ವೀಕರಿಸದಿದ್ದರೆ ಇತರರಿಗೆ ತೊಂದರೆಯಾಗುವ ಅಥವಾ ಲೋಕಕ್ಕೆ ಮಾರ್ಗದರ್ಶನವಾಗುವುದಕ್ಕೆ ಅಡ್ಡಿಯಾಗುವುವಂತಹ  ಸಂದರ್ಭ ಯೋಗ್ಯತೆಯಿಂದ ಒದಗಿ ಬಂದರೆ ಅಂತಹ ಸಮಯದಲ್ಲಿ ಸ್ವಾರ್ಥವನ್ನು ತ್ಯಾಗ ಮಾಡಿ ಕೇವಲ ಪ್ರೀತಿಗಾಗಿ ಸೇವಾದಿಗಳನ್ನು ಸ್ವೀಕರಿಸುವುದು ದೋಷವಲ್ಲ. ಏಕೆಂದರೆ ಹೆಂಡತಿ-ಮಕ್ಕಳು ಮತ್ತು ಸೇವಕರಿಂದ ಒದಗಿ ಬರುವ ಪ್ರೀತಿಯ ಸೇವೆ ಹಾಗೂ ಬಂಧು ಬಾಂಧವರು/ಸ್ನೇಹಿತರು  ಪ್ರೀತಿಯಿಂದ ಕೊಡುವ ಭೊಜನಾದಿ ಪದಾರ್ಥಗಳನ್ನು ತಿರಸ್ಕರಿಸುವುದರಿಂದ ಅವರಿಗೆ ದುಃಖ ಉಂಟಾಗುವ ಅಥವಾ ಲೋಕ ಮರ್ಯಾದೆಗೆ ಅಡ್ಡಿ ಬರುವ ಸಂದರ್ಭವಿದ್ದಲ್ಲಿ ಅದನ್ನು ಸ್ವೀಕರಿಸಿ ಅವರಿಗೆ ಸಂತೋಷ ಉಂಟುಮಾಡುವುದೇ ಧರ್ಮವಾಗಿರುತ್ತದೆ.) 

೫. ಸಮಸ್ತ ಕರ್ತವ್ಯಗಳಲ್ಲಿ ಆಲಸ್ಯ ಮತ್ತು ಫಲದ ಇಚ್ಛೆಯ ತ್ಯಾಗ 
ಈಶ್ವರನಲ್ಲಿ ಭಕ್ತಿ , ದೇವತೆಗಳ ಪೂಜೆ, ತಂದೆ-ತಾಯಿ, ಗುರು ಹಿರಿಯರ ಶುಶ್ರೂಷೆ, ಯಜ್ಞ, ದಾನ, ತಪಸ್ಸು ಹಾಗೂ ವರ್ಣಾಶ್ರಮಕ್ಕೆ ಅನುಗುಣವಾದ ಉದ್ಯೋಗದ ಮೂಲಕ ಗೃಹಕೃತ್ಯಗಳ ನಿರ್ವಹಣೆ, ಶರೀರವನ್ನು ಸ್ವಸ್ಥವಾಗಿ ಇಟ್ಟುಕೊಳ್ಳಲು ಮಾಡಬೇಕಾದ ಕ್ರಿಯೆಗಳು ಮುಂತಾದ ಎಲ್ಲ ಕರ್ಮಗಳಲ್ಲಿ ಆಲಸ್ಯವನ್ನು ಹೊಂದಬಾರದು ಮತ್ತು ಅವುಗಳಿಂದ ಎನೂ ಪ್ರತಿಫಲಗಳನ್ನು ಅಪೇಕ್ಷಿಸಬಾರದು. ಇದು ತ್ಯಾಗದ ಐದನೆಯ ಹಂತವಾಗಿದೆ.

 ೬. ಪ್ರಾಪಂಚಿಕವಾದ ಪದಾರ್ಥಗಳಲ್ಲಿ ಮತ್ತು ಕರ್ಮಗಳಲ್ಲಿ ಆಸಕ್ತಿ ಮತ್ತು ಮಮತ್ವದ ತ್ಯಾಗ 
ಪ್ರಾಪಂಚಿಕವಾದ   ಸಮಸ್ತ ವಸ್ತುಗಳು ಅಂದರೆ ಕುಟುಂಬ ಬಂಧು ಬಾಂಧವರು, ವಸ್ತುಗಳು ಆಸ್ತಿ ಪಾಸ್ತಿ, ಸಾಮಾಜಿಕ ಮಾನ ಸಮಾನ, ಪ್ರತಿಷ್ಥೆ, ವಡವೆ ವಸ್ತ್ರ ಮುಂತಾದ ಭೊಗರೂಪಿ ಪದಾರ್ಥಗಳೆಲ್ಲ ಸಮಯದ ಹೊಡೆತಕ್ಕೆ ಸಿಕ್ಕಿ ನಾಶವಾಗಿ ಹೋಗತಕ್ಕವುಗಳು.  ಆದ್ದರಿಂದ ಆ ಸತ್ಯವನ್ನು ಮನದಟ್ಟು ಮಾಡಿಕೊಂಡು ಅವುಗಳ ಬಗ್ಗೆ ''ಮಮತ್ವ ಅಥವಾ ಮಮತೆ'' ಅಂದರೆ ''ಅದು ನನ್ನದು'' ಎಂಬ ಭಾವವನ್ನು ಹಾಗೂ ಅವುಗಳಲ್ಲಿ ಆಸಕ್ತಿಯನ್ನು ತೊರೆಯುವುದು ಆರನೆಯ ಶ್ರೇಣಿಯ ತ್ಯಾಗವಾಗಿದೆ
(* ಸಮಸ್ತ ಕರ್ಮ ಮತ್ತು ಪದಾರ್ಥಗಳ ಬಗೆಗಿನ ಆಸೆ ಮತ್ತು ಫಲಾಪೆಕ್ಷೆಯ ತ್ಯಾಗ ಮೂರು ಮತ್ತು ಐದನೆಯ ಶ್ರೇಣಿಯ ತ್ಯಾಗದಲ್ಲಿಯೇ ಹೆಳಲಾಗಿದೆ. ಆದರೆ ಆಸೆ ಮತ್ತು ಫಲಾಪೆಕ್ಷೆಯ ತ್ಯಾಗವಾಗಿದ್ದರೂ ಕೂಡ ಅವುಗಳಲ್ಲಿ ಮಮತೆ ಮತ್ತು ಆಸಕ್ತಿ ಉಳಿದುಕೊಂಡಿರುತ್ತದೆ. ಅವುಗಳೆರ ಡನ್ನೂ ಸಹ ತೊಎಯುವುದು ಆರನೆಯ ಹಂತವಾಗಿದೆ. ಒಂದು ಜಿಂಕೆಯನ್ನು ನಾವು ಸಾಕಿಕೊಂದ್ದೇವೆ ಅಂತಿಟ್ಟುಕೊಳ್ಳೋಣ. ಆ ಜಿಂಕೆಯಿಂದ ಯಾವುದೇ ಪ್ರಯೋಜನದ ಆಸೆ ನಮಗೆ ಇಲ್ಲದೆ ಹೋದರೂ ಆ ಜಿಂಕೆ ''ನನ್ನದು'' ಅನ್ನುವ ಭಾವ ಮತ್ತು ಅದರ ಪಾಲನಾ ಕ್ರಮದಲ್ಲಿ  ಆಸಕ್ತಿ  ಹಾಗೆಯೇ ಉಳಿದುಕೊಂಡಿರುತ್ತದೆ. ಅಂತಹ ಆಸಕ್ತಿ ಮತ್ತು ಮಮತೆಯನ್ನು ಧ್ಯಾನ, ಸತ್ಸಂಗ ಮುಂತಾದ ಪ್ರಕ್ರಿಯೆಗಳಿಂದ ಮನಸ್ಸನ್ನು ತಿಳಿ ಮಾಡಿಕೊಳ್ಳುವುದರ ಮೂಲಕ ಕಳೆದುಕೊಳ್ಳಬೇಕೆಂದು ಭರತ ಮುನಿಯು ಹೇಳುತ್ತಾನೆ. ಹೀಗೆ ಸಮಸ್ತ ವಸ್ತುಗಳಲ್ಲಿ ಮತ್ತು ಕರ್ಮಗಳಲ್ಲಿ ಮಮತೆ ಮತ್ತು ಆಸಕ್ತಿಯ ತ್ಯಾಗ ಉಂಟಾಗಿ ಕೇವಲ ಸಚ್ಚಿದಾನಂದ ಘನ ಸ್ವರೂಪನಾದ ಪರಮಾತ್ಮನಲ್ಲಿ ವಿಶುದ್ಧ ಪ್ರೇಮ ಉಂಟಾಗುವಿಕೆ ಜ್ಞಾನದ ಹಂತಗಳಲ್ಲಿ ಎರಡನೆಯ ಹಂತವಾಗಿದೆ )

೭.  ಸಂಸಾರ, ಶರೀರ ಮಾತ್ತು ಎಲ್ಲಾ ಕರ್ಮಗಳಲ್ಲಿ ಸೂಕ್ಷ್ಮವಾಸನಾ ಮತ್ತು ಅಹಂಭಾವದ ತ್ಯಾಗ
ಸಾಂಸಾರಿಕ ಪದಾರ್ಥಗಳೆಲ್ಲ ಮಾಯೆಯ ಕಾರ್ಯವಾದ್ದರಿಂದ ಅವುಗಳು ಅನಿತ್ಯವಾಗಿವೆ.  ಆದರೆ ಅವುಗಳಲ್ಲೆಲ್ಲ ಏಕ ಮಾತ್ರ ಸಚ್ಚಿದಾನಂದ ರೂಪಿಯಾದ ಪರಮಾತ್ಮ ಅಥವಾ ಆತ್ಮತತ್ವವೇ ವ್ಯಾಪಿಸಿದೆ, ಎಲ್ಲೆಲ್ಲಿಯೂ ಆತ್ಮವೇ ವ್ಯಾಪಿಸಿಕೊಂಡಿದೆ ಎಂಬ ಮನವರಿಕೆ ಮಾಡಿಕೊಂಡು ಅದರ ಹೊರತಾಗಿ ನಾಮ ರೂಪಗಳ ಆಧಾರದ ಮೇಲೆ ಮತ್ತೊಂದು ವಸ್ತುವನ್ನು ಗುರುತಿಸದೆ ಎಲ್ಲದರಲ್ಲಿ ಏಕತೆಯನ್ನು ಕಂಡು ವಸ್ತು ಮತ್ತು ಕರ್ಮಗಲ್ಲಿನ ಸೂಕ್ಷ್ಮವಾಸನೆ ಅಂದರೆ ವಸ್ತು-ವಿಷಯಗಳ ಸಂಸ್ಕಾರ ರೂಪಿಯಾದ ನಾಮ-ರೂಪಾತ್ಮಕ ಚಿತ್ರವನ್ನು ಹೊಂದದೇ ಇರುವುದು, ಹಾಗೂ ಶರೀರದಲ್ಲಿ ಅಹಂಭಾವ ಸಂಪೂರ್ಣವಾಗಿ ಇಲ್ಲದಂತಾಗಿ ದೇಹ, ಮನಸ್ಸು ಮತ್ತು ವಾಕ್ಕು ಈ ಮೂರರಿಂದಲೂ ನಡೆಯುವ ಕರ್ಮಗಳಲ್ಲಿ ''ಕರ್ತೃತ್ವ ಭಾವ'' ಅಂದರೆ ''ನಾನು ಅವುಗಳನ್ನು ಮಾಡಿದೆ'' ಎಂಬ  ಭಾವವನ್ನು ತ್ಯಜಿಸುವುದು ಏಳನೆಯ ಹಂತದ ತ್ಯಾಗವಾಗಿದೆ.
ಪ್ರಾಪಂಚಿಕ ವಸ್ತುಗಳಲ್ಲಿ ಮತ್ತು ಕರ್ಮಗಳಲ್ಲಿ ಆಸೆ ಮತ್ತು ಫಲಾಪೇಕ್ಷೆ, ಮಮತೆ ಹಾಗೂ ಆಸಕ್ತಿಗಳು ಸಂಪೂರ್ಣವಾಗಿ ನಾಶವಾಗಿದ್ದರೂ ಸಹ ಅವುಗಳ ಮೇಲೆ ಸೂಕ್ಷ್ಮ ಅಭಿಲಾಷೆ, ಮತ್ತು ಕರ್ತೃತ್ವದ ಅಭಿಮಾನ ಹಾಗೆಯೇ ಉಳಿದುಕೊಂಡಿರುತ್ತದೆ. ಆದುದರಿಂದ ಸೂಕ್ಷ್ಮ ಇಚ್ಛೆ ಮತ್ತು ಅಹಂಭಾವಗಳ ತ್ಯಾಗವನ್ನು ಏಳನೆಯ ಹಂತದ ತ್ಯಾಗವೆಂದು ಹೇಳಿದೆ.

ಈ ರೀಯಲ್ಲಿ ಏಳು ಹಂತದ ತ್ಯಾಗವನ್ನು ರೂಡ್ಹಿಸಿಕೊಂಡಲ್ಲಿ ಅರ್ಜಿತ, ಸಂಚಿತ ಮತ್ತು ಪ್ರಾರಬ್ಧ ಎಂಬ ಮೂರೂ ರೀತಿಯ ಕರ್ಮಗಳು ನಾಶವಾಗುತ್ತವೆ. ಇಂತಹ ತ್ಯಾಗದ ಪಾಲನೆಯಿಂದ ಎಲ್ಲ ರೀತಿಯ ಕರ್ಮಗಳನ್ನು ಆಚರಿಸುತ್ತಾ, ಲೋಕವ್ಯವಹಾರಗಳನ್ನು ಮಾಡುತ್ತಲೇ, ಸಾಂಸಾರಿಕ ಜೀವನದಲ್ಲಿ ಇದ್ದುಕೊಂಡೇ ಸುಲಭವಾಗಿ ಮುಕ್ತಿಯನ್ನು ಹೊಂದಬಹುದಾಗಿದೆ. ಆದ್ದರಿಂದ ತ್ಯಾಗವೇ ಎಲ್ಲಕ್ಕಿಂತ ಮಿಗಿಲಾದ ತಪಸ್ಸು ಎಂದು ಕರೆಯಲ್ಪಟ್ಟಿದೆ.



 

Saturday, December 28, 2013

ಭಾನುವಾರದ ಬೆಳಗು


ಧೊಪ್ಪನೆ ಬಾಗಿಲಿಗೆ ಬಡಿದು ಬೀಳುವ ಪ್ರಜಾವಾಣಿ
ಅದರ ಮುಖದಲ್ಲೇ ಸಾವುಗಳ ಸರಮಾಲೆ ಸುದ್ದಿ

ಪಕ್ಕದ ಮನೆಯ ಕಾರಿನ ರಿವರ್ಸ್ ಗೇರಿನ  ಟ್ಯುಯ್ ಟ್ಯುಯ್
ರಸ್ತೆಯಲ್ಲಿ ಪೊರಕೆಯ ಪರ ಪರ...  ಮೆಟ್ಟಿಲುಗಳ ಮೇಲೆ ಬೂಟುಗಳ ಧಗ ಧಗ
ಟೀವಿ.. ಎಫ್ಫೇಮ್ಮುಗಳಲ್ಲಿ ಕರ್ಕಶ ಸುಪ್ರಭಾತ.. ಪೊಳ್ಳು ಜ್ಯೋತಿಷ್ಯದ ಹಾವಳಿ

ಸರ್ವೀಸಿಗೆ ಕೊಡದ ಬೈಕು, ಗುಡಿಸದ ಅಂಗಳ..
ಕಸದ ರಾಶಿಯಂಥ ವಾರ್ಡ್ ರೋಬು..
ತೊಳೆಯದ ಬಾಥ್ ರೂಮು, ವಾಶ್ ಬೇಸನ್ನು
ಹಳೆಯ ಟೂಥ್ ಬ್ರಶ್ಶು.. ಕಮಟು ಚಡ್ಡಿ..
ಏನುಂಟು ..? ಏನಿಲ್ಲ ? ..ಯಾವುದೂ ನೆನಪಿಲ್ಲ

ಅಣಕಿಸುವ ಓದದೇ ಉಳಿದ ಪುಸ್ತಕಗಳು..
ಗಾಭರಿ ಹುಟ್ಟಿಸುವ ಕಳೆದುಕೊಂಡ ರಶೀದಿಗಳು..ಇನ್ಶೂರೆನ್ಸ್ ಬಾಂಡುಗಳು
ಶಪಿಸಲು ಸಿದ್ಧವಾಗುತ್ತಿರುವ್ ಪೂಜೆ ಕಾಣದ ಸಾಲಿಗ್ರಾಮಗಳು..
ಟೇಬಲ್ಲಿನ ಮೇಲೆ ಬೆಸ್ಕಾಂ, ಬಿಎಸ್ಸೆನ್ನೆಲ್ ಬಿಲ್ಲುಗಳು
ಯಾವುದಕ್ಕೂ ಸಮಯ ಉಳಿದಿಲ್ಲ...ನಿದ್ದೆ ಇನ್ನೂ ಮುಗಿದಿಲ್ಲ

ಅಗಿದು ಹಾಕಿದ ರಸ್ತೆ.. ಮೂಗಿಗಡರುವ ಧೂಳು
ಟ್ರಾಫಿಕ್ಕಿನೊಳು ನೀ ತಾಳು.. ಅಷ್ಟರಲೆ ಕ್ರೆಡಿಟ್ ಕಾರ್ಡಿನ ಕಾಲು
ಬೇಕಿದ್ದು.. ಬೇಡದ್ದು ಎಲ್ಲ ತಂದೊಟ್ಟುವ ಸಂತೆ ..
ಐ ಪ್ಯಾಡು.. ಸ್ಮಾರ್ಟ್ ಫೋನು ಇಲ್ಲದವನೇ ಇಲ್ಲಿ ದರಬೇಶಿಯಂತೆ

Thursday, December 26, 2013

ಟೀವಿಯಲ್ಲಿ ಬಿಂಕ ವೈಯ್ಯಾರದಿಂದ
ನೀ ಉಲಿವಾಗ ನಿನ್ನ ಕನ್ನಡಕ್ಕಿಂತ
ನೀ ಚೆಂದ ಕಂಡಿದ್ದೆ..ಎನಗೆ..

ಕನಸುಗಳಲಿ ಬಂದಾಗಲೂ ನೀ
ಅತಿಲೋಕ ಸುಂದರಿಯ ನಾಚಿಸುವ
ತೆರನಾದ ಮಧುರ ಮಾತಿನ ಮಲ್ಲಿ

ಘಲ್ಲೆಂಬ ನಗು ಚೆಲ್ಲಿ ಪಕ್ಕದಲೇ ಸುಳಿದಾಗ
ನಿನ್ನ ಕೂದಲ ಘಮ..ಬೆನ್ನ ಮೇಲಿನ ಗುಳ್ಳೆ
ನವಿರು ತೋಳಿನ ಒನಪು, ತುಟಿಯ ಮೇಲಿನ ಬಣ್ಣ

ಯಾರೋ ಎಂದು ನನ್ನ ತಪ್ಪು ಗುರುತು ಹಿಡಿದ ನೀನು
''ಹೇಗಿದ್ದೀರಿ'' ಎಂದಾಗ ಕಾಲ್ನಡಗಿ.. ಉಸಿರುಡುಗಿ
ನನ್ನ ನಿಜ ಪರಿಚಯವ ಹೇಳಲು ಸೋತಿದ್ದೆ

Wednesday, December 25, 2013

ಸಂಸರ್ಗದಿಂ ಕಾಮವು
ಕಾಮದಿಂ ಕ್ರೋಧವು
ಕ್ರೋಧದ ಸಮ್ಮೋಹದಿ ಸ್ಮ್ರತಿಯಳಿದು
ಬುದ್ಧಿಯ ನಾಶವಂತೆ..ಜೊತೆಗೆ ನಮ್ಮದೂ.. ಸಂಗಾತ್ ಸಂಜಾಯತೆ ಕಾಮಃ

ಜಾಗ್ರುತಿಯಲ್ಲಿ ರೂಪಗಳ ಭ್ರಾಂತು
ಸ್ವಪ್ನದಲಿ ವಾಸನೆಗಳ ಭ್ರಾಂತು
ಸುಷುಪ್ತಿಯ ಆಳದಲಿ ವಿಷಯದ ಮಳೆ ನಿಂತು
ದಕ್ಕುವುದು ಯೋಗ ಅಂತೂ ಇಂತೂ .. ಮುಕ್ತ್ಯೈ ನಿರ್ವಿಷಯಂ ಸ್ಮ್ರುತಂ

ಎಲ್ಲಿಂದ ಬಂತು, ಏನೇನು ಬಂತು..
ಏತಕ್ಕೆ ಬಂತು..ಎಲ್ಲಿಗೆ ಹೊರಟಿಹುದು..
ಕಳಿಸಿದ್ದು ಯಾರು.. ಕರೆವವರು ಯಾರು
ಹಿಡಿ ಕಾಲು ಬಿಡಬೇಡ ತಿಳಿ ಅದನು ನೀ ಮೊದಲು.. ತತ್ ವಿದ್ಧಿ ಪ್ರಣಿಪಾತೇನ ...
ಶುದ್ಧವಲ್ಲದ ಜಾಗೃತಿಯ
ಲೋಕದಲ್ಲಿ ನನ್ನಿಟ್ಟು

ಶುದ್ಧವಾದ ಸ್ವಪ್ನವ
ಆಗಾಗ ತೋರುತ್ತ
ಸುಷುಪ್ತಿಯ ಆನಂದವನು
ಕದ್ದು ಕೊಡುವೆಯೇತಕ್ಕೆ

ಬರಸೆಳೆದು ತಬ್ಬಿ
ಪೂರ್ಣ ಆನಂದವನಿತ್ತು
ಕಳೆಯಬಾರದೇ ಮಾಯೆ
ಮಾತಂಗತನಯೇ...