Tuesday, January 28, 2014

ಸರ್ಟಿಫಿಕೇಟ್

ನಮಗೆ ಸಿಗುವ ಸೀಮಿತ ಅನುಭವ ಮತ್ತು ಅಲ್ಪ-ಸ್ವಲ್ಪ ಮಾಹಿತಿಯ ಆಧಾರದ ಮೇಲೆಯೇ ನಾವು ನಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಂಡು ಆ ಅಭಿಪ್ರಾಯಗಳ ಮೇಲೆ ಪದ್ಮಾಸನ ಹಾಕ್ಕೊಂಡು ಕೂತ್ಕೊಂಡುಬಿಡ್ತೀವಿ. ಜಪ್ಪಯ್ಯ ಅಂದ್ರೂ ಅದರ ಮೇಲಿಂದ ಏಳೊದಿಲ್ಲ.
ನಾನು ಜ್ಯೋತಿಷ್ಯ ಶಾಸ್ತ್ರ ಓದಿಲ್ಲ.. ಜ್ಯೋತಿಷ್ಯ ನಂಬ್ತೀನಿ- ನಂಬೋದಿಲ್ಲ ಇತ್ಯಾದಿ ಇತ್ಯಾದಿ ಚರ್ಚೆಗಳಲ್ಲಿ ನಾನು ಭಾಗವಹಿಸೋದಿಲ್ಲ. ಅದನ್ನು ನಂಬಿ ಅಂತ ಯಾರಿಗೂ ಸಲಹೆನೂ ಕೊಡೋದಿಲ್ಲ. ನಂಬದೇ ಇದ್ದವರನ್ನು ತುಚ್ಛವಾಗಿಯೂ ಕಾಣೋದಿಲ್ಲ. ಮೊನ್ನೆ ಗೆಳೆಯರೊಬ್ಬರು ಇದ್ದಕ್ಕಿದ್ದ ಹಾಗೆ ಜ್ಯೋತಿಷ್ಯದ ಬಗ್ಗೆ ಮಾತು ಶುರು ಹಚ್ಕೊಂಡ್ರು.. ''ನಾನು ನಂಬೋದೇ ಇಲ್ಲ.. ಎಲ್ಲಾ ಕಳ್ಳರು.. ಜ್ಯೋತಿಷ್ಯ ಹೇಳೋ ವ್ಯಕ್ತಿ ತನ್ನ ಸ್ವಂತ ಜೀವನ ಸರಿ ಮಾಡ್ಕೊಳ್ಳೋಕಾಗಲ್ಲ, ಅವನ ಪ್ರಾಣ ಯಾವಾಗ ಹೋಗುತ್ತೋ ಅವನಿಗೇ ಗೊತ್ತಿರೋದಿಲ್ಲ.(ಲಗೇ ರಹೋ ಮುನ್ನಾಭಾಯ್ ಸಿನೆಮಾದಲ್ಲಿ ಹೇಳಿದಹಾಗೆ), ಹುಟ್ಟಿದ ಸಮಯ ಯಾರದ್ದೂ ಸರಿಯಾಗಿ ಯಾರಿಗೂ ಗೊತ್ತಿರೋದಿಲ್ಲ, ಹಿಂಗಾಗಿ ಎಲ್ಲರ ಜಾತಕಗಳೂ ತಪ್ಪಾಗಿಯೇ ಇರ್ತವೆ. etc etc.
ನಾನು ಅವರನ್ನು ''ಇದೆಲ್ಲಾ ನಿಮಗೆ ಹೇಗೆ ಗೊತ್ತಾಯ್ತು ?'' ಅಂತ ಕೇಳಿದೆ. ಅದಕ್ಕೆ ಅವರು ''ನಾನು ಟೀವಿನಲ್ಲಿ ನೋಡಿದೀನಲ್ಲ, ಜ್ಯೋತಿಷ್ಯ ಹೇಳೋರನ್ನ. ಜ್ಯೋತಿಷ್ಯದ ತುಂಬಾ ಕಾರ್ಯಕ್ರಮ ನೋಡಿದೀನಿ'' ಅಂದ್ರು. ಅವರ ಅಭಿಪ್ರಾಯಗಳಿಗೆ ಆಧಾರ ಟಿವಿಯಲ್ಲಿ ಬರುವ ಬ್ರಹ್ಮಾಂಡಸಂತತಿ ಅಂತ ಗೊತ್ತಾಯ್ತು. ಅದಕ್ಕೆ ನಾನು ''ಟೀವಿ ಯಲ್ಲಿ ಬರೋ ಕೆಲ ಯಡವಟ್ಟುಗಳನ್ನು ನೋಡ್ಕೊಂಡು ಇಡೀ ಜ್ಯೋತಿಷ್ಯ ಅನ್ನುವ ಶಾಸ್ತ್ರಕ್ಕೇ ನೀವು ''ಇದು ಸರಿಯಾಗಿಲ್ಲ'' ಅನ್ನೋ ''ಸರ್ಟಿಫಿಕೇಟ್'' ಕೊಡ್ತಾ ಇದೀರಲ್ಲ..? ಇದು ಸರೀ ನಾ..? ಹೋಗ್ಲಿ, ಜ್ಯೋತಿಷ್ಯ ಅನ್ನೋದು ಯಾವ ಗ್ರಂಥದ ಆಧಾರದ ಮೇಲೆ ನಿಂತಿದೆ..? ಅದನ್ನೆಲ್ಲಾ ಬರೆದವರು ಯಾರು ಅಂತೆಲ್ಲಾ ಗೊತ್ತಾ ನಿಮಗೆ..?'' ಅಂತ ಕೇಳಿದೆ. ಅವರಿಗೆ ಅದ್ಯಾವುದೂ ಗೊತ್ತಿರಲಿಲ್ಲ. ಜ್ಯೋತಿಷ್ಯದಲ್ಲಿ ''ಸಂಹಿತೆ, ಸಿದ್ಧಾಂತ, ಹೋರಾ'' ಎಂಬ ಮೂರು ವಿಭಾಗಗಳಿವೆ, ಅದಲ್ಲದೇ ಕಾಲಕಾಲಕ್ಕೆ ಅನೇಕ ಸಂಶೋಧಕರು ಬರೆದ ನೂರಾರು ಗ್ರಂಥಗಳಿವೆ, ಜ್ಯೋತಿಷ್ಯ ಅಂದ್ರೆ ''ನಾಲ್ಕು ಲಕ್ಷ ಶ್ಲೋಕ'' ಗಳಿರುವ ಒಂದು ದೊಡ್ಡ ಶಾಸ್ತ್ರ. ಶಾಸ್ತ್ರ ಯಾವತ್ತೂ ಶಾಸ್ತ್ರೀಯ ನಿಯಮಗಳನ್ನು ಒಳಗೊಂಡಿರುತ್ತೆ. ಅದನ್ನು ಪೂರ್ತಿಯಾಗಿ ಅಧ್ಯಯನ ಮಾಡಲಿಕ್ಕೆ ಕನಿಷ್ಠ12 ರಿಂದ 15 ವರ್ಷಗಳ ಸಮಯಾವಕಾಶ ಬೇಕು. ಅದ್ಯಾವುದೂ ಗೊತ್ತಿಲ್ಲದೇ ಕೇವಲ ಇಪ್ಪತ್ತೇಳು ನಕ್ಷತ್ರ, ಹನ್ನೆರಡು ರಾಶಿ ಇಟ್ಕೊಂಡು ಟೀವಿಯಲ್ಲಿ ರಾಶೀಫಲ ಹೇಳೋರನ್ನು ನೋಡಿಬಿಟ್ಟು ಒಂದಿಡೀ ಶಾಸ್ತ್ರವನ್ನೇ ನೀವು ''ಸರಿಯಿಲ್ಲ'' ಅನ್ನೋದು ಎಷ್ಟು ಸರಿ..? ಒಂದು ವಿಷಯದ ಬಗ್ಗೆ ನಾವು ನಿರ್ಣಯ ಕೊಡಬೇಕು ಅಂದರೆ ಅದರ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇರಬೇಕು ಅಥವಾ ಪೂರ್ತಿ ಮಾಹಿತಿ ಯಾರ ಬಳಿ ಇದೆಯೋ, ಅಂಥವರ ಬಳಿ ಚರ್ಚಿಸಿದ ಮೇಲೆ ನಮ್ಮ ಅಭಿಪ್ರಾಯ ನಿರ್ಮಾಣ ಮಾಡ್ಕೋಬೇಕಲ್ವಾ..? ಅಂದೆ. ನನ್ನ ಮಾತನ್ನು ಒಪ್ಪಿಕೊಳ್ಳಲಿಕ್ಕೆ ಅವರ ''ಇಗೋ'' ಅಡ್ಡ ಬಂತು. ಹಿಂಗಾಗಿ ಮತ್ತೇನೇನೋ ವಾದ ಮಾಡಿದರು. ಆದರೆ ಒಟ್ಟಾರೆ ಅವರ ಅಭಿಪ್ರಾಯಕ್ಕೆ ಆಧಾರವಾದ ಮಾಹಿತಿ ಮತ್ತು ಅನುಭವ ಎರಡೂ ಬಹಳ ನಗಣ್ಯವಾಗಿದ್ದವು. ಆದರೂ ತಮ್ಮ ಅಭಿಪ್ರಾಯ ಪರಮಸತ್ಯ ಅಂತಲೇ ಸಾಧಿಸಲಿಕ್ಕೆ ಅವರು ಪ್ರಯತ್ನ ಪಡ್ತಾ ಇದ್ರು.
ಅದೇ ರೀತಿ ಇನ್ನೊಬ್ಬ ಗೆಳೆಯರು ಸಿನೇಮಾಗಳ ಬಗ್ಗೆ ಮಾತಾಡುವಾಗ ''ನಾನು ಟಾಮ್ ಹಾಂಕ್ಸ್, ಲಿಯೋನಾರ್ಡೋ ಡಿಕಾಪ್ರಿಯೋ, ಕಮಲ್ ಹಾಸನ್ ಇವರನ್ನು ಮಾತ್ರ ನಟ ಅಂತ ಒಪ್ಕೊತೀನಿ. ಅವರ ಚಿತ್ರಗಳನ್ನು ಮಾತ್ರ ನೋಡ್ತೀನಿ'' ಅಂತೆಲ್ಲಾ ನಾನು ಅವರನ್ನು ಕೇಳದೇ ಇದ್ರೂ ಹೇಳ್ತಾ ಇದ್ರು. ''ಅಂದ್ರೆ ನಾನು ಅಷ್ಟು ಹೈ ಲೇವಲ್ಲಿನ ಪ್ರೇಕ್ಷಕ. ನಾನು ಅಷ್ಟು ದೊಡ್ಡ ಬುದ್ಧಿವಂತ, ಉಳಿದವರೆಲ್ಲಾ ನನ್ನ ರೇಂಜ್ ಗೆ ಸರಿ ಸಮಾನರು ಅಲ್ಲ'' ಅನ್ನೋ ಭಾವ ಅವರ ಮಾತಲ್ಲಿ ಢಾಳಾಗಿ ಇತ್ತು. ಹೀಗೆ ಆ ದೊಡ್ಡ ನಟರ ಹೆಸರು ಹೇಳುವುದರ ಮೂಲಕ ಆತ ತನ್ನ ಅಸ್ತಿತ್ವವನ್ನು ಅವರು ನನ್ನ ಮುಂದೆ ಸಾಬೀತು ಪಡಿಸಬೇಕಾಗಿತ್ತು. ಅದು ಆತನ ಸಧ್ಯದ ಅವಶ್ಯಕತೆ ಆಗಿತ್ತು. ನಿಜವಾಗಿಯೂ ಆತನಿಗೆ ಸಿನೆಮಾಗಳ ಬಗ್ಗೆ ಆಸಕ್ತಿ ಅಭಿರುಚಿ ಇದೆ ಅಂತ ನನಗೆ ಅನಿಸಲಿಲ್ಲ. ''ನಾನು ಈ ಜಗತ್ತಿನಲ್ಲಿ ಇದ್ದೀನಿ, ಮತ್ತು ನಾನು ಬಹಳ ಮಹತ್ವಪೂರ್ಣ ಅನ್ನೋದನ್ನು ನೀನು ಗುರುತಿಸಬೇಕು'' ಅನ್ನುವ ಕಾರಣಕ್ಕಾಗಿ ಇಂತಹ ನಟರ ಜೊತೆ, ಸಂಗತಿಗಳ ಜೊತೆ ತನ್ನನ್ನು Identify ಮಾಡಿಕೊಂಡು ಅದನ್ನು ನಾನು ಒಪ್ಪಬೇಕು ಅಂತ ಬಯಸುತ್ತಿದ್ದರು.
ಸ್ವಾಮಿಗಳನ್ನು, ಮಠಾಧಿಪತಿಗಳನ್ನು ಬೈಯುವುದರ ಮೂಲಕ ಕೂಡ ನಾವು ನಮ್ಮ ಅಸ್ತಿತ್ವವನ್ನು ಮತ್ತು ನಮ್ಮ ''ಸಾಚಾತನ''ವನ್ನು ಸಾಬೀತುಪಡಿಸಲಿಕ್ಕೆ ಹೋಗ್ತೀವಿ. ''ನಾನು ಆ ಸ್ವಾಮಿಗಳನ್ನು ನಂಬೋದಿಲ್ಲ ಅಥವಾ ಗೌರವಿಸೋದಿಲ್ಲ, ಅವರೆಲ್ಲ ಖದೀಮರು. ನಾನು ಇಂತಹ ಒಂದು ನಿರ್ದಿಷ್ಟ ಮಠದ ಸನ್ಯಾಸಿಗಳನ್ನು ಮಾತ್ರ ಗೌರವಿಸ್ತೇನೆ. ಯಾಕೆಂದರೆ ಈಗಿನ ಕಾಲದಲ್ಲಿ ಅವರು ಮಾತ್ರ ಸಾಚಾಗಳು'' ಅಂತ ಹೇಳುವ ಗೆಳೆಯರು ಅನೇಕರು ಇದ್ದಾರೆ. ಯಾವುದೋ ಒಬ್ಬ ಸ್ವಾಮಿಗಳಿಗೆ ಸಾಚಾತನದ ''ಸರ್ಟಿಫಿಕೇಟ್'' ನಾವೇ ಕೊಟ್ಟು, ನಾನು ಅವರನ್ನು ಮಾತ್ರ ಗೌರವಿಸ್ತೇನೆ ಅಂತ ಹೇಳುವ ಮೂಲಕ ''ನಾನು ಕೂಡ ಸಾಚಾ'' ಅಂತ ತಮ್ಮನ್ನು ತಾವು ಸಾಬೀತು ಪಡಿಸಿಕೊಳ್ಳುವ ಅನಿವಾರ್ಯತೆಗೆ ಅಂತಹ ಗೆಳೆಯರು ಬಿದ್ದಿರುತ್ತಾರೆ. ಯಾಕಂದರೆ ಯಾರಾದರೂ ಒಬ್ಬರು ಅವರನ್ನು ಅರ್ಜೆಂಟಾಗಿ ''ಇವನು ಸಾಚಾ..ಪ್ರಾಮಾಣಿಕ'' ಅಂತ ಒಪ್ಪಿಕೊಳ್ಳಬೇಕಾಗಿರುತ್ತದೆ. ಕರ್ನಾಟಕದಲ್ಲಿ ತುಂಬಾ ಫೇಮಸ್ ಆಗಿರುವ ಪ್ರವಚನಕಾರ ಆಚಾರ್ಯರೊಬ್ಬರು ಒಂದು ತುಂಬಿದ ಸಭೆಯಲ್ಲಿ ಒಬ್ಬ ಮಹಾ ತಪಸ್ವಿಯಾದ ಪೀಠಾಧಿಪತಿಗಳ ಹೆಸರನ್ನು ಉಲ್ಲೇಖಿಸಿ '' ಈ ಪೀಠ ಪರಂಪರೆಯಲ್ಲಿ ಅಥವಾ ಆಸಿದ್ಧಾಂತದ ಯತಿಗಳಲ್ಲಿ ನಾನು ಅವರನ್ನು ಒಬ್ಬರನ್ನು ಮಾತ್ರ ಒಪ್ಪಿಕೊಳ್ತೇನೆ..ಅಂತ ಅಪ್ಪಣೆ ಕೊಡಿಸಿದರು. ವಾಸ್ತವವಾಗಿ ಈ ಆಚಾರ್ಯರು ಉಲ್ಲೇಖಿಸಿದ ಆ ತಪಸ್ವಿ ಯತಿಗಳು 1954 ರಲ್ಲೇ ತೀರಿಹೋಗಿದ್ದಾರೆ. ಅವರು ತೀರಿಕೊಂಡಾಗ ಈ ಆಚಾರ್ಯರಿನ್ನೂ 16-18 ವರ್ಷದ ಬಾಲಕರಾಗಿದ್ದರು. ಆ
ಆ ಮಹಾನ್ ತಪಸ್ವಿಯಾದ ಯತಿಗಳಿಗೆ ಇವರು ಕೊಡುವ ಈ ಸರ್ಟಿಫಿಕೇಟಿನ ಅಗತ್ಯ ಖಂಡಿತ ಇಲ್ಲ ಹಾಗೂ ಅವರಿಗೆ ಸರ್ಟಿಫಿಕೇಟ್ ಕೊಡುವ ಯೋಗ್ಯತೆ ಈ ಆಚಾರ್ಯರಿಗೆ ಎಳ್ಳಷ್ಟೂ ಇಲ್ಲ. ಆದರೂ ತಮ್ಮ ಹೆಸರನ್ನು ಅಂಥ ಮಹಾತ್ಮರ ಹೆಸರಿನ ಜೊತೆ ಸೇರಿಸಿ, ಅವರನ್ನು ಮಾತ್ರ ಒಪ್ಪಿಕೊಳ್ತೇನೆ ಅಂತ ಹೇಳುವುದರ ಮೂಲಕ ಉಳಿದವರೆಲ್ಲ ನನ್ನ ಪಾಲಿಗೆ ತುಚ್ಛರು, ''ನನ್ನ ಲೇವಲ್ಲೇ ಬೇರೆ'' ಅಂತ ಹೇಳಿಕೊಳ್ಳುವುದರ ಮೂಲಕ ತಮ್ಮ ಬಾಲಬಡುಕರ ಮುಂದೆ ತಾವು ದೊಡ್ಡವರಾಗುವ ಪ್ರಯತ್ನವಲ್ಲದೇ ಮತ್ತೇನು..?

ನಿಜ. ನಮಗೆ ಕೆಲವರ ಬಗ್ಗೆ ವೈಯಕ್ತಿಕವಾಗಿ ಗೌರವವಿರುತ್ತದೆ, ಕೆಲವರ ಬಗ್ಗೆ ಇರುವುದಿಲ್ಲ. ನಮಗೂ ಆ ವ್ಯಕ್ತಿಗೂ ನಡುವೆ ಇರುವ ಸಂಬಂಧ, ನಮ್ಮ ತಿಳುವಳಿಕೆ, ಆ ವ್ಯಕ್ತಿಯ ಬಗೆಗಿನ ತಿಳುವಳಿಕೆ ಮುಂತಾದವುಗಳಿಂದಾಗಿ ನಮಗೆ ಕೆಲ ವ್ಯಕ್ತಿಗಳ ಮೇಲೆ ವಿಶೇಷವಾದ ಗೌರವ ಮೂಡಿರುತ್ತದೆ. ನಮ್ಮ ತಂದೆ ತಾಯಿಯರ ನಡುವೆಯೇ ತಂದೆಯ ಬಗ್ಗೆ ಅಥವಾ ತಾಯಿಯ ಬಗ್ಗೆ ಇಬ್ಬರಲ್ಲಿ ಒಬ್ಬರ ಬಗ್ಗೆ ಹೆಚ್ಚಿನ ಗೌರವ ನಮ್ಮಲ್ಲಿ ಇರುತ್ತದೆ. ಅವರಿಗೂ ನಮಗೂ ನಡುವಿನ ರಕ್ತ ಸಂಬಂಧದ ಹೊರತಾದ ಒಂದು ಹೊಂದಾಣಿಕೆಯಿಂದಾಗಿ ಆ ರೀತಿ ಒಬ್ಬರ ಮೇಲೆ ಹೆಚ್ಚಿನ ಶ್ರದ್ಧೆ ಮೂಡುತ್ತದೆ. ಆದರೆ ಅದನ್ನು ನಾವು ಬಹಿರಂಗವಾಗಿ ಹೇಳಿಕೊಳ್ಳಲು ಹೋಗುವುದಿಲ್ಲ. ಏಕೆಂದರೆ ನಮ್ಮಪ್ಪ ತುಂಬಾ ಗ್ರೇಟ್ ಅಂತ ಹೇಳುವ ಮಾತಿನಲ್ಲೇ ನಮ್ಮ ಅಮ್ಮ ಅಷ್ಟೇನೂ ಗ್ರೇಟ್ ಅಲ್ಲ ಅನ್ನುವ ಅರ್ಥ ಧ್ವನಿಸುತ್ತದೆ. ಹೆತ್ತವರ ಬಗೆಗೆ ನಮ್ಮಲ್ಲಿ ಅಭಿಪ್ರಾಯಗಳು ಮೂಡುವಂತೆಯೇ ಹೊರಜಗತ್ತಿನ ವ್ಯಕ್ತಿ ಮತ್ತು ಸಂಗತಿಗಳ ಬಗ್ಗೆ ಗೌರವಾದರ ಅಥವಾ ತಿರಸ್ಕಾರಗಳು ಮೂಡುತ್ತವೆ. ಆದರೆ ಅವುಗಳನ್ನು ಬಹಿರಂಗವಾಗಿ ನಾನು ಇಂಥದ್ದನ್ನು ಮಾತ್ರ ಗೌರವಿಸುತ್ತೇನೆ ಅಂತ ಹೇಳಿಕೊಳ್ಳುವುದರ ಹಿಂದೆ ಆ ವ್ಯಕ್ತಿ ಅಥವಾ ಸಂಗತಿಯ ಜೊತೆಗೆ ನಮ್ಮನ್ನು ನಾವು ಜೋಡಿಸಿಕೊಳ್ಳುವುದರ ಮೂಲಕ ನಮ್ಮ ಅಸ್ತಿತ್ವವನ್ನು ಹಾಗೂ ತಮ್ಮ ವ್ಯಕ್ತಿತ್ವದ ಪೊಳ್ಳು ಔನ್ನತ್ಯವನ್ನು ಸಾಬೀತುಪಡಿಸುವ ಉದ್ದೇಶವಿರುತ್ತದೆ ಅಷ್ಟೇ. ವೈಯಕ್ತಿಕವಾಗಿ ನಾವು ಯಾರನ್ನು ಗೌರವಿಸುತ್ತೇವೆ, ಯಾರನ್ನು ಇಲ್ಲ ಅಂತ ಬಹಿರಂಗವಾಗಿ ಹೇಳಿಕೊಳ್ಳುವ ಅಗತ್ಯ ಇರುವುದಿಲ್ಲ. ಅದು ನಮ್ಮ ಮನಸ್ಸಿನಲ್ಲಿಯೇ ಇದ್ದರೆ ಚೆಂದ.

Saturday, January 18, 2014


ಸಮರ್ಥ ರಾಮದಾಸರನ್ನು ಛತ್ರಪತಿ ಶಿವಾಜಿ ತನಗೆ ಎಲ್ಲ ರೀತಿಯಿಂದಲೂ ಗುರು ಅಂತ ಒಪ್ಪಿಕೊಂಡು ಅವರ ಆಜ್ಞೆಯಂತೆ ತನ್ನ ಪ್ರಮುಖ ಕೆಲಸಗಳನ್ನು ಮಾಡಿದ. ಅವರು ಅವನಿಗೆ ಆಧ್ಯಾತ್ಮಿಕ ಗುರುಗಳೂ ಕೂಡ ಆಗಿದ್ದರು.   ಈ ರಾಮದಾಸರ ಜೀವನದ ಕಥೆಗಳನ್ನು ಕೇಳುತ್ತಾ ಕೂತರೆ ರೊಮಾಂಚನ ಆಗುತ್ತೆ.  ಭೊಲಾರಾಮ್ ಅನ್ನುವ ಅವರ ಶಿಷ್ಯನೊಬ್ಬನ ಬಗೆಗಿನ ಘಟನೆ ಕೇಳಿ ನಾನು ದಂಗಾಗಿ ಹೋದೆ. ಅದನ್ನು ಮೊದಲ ಬಾರಿ ಕೇಳಿದಾಗಲೂ ನನ್ನ ಕಣ್ಣು ಒದ್ದೆಯಾಗಿದ್ದವು. ನಿನ್ನೆ ರಾತ್ರಿ ಅದನ್ನು ಬರೆಯುವಾಗಲೂ ಕಣ್ಣುಗಳು ಕೊಡಿ ತುಂಬಿ ಹರಿಯುತ್ತಿದ್ದವು. ಹಾಗಾಗಿ ನಿಮ್ಮ ಜೊತೆ ಆ ಘಟನೆಯನ್ನು ಹಂಚಿಕೊಳ್ಳುತ್ತಿದ್ದೇನೆ.

(ಬಹುತೇಕರಿಗೆ ಇದು ಕಟ್ಟು ಕಥೆ ಅಂತ ಅನ್ನಿಸಬಹುದು.. ಆದರೆ ನನಗೆ ಹಾಗನಿಸೊದಿಲ್ಲ. ಏಕೆಂದರೆ ಸಮರ್ಥ ರಾಮದಾಸರು ಅಂದರೆ ಏನು... ಸಂತರು, ಅವಧೂತರು ಅಂದರೆ ಏನು ಅನ್ನುವುದು ನನಗೆ ಚೆನ್ನಾಗಿ ಅನುಭವಕ್ಕೆ ಬಂದಿದೆ. ರಾಮದಾಸರೇ ಈ ಘಟನೆಯನ್ನು  ಒಂದು ಕಡೆ ಉಲ್ಲೇಖಿಸಿದ್ದಾರೆ ಮತ್ತು ಅವರು ಸುಳ್ಳು ಬರೆದಿದ್ದಾರೆ  ಅನ್ನಲು ಸಾಧ್ಯ ಇಲ್ಲ  )

 

ಒಮ್ಮೆ ಸಮರ್ಥರ ಶಿಷ್ಯರನೇಕರು ಸೇರಿ ತಮ್ಮ ಗುರುಗಳನ್ನ್ನು ಕಾಶೀ ಯಾತ್ರೆ ಗೆ ಕರೆದುಕೊಂಡು ಹೋಗಬೇಕು ಅಂತ ಯೋಜನೆ ಮಾಡಿದ್ರು.  ಸಮರ್ಥರೂ ಕೂಡ ಹೊರಡಲು ಸಿದ್ಧರಾದರು.. ಆದರೆ ಸಮರ್ಥರ ಮನೆಯಲ್ಲಿದ್ದ ರಾಮದೇವರ ನಿತ್ಯ ಪೂಜೆ ಮಾಡೋದು ಯಾರು..? ಅನ್ನೋ ಸಮಸ್ಯೆ ಉದ್ಭವ ಆಯ್ತು. ಆಗಿನ ಕಾಲದಲ್ಲಿ ಈಗಿನಷ್ಟು  Transport ಸೌಲಭ್ಯಗಳು ಇಲ್ಲದೇ ಇದ್ದುದರಿಂದ ಕಾಶೀ ಯಾತ್ರೆ ಮುಗಿಸಿಕೊಂಡು ಬರಲಿಕ್ಕೆ ಒಂದು ತಿಂಗಳಿಗಿಂತ ಹೆಚ್ಚು ಸಮಯ ಬೇಕು. ಅಷ್ಟು ದಿನಗಳ ಕಾಲ ಇಲ್ಲೇ ಇದ್ದುಕೊಂಡು ದೇವರ ಪೂಜೆ ಮಾಡುವವರು ಯಾರು..? ಎಲ್ಲರೂ ಪ್ರಯಾಣಕ್ಕೆ ಹೊರಡುವ ಉತ್ಸಾಹದಲ್ಲಿದ್ದರು. ಆಗ ಸಮರ್ಥರ ಶಿಷ್ಯರಲ್ಲಿ ಅತೀ ಕಿರಿಯನಾದ ಮತ್ತು ತುಂಬಾ ಅಮಾಯಕನಾದ ಹುಡುಗನೊಬ್ಬನಿದ್ದ. ಅವನಿಗೆ ವಯಸ್ಸಿಗೆ ತಕ್ಕ ಲೋಕಜ್ಞಾನ ಇಲ್ಲದ ಕಾರಣ ಅವನನ್ನು ಎಲ್ಲರೂ ''ಭೋಲಾ ರಾಮ್''  ಅಂತ ಕರೀತಿದ್ರು. ಅವನಿಗೆ ಆಗ ಕೇವಲ ಹತ್ತು ವರ್ಷ ವಯಸ್ಸು. ಅವನ ಮೇಲೆ ಪೂಜೆಯ ಜವಾಬ್ದಾರಿಯನ್ನು ತಳ್ಳಿಹಾಕಿ ಬಾಕೀ ಎಲ್ಲಾ ಶಿಷ್ಯರೂ ಹೊರತು ನಿಂತರು. ನೀನು ಯಾತ್ರೆಗೆ ಬಂದರೆ ದಾಇಯಲ್ಲಿ ಕಳೆದು ಹೋಗ್ತೀಯಾ.. ದಾರಿಯಲ್ಲಿ ಕ್ರೂರ ಮೃಗಗಳು  ಇರ್ತವೆ. ನಿನ್ನನ್ನು ತಿಂದು ಹಾಕ್ತವೆ. ಕಾಶಿಗೆ ಬಂದರೂ ನೀನಗೆನೂ ಗೊತ್ತಾಗೋದಿಲ್ಲ.. ಇಲ್ಲೇ ಇದ್ದುಕೊಂಡು ಪೂಜೆ ಮಾಡು ಅಂತ ಅವನನ್ನು ಒಪ್ಪಿಸಿ  ಗುರುಗಳಿಗೆ  ”ಭೊಲಾ ಪೂಜೆ ಮಾಡ್ತಾನೆ..ನಾವು ನಿಶ್ಚಿಂತೆಯಾಗಿ ಹೊರಡೋಣ ಬನ್ನಿ ಅಂದರು.”’
ಭೋಲಾ ಬಂದು ಗುರುಗಳ ಮುಂದೆ ನಿಂತ. ಸಮರ್ಥರು ಹೇಳಿದ್ರು.. ''ನೋಡು ಭೋಲಾ , ನಾವು ಕಾಶಿಗೆ ಹೋಗಿ ಬರೋವರೆಗೂ ನಮ್ಮ ರಾಮನನ್ನು ಚೆನ್ನಾಗಿ ನೋಡ್ಕೋ..  ಸರಿಯಾಗಿ ಪೂಜೆ ಮಾಡು'' ಅಂದ್ರು.
ಭೋಲಾಗೆ ಪೂಜೆ ಮಾಡುವ ವಿಧಾನ ಗೊತ್ತಿರಲಿಲ್ಲ. ''ಹೇಗೆ ಮಾಡಲಿ'' ಅಂತ ಕೇಳಿದ.  ಆಗ ಗುರುಗಳು ವಾತ್ಸಲ್ಯದಿಂದ ''ಮುಂಜಾನೆ ಎದ್ದ ಕೂಡಲೇ  ಸುಪ್ರಭಾತ ಹಾಡಿ ದೇವರನ್ನು ಎಬ್ಬಿಸಬೇಕು, ಆಮೇಲೆ ಕಾಕಡಾರತಿ ಮಾಡಬೇಕು. ಸ್ನಾನ ಮಾಡಿ ಊರಿನ ಬೀದಿಗಳಲ್ಲಿ ಮನೆಗಳಿಗೆ ಹೋದರೆ ಧವಸ -ಧಾನ್ಯ ಬಿಕ್ಷೆ ಸಿಗುತ್ತೆ. ಅದನ್ನು ತಂದು ನಿನಗೆ ತಿಳಿದ ಹಾಗೆ ಅಡುಗೆ ಮಾಡು.  ನಿನಗೆ ತಿಳಿದ ಹಾಗೆ ಪೂಜೆ ಮಾಡಿ ನೈವೇದ್ಯ ಮಾಡು. ದೇವರನ್ನ ಉಪವಾಸ ಇರೋ ಹಾಗೆ ಮಾಡಬೇಡ'' ಅಂತ ಹೇಳಿ ಆಶೀರ್ವಾದ ಮಾಡುವಂತೆ ಅವನ ಕೆನ್ನೆಯನ್ನು  ಸವರಿ ಕಾಶಿಗೆ ಹೊರಟು ಹೋದರು.
ಮಾರನೆಯ ದಿನ ಮುಂಜಾನೆ ಭೊಲಾರಾಮ್ ಗುರುಗಳು ಹೇಳಿದಂತೆ ಎಲ್ಲ ಮಾಡಿದ.   ನೈವೇದ್ಯದ ಸಮಯ ಬಂದಾಗ ಭಿಕ್ಷೆಯಿಂದ ಬಂದ ಪದಾರ್ಥಗಳಿಂದ ಅಡುಗೆ ಮಾಡಿ ಅದನ್ನು ಒಂದು ತಟ್ಟೆಯಲ್ಲಿ ಹಾಕಿಕೊಂಡು ರಾಮ ದೇವರ ಮುಂದೆ ಇಟ್ಟು ಕೈ ಮುಗಿದು ನಿಂತ. ಅವನ ಗುರುಗಳು  ಪ್ರತಿ ದಿನ ನೈವೇದ್ಯ ಮಾಡುವಾಗ ಪೂಜಾ ಮಂದಿರದ ಬಾಗಿಲು ಮುಚ್ಚಿಕೊಳ್ಳುತ್ತಿದ್ದರಿಂದ ಭೊಲಾನಿಗೆ ನೈವೇದ್ಯ ಮಾಡುವ ವಿಧಾನ ಗೊತ್ತಿರಲಿಲ್ಲ. ಮಧ್ಯಾನ್ಹದ ಸಮಯ ಆದ್ದರಿಂದ  ಭೊಲಾರಾಮನಿಗೂ ಹಸಿವಾಗಿತ್ತು. ಹೀಗಾಗಿ ''ರಾಮ..! ಬೇಗ ಊಟ ಮಾಡು'' .. ಅಂತ ಅವಸರಿಸಿದ.  ಆದರೆ ರಾಮನ ಕಡೆಯಿಂದ ಯಾವುದೇ ಉತ್ತರವಿಲ್ಲ.  ಭೊಲಾ ಬಗೆ ಬಗೆಯಲ್ಲಿ ಬೇಡಿಕೊಂಡ.. ''ನನ್ನ ಗುರುಗಳು ನಿನಗೆ ಊಟ ಮಾಡಿಸದೇ   ಊಟ ಮಾಡಬೇಡ ಅಂತ ಹೇಳಿದ್ದಾರೆ.. ಹಿಂಗಾಗಿ ಬೇಗ ಬಂದು ಊಟ ಮಾಡು.  ನನಗೆ ಹಸಿವು ತಡೆಯಲಾಗುತ್ತಿಲ್ಲ..  '' ಅಂದ. ರಾಮ ಬರಲಿಲ್ಲ. ಭೋಲಾ ಮಾಡಿದ ಎಲ್ಲ ಪ್ರಯತ್ನ ಗಳೂ ವಿಫಲವಾಗುತ್ತಿದ್ದವು. ಸಮಯ ಉರುಳಿ ಹೋಗಿ ಸಂಜೆಯಾಗುತ್ತಾ ಬಂದಿತ್ತು. ಭೋಲಾ ಕಣ್ಣೀರು ಸುರಿಸಿ ಬೇಡಿಕೊಂಡ..  ರಾಮ ಉಣ್ಣಲಿಲ್ಲ. ರಾತ್ರಿಯೂ ಆಗಿ ಹೋಯಿತು. ಆಗ ಆಗಿ ರೋಸಿ ಹೋದ ಭೋಲಾ ತನ್ನ ತಲೆಯನ್ನು ರಾಮನ ವಿಗ್ರಹದ ಕಟ್ಟೆಗೆ ಚಚ್ಚಿಕೊಂಡು ಗಾಯ ಮಾಡಿಕೊಂಡು ಮೂರ್ಛೆ ಹೋದ. ಆಗ ಸೀತೆ, ಲಕ್ಷ್ಮಣ, ಹನುಮಂತನ ಸಮೆತನಾದ ಶ್ರೀರಾಮ ಭೌತಿಕವಾಗಿ ಬಂದು ಆ ಭೊಲರಾಮನನ್ನು ಉಪಚರಿಸಿ ಎಬ್ಬಿಸಿ ಕೂರಿಸಿ ಅವನು ಬಡಿಸಿದ ನೈವೇದ್ಯವನ್ನು ಊಟ ಮಾಡಿದ.   ''ನಾಳೆಯಿಂದ ಇಷ್ಟು ತಡ ಮಾಡಿ ಬರಬಾರದು.. ಬೇಗ ಬರಲೇ ಬೇಕು..'' ಅಂತ ಶ್ರೀರಾಮನಿಗೆ ಭೋಲಾ ಆರ್ಡರ್ ಮಾಡಿದ. ಶ್ರೀರಾಮ ''ಆಗಲಿ ಕಣಪ್ಪಾ'' ಅಂತ ಒಪ್ಪಿಕೊಂಡು ಹೋದ.  ಹೀಗೆ ಪ್ರತೀ ದಿನ ಯಥಾ ಪ್ರಕಾರ ಮಧ್ಯಾನ್ಹದ ಹೊತ್ತಿಗೆ ರಾಮ- ಸೀತೆ  ಬಂದು ಭೋಲಾ ಬಡಿಸುತ್ತಿದ್ದ ಊಟ ಮಾಡಿ ಹೋಗುತ್ತಿದ್ದರು. ನಾಲ್ಕಾರು ದಿನಗಳು ಕಳೆದ ಮೇಲೆ  ಶ್ರೀರಾಮ ಊಟ ಮುಗಿಸಿ  ಕೈ ತೊಳೆಯುವಾಗ ಅವನ ಕೈ ಗೆ ನೀರು ಹಣಿಸುತ್ತಿದ್ದ ಭೋಲಾ ರಾಮನನ್ನು ಕುರಿತು ''ನೋಡು ರಾಮಾ..   ನೀವೆಲ್ಲಾ ನೈವೇದ್ಯದ ಸಮಯಕ್ಕೆ ಬರ್ತೀರಿ. ಅಂದಮೇಲೆ ಈ ನೈವೇದ್ಯವೇ ಪೂಜೆಯ ಪ್ರಮುಖ ಉಪಚಾರ ಅಂತಾಯ್ತು. ಹಾಗಾಗಿ  ನಾನು ಬೆಳಿಗ್ಗೆ ಅಷ್ಟು ಬೇಗ ಎದ್ದು ಸುಪ್ರಭಾತ ಹಾಡೋದು, ಕಾಕಡಾರತಿ ಮಾಡೋದು.. ಇವೆಲ್ಲಾ ಬೇಕಾ..? '' ಅಂತ ಕೇಳಿದ.
''ಅದೆಲ್ಲಾ ಏನು ಬ್ಯಾಡ ಬಿಡು'' ಅಂತ ರಾಮನೂ ಒಪ್ಪಿಕೊಂಡ.

ಮತ್ತೆ ಒಂದೆರಡು ದಿನ ಕಳೆದ ಮೇಲೆ   '' ರಾಮಾ.. ನಾನಿನ್ನೂ ಚಿಕ್ಕ ಹುಡುಗ.. ಕಾಡಿನಿಂದ ಸೌದೆ ಆರಿಸಿಕೊಂಡು ಬರೋದು, ಊರಲ್ಲಿ ಭಿಕ್ಷೆ ಬೇಡಿ ತರೋದು, ಹಸುಗಳನ್ನು ನೋಡಿಕೊಂಡು ಹಾಲು ಕರೆಯೊದು .. ಇವೆಲ್ಲ ತುಂಬಾ ಕಷ್ಟ ಆಗ್ತಾ ಇದೆ. ನಿನ್ನ ಜೊತೆಗೆ ಯಾವಗಲೂ ಈ ಹನುಮಂತ ಮತ್ತು ಲಕ್ಷ್ಮಣ ಖಾಲಿ ಖಾಲಿಯಾಗಿ ಒಡಾಡಿಕೊಂಡಿರ್ತಾರೆ.. ಅವರಿಬ್ಬರಿಗೂ ನನ್ನ ಸಹಾಯ ಮಾಡು ಅಂತ ಹೇಳಬಾರದಾ..?''  ಅಂತ ತನ್ನ ಅಮಾಯಕ ಬೇಡಿಕೆ ಮುಂದಿಟ್ಟ.   ಮಾರನೆ ದಿನದಿಂದಮಾರುತಿ ಮತ್ತು ಲಕ್ಷ್ಮಣನಿಗೆ ಫುಲ್ ಟೈಮ್ ಡ್ಯುಟಿ ಬಿತ್ತು . ಅವರಿಬ್ಬರೂ ಬೆಳಿಗ್ಗೆಯೇ ಬಂದು ಭೋಲಾ ಹೇಳಿದ ಕೆಲಸಗಳನ್ನೆಲ್ಲಾ ಮಾಡುತ್ತಿದ್ದರು. ಮತ್ತೆ ನಾಲ್ಕಾರು ದಿನಗಳು ಕಳೆದ ಮೇಲೆ ಭೋಲಾ '' ರಾಮಾ... ನಮ್ ಸೀತಮ್ಮನೊರಿಗೆ ಅಡುಗೆ ಮಾಡೋ ಅಭ್ಯಾಸ ಇದೆಯಾ. ಅಥವಾ ಮರೆತು ಹೋಗಿದೆಯಾ ..?''  ಅಂತ ಮೆಲ್ಲನೆ ಕೇಳಿದ.   ರಾಮ ನಗುತ್ತ .. ''ಆಗಲಿ ನಾಳೆಯಿಂದ ಅವಳು ಅಡುಗೆ ಮಾಡ್ತಾಳೆ ಬಿಡು'' ಅಂದ. ಭೌತಿಕ ನಿಯಮಕ್ಕೆ ಕಟ್ಟುಬಿದ್ದ ಸೀತೆ ಓಲೆ ಹೊತ್ತಿಸಿ ಹೊಗೆಯಿಂದ ಕಣ್ಣು ಮೂಗು ಕೆಂಪಗೆ ಮಾಡಿಕೊಂಡು ಅಡುಗೆ ಮಾಡತೊಡಗಿದಳು. ಸೀತಮ್ಮ ಅಡುಗೆ ಸಿದ್ಧ ಮಾಡುವ ವರೆಗೂ ಶ್ರೀರಾಮನ  ಜೊತೆಗೆ  ಭೋಲಾ ಹರಟೆ ಹೊಡೆಯುತ್ತಾ ಕೂರುತ್ತಿದ್ದ. ಹೀಗೇ ದಿನಗಳು ಸಾಗಿದ್ದವು. ಒಂದು ದಿನ ಸೀತಮ್ಮ ಅಡುಗೆ ಮಾಡುವಾಗ ಹಿಂದಿನ ದಿನ ರೊಟ್ಟಿ ಮಾಡಲಿಕ್ಕೆ ಕಲಸಿದ ಹಿಟ್ಟು ಉಳಿದಿತ್ತು. ಅದಕ್ಕೆ ನೀರು ಹಾಕಿ ಕುದಿಸಿ ಮಜ್ಜಿಗೆ ಮತ್ತು ಒಗ್ಗರಣೆ ಹಾಕಿ ''ಕಾಳಾ'' ಅನ್ನುವ ಮರಾಠಿಗರು ಇಷ್ಟ ಪಟ್ಟು ಕುಡಿಯುವ ಪೇಯ ಸಿದ್ದ ಪಡಿಸಿದಳು. ಯಥಾ ಪ್ರಕಾರವಾಗಿ ರಾಮನ ಪಕ್ಕದಲ್ಲಿ ಭೋಲಾ ಕೂಡ  ಊಟಕ್ಕೆ ಕುಳಿತಿದ್ದ . ಸೀತಮ್ಮ ನಾಲ್ಕೂ ಜನರಿಗೆ ಊಟ ಬಡಿಸುತ್ತಿದ್ದಳು. ಒಂದು ಊಟದೆಲೆಯ ಮುಂದೆ ಎಲ್ಲರಿಗೂ ಬಟ್ಟಲುಗಳನ್ನು ಇಟ್ಟು ಅದರಲ್ಲಿ ''ಕಾಳಾ'' ಅನ್ನು ಬಡಿಸಿದಳು.   ತನ್ನ ಪಾಲಿನ ''ಕಾಳಾ'' ತುಂಬಿದ ಬಟ್ಟಲನ್ನು ಹಿಡಿದು ಎದ್ದು ನಿಂತ. ಪಕ್ಕದಲ್ಲಿ ಕುಳಿತಿದ್ದ ರಾಮ. ''ಯಾಕೋ ಭೋಲಾ.. ಬಟ್ಟಲು ತೊಗೊಂಡು ಎಲ್ಲಿಗೆ ಹೊರಟೆ.. ?'' ಅಂತ ಕೇಳಿದ
''ಈ ಕಾಳಾ ನಮ್ ಗುರುಗಳಿಗೆ ಭಾಳ ಇಷ್ಟ.. ಅವರಿಗೆ ಒಂದು ಬಟ್ಟಲು ಕೊಟ್ಟು ಬರ್ತೀನಿ'' ಅಂದ
ಅದಕ್ಕೆ ಪ್ರತಿಯಾಗಿ ರಾಮ ''ಅಯ್ಯೋ ಪೆದ್ದ.. ನಿಮ್ ಗುರುಗಳು ಕಾಶಿಯಲ್ಲಿ ಇದ್ದಾರಲ್ಲೋ..  ನೀನು ಅಲ್ಲಿಗೆ ಹೋಗಿ ಕೊಟ್ಟು ಬರೋಕೆ ಆಗೋದಿಲ್ಲ'' ಅಂದ
ಆಗ ಭೋಲಾ ತುಂಟ ನಗೆ ನಗುತ್ತಾ ''ರಾಮಾ...  ಈ ಮಾರುತಿ ಇದಾನಲ್ಲ ಜೊತೆಯಲ್ಲಿ.. ಆರಾಮಾಗಿ ಕಾಶಿಗೆ ಹೋಗಿ ಬರಬಹುದು'' ಅಂದ
ಭಗವಂತ ಭಕ್ತಿಗೆ ಬದ್ಧನಲ್ಲವೇ..?   ರಾಮ ಒಪ್ಪಿದ.
ಮಾರುತಿ ಭೊಲಾನನ್ನು ಹೊತ್ತುಕೊಂಡು ಕಾಶಿಯ ಗಂಗೆಯ ಹತ್ತಿರ ಇಳಿಸಿ ಹೇಳಿದ. ''ಅಲ್ಲಿ ನೋಡು.. ನಿಮ್ಮ ಗುರುಗಳು ಮಧ್ಯಾನ್ಹದ ಅಹ್ನಿಕ ಮಾಡಿ ಬ್ರಮ್ಹಯಜ್ಞದ ತರ್ಪಣಗಳನ್ನ ಮಾಡ್ತಾ ಇದ್ದಾರೆ. ಅವರಿಗೆ ಬಟ್ಟಲು ಕೊಟ್ಟು ಬೇಗ ಬಂದುಬಿಡು. ಅವರಿಗೆ ನಾನು ನಿನ್ನನ್ನು ಇಲ್ಲಿಗೆ ಕರೆತಂದಿದ್ದು ಅಂತ ಹೇಳಬೇಡ.'' ಅಂತ ತಾಕೀತು ಮಾಡಿ ಕಳಿಸಿದ.

ನೀರಲ್ಲಿ ನಿಂತು ತರ್ಪಣ ಮಾದುತ್ತಿದ್ದ ಸಮರ್ಥರ ಮುಂದೆ ಚಂಗನೆ ಹಾರಿ ಬಂದು ನಿಂತು '' ತುಮಚ್ಯಾ ಸಾಠಿ ಕಾಳಾ ಆಣ್ಲೋ .. ಬಗಾ''  ''ನಿಮಗಾಗಿ ಕಾಳಾ ತಂದಿದೀನಿ ನೋಡಿ''  ಅಂತ ಅವರ ಮುಂದೆ ಹಿಡಿದ.
ಸಮರ್ಥರು ಒಮ್ಮೆಲೇ ದಂಗಾಗಿ ''ಇಲ್ಲಿಗೆ ಹೇಗೆ ಬಂದ್ಯೋ  ನೀನು ? '' ಅಂತ ಕೇಳಿದರು. ಆಗ ಭೋಲಾ ದೂರದಲ್ಲಿ ನಿಂತಿದ್ದ ಮಾರುತಿಯನ್ನು ಗುರುಗಳಿಗೆ  ತೋರಿಸಿ ''ನಿಮಗೆ ಹೇಳಬೇಡ ಅಂದಿದಾನೆ'' ಅಂತ ಮಾರುತಿಯ ಬಗ್ಗೆ ದೂರು ಕೂಡ ಕೊಟ್ಟ. ಮಾರುತಿಯ ಹತ್ತಿರ ಬಂದ ಸಮರ್ಥರು ಅವನ ಕಾಲಿಗೆರಗಿದರು. ನಡೆದಿದ್ದೆಲ್ಲವನ್ನೂ ಅರ್ಥ ಮಾಡಿಕೊಂಡ ಸಮರ್ಥರು ''ನನ್ನ ಶಿಷ್ಯನಿಂದಾಗಿ ನಿನಗೆ ತುಂಬಾ ತೊಂದರೆ ಆಯ್ತು ಮಾರುತಿ..'' ಎಂದು ಕ್ಷಮೆ ಕೇಳಿದರು. ಆಗ ಮಾರುತಿ ''ನನಗೇನೂ ತೊಂದರೆಯಿಲ್ಲ ರಾಮದಾಸರೇ. .. ಆದರೆ ನಿಮ್ಮ ಶಿಷ್ಯನಿಂದ  ನಮ್ಮ ಸೀತಮ್ಮನವರಿಗೆ ಮಾತ್ರ ಬಹಳ ತೊಂದರೆ ಆಗ್ತಾ ಇದೆ'' ಅಂತ ದೂರಿದ.  ಗಂಗೆಯ ದಡದಲ್ಲಿ ಪಿಳಿ ಪಿಳಿ ಕಣ್ಣು ಬಿಡುತ್ತ ಇವರಿಬ್ಬರ  ಮಾತು ಕೇಳುತ್ತ ನಿಂತಿದ್ದ ಅಮಾಯಕ ಭೊಲಾರಾಮನನ್ನು ಸಮರ್ಥ ರಾಮದಾಸರು ಅಪ್ಪಿಕೊಂಡು   ''ಎಂಥಾ ಭ್ಯಾಗ್ಯ ಸಿಕ್ತಲ್ಲೊ ಭೋಲಾ ನಿನಗೆ.. '' ಅಂತ ಅವನನ್ನು ಮುದ್ದಾಡಿದರು.

 (ಸಮರ್ಥ ರಾಮದಾಸರು ಇನ್ನೂ ಅಧ್ಯಾತ್ಮಿಕ ಸಾಧನೆಯ ಪ್ರಾರಂಭದಲ್ಲಿದ್ದಾಗ ನಡೆದ ಘಟನೆ ಇದು. ಮುಂದೆ ಸಮರ್ಥರು  ಆಗಾಧವಾಗಿ ಬದಲಾದರು. ಸನ್ಯಾಸ ಪಡೆದರು. ಅವರ ಊರು ''ಟಾಕಳಿ'' ಯಲ್ಲಿ ಸೀತಮ್ಮನವರು ಬಂದು ಅಡುಗೆ ಮಾಡಿದ ಅಡುಗೆ ಮನೆ ಇಂದಿಗೂ ಇದೆ.)

ಅಂಕಣಗಳು
ಪ್ರತಿಸ್ಪಂದನ | ಎಚ್.ಎಸ್.ಶಿವಪ್ರಕಾಶ್ ಆಗಮೋಕ್ತವಾಗಿ ಪ್ರಾರಂಭ­ವಾ­ದರೂ ಮಾ­ದಾರ ಚನ್ನಯ್ಯ-,ದೇವರ ದಾಸಿ­ಮಯ್ಯ -ಬಸವಾದಿ ಪ್ರಮಥರ ಮೂಲಕ ಒಂದು ವಿಶಾಲ­ಭಿತ್ತಿ ಮತ್ತು ವ್ಯಾಪ್ತಿಯನ್ನು ಪಡೆದು­ಕೊಂಡ ವೀರಶೈವ ಲಿಂಗಾಯತ ಸಮಾಜದ ಸ್ವರೂಪ ಮತ್ತೆ ಚರ್ಚೆ­ಯಲ್ಲಿದೆ. ಈಚೆಗೆ ವೀರ­ಶೈವ ಮಹಾ­ಸಭೆ­ಯವರು ತಾವು ಹಿಂದೂ ಧರ್ಮದ ಭಾಗವಲ್ಲ, ತಮ್ಮದು ಒಂದು ಸ್ವತಂತ್ರ ಧರ್ಮ­ವಾಗಿ­ರುವುದರಿಂದ ತಮಗೆ ಪ್ರತ್ಯೇಕ ಧರ್ಮದ ಸ್ಥಾನ ನೀಡ­ಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ನೀಡಿದ್ದು ಈಗಾಗಲೇ ಕೇಂದ್ರ ಸರ್ಕಾರ ಈ ಮನವಿಯನ್ನು ನಿರಾಕರಿಸಿದೆ. 
ಮಹಾ­­ಸಭೆಯ ವಿಚಾರವನ್ನು ಅನು­ಮೋದಿಸದ ಪ್ರೊ.ಚಿದಾನಂದ ಮೂರ್ತಿ­ಯವರಂಥ ಹಿರಿ­ಯರೂ ಕೆಲವು ಗೌರವಾನ್ವಿತ ಸಂಪ್ರದಾಯ ಪರಾ­ಯಣ ಮಠಾಧಿಪತಿಗಳೂ ವೀರಶೈವ ಧರ್ಮದ ಪ್ರತ್ಯೇಕ ಅಸ್ತಿತ್ವ­ವನ್ನೊಪ್ಪದೆ ಅದು ಹಿಂದೂ ಧರ್ಮದ ಒಂದು ಭಾಗವೆಂದು ಘಂಟಾ­ಘೋಷವಾಗಿ ಸಾರಿದ್ದಾರೆ.
ಈ ಬಗ್ಗೆ ಇತ್ತೀಚೆಗೆ ನಾನೂ ಯೋಚಿಸ­ತೊಡಗಿದ್ದೇನೆ. ಕಾರಣ ನಾನು ವೀರಶೈವ ಕುಟುಂಬ­­ವೊಂದ­ರಲ್ಲಿ ಹುಟ್ಟಿದ್ದು ಮಾತ್ರವಲ್ಲ. ಹಾಗೆ ಹುಟ್ಟಿದ್ದರೂ ನಾನು ವೀರಶೈವ, ಬೌದ್ಧ, ಶಾಕ್ತ ಸಾಧನಾ ಕ್ರಮಗಳ ಮೂಲಕ ಮುನ್ನ­ಡೆದು ಕಾಶ್ಮೀರ ಶೈವ­ದರ್ಶನದ ಸ್ಪಂದ­ಮತ­ವನ್ನು ನನ್ನ ವಿಶ್ವಾಸಗಳ ಚೌಕಟ್ಟನ್ನಾಗಿ ನಿರ್ಮಿಸಿ­ಕೊಂಡಿ­ದ್ದೇನೆ.
ಒಂದು ಪಕ್ಷ ನಾನು ವೀರಶೈವೇ­ತರನಾಗಿ ಹುಟ್ಟದಿದ್ದರೂ ಈ ಸಮಸ್ಯೆ ನನ್ನನ್ನು ಕಾಡುತ್ತಿತ್ತು. ಯಾಕೆಂದರೆ ಯಾರು ಒಪ್ಪಲಿ ಬಿಡಲಿ, ವೀರಶೈವ  ದೃಷ್ಟಿಯ ಅಭಿವ್ಯಕ್ತಿಯೆಂದು ಗುರುತಿಸಲಾಗಿರುವ ಕನ್ನಡ ವಚನ ವಾಙ್ಮಯ­ವು ಕನ್ನಡ ಭಾಷೆ ಮತ್ತು ಸಂಸ್ಕೃತಿಗಳ ಒಂದು ಬಹು ಮುಖ್ಯ ಸ್ರೋತ­ವಾಗಿದೆ. ಅದೊಂದು ಜೀವಂತ ಧಾರೆ­ಯಾಗಿರುವ ಕಾರಣ ಇಂದೂ ಹಲವು ಮಂದಿ ವೀರಶೈವೇತರ ಚಿಂತಕರಿಗೆ, ಕಲಾವಿದರಿಗೆ, ಸಾಮಾಜಿಕ ಆಂದೋಲನಗಳಿಗೆ ಹೊಸಹೊಸ ಸಂಪನ್ಮೂಲ­­ಗಳನ್ನೂ ಅದು ಇಂದಿಗೂ ನೀಡುತ್ತಿದೆ. ಆದ್ದರಿಂದ ಈ ಬಹು­ಜನಾಭಿವ್ಯಕ್್ತಿ ಸಮು­ಚ್ಚಯದ ತಾತ್ವಿಕ ಮತ್ತು ಧಾರ್ಮಿಕ ಚೌಕಟ್ಟುಗಳನ್ನು ಅರಿತುಕೊಳ್ಳು­ವುದು ಜರೂರಿಯಾಗಿದೆ.
ವೀರಶೈವದ ಸ್ವರೂಪದ ಬಗ್ಗೆ ವೀರ­ಶೈವರಲ್ಲೇ ಇಬ್ಬಗೆಯ ದೃಷ್ಟಿ­ಗಳಿ­ರು­ವುದನ್ನು ಈಗಾಗಲೇ ಸೂಚಿಸಿದ್ದೇನೆ. ವೀರಶೈವ ಮತ್ತು ಹಿಂದೂ­­ಗಳ ಸಂಬಂಧದ ಪ್ರಶ್ನೆ ಮುನ್ನೆಲೆಗೆ ಬಂದಾಗ ಅದರ ಬೆನ್ನಲ್ಲೇ ಇನ್ನೊಂದು ಪ್ರಶ್ನೆ ಏಳು­ತ್ತದೆ: ಹಿಂದೂ­ಧರ್ಮದ ಕುರಿತ  ಸರ್ವಾ­ನು­­ಮತ­ವಾದ ವ್ಯಾಖ್ಯೆ ಯಾವು­ದಾದರೂ ಇದೆಯೆ?
ಹಿಂದೂ ಎಂಬುದರ ಅರ್ಥವಿರಲಿ, ಆ ಶಬ್ದವೇ ಹಾದಿ ತಪ್ಪಿಸುವಂಥದೆಂದು ಕೆಲವು ಜನ ಪ್ರಭೃತಿಗಳು ವಾದಿಸಿ­ದ್ದಾರೆ. ಹಿಂದೂ ಎಂಬ ಶಬ್ದ ಮತ್ತು ಪರಿಕಲ್ಪನೆ ಎರಡೂ ವಸಾಹತು­ಕಾಲ­ದಲ್ಲಿ ನಮ್ಮ ಮೇಲೆ ಹೇರಲ್ಪಟ್ಟವೆಂದು ಪ್ರೊ. ಬಾಲಗಂಗಾಧರ ಅವರು ಸಮರ್ಥ­ವಾಗಿ ವಾದಿಸಿದ್ದಾರೆ. ಅದಕ್ಕೂ ಮುಂಚಿತವಾಗಿ  ಕನ್ನಡದ ಮಹಾನ್ ಚಿಂತಕ-, ವಿದ್ವಾಂಸರಾದ ಶಂಬಾ ಜೋಷಿ­­ಯವರು ತಮ್ಮ ಹಲವು ವಿದ್ವ­ತ್ಪೂರ್ಣ ಬರಹಗಳಲ್ಲಿ ಹೇಳಿದ್ದನ್ನು ಹೀಗೆ ಅಡಕಗೊಳಿಸಬಹುದು: ನಾಲ್ಕು ವೇದಗಳಲ್ಲಾ­ಗಲಿ, ಆರು ಶಾಸ್ತ್ರ­ಗಳ­ಲ್ಲಾಗಲಿ, ಹನ್ನೆರಡು ಪ್ರಧಾನ ಉಪನಿಷತ್ತು­ಗಳಲ್ಲಾಗಲಿ, ಹದಿನೆಂಟು ಪುರಾಣಗಳಲ್ಲಾಗಲಿ, ಇಪ್ಪತ್ನಾಲ್ಕು ದಿವ್ಯಾ­ಗಮಂಗಳಲ್ಲಾಗಲಿ, ಅಸಂಖ್ಯಾತ ತಂತ್ರಾಗಮ­ಗ­ಳ­ಲ್ಲಾಗಲಿ,ಭಕ್ತಿ ವಾಙ್ಮಯ­­­ದಲ್ಲಾಗಲಿ ಎಲ್ಲಿ­ಯೂ ಗೋಚ­ರಿಸದ ಈ ಶಬ್ದವನ್ನು ಗ್ರೀಕರು ಮೊದಲಾಗಿ ಹೊರನಾಡ ಹಲ್ಲೆ­ಕೋರರು ಸಿಂಧೂ­ನದಿ ಇತ್ತಲ ಕಡೆಗೆ ವಾಸಿಸುತ್ತಿದ್ದ ಜನಾಂಗದವರನ್ನು ಗುರು­ತಿಸಲು ಬಳಸತೊಡಗಿ­ದರು.
ಪರಕೀ­ಯರು ಕೊಟ್ಟ ಈ ಪದವನ್ನು ನಾವು ಅವಿಮರ್ಶಾತ್ಮಕ­ವಾಗಿ ಒಪ್ಪಿಕೊಂಡದ್ದು ನಮ್ಮ ಸಾಮೂಹಿಕ ಮಾನಸಿಕ ಅವನತಿಯ ಒಂದು ಕುರುಹು. ಹಲವು ಕೃತಿಗಳಲ್ಲಿ ಅವರು ಮುಂದಿಟ್ಟಿರುವ ಈ ವಾದವನ್ನು ಪ್ರವಾಹ­ಪತಿತರ ಕರ್ಮ ಹಿಂದೂ ಧರ್ಮ ಎಂಬ ಚಿಂತನಾ­­ಪ್ರಚೋದಕ ಪುಸ್ತಕ­ದಲ್ಲಿ ವಿಶೇಷವಾಗಿ ಚರ್ಚಿಸಿದ್ದಾರೆ.
ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಹಿಂದೂ ಎಂಬ ಶಬ್ದ ಪ್ರಚಲಿತ­ವಾಗಿದ್ದಕ್ಕೆ ಉದಾಹರಣೆ­ಯೆಂದರೆ ‘ಹಿಂದೂರಾಯ ಸುರತ್ರಾಣ’ ಎಂಬ ಬಿರುದು ಆಗಿನ ದಾಖಲೆಗಳಲ್ಲಿ ವಿಜಯ­ನಗರದ ಅರಸರಿಗೆ ಅನ್ವಯಿ­ಸಲ್ಪಟ್ಟಿರುವುದು. ಆದರೆ ಆ ಕಾಲದ ಬೇರೆ ಕೃತಿಗಳಲ್ಲಿ ಉದಾಹರಣೆಗೆ ಹರಿಹರ, ರಾಘವಾಂಕ, ಕುಮಾರ­ವ್ಯಾಸ, ಚಾಮ­ರಸಾದಿಗಳಲ್ಲಿ-- ಈ ಪದದ ಪ್ರಯೋಗ ಕಾಣ­ಸಿಗುವುದಿಲ್ಲ. ಹೀಗೆ ಕಾವ್ಯ-ಶಾಸ್ತ್ರಾದಿಗಳಲ್ಲಿ ನಾಪತ್ತೆ­ಯಾಗಿರುವ ಈ ಪದವು ಇವತ್ತು ಇಷ್ಟೊಂದು ಪರವಿರೋಧ ನಿಲುವು­ಗಳನ್ನು ಸೃಜಿಸುತ್ತಿರುವುದನ್ನು ಕಂಡಾಗ ಅಲ್ಲಮನ ಒಂದು ಮಾತು ನೆನಪಾಗುತ್ತದೆ: ‘ಇಲ್ಲದ ಮಾಯೆ­ಯನಹುದೆಂದು ಭ್ರಮಿಸಿದರೆ ಕಣ್ಣ ಮುಂದಿನ ಮಾಯೆಯಾಗಿ ಕಾಡಿತ್ತು ನೋಡಾ’.
ಹಲ್ಲೆಕೋರರು ಮತ್ತು ನಂತರದ ಆಡಳಿತ­ಗಾರರು ಹೇರಿದ ಈ ಶಬ್ದವನ್ನು ನಾವು ಈ ಮಟ್ಟಿಗೆ ಸಂಭ್ರಮಿಸುತ್ತಿರು ವುದೇ ಒಂದು ದೊಡ್ಡ ತಮಾಷೆ. ಮಹಾರಾಷ್ಟ್ರದ ದಲಿತ ಗೆಳೆಯ ರೊಬ್ಬರು ನನಗೆ ಹೇಳಿದರು: ಬಾಬಾ­ಸಾಹೇಬರ ಸ್ಫೂರ್ತಿ­ಯಿಂದ ಬೌದ್ಧ­ಧರ್ಮ ಸ್ವೀಕರಿಸಿದ ದಲಿತ ಜನಾಂಗದ ಹಲವರು ಜನಗಣತಿಯವರ ಬಳಿ ನೋಂದಾಯಿಸುವಾಗ ಧರ್ಮ ಎಂಬ ಕಾಲಮಿ­ನಲ್ಲಿ ಬೌದ್ಧ ಎಂದು ಬರೆಸುತ್ತಾರೆ. ಆದರೆ ಈ ವಿಚಾರ ಜನಗಣತಿಯವರಿಗೆ ಅರ್ಥ­-ವಾಗದ ಕಾರಣ ಅವರು ಅದನ್ನು ಹಿಂದೂ ಎಂದು ತಿದ್ದಿಬಿಡುತ್ತಾರೆ. ವೀರಶೈವ ಮಹಾ­ಸಭೆಯವರು ಈಚೆಗೆ ಸಮಸ್ತ ವೀರಶೈವರಿಗೆ ತಾವು ಜನ­ಗಣತಿಯಲ್ಲಿ ಹಿಂದೂಧರ್ಮೀಯರು ಎಂಬುದಕ್ಕೆ ಬದಲಾಗಿ ವೀರಶೈವ ಎಂದು ಬರೆಸಬೇಕೆಂದು ಕರೆ ಕೊಟ್ಟಿದ್ದರಂತೆ.
ಆದರೆ ಅದನ್ನು ಜನಗಣತಿ­ಯವ­ರಾಗಲಿ,  ಸರ್ಕಾರ­ವಾಗಲಿ ಅಂಗೀಕರಿ­ಸಿಲ್ಲ ವೆಂಬುದು ಸ್ಪಷ್ಟ­ವಾಗಿದೆ. ಇನ್ನು ಸಂವಿಧಾನದ ಮತ್ತು ಕಾನೂನಿನ ದೃಷ್ಟಿಯಿಂದ ನೋಡಿದಾಗ ಯಾರು ಮುಸ್ಲಿಂ ಮತ್ತು ಕ್ರೈಸ್ತ ಧರ್ಮೀ ಯರಲ್ಲವೋ ಅವರೆಲ್ಲರೂ ಹಿಂದೂ ಗಳೆಂದು ಒಪ್ಪಿಕೊಂಡ ಹಾಗೆ ಕಾಣುತ್ತದೆ. ಆದರೆ ಹಿಂದೂಗಳೆಂದು ಕರೆಯಲಾದ ಹಲಮುಖೀ ಬಹು­ಸ್ತರೀಯ  ಜನಗಳಿಗೆ ಸಮಾನವಾದ ಮತ್ತು ಸಾಮಾನ್ಯ­ವಾದ ನಂಬಿಕೆಗಳು, ಆಚರಣೆಗಳು ಇವೆಯೆ? ಆಧುನಿಕ ಭಾರತದ ನಿರ್ಮಾತೃ ಗಳಾದ ಗಣ್ಯರು ಹಿಂದೂ ಧರ್ಮದ ಬಗ್ಗೆ ಪರಸ್ಪರ ವಿರುದ್ಧವಾದ ವ್ಯಾಖ್ಯೆ­ಗಳನ್ನು ನೀಡಿದ್ದಾರೆ. ಇವರು ಈಗಾ­ಗಲೇ ಅಸ್ತಿತ್ವದಲ್ಲಿರುವ ಒಂದು ಧರ್ಮ­ವನ್ನು ವ್ಯಾಖ್ಯಾನಿಸುತ್ತಿದ್ದಾರೋ ಅಥವಾ ಪರಂಪರೆಯಿಂದ ತಮಗೆ ಅನು­ಕೂಲವಾದದ್ದನ್ನು ಕಲೆಹಾಕಿ ಇದೇ ಹಿಂದೂ ಧರ್ಮ ಅನ್ನು­ತ್ತಿದ್ದಾರೋ ಎಂಬ ಅನುಮಾನ ಮೂಡುತ್ತದೆ.
ಮಹಾತ್ಮಗಾಂಧಿಯವರು ಪ್ರಶಂಸಿಸಿದ ಹಿಂದೂಧರ್ಮ ಅವರದೇ ನಿರ್ಮಾಣ. ಅಹಿಂಸೆ­ಯೇ ಹಿಂದೂಧರ್ಮದ ಸಾರೋ­ದ್ಧಾರ­ವೆಂದು ತಿಳಿದಿದ್ದ ಅವರು ಯುದ್ಧ­ಕರ್ಮ-­ವನ್ನು ಬೋಧಿ­ಸುವ ಭಗವದ್ಗೀತೆಗೂ ಅಹಿಂಸಾ­ಪರ ವ್ಯಾಖ್ಯೆ ನೀಡಿಬಿಟ್ಟರು. ಇದಕ್ಕೆ ವಿರುದ್ಧ ದಿಶೆ­ಯಲ್ಲಿ ಬಾಲಗಂಗಾಧರ ತಿಲಕರು ಗೀತೆ­ಯಲ್ಲಿ ಹೋರಾಟದ ಸಂದೇಶವನ್ನು ಗುರುತಿಸಿದರು. ಆದರೆ ಹಿಂದೂ­ಗಳೆಂದು ಕರೆಯ­ಲಾಗುವ ಬಹು­ಸಂಖ್ಯಾತರಿಗೆ ಭಗ­ವದ್ಗೀತೆ ಏನೆಂಬುದೇ ಗೊತ್ತಿಲ್ಲ. ಭಾರತದ ಅಧಿಕಾಂಶ ಆದಿ­ವಾಸಿಗಳ ಧರ್ಮಾ­ಚರಣೆ­ಗಳಿಗೂ ಹಿಂದೂ­­ಗಳ ಧರ್ಮಾ­ಚರಣೆ­ಗಳೆಂದು ಕರೆಯಲಾಗುವ ಯಜ್ಞ, ಹವನ, ಪೂಜೆ-­­ಪುನಸ್ಕಾರಗಳಿಗೂ ಯಾವುದೇ ಸಂಬಂಧ­ವಿಲ್ಲ. ದಲಿತರು ಹಿಂದೂ ಸಮಾಜದ ಭಾಗ ಖಂಡಿತಾ ಅಲ್ಲವೆಂದು ಬಾಬಾಸಾಹೇಬರು ಸೂರ್ಯ­ ಸ್ಪಷ್ಟ­ವಾಗಿ ವಾದಿಸಿದರು. ಮಹಾತ್ಮ ಗಾಂಧಿ­­ಯವರು ದಲಿತರನ್ನು ಹಿಂದೂ ಸಮು­ದಾಯದ ಹೊರಗಿಡಲು ಎಂದೂ ತಯಾರಿರಲಿಲ್ಲ.
ಹಿಂದೂಧರ್ಮಪರ ಇರುವವರು ಹೀಗೆ ವಾದಿಸಿಯಾರು: ಹಾಗಿದ್ದರೆ ಶಿವ, ರಾಮ, ಕೃಷ್ಣ ಮುಂತಾದ ದೇವರು­ಗಳನ್ನು ಭಾರತದಾದ್ಯಂತ ಆರಾಧಿ­­ಸುತ್ತಾರಲ್ಲ, ಅದನ್ನೇ ಯಾಕೆ ಹಿಂದೂ­ಧರ್ಮದ ಬುನಾದಿಯೆಂದು ಒಪ್ಪ­ಬಾರದು? ಈ ವಾದದಲ್ಲಿ ಹಲವು ಸಂದಿಗ್ಧಗಳಿವೆ. ಬಹುತೇಕ ಆದಿವಾಸಿ ಜನಾಂಗಗಳಿಗೆ ಉದಾ­ಹರಣೆಗೆ ನಾಗಾ ಬುಡಕಟ್ಟಿನವರಿಗೆ ಅಥವಾ ಸಂತಾಲ-ರಿಗೆ ಇದು ಅನ್ವಯಿಸುವುದೇ ಇಲ್ಲ. ಹಿಂದೂ ಪರಂಪರೆ ದೈವತಗಳನ್ನು ಒಪ್ಪಿಕೊಂಡ ಆದಿ­ವಾಸಿಗಳು ಈ ದೇವತೆಗಳಿಗೆ ನೀಡುವ ಉದ್ದೇಶ, ಆಚರಣೆಗಳು ಪೂರ್ತಿ ಭಿನ್ನ. ಉದಾ­ಹರಣೆಗೆ ಅಸ್ಸಾಮಿನ ರಾಭಾ ಜನಾಂಗೀ­ಯರು ತಮ್ಮನ್ನು ಶಿವಧರ್ಮದವರೆಂದು ಕರೆದು­ಕೊಳ್ಳು­ತ್ತಾರೆ. ಆದರೆ ಅವರ ಶಿವ ಅವರ ಬುಡಕಟ್ಟು ದೇವತೆಯ ಸೋದರ.
ಅವರ ವಾರ್ಷಿಕ ವಿಧಿಗಳಲ್ಲಿ ಶಿವನಿಗೆ ಹಂದಿ ಮಾಂಸ ಮತ್ತು ಅಕ್ಕಿಕಳ್ಳುಗಳನ್ನು ಪ್ರಸಾದವಾಗಿ ನೀಡುತ್ತಾರೆ. ಶಿವನನ್ನು ತಮ್ಮ ಕುಲ­ಮೂಲದವನೆಂದು ನಂಬುವ ಹಿಮಾ­ಚಲ­ಪ್ರದೇಶದ ಗದರ್ ಸಮು-­ದಾಯ­ದವರು ಸಂಸ್ಕೃತ ಪರಂಪರೆಗೆ ಭಿನ್ನ­ವಾದ ತಮ್ಮದೇ ಆದಿವಾಸಿ ಶಿವ­ಪುರಾಣ­ವನ್ನು ಒಪ್ಪು­ತ್ತಾರೆ. ಮಣಿಮಾಃಏಶ್ವರ ಂಂದಿರದಲ್ಲಿ ನಡೆ­ಯುವ ಅವರ ವಾರ್ಷಿಕ ವಿಧಿಗಳಲ್ಲಿ ಮಾಂಸಾ­ಹಾರ ಅವಿಭಾಜ್ಯ ಅಂಗ. ಅವರ ಪ್ರಕಾರ ಶಿವ ತಮ್ಮ ಪಶುಪಾಲಕ ಜನಾಂಗದ ಮೂಲ ಪುರುಷ. ಛತ್ತೀಸಗಡದ ಸತನಾಮಿ ಪಂಥ­ದವರನ್ನು- ಇವರೆಲ್ಲಾ ದಲಿತ ಜನಾಂಗ­ದವರು ವೈಷ್ಣವರನ್ನಾಗಿ ನೋಡ­ಲಾಗುವುದಿಲ್ಲ. ಅವರು ರಾಮಭಕ್ತರು. ಆದರೆ ಅವರ ರಾಮ  ಕಬೀರ­ಪಂಥ­ದಲ್ಲಿ­ರುವಂತೆ ಒಬ್ಬ ದೇವತೆ­ಯಲ್ಲ, ಒಂದು ತತ್ವ. ರಾಮಾಯಣದ ರಾಮ ಅವರಿಗೆ ಹೊರತು. ನಿಗಮಾಗ­ಮಾಚರಣೆಗಳನ್ನು ಪಾಲಿಸುವ ಹಿಂದೂ­­ಗಳು ಮತ್ತು ಮೇಲೆ ಹೆಸರಿಸಿ­ದಂತಹ ಬುಡಕಟ್ಟು ಜನಾಂಗ­ಗಳವರೂ ಒಂದೇ ಧರ್ಮಕ್ಕೆ ಸೇರಿ­ದವರೆನ್ನಲು ಯಾವುದೇ ವಸ್ತುನಿಷ್ಠ ಆಧಾರಗಳಿಲ್ಲ.
ರಾಮಾಯಣ, ಮಹಾಭಾರತ­-ಗಳನ್ನೂ ಹಿಂದೂ ಧರ್ಮದ ಸಂಕೇತ­ಗಳೆನ್ನ­ಲಾಗು­-­ವುದಿಲ್ಲ. ಯಾಕೆಂದರೆ ನಮ್ಮಲ್ಲಿ ಹಲವಾರು ಆದಿವಾಸಿ ಮತ್ತು ಜನಪದ ಧರ್ಮೀಯರು ಇಂದಿಗೂ ರಾಮಾ­ಯಣ, ­ಮಹಾಭಾರತಗಳನ್ನು ನಿತ್ಯ­ನೂತನವಾಗಿ ಸೃಜಿಸುತ್ತಿರುತ್ತಾರೆ. ಸಂಸ್ಕೃತ ರಾಮಾಯಣ- ಮಹಾಭಾರತ­ಗಳಿಗೂ ಆದಿ­ವಾಸಿ ಮತ್ತು ಜನಪದ ರಾಮಾಯಣ-, ಮಹಾ­ಭಾರತ­­ಗಳಿಗೂ ಅಜಗಜಾಂತರ ವ್ಯತ್ಯಾಸ. ಉದಾ­ಹರಣೆಗೆ ಗುಜರಾತಿನ ಭಿಲ್ ಜನಾಂಗದ ಮಹಾಭಾರತವಾಗಲಿ ಕರ್ನಾಟಕದ ಹಕ್ಕಿಪಿಕ್ಕೆ ಮಹಾ­ಭಾರತಗಳು ಎತ್ತಿ ಹಿಡಿಯುವುದು ಪುರುಷ­­­ಶೌರ್ಯವನ್ನಲ್ಲ, ಸ್ತ್ರೀ ಶೌರ್ಯ­ವನ್ನು. ಭಿಲ್ ಮಹಾಭಾರತದಲ್ಲಿ ಅರ್ಜುನ ದ್ರೌಪದಿ­ಯನ್ನು ಆದಿಶಕ್ತಿ­ಯೆಂದು ಅರ್ಚಿಸುತ್ತಾನೆ.
ಅಲ್ಲದೆ ರಾಮಾಯಣ-, ಮಹಾ­ಭಾರತದ ಪಾರಮ್ಯ ಹಿಂದೂಗಳೆಂದು ಕರೆಯಲಾಗುವ ಅನೇಕ ಪಂಥೀಯರಿಗೆ ಅಪಥ್ಯ. ಉದಾಹರಣೆಗೆ ನಾನು ಹುಟ್ಟಿದ ವೀರಶೈವ ಸಮುದಾಯದಲ್ಲಿ ರಾಮಾಯಣ-ಮಹಾಭಾರತ-ಭಗವದ್ಗೀತೆಗಳಿಗೆ ಯಾವ ಸ್ಥಾನವೂ ಇಲ್ಲ. ಇದೇ ಮಾತು ಜೈನ, ಬೌದ್ಧ ಮತ್ತು ಸಿಖ್ ಧರ್ಮೀಯರಿಗೆ ಮತ್ತು ಹಲವು ಶೈವ, ವೈಷ್ಣವ, ಶಾಕ್ತ ಪಂಥಗಳಿಗೂ ಅನ್ವಯಿಸುತ್ತದೆ.
ಒಟ್ಟಿನಲ್ಲಿ ಹಿಂದೂಧರ್ಮೀಯರೆಂದು  ಆಳುವ ವರ್ಗದವರು, ಹಿಂದುತ್ವ­ವಾದಿಗಳು, ಧರ್ಮ­­ನಿರಪೇಕ್ಷ­ವಾದಿ­ಗಳು, ಕ್ರಾಂತಿಕಾರಿಗಳು ಯಾರನ್ನು ಗುರುತಿ­ಸುತ್ತಾರೋ ಅವರ ಆಚಾರ­ಗಳಿಗೂ ಅವರ ಬಗ್ಗೆ ವ್ಯಾಖ್ಯಾ­ನಿಸುವ ಈ ಮಹನೀಯರುಗಳ ವಿಚಾರ­ಗಳಿಗೂ ಯಾವುದೇ ಅಂಟುನಂಟುಗಳಿಲ್ಲ. ಯಹೂದಿ ಧರ್ಮೀಯರಿಗೆ ಸ್ಪಷ್ಟ­ವಾದ ಧರ್ಮ­ಗ್ರಂಥಗಳ ಪರಂಪರೆ­ಯಿದೆ. ಆ ಧರ್ಮಾ­ನು­­ಯಾ­ಯಿಗಳನ್ನು ಗುರುತಿಸಲು ಬೇಕಾದ ಸ್ಪಷ್ಟ ವಸ್ತುನಿಷ್ಠ್ಟ ಆಚರಣೆಗಳು, ಸಂಸ್ಥೆಗಳು, ನಂಬಿಕೆಗಳು ಇವೆ. ಹಿಂದೂ ವಿವಾಹ ಕಾನೂನಿ­ಗೊಳ­ಪಡುವ ಹಲವು ಪಂಥಗಳಿಗೆ- ವೀರ­ಶೈವರಿಗೆ, ಸಿಖ್ಖರಿಗೆ, ಕಬೀರ್ ಪಂಥೀಯರಿಗೆ- ತಮ್ಮದೇ ಆದ ಗ್ರಂಥಾ­ವಳಿಗಳು, ಗುರು­ಪರಂಪರೆಗಳು ಇವೆ. ಆದರೆ ಸಮಸ್ತ ಹಿಂದೂಗಳಿಗೆ ಈ ರೀತಿಯ ಸಾಮಾನ್ಯ ಲಕ್ಷಣ­ಗಳಿಲ್ಲ. ಶಂಕ­ರಾಚಾರ್ಯ ಮಠಗಳನ್ನಾಗಲೀ ಅಷ್ಟ­ಮಠ­ಗಳನ್ನಾಗಲಿ ಮೇಲುಜಾತಿಯವರ ದೇವಸ್ಥಾನಗಳನ್ನಾಗಲಿ  ಸಮಸ್ತ ಹಿಂದುಗಳ ಸಂಸ್ಥೆಗಳೆಂದು ಕರೆಯಬರುವುದಿಲ್ಲ.
ಉದಾರವಾದಿ ಹಿಂದೂಗಳು ಈ ಬಹು­ಕುಳತೆಯನ್ನೇ ಹಿಂದೂ ಧರ್ಮದ ಲಕ್ಷಣವೆಂದು ಕರೆದಿದ್ದಾರೆ. ಇದೇ ತರ್ಕವನ್ನು ಮೂಂಬರಿರಿಸಿ ಗಾಂಧಿ ಮಹಾತ್ಮರು ನಿಜವಾದ ಹಿಂದುವೊಬ್ಬ ನಿಜವಾದ ಕ್ರೈಸ್ತನೂ ನಿಜವಾದ ಮುಸ್ಲಿಮನೂ ಆಗಿರುತ್ತಾನೆ ಅಂದರು. ಸ್ವಾಮಿ ವಿವೇಕಾ­ನಂದರು ತಮ್ಮ ಷಿಕಾಗೋ ಭಾಷಣ­ದಲ್ಲಿ ಹಿಂದೂ ಧರ್ಮದ ಸಾರವೆಂಬೋ­ಪಾದಿಯಲ್ಲಿ ಶಿವಮಹಿಮ್ನ ಸ್ತ್ರೋತ್ರದ  ಋಜು­ಕುಟಿಲ ನಾನಾ ಪಥಜುಷಾಂ ನೃಣಾ­ನೇಕೋ ಗಮ್ಯತ್ವಮಸಿ ನದೀನಾಂ ಸಾಗರಂ ಇವ ಎಂಬ ವಾಕ್ಯವನ್ನು ಉದಾ­ಹರಿಸಿದರು. ಆದರೆ ಈ ವಾಕ್ಯವನ್ನು ವಿಶಾಲಾರ್ಥದಲ್ಲಿ ತೆಗೆದು­ಕೊಂಡರೆ ಎಲ್ಲ ಧರ್ಮಗಳೂ ಒಂದೇ ಎಂಬ ಅಭಿಪ್ರಾಯ ಬರುತ್ತದೆ.  ಅಲ್ಲದೆ ಆ ಸುಂದರ ಸ್ತ್ರೋತ್ರದ ಕರ್ತೃ­ವಾದ ಆಚಾರ್ಯ ಪುಷ್ಪದಂತ ಹಿಂದೂ ಎಂಬ ಪದವನ್ನು ಬಳಸಿಯೇ ಇಲ್ಲ.
ಆಧುನಿಕ ಪ್ರಜಾಸತ್ತಾತ್ಮಕ ವಾತಾ­ವರಣ­ದಲ್ಲಿ ನಮ್ಮ ಅಸ್ತಿತ್ವಗಳನ್ನು ನಾವೇ ನಿರ್ಮಿಸಿ­ಕೊಳ್ಳುವ ಸ್ವಾತಂತ್ರ್ಯ­ವಿದೆ. ಹಿಂದೂ ಧರ್ಮೀ­ಯರೆಂದು ಹಾಗೆ ಕರೆಯಲ್ಪಟ್ಟವರಲ್ಲಿ ಕೆಲವರು ಆ ಹಣೆ­ಪಟ್ಟಿಯನ್ನೇ ಇಚ್ಛಿಸಿದರೆ ಅದು ಅವರ ಇಷ್ಟ. ಆದರೆ ಈ ಹಣೆಪಟ್ಟಿ ವೀರ­ಶೈವರಿಗಾಗಲಿ ,ಜೈನ­ರಿಗಾಗಲಿ, ಬೌದ್ಧರಿಗಾಗಲಿ, ಕಬೀರ, -ರಾಯ್ ದಾಸ್-­ಸತನಾಮೀ ಪಂಥ­ದವರಿ­ಗಾಗಲೀ ಒಪ್ಪಿತ­ವಾಗುವುದೆಂದು ನನಗನಿಸು­ವುದಿಲ್ಲ. ಇವರೆ­ಲ್ಲರೂ ಪ್ರತ್ಯೇಕ ಧರ್ಮಗಳಾಗಿ ಪರಿ­ಗಣಿಸ­ಲ್ಪಟ್ಟರೆ ದೇಶದ ಐಕ್ಯತೆಗೆ ಕುತ್ತು ಬರುವುದೆಂದೂ ಅನಿಸುವುದಿಲ್ಲ.
ಏಕಂ ಸದ್ವಿಪ್ರಾ ನಾಂ ಬಹುದಾ ವದಂತಿ (?//)ಎಂಬ ವೇದೋಕ್ತಿಯು ನಿಜ­ವಾದರೆ ನಾವು ಒಂದು ಧರ್ಮ, ಸಂಹಿತೆ, ಆಚಾರ, ದೇವತೆಯನ್ನು ಯಾರ ಮೇಲೂ ಹೇರಬೇಕಾಗಿಲ್ಲ. ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ಬೇಕು. ಈ ನಿಟ್ಟಿನಲ್ಲಿ ಬಸವಾದಿ ಪ್ರಮಥರು ಆಗಮೋಕ್ತ ಶೈವ­ಧರ್ಮವನ್ನು ವಿಸ್ತರಿಸಿ ಪುನಾರಚಿಸಿದ ಪಂಥಾ­ನುಯಾ­ಯಿಗಳಾದ ವೀರಶೈವಧರ್ಮೀಯರು ತಮ್ಮವೇ ಆದ ಸ್ಪಷ್ಟ ಆಚಾರ-ವಿಚಾರ­ಗಳಿರುವಾಗ ಯಾರೋ ಹೇರಿದ ಅಸ್ಪಷ್ಟ ಹಿಂದೂ ಎಂಬ ಅಸ್ತಿತವವನ್ನು ಒಪ್ಪಿ­ಕೊಳ್ಳಬೇಕಿಲ್ಲ.
ಇನ್ನಾದರೂ ವೀರಶೈವ ಧರ್ಮವನ್ನು, ಅದೇ ರೀತಿ ಕಬೀರಪಂಥ, ರಾಯ್ ದಾಸ್ ಪಂಥ, ಭೀಮಾಭೋಯಿ ಇತ್ಯಾದಿ ಪಂಥಗಳನ್ನು  ಸ್ವತಂತ್ರ ಧರ್ಮಗಳೆಂದು ಗುರುತಿಸಿ ಸಮಾನತೆ ಮತ್ತು ಸ್ವಾತಂತ್ರ್ಯಗಳ ಬುನಾದಿಯ ಮೇಲೆ ವಿವಿಧತೆಯಲ್ಲಿ ಒಂದಾಗಿ ನಿಂತ ಒಟ್ಟು ಸಂಸ್ಕೃತಿ ನಿರ್ಮಾಣವಾಗಲು ನೆರವಾಗಲೆಂದು ನನ್ನ ಹಾರೈಕೆ. ಇದನ್ನೇ ರಾಷ್ಟ್ರಕವಿ ಕುವೆಂಪು ಅವರು ಸರ್ವಜನಾಂಗದ ಸುಂದರ ತೋಟ ಎಂದು ಬಣ್ಣಿಸಿದ್ದಾರೆ.

Tuesday, January 14, 2014

''ಈ ದೇಶಕ್ಕಾಗಿ ನನ್ನ ಗಂಡನನ್ನೇ ಕೊಟ್ಟವಳಪ್ಪಾ ನಾನು…'' ಎನ್ನುವ ಮಾತಿನ ಹಿಂದೆ

ಈ ಫೆಸ್ ಬುಕ್ಕಿನಲ್ಲಿ ಬೇಕಾದದ್ದು ಮತ್ತು ಬೇಡವಾದದ್ದು ಎಲ್ಲ ಬಂದು ಪೋಸ್ಟ್ ಗಳ ರೂಪದಲ್ಲಿ ನಮ್ಮ ಕಣ್ಣುಗಳಿಗೆ ರಾಚುತ್ತಿರುತ್ತದೆ. ಕೆಲವೊಮ್ಮೆ ಅವುಗಳಿಗೆ ಪ್ರತಿಕ್ರಯಿಸದೇ ನಮ್ಮತನವನ್ನು ಕಾಯ್ದುಕೊಳ್ಳುವುದೇ ಒಂದು ಸವಾಲಾಗಿಬಿಡುತ್ತದೆ. ಕೆಟ್ಟದ್ದಕ್ಕಿಂತ ಒಳಿತು ಹೆಚ್ಚು ದಕ್ಕುವುದರಿಂದ ಈ ಜಾಲತಾಣಗಳನ್ನು ಬಿಟ್ಟು ಬಿಡುವಂತೆಯೂ ಇಲ್ಲ. ವೈಯಕ್ತಿಕ ಅಭಿವ್ಯಕ್ತಿಗೆ ವಿಪುಲವಾದ ಅವಕಾಶವನ್ನು ಈ ವೇದಿಕೆ ನೀಡುವುದರಿಂದ ತಮ್ಮ ಪ್ರತಿಷ್ಠೆ ಹೆಚ್ಚಿಸುವ ಚಿತ್ರಗಳು ಮತ್ತು ಮಾಹಿತಿಗಳನ್ನು ಹಂಚಿಕೊಳ್ಳುವುದರ ಜೊತೆಗೆ ವೈಯಕ್ತಿಕ ನೋವು ತೋಡಿಕೊಂಡು ಗೋಳಾಡುವವರು ಕೂಡ ಪುಷ್ಕಳವಾಗಿ ಕಂಡು ಬರುತ್ತಾರೆ.   ಚಿಕ್ಕ ಮಕ್ಕಳು ತಮ್ಮ ಕಡೆಗೆ ಯಾರೂ ಗಮನ ಕೊಡುತ್ತಿಲ್ಲ ಎಂದೆನಿಸಿದಾಗೆಲ್ಲ ಜೋರಾಗಿ ದ್ವನಿ ಏರಿಸಿ ''ಅಬ್ಬೂ''  ಅಂತ ಅತ್ತು ಎಲ್ಲರನ್ನೂ ತಮ್ಮೆಡೆಗೆ ಸೆಳೆದುಕೊಂಡುಬಿಡುತ್ತವೆ. ಹಾಗೆಯೇ ಈ ಗೋಳು ತೋಡಿಕೊಳ್ಳುವ ಯವಸ್ಕರದ್ದೂ ಒಂಥರಾ ''ಅಬ್ಬೂ'' ಸಿಂಡ್ರೋಮ್. ನಾನು ಕೂಡ ಈ ಗೋಳಿನ ಗೀಳಿನಿಂದ ಹೊರತಾದವನಲ್ಲ. ನಮ್ಮೆಲ್ಲರ ಮನಸ್ಸು ಸ್ವಾನುಕಂಪ ಮತ್ತು ಪರರ ಸಾಂತ್ವನವನ್ನು ಎಂಜಾಯ್ ಮಾಡುತ್ತದೆ. ಜೊತೆಗೆ ಸ್ವಾನುಕಂಪ ಯಥೇಚ್ಚವಾಗಿ ಸುಳ್ಳುಗಳನ್ನು ಕೂಡ ಹೇಳಿಸುತ್ತದೆ. ಹೀಗಾಗಿ ಬಹುತೇಕರು ಹೇಳಿಕೊಳ್ಳುವ ಗೋಳಿನಲ್ಲಿ ಸುಳ್ಳಿನ ಅಂಶ ಎಷ್ಟಿರುತ್ತದೆಯೋ, ಅದಕ್ಕೆ ಪ್ರತಿಯಾಗಿ ಸಿಗುವ ಅನುಕಂಪವೂ ಅದಕ್ಕಿಂತ ಹೆಚ್ಚು ಕೃತಕವಾದ ಸುಳ್ಳಿನ ಮುಖವಾಡವನ್ನು ಹೊಂದಿರುತ್ತದೆ. ಆದರೆ ಆ ಕ್ಷಣದಲ್ಲಿ ಅನುಕಂಪ ಬಯಸಿದ ಮತ್ತು ನೀಡಿದ ವ್ಯಕ್ತಿಗಳಿಬ್ಬರಿಗೂ ಒಂದು ರೀತಿಯ ಸಮಾಧಾನದಂತಹ ಅನುಭವ ಆಗಿರುತ್ತದೆ.
ಮೊನ್ನೆ ಫೆಸ್ ಬುಕ್ ನಲ್ಲಿ ಟಿವಿ ಪತ್ರಕರ್ತರೊಬ್ಬರು ಹಾಕಿದ ಒಂದು ಪೋಸ್ಟ್  ಬಂದು ನನ್ನನ್ನು ಸ್ವಲ್ಪ ಹೊತ್ತಿನ ಮಟ್ಟಿಗೆ ಕದಡಿ ಹಾಕಿತು. ಮುಂಬೈ ಮೇಲೆ ಉಗ್ರರ ದಾಳಿ ನಡೆದ ದಿನಾಂಕ ಕ್ಯಾಲೆಂಡರಿನಲ್ಲಿ ಮರುಕಳಿಸಿದ ಸಂದರ್ಭವಾಗಿ ಆ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಪೋಲಿಸ್ ಅಧಿಕಾರಿ ಸಲಾಸ್ಕರ್ ಅವರ ಪತ್ನಿಯನ್ನು ಈ ಪತ್ರಕರ್ತರು ತಮ್ಮ ಟಿವಿಗಾಗಿ ಸಂದರ್ಶಿಸಲು ಹೋದಾಗ ನಡೆದ ಘಟನೆಯನ್ನು ಅವರು ಫೆಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದರು.

ಆ ಪೋಸ್ಟ್ ಹೀಗಿದೆ..
''ಅಶೋಕ್ ಚಕ್ರ ಪುರಸ್ಕೃತರ ಮನೆಯವರೊಬ್ಬರಿಗೆ ಭಾರತದ ಎಲ್ಲಾ ಟೋಲ್ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಇರತ್ತೆ. ಅದಕ್ಕೊಂದು ಐಡೆಂಟಿಟಿ ಕಾರ್ಡ್ ಕೊಟ್ಟಿರ್ತಾರೆ. ಅದನ್ನ ಟೋಲ್ನಲ್ಲಿ ಕುಳಿತಿದ್ದ ಹುಡುಗನಿಗೆ ತೋರಿಸಿದೆ.
’ನಿಮ್ಮ ಕಾರಿಗೆ ರೆಡ್ ಲೈಟ್ ಇಲ್ಲ, ಮತ್ತೆ ನೀವ್ಹೆಂಗೆ ವಿ.ಐ.ಪಿ ಆಗ್ತೀರಿ..?’ ಅಂತ ಕೇಳಿದ...
ಏನುತ್ತರ ಕೊಡಬೇಕೋ ಅರ್ಥ ಆಗಲಿಲ್ಲ... ’ನಾನು, ವಿ.ಐ.ಪಿ ಅಲ್ಲಪ್ಪಾ... ಮರಣೋತ್ತರ ಅಶೋಕ ಚಕ್ರ ಪಡೆದ ಅಧಿಕಾರಿಯ ಹೆಂಡತಿ. ನಮಗೆ ಟೋಲ್ಗಳಲ್ಲಿ ಉಚಿತವಾಗಿ ಪ್ರಯಾಣಿಸೋದಕ್ಕೆ ಅವಕಾಶ ಮಾಡಿಕೊಟ್ಟಿರೋ ಸರಕಾರಿ ಆದೇಶ ಇಲ್ಲಿದೆ ನೋಡು’ ಅಂದೆ...

’ಇಲ್ಲಾರೀ... ಇಂಥವಕ್ಕೆಲ್ಲ ಅಲವ್ ಮಾಡಲ್ಲ... ಐವತ್ತು ರುಪಾಯಿ ಕೊಡಿ’ ಅಂದ ಅವನು...

’ಈ ದೇಶಕ್ಕಾಗಿ ಗಂಡನ್ನೇ ಕೊಟ್ಟವಳಪ್ಪಾ ನಾನು... ನಿನಗೆ ಐವತ್ತು ರುಪಾಯಿ ಕೊಡಲ್ಲ ಅಂತೀನಾ ಅಂತಂದು ದುಡ್ಡು ಕೊಟ್ಟು ಟಿಕೆಟ್ ತಗೊಂಡೆ... ಅದೇ ಕೊನೆ... ಮತ್ಯಾವತ್ತೂ ನಾನು ಯಾವ ಟೋಲ್ನಲ್ಲೂ ನನ್ನ ಗಂಡನ ಅಶೋಕ ಚಕ್ರದ ಕಾರ್ಡ್ ತೋರೀಸಲಿಲ್ಲ ಅಂದರು’

ಯಾಕೋ ಕಣ್ಣೀರು ತಡೆಯಲೇ ಇಲ್ಲ... ಕ್ಯಾಮರಾ ಮ್ಯಾನ್ಗೆ ಶೂಟಿಂಗ್ ನಿಲ್ಲಿಸು ಅಂತಂದುಬಿಟ್ಟೆ... ಕೆಲವು ನಿಮಿಷ ಬೇಕಾದವು ಯಥಾಸ್ಥಿತಿಗೆ ಬರೋದಕ್ಕೆ...

’ನಿಮ್ಮ ಗಂಡ ಒಂದು ನಿಯತ್ತಿಲ್ಲದ ಸಮಾಜಕ್ಕಾಗಿ ಬಡಿದಾಡಿ ಸತ್ತು ಹೋದರು ಅಂತ ಈ ಐದು ವರ್ಷಗಳಲ್ಲಿ ಯಾವತ್ತಾದರೂ ಅನ್ನಿಸಿದೆಯಾ..?’ ಮ್ಲಾನವಾಗಿ ಕೇಳಿದೆ...''  


ಹೀಗೆ  ಆ ಪತ್ರಕರ್ತರು ಹಂಚಿಕೊಂಡ ಸಂಗತಿ ಎಂಥವರನ್ನೂ ಕೂಡ ಒಂದು ಕ್ಷಣ ಕಲಕಿ ಹಾಕಬಲ್ಲ ಶಕ್ತಿ ಹೊಂದಿದೆ.  ದೇಶಕ್ಕಾಗಿ ಪ್ರಾಣ ತೆತ್ತ ಒಬ್ಬ ವ್ಯಕ್ತಿಯ ಕುಟುಂಬವನ್ನು ನಮ್ಮ ಭಾರತ ನಡೆಸಿಕೊಳ್ಳುವ ರೀತಿ ಇದೇನಾ ..? ಎಂದು ನಮ್ಮ ಬಗ್ಗೆ ನಮಗೇ  ಕೀಳರಿಮೆ ಮತ್ತು ಆ ಹೆಣ್ಣುಮಗಳ ಬಗ್ಗೆ ಹೆಮ್ಮೆ ಆ ಕ್ಷಣದಲ್ಲಿ ಮೂಡುತ್ತವೆ. ನಮ್ಮ ಭಾರತ ಸರ್ಕಾರದ ಬಗ್ಗೆ, ನಮ್ಮ  ವ್ಯವಸ್ಥೆಯ ಬಗ್ಗೆ ನಮಗೆ ಸಿಟ್ಟು ಬರುತ್ತದೆ. ಇದೆಲ್ಲ ಸರಿ... ನಮ್ಮ ಭಾರತದೇಶ ತನ್ನ ನೆಲದ ಹುತಾತ್ಮರನ್ನು ಎಂದೂ ಸರಿಯಾಗಿ ಗೌರವಿಸಿಲ್ಲ ಅಂತಲೇ ಭಾವಿಸೋಣ, ಈ ಟಿವಿ ಪತ್ರಕರ್ತರ ಪ್ರಕಾರ ''ನಮ್ಮದು ನಿಯತ್ತಿಲ್ಲದ ದೇಶ''. ಅದನ್ನೂ ನಾವು ಒಪ್ಪಿಕೊಳ್ಳೋಣ.  ಭಾರತೀಯ ಪ್ರಜೆಯ ಸ್ಥಾನದಲ್ಲಿ ನಿಂತು ನೋಡಿದರೆ ಇದು ನಿಜಕ್ಕೂ ದುಃಖದ ಸಂಗತಿ. 

 ಆದರೆ ಸದರಿ ಪತ್ರಕರ್ತರು ವಿವರಿಸಿದ ಘಟನೆಯಲ್ಲಿನ ಮಹಿಳೆಯ ಬಗ್ಗೆ ನನಗೆ ತುಂಬಾ ಗಾಢವಾಗಿ ಅನಿಸಿದ್ದು ''ಈ ಹೆಣ್ಣುಮಗಳು ಅನಗತ್ಯವಾಗಿ ಇಲ್ಲದ ದುಃಖವನ್ನು ಮೈಮೇಲೆ ಎಳೆದುಕೊಂಡು ಅದರಲ್ಲಿ ಮುಳುಗುಹಾಕುವುದರಲ್ಲಿ ನಿರತಳಾಗಿದ್ದಾಳೆ'' ಅಂತ.  ಹಾಗೆ ಅನಿಸಿದ ಕೂಡಲೇ ನನ್ನ ಮನಸ್ಸು ಈ ದೇಶಭಕ್ತಿಯಿಂದ,  ಭಾವುಕತೆಯಿಂದ ಅಥವಾ ಕನಿಕರದ ಭಾವದಿಂದ ಹೊರಬಂದುಬಿಟ್ಟಿತು. 
ಆ ತಾಯಿಯ ಜೊತೆಗೆ ನಡೆದದ್ದು ಸರಿಯೋ ತಪ್ಪೋ ಅನ್ನುವುದರ ವಿಮರ್ಶೆಗೆ ಹೋಗುವುದರ ಬದಲಾಗಿ ನನ್ನ ಮನಸ್ಸು '' ಈ ಹೆಣ್ಣುಮಗಳ ದುಃಖಕ್ಕೆ ಕಾರಣವೇನು, ಮತ್ತು ಆ ದುಃಖದ ನಿವೃತ್ತಿ ಹೇಗೆ ..? '' ಅನ್ನುವುದರ ಬಗ್ಗೆ ಮಾತ್ರ ಆಲೋಚಿಸುತ್ತಿತ್ತು. 
ಸಾವುಗಳು ಎಲ್ಲರ ಮನೆಯಲ್ಲೂ ಸಂಭವಿಸುತ್ತವೆ. ಮನೆಯ ಯಜಮಾನ ಯಾವುದೇ ಕಾರಣದಿಂದಾಗಿ ತೀರಿಕೊಂಡರೂ  ಮನೆಯ ಸದಸ್ಯರು ಕಂಗಾಲಾಗುವುದು ಸಹಜ. ಆದರೆ ಇಲ್ಲಿ ಈಕೆಯ ಗಂಡ ಮಡಿದದ್ದು ಉಗ್ರವಾದಿಗಳ ದಾಳಿಯಲ್ಲಿ. ಹೀಗಾಗಿ ಆಕೆಯ ದುಃಖದ ಪ್ರಮಾಣ ಹೆಚ್ಚೋ? ಅಥವಾ ಅವಳ ದುಃಖವನ್ನು ಗಮನಿಸುವವರು, ಅನುಕಂಪ ತೋರುವವರು ಇದ್ದಾರೆ  ಅನ್ನುವ ಕಾರಣಕ್ಕೆ ಇಷ್ಟು ದುಃಖವೋ?  ಇಲ್ಲಿನ ದುಃಖಕ್ಕೆ ಕಾರಣ ಆ ಟೋಲ್ ಗೇಟಿನ ಹುಡುಗನ ಅಜ್ಞಾನವೊ, ಅಥವಾ ಈಕೆಯ ಅಜ್ಞಾನವೊ ? ಮುಂತಾಗಿ ನನ್ನ ಮನಸ್ಸು ಪ್ರಶ್ನೆಗಳನ್ನು ಕೇಳುತ್ತಾ ಅವುಗಳಿಗೆ ತಾನೇ ಉತ್ತರಿಸಿಕೊಳ್ಳುತ್ತಾ ಹೋಯಿತು. 

 ನನ್ನ ಆ ಕ್ಷಣದ ವಿಚಾರಧಾರೆಯನ್ನಿ ಇಲ್ಲಿ ನಿಮ್ಮ ಮುಂದಿಡುತ್ತೇನೆ.. 
( ನನ್ನ ಆಲೋಚನೆ ಅಮಾನವೀಯ, ಅವಿವೇಕ ಹಾಗೂ ಮುರ್ಖತೆಯಿಂದ ಕೂಡಿದ್ದು, Judicially wrong, ಅಥವಾ ಹುತಾತ್ಮರ ಬಗ್ಗೆ ಕೃತಘ್ನ ಭಾವ ಹೀಗೆ ಬೇರೆ ಬೇರೆ ರೀತಿಯಲ್ಲಿ ನಿಮಗೆ ತೋರಬಹುದು. ಆದರೆ ನಾನು ಮೊದಲೇ ಹೇಳಿದಂತೆ ನನ್ನ ಆ ಕ್ಷಣದ ಆಲೋಚನೆಯ ಉದ್ದೇಶ ಕೇವಲ ಆ ಹೆಣ್ಣುಮಗಳ ದುಃಖದ ನಿವಾರಣೆಯಷ್ಟೇ. ಉಳಿದದ್ದೆಲ್ಲ ನನಗೆ ನಗಣ್ಯವಾಗಿತ್ತು.)

ಅನೇಕ ಭ್ರಮೆಗಳು ಆ ತಾಯಿಯ ಆ ಕ್ಷಣದ ದುಃಖಕ್ಕೆ ಕಾರಣ ಅಂತ ನನಗೆ ತೋರಿತು..
ಮೊದಲನೆಯದಾಗಿ.. ''ಈ ದೇಶಕ್ಕಾಗಿ ನನ್ನ ಗಂಡನನ್ನೇ ಕೊಟ್ಟವಳಪ್ಪಾ ನಾನು…'' ಎನ್ನುವ ಆಕೆಯ ಮಾತನ್ನು ತೆಗೆದುಕೊಂಡು ನೋಡುವುದಾದರೆ ತಾನು ''ಕೊಟ್ಟವಳು'' ಎನ್ನುವ  ಭಾವ ಆಕೆಯಲ್ಲಿ ಗಾಢವಾಗಿ ಬೆರೂರಿದಂತೆ ಕಾಣುತ್ತದೆ. ಹಾಗಾದರೆ ..ತಾನು ''ಕೊಟ್ಟ'' ಗಂಡನನ್ನು ಅವಳು ತಂದಿದ್ದು  ''ಎಲ್ಲಿಂದ'' ?  ಹೀಗಾಗಿ ಆಕೆಯ ''ಕೊಟ್ಟೆ'' ಎಂಬ ಭಾವವೇ ಅವಳ ಮೊದಲ ಶತ್ರುವಾಗಿ ಆಕೆಯ ದುಃಖದ ಮೂಲ ಕಾರಣ ಎಂದು ನನಗೆ ತೋರುತ್ತದೆ. 

ಇನ್ನು, ಉದ್ದೇಶಪೂರ್ವಕವಾಗಿ ಭಾರತ ದೇಶ ಸಂಚು ಮಾಡಿ  ಆಕೆಯ ಗಂಡನನ್ನು ಆಕೆಯಿಂದ  ಕಿತ್ತುಕೊಂಡಿದೆಯೇ ..? ಅಥವಾ ಆಕೆಯೇ ಸರ್ಕಾರವನ್ನು ಕರೆದು ನನ್ನ ಗಂಡನನ್ನು ''ತೆಗೆದುಕೊಂಡು ಹೋಗಿ'' ಅಂತ ''ದಾನ'' ಮಾಡಿದ್ದಾಳೆಯೇ ? .. ಇಲ್ಲ.. ಹಾಗೇನೂ ನಡೆದಿಲ್ಲ. ನಡೆದದ್ದು ಯಾರೂ  ಊಹಿಸಲಾಗದ ಒಂದು ಅಪಘಾತದಂತಹ ಘಟನೆ. ಅದಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಿರುವುದನ್ನೆಲ್ಲ ಮಾಡಿದೆ.

ಅದೂ ಅಲ್ಲದೆ ಆಕೆಯ ಗಂಡನಿಗೂ ಒಂದು ವ್ಯಕ್ತಿತ್ವ ಅಂತ ಇತ್ತು.. ಬುದ್ಧಿಶಕ್ತಿ ವಿವೇಕ ಎಲ್ಲ ಇತ್ತು. ಈ ಎಲ್ಲದರ ಆಧಾರದ ಮೇಲೆ ಆತ ''ಆ ಉದ್ಯೋಗವನ್ನೇ'' ಮಾಡಲು ಅಥವಾ ಅದೇ ಉದ್ಯೊಗದಲ್ಲೆ ಮುಂದುವರೆಯಲು ತನ್ನ ವಿವೆಚನಾಪುರ್ವಕವಾಗಿ ನಿರ್ಧಸಿರುತ್ತಾನೆ. ಹಾಗೂ ಆ ಉದ್ಯೋಗದಿಂದ ದೊರೆಯುವ ಎಲ್ಲ ರೀತಿಯ ಪ್ರಯೊಜನಗಳನ್ನೂ ಸಹ ವಿವೆಚನಾಪುರ್ವಕವಾಗಿ ಪಡೆದಿರುತ್ತಾನೆ. ಆತ ಆ ಉದ್ಯೋಗದಿಂದ ಪಡೆದ ಪ್ರಯೋಜನಗಳಲ್ಲಿ ಒಂದು ಭಾಗ ಆತನ ಹೆಂಡತಿಗೂ ಕೂಡ ಸಂದಿರುತ್ತದೆ. ಆತನ ಮರಣಾ ನಂತರವೂ ಕೂಡ ಪೆನ್ಶನ್ನು, ಫಂಡು, ಸಮಾಜದಲ್ಲಿ ಗೌರವ ಮುಂತಾಗಿ ಅನೇಕ ಸೌಲಭ್ಯಗಳು ಈಕೆಗೆ ಸಿಕ್ಕಿದೆ. ಹೀಗಾಗಿ ಆಕೆ ತಾನು ''ಗಂಡನನ್ನು ಕೊಟ್ಟೆ'' ಎಂದು ಭಾವಿಸುವುದು ಅತಾರ್ಕಿಕವಾಗುತ್ತದೆ. ಈ ರೀತಿಯ ಯಾವುದೇ ಸೌಲಭ್ಯಗಳನ್ನು ಹಾಗೂ ಸಂಬಳವನ್ನೂ ಆಕೆ ಮತ್ತು ಆಕೆಯ ಗಂಡ ಪಡೆಯದೇ ಇದ್ದಲ್ಲಿ ಆಕೆಯ ಭಾವ ಸರಿಯಾದದ್ದು. ಆದರೆ ಹಾಗಾಗಿಲ್ಲ. 

ಇನ್ನು ಆಕೆ ''ಕೊಟ್ಟೆ'' ಎಂದು ಒತ್ತಿ ಹೇಳುವಾಗ ಮರೆತು ಹೋಗುತ್ತಿರುವ ಸಂಗತಿ ಏನೆಂದರೆ ಆಕೆ ಮದುವೆ ಆಗುವುದಕ್ಕೂ ಮುಂಚಿನಿಂದಲೂ ಆಕೆಯ ಗಂಡ ಆ ಉದ್ಯೋಗವನ್ನು ಮಾಡುತ್ತಿದ್ದ ಮತ್ತು ಆತ ತನ್ನ ಸ್ವಂತ ನಿರ್ಧಾರದಿಂದ ಸಂತೋಷ ಪೂರ್ವಕವಾಗಿ ಆ ಉದ್ಯೋಗಕ್ಕೆ ತನ್ನನ್ನು ಸಮರ್ಪಿಸಿಕೊಂಡಿದ್ದ. ಹೀಗಾಗಿ ಆತ ತನ್ನನ್ನು ತಾನು ದೇಶಕ್ಕೆ 'ಕೊಟ್ಟುಕೊಂಡ' ಎನ್ನುವುದು ಒಂದು ಮಟ್ಟದಲ್ಲಿ ಸಮಂಜಸವಾಗಿ ತೋರುತ್ತದೆ. ಆದರೆ ಆತನ ಪತ್ನಿ ತಾನು ''ಆತನನ್ನು ಕೊಟ್ಟೆ' ಎಂದು ಹೇಳುವುದು ಅಷ್ಟು ಸಮಂಜಸವಲ್ಲ. ಆತನಿಗೆ ತನ್ನದೇ ಆದ ಅಸ್ತಿತ್ವ ಇತ್ತು. ಈಕೆ 'ತಾನು ಕೊಟ್ಟೆ' ಎಂದು ಹೇಳುವುದರ ಮೂಲಕ ಅದೆಲ್ಲವನ್ನು ನಿರಾಕರಿಸಿ ತನ್ನ ಪತಿಯನ್ನು ತನ್ನ ಸ್ವಂತ ಸೊತ್ತು ಅಥವಾ ತನ್ನ ಕೈಗೊಂಬೆ ಎಂದು ಭಾವಿಸಿದಂತಾಗುತ್ತದೆ. ಈ ಉದ್ಯೋಗದಲ್ಲಿ ಇಂತಹ ಅಪಾಯವಿದೆ ಅಂತ ಆಕೆಗೆ ಮೊದಲೇ ತಿಳಿದಿತ್ತು. ಹೀಗಾಗಿ ಮೊದಲೇ ಆ ಉದ್ಯೋಗ ಮತ್ತು ಆ ಉದ್ಯೋಗದ ಕಾರಣಕ್ಕಾಗಿ ದೊರೆಯುವ ಎಲ್ಲ ಸುಖ ಸೌಲಭ್ಯಗಳನ್ನು ನಿರಾಕರಿಸಿದ್ದರೆ ಇವತ್ತಿನ ಈ ದುಃಖದ ಪರಿಸ್ಥಿತಿಯೇ ನಿರ್ಮಾಣವಾಗುತ್ತಿರಲಿಲ್ಲ.
 (ನಮಗೆ ಏನಾದರೂ ಅನಾಯಾಸವಾಗಿ ಸಿಕ್ಕರೆ ''ಇದು ಯಾಕೆ ? ನನಗೆ ಯಾಕೆ ಸಿಗುತ್ತಿದೆ? ನಾನು ಅದಕ್ಕೆ ಯೋಗ್ಯನೇ/ಳೇ ? ನಾನು ಸ್ವೀಕರಿಸಬಹುದೇ ? ಇದು ನಮಗೆ ಸಿಗಲಿಕ್ಕೆ ಯಾರು ಕಾರಣ ..? ಯಾರು ಜವಾಬ್ದಾರಿ ? '' ಮುಂತಾಗಿ ನಾವು ಯೋಚಿಸುವುದಿಲ್ಲ. ಕೈ ಚಾಚಿ ಎಲ್ಲವನ್ನೂ ಬಾಚಿಕೊಳ್ಳುತ್ತೆವೆ. ಆದರೆ ಕಷ್ಟ ಬಂದಾಗ ಮಾತ್ರ  ಇದು ಯಾಕೆ ಹೀಗೆ ..? ನಮಗೆ ಯಾಕೆ ಈ ಕಷ್ಟ ? ಇದಕ್ಕೆ ಅವರು ಜವಾಬ್ದಾರರು.. ಅವರಿಂದ ಹಿಂಗಾಯಿತು ಅನ್ನುವ ಆಪಾದನೆಗಳನ್ನು ಮಾಡ್ತೇವೆ. ''ಸುಖ ಬಂದಾಗ ಮೈ ಮರೆತು ವಿಮರ್ಶೆ ಮಾಡದೇ ಅನುಭವಿಸುವುದು''  ಮನುಷ್ಯ ಸಹಜ ಸ್ವಭಾವ ಮತ್ತು ಆ ಅಜ್ಞಾನವೇ ದುಃಖಕ್ಕೆ ಕಾರಣ.)


ಇನ್ನು, ಆಕೆ ತನ್ನ ಗಂಡನನ್ನು ದೇಶಕ್ಕೆ ''ಕೊಟ್ಟಿದ್ದಾಳೆ'' ಅಂತಲೇ ಒಪ್ಪಿಕೊಂಡು ನೋಡುವುದಾದರೆ ಅದಕ್ಕೆ ''ಪ್ರತಿಯಾಗಿ'' ಆಕೆಗೆ ದೇಶದಿಂದ ಎನೂ ಸಿಗಲೇ ಇಲ್ಲವೇ ..?  ಅಥವಾ ಆಕೆ ಸಿಕ್ಕಿದ್ದನ್ನು ತಿರಸ್ಕರಿಸಿದ್ದಾಳೆಯೇ ..?  ಇದರ ಬಗ್ಗೆ ಎಲ್ಲವೂ ಸ್ಪಷ್ಟವಾಗಿ ಎಲ್ಲರಿಗೂ ಗೊತ್ತಿದೆ. 

ಇನ್ನು ಆ ಟೋಲ್  ಗೇಟಿನ ವಿಷಯಕ್ಕೆ ಸಂಬಂಧಿಸಿದಂತೆಯೂ ಕೂಡ ನೀಡಬೇಕಾದ ಗುರುತಿನ  ಪತ್ರವನ್ನೂ  ಸರ್ಕಾರ ನೀಡಿದೆ. ಸಾಮಾನ್ಯವಾಗಿ ಟೋಲ್  ಗೆಟ್ ಗಳಲ್ಲಿ ಯಾವ ಯಾವ ಅಧಿಕಾರಿಗಳ ವಾಹನಗಳನ್ನು ಉಚಿತವಾಗಿ ಬಿಡಬೇಕು ಎಂಬ ಬಗ್ಗೆ ಒಂದು ಪಟ್ಟಿ ಮಾಡಿ ಬೋರ್ಡ್ ಹಾಕಿರುತ್ತಾರೆ ಹಾಗೂ ಟೋಲ್ ನಲ್ಲಿ ಕೂರುವ ವ್ಯಕ್ತಿಗಳಿಗೆ ಅದರ ಬಗ್ಗೆ ಮಾಹಿತಿ ಇರುತ್ತದೆ. ಈ ಶ್ರೀಮತಿ ಸಲಸ್ಕರ್ ರವರು ಹೋದಾಗ ಅಲ್ಲಿ ಕುಳಿತಿದ್ದ ವ್ಯಕ್ತಿಗೆ ಅದರ ಬಗ್ಗೆ ಮಾಹಿತಿ ಇರಲಿಕ್ಕಿಲ್ಲ.. ಅಥವಾ ಅವರ ಮೇಲಧಿಕಾರಿಗಳು ನೀಡಿದ ಮಾಹಿತಿಯಲ್ಲಿ ಅಶೋಕ ಚಕ್ರ ಪಡೆದವರಿಗೆ ಇರುವ ವಿನಾಯಿತಿಯ ಉಲ್ಲೇಖ ಇರಲಿಕ್ಕಿಲ್ಲ. ಆ ಒಂದು ಬಾರಿಗೆ ಟೋಲ್ ನಲ್ಲಿ ಹಣ ಪಾವತಿ ಮಾಡಿ  ಆಮೇಲೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಆ ತೊಡಕನ್ನು ಸರಿಪಡಿಸಬಹುದಿತ್ತು. ಅಲ್ಲಿನ ಟೋಲ್ ನಲ್ಲಿ ಹಾಕಿದ ವಿನಾಯಿತಿಯ ಫಲಾನುಭವಿಗಳ ಸಾಲಿನಲ್ಲಿ ಅಶೋಕ ಚಕ್ರ ಪಡೆದವರ ವರ್ಗವನ್ನು ಸೇರಿಸುವ ವ್ಯವಸ್ಥೆ ಮಾಡಲು ಕೋರಬಹುದಾಗಿತ್ತು.

 ಇಷ್ಟು ಚಿಕ್ಕ ಘಟನೆಗೆ ಅಷ್ಟೊಂದು ಮಹತ್ವ ಕೊಟ್ಟು "ದೇಶಕ್ಕಾಗಿ ಗಂಡನನ್ನೇ ಕೊಟ್ಟವಳಪ್ಪಾ ನಾನು” ಎಂದೆಲ್ಲ ಅನಗತ್ಯವಾಗಿ  ಟಿವಿಯ ಕ್ಯಾಮೆರಾಗಳ ಮುಂದೆ ಹೇಳಿಕೊಂಡು ದುಃಖಿಸುವ ಅಗತ್ಯ ಇರಲಿಲ್ಲ. ಅದನ್ನು ನಮ್ಮ ವರದಿಗಾರರು ಅತಿರಂಜಕವಾಗಿ ಚಿತ್ರಿಸಿ, ಅದರ ಬಗ್ಗೆ ಬರೆದು ನಮ್ಮೆಲ್ಲರನ್ನು ಭಾವುಕ ಕಲಕುವಿಕೆಗೆ ಒಳಪಡಿಸುವ ಅಗತ್ಯವಿರಲಿಲ್ಲ.  ಆದರೆ ನಾನು ಮೊದಲೇ ಹೇಳಿದಂತೆ ನಾವೆಲ್ಲರೂ ಸ್ವಾನುಕಂಪದ ಗೀಳಿಗೆ ಬಿದ್ದು ಇಲ್ಲದ ದುಃಖವನ್ನು ಮೈ ಮೇಲೆ ಎಳೆದುಕೊಂಡು ಅದರಲ್ಲಿ ಹೊರಳಾಡಿ ಸುಖಿಸುತ್ತೇವೆ. ನಮಗೆ ''ಅಬ್ಬೂ'' ಸಿಂಡ್ರೋಮ್ ಬಹಳ ಇಷ್ಟ. ನಾವು ಅದನ್ನು ಎಂಜಾಯ್ ಮಾಡತೊಡಗಿದ್ದೇವೆ.