Tuesday, May 20, 2014

ಸಿದ್ಧಾಂತ ಮತ್ತು ಅನುಷ್ಠಾನ

ಸಿದ್ಧಾಂತ ಮತ್ತು ಅನುಷ್ಠಾನ 
ಧರ್ಮ ಅಥವಾ ಆಧ್ಯಾತ್ಮಿಕವಿಜ್ಞಾನ ಎಂಬುದು ಸೈದ್ಧಾಂತಿಕವಲ್ಲ. ಸಿದ್ಧಾಂತಗಳ ಚಿಂತನೆಯಿಂದ ಯಾವುದೇ ಆಧ್ಯಾತ್ಮಿಕ ಪ್ರಯೋಜನವಾಗುವುದಿಲ್ಲ.  ಆದ್ದರಿಂದಲೇ ಭಾರತೀಯ ಆಧ್ಯಾತ್ಮವಿದ್ಯೆಗೆ ಸಿದ್ಧಾಂತ ಮತ್ತು ಅನುಷ್ಠಾನ ಎಂಬ ಎರಡು ಮುಖಗಳಿವೆ.  ಭಾರತದ ಪ್ರಾಚೀನರು ಧಾರ್ಮಿಕ ಅನುಷ್ಠಾನಗಳನ್ನು ಆಚರಣೆಗೆ ತರಲಿಕ್ಕೆ ಸಿದ್ಧಾಂತಗಳ ಪ್ರತಿಪಾದನೆಯ ಮೂಲಕ ವಿವರಣೆ ನೀಡಿದ್ದಾರೆ. ಸಿದ್ಧಾಂತಗಳ ಅಡಿಪಾಯದ ಮೇಲೆಯೇ ಅನುಷ್ಠಾನವಿಧಾನಗಳು ನಿಂತಿವೆ. ಸಿದ್ಧಾಂತಗಳ ಚಿಂತನೆ ಹಾಗೂ ಅವುಗಳ ಫಲಿತಾಂಶಗಳ ಅನುಷ್ಠಾನದಿಂದ ಯೋಗಗಳೆಂಬ ನಾಲ್ಕು ಸಾಧನಾ ಮಾರ್ಗಗಳು ಹುಟ್ಟಿಕೊಂಡಿವೆ. ಆದರೆ ದುರ್ದೈವದಿಂದ ಈ ಸೈದ್ಧಾಂತಿಕ ತತ್ವಗಳು ಬೇರೆ ಬೇರೆ ರೀತಿಯಾಗಿ ಅರ್ಥೈಸಲ್ಪಟ್ಟು ಅನೇಕ ತತ್ವ-ಮತಗಳಿಗೆ ಸೆಮೆಟಿಕ್ ಮತಗಳ ಹುಟ್ಟುವಿಕೆಗೆ ಎಡೆಮಾಡಿಕೊಟ್ಟಿವೆ. 

ಸಿದ್ಧಾಂತ ವಿಭಾಗ (ಆರು ಶಾಸ್ತ್ರಗಳು)
ಭಾರತೀಯ ಆಧ್ಯಾತ್ಮವಿದ್ಯೆಯ ಅಥವಾ ಧರ್ಮದ ಶಾಖೆಗಳು ಆರು. ಅವುಗಳೇ ಷಡ್ದರ್ಶನಗಳು ಅಥವಾ ಆರು ಶಾಸ್ತ್ರಗಳೆಂದು ಕರೆಯಲ್ಪಟ್ಟಿವೆ. ನಾಯಶಾಸ್ತ್ರ(ಗೌತಮ), ವೇಶೇಷಿಕ(ಕಣಾದ), ಸಾಂಖ್ಯ(ಕಪಿಲ),  ಯೋಗ(ಪತಂಜಲಿ), ಮೀಮಾಂಸಾ(ಜೈಮಿನಿ) ಹಾಗೂ ವೇದಾಂತಶಾಸ್ತ್ರ(ಬಾದರಾಯಣ) ಇವುಗಳೇ ಆ ಆರು ದರ್ಶನಗಳಾಗಿವೆ. ಇವುಗಳಿಗೆಲ್ಲ ವೇದವೇ ಆಧಾರವಾಗಿದೆ. ಆದ್ದರಿಂದ ಇವುಗಳನ್ನು ವೈದಿಕ ದರ್ಶನಗಳೆಂದು ಗುರುತಿಸಲಾಗುತ್ತದೆ.

ನ್ಯಾಯ ಮತ್ತು ವೈಶೇಷಿಕ  
ಗೌತಮನ ನ್ಯಾಯ ಹಾಗೂ ಕಣಾದನ ವೈಶೇಷಿಕ ಪದ್ಧತಿಗಳ ಪ್ರಕಾರ ಅಳಿವಿಲ್ಲದ ಅಣುಗಳಿಂದ ಈ ಸೃಷ್ಟಿ ನಿರ್ಮಾಣವಾಗಿದೆ. ಎಲ್ಲ ಜೀವಿಗಳ ಬಾಳಿನ ಆಗುಹೋಗುಗಳು  ಹಿಂದಿನ ಸೃಷ್ಟಿಯಲ್ಲಿ ಮುಕ್ತವಾಗದೇ ಉಳಿದ ಆಯಾ ಜೀವಿಯ ‘’ಅದೃಷ್ಟ’’ ವನ್ನು (ದೃಷ್ಟಿಗೆ ಕಾಣದ್ದನ್ನು, ಅರ್ಹತೆಯನ್ನು) ಅವಲಂಬಿಸಿದೆ.  ಈ ಅಣುಗಳ ಸಂಯೋಗದಿಂದ ವಿಶ್ವದ ಸೃಷ್ಟಿಕ್ರಿಯೆ ನಡೆಯುತ್ತದೆ. ಹಾಗೆಯೇ ಅವುಗಳ ವಿಯೋಗದಿಂದ ಲಯ ಸಂಭವಿಸುತ್ತದೆ. ಜೀವಿಗಳಿಗೆ ತಾನು ದೇಹ-ಇಂದ್ರಿಯಸಮೂಹ ಹಾಗೂ ಮನಸ್ಸಿಗಿಂತ ಭಿನ್ನವಾದ ಶಾಶ್ವತ ವಸ್ತು ಎಂಬ ತಿಳುವಳಿಕೆ ಇಲ್ಲದ ಕಾರಣದಿಂದಲೇ ಜೀವಿಗಳು ಮತ್ತೆ ಮತ್ತೆ ಹುಟ್ಟುವ ಸಾಯುವ ಚಕ್ರಕದಲ್ಲಿ ಸಿಲುಕಿಕೊಂಡಿರುತ್ತವೆ.  ಈ ಚಕ್ರದಿಂದ ಅಂದರೆ ಎಲ್ಲ ರೀತಿಯ ದುಃಖಗಳಿಂದಲೂ ಶಾಶ್ವತ ಬಿಡುಗಡೆ ಹೊಂದಲು ಆ ಜೀವಿಯು ‘’ಶ್ರವಣ’’(ಶಾಸ್ತ್ರವು ವಿವರಿಸುವ ಸತ್ಯದ ತಿಳುವಳಿಕೆಯ ಆಲಿಸುವಿಕೆ), ಮನನ(ಆ ಸತ್ಯದ ಕುರಿತಾದ ಚಿಂತನೆ-ತನ್ಮೂಲಕ ತನ್ನ ನಿಜಸ್ವೂಪದ ಜ್ಞಾನ) ಹಾಗೂ ನಿಧಿಧ್ಯಾಸನ(ತನ್ನ ನಿಜಸ್ವರೂಪದ ಬಗ್ಗೆ ಧ್ಯಾನ)  ಎಂಬ ಕ್ರಿಯೆಗಳನ್ನು ಅವಲಂಬಿಸಬೇಕು ಎಂದು ನ್ಯಾಯ- ವೈಶೇಷಿಕ  ಶಾಸ್ತ್ರಗಳು ಪ್ರತಿಪಾದಿಸುತ್ತವೆ. 
ಸಾಂಖ್ಯ ಮತ್ತು ಯೋಗ
ಕಪಿಲನ ಸಾಂಖ್ಯ ಮತ್ತು ಪತಂಜಲಿಯ ಯೋಗಪದ್ಧತಿಗಳು ಒಂದಕ್ಕೊಂದು ಪೂರಕವಾಗಿವೆ. ಪ್ರಕೃತಿ ಎನ್ನುವುದು ವಿಶ್ವದ ಮೂಲವಸ್ತುಗಳ ಸಂಗ್ರಹ ಎನ್ನುವುದು ಈ ಎರಡೂ ಶಾಸ್ತ್ರಗಳ ಕಾಣ್ಕೆಯಾಗಿದೆ.  ಪುರುಷರು(ಮನುಷ್ಯರು ಅಥವಾ ಜೀವಾತ್ಮರು) ಪ್ರೇರಕ ಶಕ್ತಿಗಳಂತೆ ವರ್ತಿಸುತ್ತಾರೆ. ಜೀವಿಗಳ ಉಪಸ್ಥಿತಿಯಲ್ಲಿ  ಈ ಪ್ರಕೃತಿ ವಿಶ್ವವಾಗಿ ಸೃಷ್ಟಿಗೊಳ್ಳುತ್ತದೆ. ವಾಸ್ತವವಾಗಿ, ಈ ಇಡೀ ಸೃಷ್ಟಿಕ್ರಿಯೆಯೇ ಜೀವಿಗಳ ಆತ್ಮಿಕ ಉನ್ನತಿಗಾಗಿ ಹಾಗೂ ಅಂತಿಮವಾಗಿ ಜೀವಿಗಳ ಮುಕ್ತಿಗಾಗಿ ಉಂಟಾಗಿದೆ. ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶವೆಂಬ ಪಂಚಭೂತಗಳ ನಾನಾ ವಿಧಧ ಜೋಡಣೆಗಳಿಂದಲೇ ಈ ವಿಶ್ವದ ಅಥವಾ ಪ್ರಕೃತಿಯ ರಚನೆಯಾಗಿದೆ. ಜೀವಾತ್ಮನು ವಾಸ್ತವದಲ್ಲಿ ಈ ಪ್ರಕೃತಿಗಿಂತ ‘’ಭಿನ್ನವಾದ ಅಸ್ತಿತ್ವ’’ವಾಗಿದ್ದರೂ ಕೂಡ ಪ್ರಕೃತಿಗೂ ಹಾಗೂ ಅದರ ಉತ್ಪನ್ನಗಳಾದ ಶರೀರ ಮತ್ತು ಸತ್ವ ರಜ ತಮಗಳೆಂಬ ಮೂರು ಗುಣಗಳ ಪ್ರಭಾವಕ್ಕೆ ಒಳಗಾಗುವುದರ ಮೂಲಕ ಅವುಗಳ ಬಂಧನದಲ್ಲಿರುತ್ತಾನೆ. ಅದರ ಫಲವೇ ಮತ್ತೆ ಮತ್ತೆ ಜನ್ಮ ಉಂಟಾಗುವುದು. ‘’ವಿವೇಕಖ್ಯಾತಿ’’ಯ ಸಂಪಾದನೆ ಅಂದರೆ ವಿವೇಚನೆ ಮತ್ತು ಮತ್ತು ಜ್ಞಾನಗಳ ಮೂಲಕ ವೈರಾಗ್ಯ ಸಂಪಾದನೆ, ಹಾಗೂ ಯೋಗದ ಎಂಟು ಹಂತಗಳ ಮೂಲಕ ಅಂತಿಮವಾಗಿ ಆತನಿಗೆ ಬಿಡುಗಡೆ ಉಂಟಾಗುತ್ತದೆ ಎಂಬುದು ಸಾಂಖ್ಯ ಮತ್ತು ಯೋಗಗಳ ಪ್ರತಿಪಾದನೆಯಾಗಿದೆ.  
ಮೀಮಾಂಸಾ ಶಾಸ್ತ್ರ
ಜೈಮಿನಿಯ ಮೀಮಾಂಸಾ ದರ್ಶನದ ಪ್ರಕಾರ ಪ್ರಕೃತಿಯು ಅಚೇತನವಾಗಿದ್ದು ಈ ವಿಶ್ವವಾಗಿ ತನ್ನಿಂತಾನೆ ವಿಕಾಸ ಹೊಂದುತ್ತದೆ. ಜೀವಿಗಳು ಪೂರ್ವಜನ್ಮದಲ್ಲಿ ಎಸಗಿದ ಕರ್ಮಗಳು ಮತ್ತು ಈಗ ಫಲ ಕೊಡಲಿರುವ ಪ್ರಾರಬ್ಧ ಕರ್ಮಗಳು ವಿಶ್ವದ ವಿಕಾಸಕ್ಕೆ ಕಾರಣ ಮತ್ತು ಪ್ರೇರಣೆಗಳಾಗಿವೆ. ಈ ಜೀವಿಗಳು ಯಜ್ಞಯಾಗಾದಿ ವೇದಗಳಲ್ಲಿ ಹೇಳಿದ ಅನುಷ್ಠಾನಗಳನ್ನು ಪ್ರತಿನಿತ್ಯದ ಜೀವನದಲ್ಲಿ ಆಚರಿಸಬೇಕು. ಅವುಗಳ ನಿರಂತರ ಆಚರಣೆಯಿಂದ  ಚಿತ್ತಶುದ್ಧಿಯನ್ನು ಪಡೆಯುದರಮೂಲಕ ಬ್ರಹ್ಮತ್ವದ ಅನುಭವವನ್ನು ಹೊಂದಿ ತಮ್ಮ ಎಲ್ಲ ಸಂಕಟಗಳಿಂದ ಬಿಡುಗಡೆ ಹೊಂದಿ ಮುಕ್ತವಾಗಬೇಕು ಎಂದು ಮೀಮಾಂಸಾ ಶಾಸ್ತ್ರ ಹೇಳುತ್ತದೆ. 
ವೇದಾಂತ ಶಾಸ್ತ್ರ
ಬಾದರಾಯಣರ(ಇವರಿಗೆ ವ್ಯಾಸರು ಎಂಬ ಹೆಸರೂ ಇದೆ) ವೇದಾಂತ ದರ್ಶನದ ಪ್ರಕಾರ ಪ್ರತಿಯೊಂದು ಕಲ್ಪದ ಆದಿಯಲ್ಲಿ ನಿರ್ಗುಣ ಪರಬ್ರಹ್ಮವು ತನ್ನೊಳಗಿನಿಂದಲೇ ಈ ವಿಶ್ವವನ್ನು ಸೃಷ್ಟಿಸುತ್ತದೆ ಹಾಗೂ ಅದನ್ನು ವಿಷ್ಣುತತ್ವವಾಗಿದ್ದುಕೊಂಡು ಪೋಷಿಸುತ್ತದೆ. ಕೊನೆಗೆ ಕಲ್ಪಾಂತ್ಯದಲ್ಲಿ ರುದ್ರತತ್ವವಾಗಿ ಈ ಸೃಷ್ಟಿಯನ್ನೆಲ್ಲ ತನ್ನೊಳಗೆ ಎಳೆದುಕೊಂಡುಬಿಡುತ್ತದೆ. ವೇದಾಂತದಲ್ಲಿ ಈ ಸೃಷ್ಟಿಕ್ರಿಯೆಯನ್ನು ಜೇಡರ ಹುಳದ ಬಾಯಿಂದ ಹೊರಬಂದಿರುವ ಅದರ ಬಲೆಗೆ ಹಾಗೂ ಉರಿಯುವ ಬೆಂಕಿಯಿಂದ ಸಿಡಿಯುವ ಕಿಡಿಗಳಿಗೆ ಹೋಲಿಸಲಾಗಿದೆ. ಅದು ಹೊರಸಿಡಿದ ಕೆಲಹೊತ್ತಿನಲ್ಲಿಯೇ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಆದರೆ ಅದಕ್ಕೆ ಕಾರಣವಾದ ಅಗ್ನಿ ಮೂಲದಲ್ಲಿ ಹಾಗೆಯೇ ಶಾಶ್ವತವಾಗಿ ಉಳಿದಿರುತ್ತದೆ. ಈ ಕಿಡಿಯ ಅಸ್ತಿತ್ವವನ್ನು ನಿರಾಕರಿಸಲೂ ಸಾಧ್ಯವಿಲ್ಲ.. ಹಾಗೆಯೇ ಅದು ಶಾಶ್ವತವೂ ಅಲ್ಲ. ಬೆಂಕಿಯಿಂದ ಸಿಡಿದ ಕಿಡಿಯೂ ಬೆಂಕಿಯೇ ಆಗಿರುವಂತೆ ಪರಬ್ರಹ್ಮದಿಂದ ಉಂಟಾದ ಈ ಜಗತ್ತೆಲ್ಲವೂ ಬ್ರಹ್ಮವೇ ಆಗಿದೆ. ಬ್ರಹ್ಮತತ್ವವಲ್ಲದ್ದು ಇಲ್ಲಿ ಏನೂ ಇಲ್ಲ. ಜೀವಿಯು ಜ್ಞಾನದ(ತನ್ನ ಅಸ್ತಿತ್ವದ, ನಿಜಸ್ವಭಾವದ ಅರಿವು) ಹಾಗೂ ಭಕ್ತಿಯ ಮೂಲಕ ತನ್ನ ಅನಂತ ಆನಂದದ ಮೂಲಸ್ಥಿತಿಯನ್ನು ಪುನಃ ಗಳಿಸುತ್ತಾನೆ ಎಂದು ಸಾರುವ ವೇದಾಂತವು ಅದರ ಸಾಧನೆಗಳನ್ನು ವಿವರಿಸುತ್ತದೆ. 

ಅನುಷ್ಠಾನ ವಿಭಾಗ ( ನಾಲ್ಕು ಯೋಗಗಳು)
ಯೋಗ ಎಂಬುದು ಅನುಷ್ಠಾನಕ್ಕೆ ಸಂಬಂಧಿಸಿದ್ದು. ಈ ಯೋಗದಲ್ಲಿ ನಾಲ್ಕು ವಿಧ. ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಮತ್ತು ರಾಜಯೋಗ. ಇವೆಲ್ಲವೂ ಮನಸ್ಸನ್ನು-ಚಿತ್ತವನ್ನು ಹಂತ ಹಂತವಾಗಿ ಶುದ್ಧಗೊಳಿಸುವ ಉಪಾಯಗಳು. ಈ ಯೋಗಗಳ ಅನುಷ್ಠಾದಿಂದ ಮನಸ್ಸು ಎಷ್ಟು ಪರಿಶುದ್ಧವಾಗುವುದೆಂದರೆ ತನ್ನೊಳಗಿನ ಆತ್ಮ ಅಥವಾ ಭಗವಂತನು ಜೀವಿಗೆ ತಾನಾಗಿಯೇ ಮೈದೋರುತ್ತಾನೆ. 

ಕರ್ಮಯೋಗ
ಪೂಜೆ, ಉಪಾಸನೆ ಇತ್ಯಾದಿ ಧಾರ್ಮಿಕ ಆಚರಣೆಗಳು, ಧರ್ಮಶಾಸ್ತ್ರದ ವಿಧಿ-ನಿಷೇಧಗಳು, ನಿಯಮಗಳು, ಹಾಗೂ ನಿತ್ಯ, ನೈಮಿತ್ತಿಕ, ಪ್ರಾಯಶ್ಚಿತ್ತ ಮತ್ತು ಕಾಮ್ಯವೆಂಬ ನಾಲ್ಕು ಪ್ರಕಾರದ ವೈದಿಕ ಅನುಷ್ಠಾನಗಳು, ಯಜ್ಞಗಳು ಇವೆಲ್ಲ ಕರ್ಮಯೋಗದ ಭಾಗಗಳಾಗಿವೆ. ವೈದಿಕ ಅನುಷ್ಠಾನಗಳು ಮಾತ್ರವಲ್ಲದೇ ಉದ್ಯೋಗ, ವ್ಯಾಪಾರ ಮುಂತಾದ ಎಲ್ಲ ಕ್ರಿಯೆಗಳೂ ಕರ್ಮವೇ ಆಗಿವೆ. ವಾಸ್ತವವಾಗಿ ಜೀವಿಗಳ ಮಾನಸಿಕ ಆಲೋಚನೆ ಮತ್ತು ಉಸಿರಾಟವೂ ಕೂಡ ಕರ್ಮವೇ ಆಗಿದೆ. ಕರ್ಮ ಮಾಡದೇ ಜೀವಿಯು ಒಂದು ಕ್ಷಣವೂ ಇರಲು ಸಾಧ್ಯವಿಲ್ಲ. ಆ ಕರ್ಮದಿಂದ ಕರ್ಮಫಲ, ಕರ್ಮಫಲದಿಂದ ವಾಸನೆ..ವಾಸನೆಯಿಂದ ಪ್ರವೃತ್ತಿ, ಪ್ರವೃತ್ತಿಯಿಂದ ಮತ್ತೆ ಕರ್ಮ, ಕರ್ಮದಿಂದ ಮತ್ತೆ ಕರ್ಮಫಲ ಆ ಕರ್ಮಫಲ ಅನುಭವಿಸಲಿಕ್ಕೆ ಮತ್ತೆ ಪುನರ್ಜನ್ಮ, ಜನ್ಮಿಸಿದ ಮೇಲೆ ಮತ್ತೆ ಕರ್ಮ ಹೀಗೆ ಈ ಚಕ್ರ ನಡೆಯುತ್ತಿದೆ. ಇದರಿಂದ ಬಿಡುಗಡೆ ಹೊಂದಲಿಕ್ಕೆ ಮಾನವನು ತನ್ನ ಕರ್ತವ್ಯವಾದ ಕರ್ಮಗಳನ್ನು ‘’ಕರ್ತೃತ್ವಭಾವ’’ ಅಂದರೆ ‘’ನಾನು ಆ ಕರ್ಮವನ್ನು ಮಾಡಿದೆ’’ ಎಂಬ ಭಾವ ಮತ್ತು ಅದರಿಂದುಂಟಾಗುವ ‘’ಫಲವು ನನ್ನದೇ’’ ಎಂಬ ‘’ಫಲಾಪೇಕ್ಷೆಯ ಭಾವ’’ ಈ ಎರಡು ವಿಷಕಾರಕ ಭಾವಗಳನ್ನು ಬಿಟ್ಟು ಭಗವಂತನಿಗೆ ಅವುಗಳನ್ನು ಸಮರ್ಪಿಸಿಬಿಡುವುದರಿಂದ ಆ ಕರ್ಮಫಲ ಮತ್ತು ಅದರಿಂದುಂಟಾಗುವ ವಾಸನೆಯಿಂದ ಮುಕ್ತನಾಗುತ್ತಾನೆ. 
‘’ನೀನು ಈ ಕರ್ಮವನ್ನು ಮಾಡುತ್ತಿರುವಿ ಎಂಬ ಭಾವವನ್ನು ಬಿಟ್ಟು ಬಿಡು.. ಮತ್ತು ಅದರಿಂದುಂಟಾಗುವ ಫಲವು ನಿನ್ನದು ಎಂದುಕೊಳ್ಳಬೇಡ. ಅವೆರಡೂ ನನ್ನವೇ ಆಗಿವೆ. ನಿನ್ನದೇನೂ ಇಲ್ಲ. ಆದರೂ ನೀನು ನಿನ್ನ ಕರ್ತವ್ಯವಾದ ಕರ್ಮವನ್ನು (ಯುದ್ಧವನ್ನು) ಮಾಡಬೇಕು ಮತ್ತು ಅದನ್ನು ಚೆನ್ನಾಗಿ ಶ್ರದ್ಧೆಯಿಂದ ಮಾಡಬೇಕು, ಅದರ ಕರ್ತೃತ್ವ ಮತ್ತು ಫಲವನ್ನು ನನ್ನಮೇಲೆ ಹಾಕಿಬಿಡು ’’ ಎಂಬ ಕೃಷ್ಣನ  ಮಾತು ಅರ್ಜುನನಿಗೆ ಮಾತ್ರವಲ್ಲ,  ಇಡೀ ಜಗತ್ತಿಗೇ ಹೇಳಿದ್ದಾಗಿದೆ ಮತ್ತು ಅದು ಕೇವಲ ಯುಧ್ಧದ ಕುರಿತಾದ ಮಾತಲ್ಲ, ಉಸಿರಾಟ, ಆಲೋಚನೆ ಮೊದಲುಗೊಂಡು ಎಲ್ಲ ರೀತಿಯ ಕರ್ಮಗಳಿಗೆ ಅನ್ವಯಿಸುತ್ತದೆ. 

ಭಕ್ತಿಯೋಗ
ದೇವರಲ್ಲಿ ಭಕ್ತಿಯನ್ನು ಬೆಳೆಸಿಕೊಂಡು ಆತನ ಕೃಪೆಯಿಂದಲೇ ಆತನನ್ನು ಸೇರಬೇಕೆಂಬುದು ಭಕ್ತಿಯೋಗದ ಮಾರ್ಗ. ನಾರದನ ಭಕ್ತಿಸೂತ್ರಗಳಲ್ಲಿ ಒಂಭತ್ತು ವಿಧವಾದ ಭಕ್ತಿಗಳನ್ನು ವಿವರಿಸಿದ್ದು ರಾಮಾಯಣದಲ್ಲಿ ಅವುಗಳನ್ನೇ ರಾಮನು ಶಬರಿಗೆ ಬೋಧಿಸಿದ್ದಾನೆ. ಇಲ್ಲಿ ಭಕ್ತಿಯೆಂದರೆ ದೇವರೆಡೆಗಿನ ಮೂಢ ವಿಶ್ವಾಸವಲ್ಲ. ಅಂಧಾಭಿಮಾನವಲ್ಲ.
ಮೋಕ್ಷಸಾಧನ ಸಾಮಗ್ರ್ಯಾಂ ಭಕ್ತಿರೇವ ಗರೀಯಸಿ |
 ಸ್ವಸ್ವರೂಪಾನುಸಂಧಾನಂ ಭಕ್ತಿರಿತ್ಯಭಿಧೀಯತೆ || 
ಮೋಕ್ಷಸಾಧನೆಗಿರುವ ಮಾರ್ಗಗಳಲ್ಲಿ ಭಕ್ತಿಯೇ ಉತ್ತಮವಾದದ್ದು. ಆದರೆ ಸ್ವಸ್ವೂಪದ ಅನುಸಂಧಾನವೇ ಭಕ್ತಿಯಾಗಿದೆ ಎಂದು ಶಂಕರಾಚಾರ್ಯರು ಭಕ್ತಿಯ ಸ್ವರೂಪವನ್ನು ವಿವರಿಸಿದ್ದಾರೆ.  ಈ ಸ್ವಸ್ವರೂಪದ ಅನುಸಂಧಾನಕ್ಕೆ ಹಾಗೂ ಭಗವಂತನ ಮೇಲೆ ಭಕ್ತಿಯನ್ನು ಹೊಂದಲಿಕ್ಕೆ ಭಗಂವಂತನ ಅನಂತತೆ, ಅಗಾಧತೆ, ಸೃಷ್ಟಿಯ ನಶ್ವರತೆ, ಜೀವದ ಚೈತನ್ಯ ಸ್ವಭಾವ ಮುಂತಾದವುಗಳ ಸ್ಪಷ್ಟ ಜ್ಞಾನ ಇರಲೇಬೇಕಾಗುತ್ತದೆ. ಹೀಗಾಗಿ ಭಕ್ತಿಯು ಜ್ಞಾನದ ಅಡಿಪಾಯದ ಮೇಲೆಯೇ ನಿಂತಿರುತ್ತದೆ. ಜ್ಞಾನವಿಲ್ಲದ ಮೂಢ ಅಭಿಮಾನವು ಅಥವಾ ಅವಲಂಬನೆಯು ಭಕ್ತಿಯೆನಿಸಿಕೊಳ್ಳಲು ಯೋಗ್ಯವಾಗಿರುವುದಿಲ್ಲ. 

ಜ್ಞಾನಯೊಗ
ಆತ್ಮಸ್ವರೂಪದ, ಬ್ರಹ್ಮತತ್ವದ ಸಂಪೂರ್ಣ ಜ್ಞಾನವನ್ನು ಪಡೆದುಕೊಂಡು ನಿರಂತರವೂ ಮನಸ್ಸನ್ನು ಅಂತರ್ಮುಖಿಯಾಗಿಸಿಕೊಂಡು ತನ್ನನ್ನು ತಾನು ಆತ್ಮನೆಂಬ ವಾಸ್ತವವನ್ನು ಧ್ಯಾನಿಸುತ್ತಿದ್ದರೆ ಅಂತಿಮವಾಗಿ ಅದು ಅನುಭವಕ್ಕೆ ಬರುತ್ತದೆ ಎಂಬುದು ಜ್ಞಾನಯೋಗದ ಅನುಷ್ಠಾನ ವಿಧಾನ. 

ರಾಜಯೋಗ
ಪತಂಜಲಿಯ ಅಷ್ಟಾಂಗಯೋಗ ಪದ್ಧತಿಯನ್ನು ರಾಜಯೋಗವು ಅವಲಂಬಿಸಿದೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಸಮಾಧಿ ಎಂಬ ಎಂಟು ಸಾಧನೆಯ ಮೆಟ್ಟಿಲುಗಳನ್ನು ಕ್ರಮವಾಗಿ ಹತ್ತಿಕೊಂಡು ಹೋದಾಗ ಆತ್ಮಾನುಭವದ ಫಲ ಉಂಟಾಗಿ ತನ್ಮೂಲಕ ಬಿಡುಗಡೆ ಸಿದ್ಧಿಸುತ್ತದೆ. ಅರ್ಜಿತ, ಸಂಚಿತ ಮತ್ತು ಪ್ರಾರಬ್ಧ ಎಂಬ ಮೂರೂ ಪ್ರಕಾರದ ಕರ್ಮಗಳೂ ಮತ್ತು ಅವುಗಳ ಫಲದಿಂದುಂಟಾಗುವ ಪುನರ್ಜನ್ಮದ ಕೊಂಡಿ ತಪ್ಪುತ್ತದೆ.

Tuesday, May 6, 2014

# ಕರೆ #


ದೇಹಕಿರುವ ಹೆಸರು, ಮೆದುಳಿನಲ್ಲಿಯ ವಿದ್ಯೆ
ಅವುಗಳೆರಡರ ಒಟ್ಟು ಸುಳ್ಳು ಮುಖವಾಡ
ಎಲ್ಲ ಕಳಚಿ ಬೆತ್ತಲಾಗಿ ನಿಲ್ಲಲಾಗುವುದಿಲ್ಲ . 
ಬರಿಯ ನಾನಾಗಿ ನಾ ಸುಖಿಸಲಾಗುವುದಿಲ್ಲ 

ಸತ್ವ ರಜ ತಮಗಳ ಆಟ ಮನಸು ಪರದೆಯ ಮೇಲೆ
ವೃತ್ತಿ ಹಿಡಿತದಿ ಚಿತ್ತ ಮುಳು ಮುಳಗಿ ಏಳುತಿರೆ 
ಬುದ್ಧಿಯರಿವಿನ ನಿಲುಕಿನಲಿ ವಿಜ್ಞಾನವಿಲ್ಲ
ಹೊಟ್ಟೆಪಾಡಿನ ಓಟ  ಹೊಟ್ಟೆಗೇ ನಿಲ್ಲುವುದಿಲ್ಲ  

ಮೂರು ಗುಣಗಳ ಚಕ್ರದಲಿ ದೇಹಗಳಿಗೆ ಅಲೆದಲೆದು 
ಹೊತ್ತ ಭ್ರಮೆಗಳ ಭಾರ ಜನ್ಮ ಜನ್ಮಾಂತರದ್ದು
ಹೊರೆ ಇಳಿಸಿ ನೀರುಣಿಸೊ ದಾರಿಹೋಕನು ನೀನು 
ಅಡಗಿರುವೆ ಏಕಿನ್ನೂ ದಣಿದಿರುವೆ ನಾನು 

ಗುಲ್ಜಾರ್


ಬೇರುಗಳನ್ನು ಕತ್ತರಿಸಿ ನನ್ನನ್ನು ಹಾರಾಡಿಸುತ್ತಿದ್ದ 
ಗಾಳಿಯೊಡನೆ ಸಖ್ಯ ಮಾಡಿಸಿಬಿಟ್ಟಿದ್ದ 
ಅದಷ್ಟೇ ಅಲ್ಲ ಕೇಳಿಲ್ಲಿ ಇನ್ನೊಂದು ಆಶ್ಚರ್ಯ 
ನಾ ನನ್ನ ವಿಧಿಯನ್ನೇ ಬದಲಿಸುವಂತೆ ಮಾಡಿದ್ದ 

ಅವನದೇ ನಿಯತ್ತು ಬದಲಾಗಿ ಹೋಗಿದೆ ಈಗ 
ನನ್ನ ಬಾಳಿನ ದೇವರಾಗಿದ್ದ  ಅವನು 
ಮೊನ್ನೆ ಯಾರೋ ಅಪರಿಚಿತನಿಗೆ  
ನನ್ನದೇ  ಕಥೆ ಹೇಳುತ್ತಿದ್ದ 

ಆವ ನನ್ನ ಉಳಿದ ಆಯುಸ್ಸು ಎಣಿಸುತ್ತಿದ್ದ 
ನಾ ನನ್ನ ಉಸಿರುಗಳ ಅಂತರವ ಬೆಳೆಸುತ್ತಿದ್ದೆ  

ಕರ್ತೃತಂತ್ರ ಹಾಗೂ ವಸ್ತು-ತಂತ್ರ

ವೇದ-ವೇದಾಂತಗಳಿಗೆ ವ್ಯಾಖ್ಯಾನ ಬರೆದ ಬಹುತೇಕ ಮಹನೀಯರು ವೇದವೆಲ್ಲವೂ ಕೂಡ‘ ವಿಧಿಪರವೇ ಅಂದರೆ ಯಜ್ಞಾದಿ ದೈಹಿಕ ಕ್ರಿಯೆಗಳ, ಹಾಗೂ ಉಪಾಸನೆಯೆಂಬ ಮಾನಸಿಕಕ್ರಿಯಾ ಸಮುಚ್ಚಯದ ‘’ವಿಧಿ-ವಿಧಾನ’’ಗಳನ್ನು ತಿಳಿಸುವುದೇ ಆಗಿದೆಎಂದು ವ್ಯಾಖ್ಯಾನಿಸಿದ್ದಾರೆ. ವಿಧಿಗೆ ಸಂಬಂಧಪಡ ದಉಪನಿಷತ್ತುಗಳನ್ನು ಕೂಡ ಉಪಾಸನಾವಿಧಿಗೆ ಒಳಪಡಿಸಿಕೊಳ್ಳಬೇಕೆಂಬುದೂ ಕೆಲವರ ಮತವಾಗಿದೆ.  ಆದ್ದರಿಂದಲೇ ಅವರುಗಳು ಆತ್ಮಜ್ಞಾನದ ಪ್ರಾಪ್ತಿಯಾದ ಬಳಿಕವೂ ಕೂಡ ಕೇವಲ ಆತ್ಮಜ್ಞಾನಪ್ರಾಪ್ತಿ ಮೋಕ್ಷಕ್ಕೆ ಸಾಕಾಗುವುದಿಲ್ಲ. ಆತ್ಮಜ್ಞಾನ ಉಂಟಾದ ಬಳಿಕ ಮೋಕ್ಷಕ್ಕಾಗಿ ಪ್ರಸಂಖ್ಯಾನ, ಉಪಾಸನೆ, ಸಾಕ್ಷಾತ್ಕಾರ, ಮನೋನಾಶ, ವಾಸನಾಕ್ಷಯ, ಪ್ರಪಂಚಪ್ರವಿಲಯ ಮುಂತಾದ ಅನೇಕಸಾಧನೆಗಳನ್ನು ಮಾಡಬೇಕೆಂದು ಪ್ರತಿಪಾದಿಸಿದ್ದಾರೆ. ಆದರೆ ಶಂಕರರು ಕೇವಲ ಆತ್ಮಜ್ಞಾನವೇ ಮೋಕ್ಷಕ್ಕೆ ಸಾಕಾಗಿದೆ- ಇನ್ನೇನೂ ಮಾಡಬೇಕಾದ ಅಗತ್ಯವಿಲ್ಲ ಎಂದು ಸಾರಿದ್ದಾರೆ. ಅವರ ಮಾತನ್ನು ಸರಿಯಾಗಿ ತಿಳಿಯಲು ಕರ್ತೃತಂತ್ರ ಹಾಗೂ ವಸ್ತು-ತಂತ್ರ ಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಕರ್ತೃತಂತ್ರ
ಕರ್ತೃ ಎಂದರೆ ಮಾಡುವವನು ಎಂದರ್ಥ. ಮಾಡುವವನ ಇಚ್ಛೆಗೆ ಅಧೀನವಾಗಿರುವ ಕ್ರಿಯೆ ಅಥವಾ ಕೆಲಸವೇ ‘’ಕರ್ತೃತಂತ್ರ’’.  ಕರ್ತವ್ಯ ಅಥವಾಕ್ರಿಯೆ – ಎಂಬುದು ಮಾಡುವವನಿಗೆ ಅಧೀನವಾಗಿಯೇ ಹುಟ್ಟುತ್ತದೆ. ಕರ್ತೃವು ಆ ಕ್ರಿಯೆಯನ್ನು ಮಾಡಬಹುದು-ಮಾಡದೇ ಇರಬಹುದು, ಅಥವಾ ಮತ್ತೊಂದು ಬಗೆಯಿಂದಲೂ ಮಾಡಬಹುದು. ಹೀಗೆ ಲೌಕಿಕ-ವೈದಿಕ ಕರ್ಮಗಳೆಲ್ಲವೂ ಕರ್ತೃತಂತ್ರವಾಗಿಯೇ ಇರುತ್ತವೆ.
ಉದಾ:- ಒಬ್ಬನು ಒಂದು ಊರಿಗೆ ಹೋಗಬೇಕಾಗಿದೆ ಎಂದಿಟ್ಟುಕೊಳ್ಳೋಣ. ಅವನು ಆ ಊರಿಗೆ. ನಡೆದುಕೊಂಡು ಹೋಗಬಹುದು. ವಾಹನದಲ್ಲಿ ಹೋಗಬಹುದು, ಅಥವಾ ಹೋಗದೆಯೂ ಇರಬಹುದು. ಹೀಗೆಯೇ ವೈದಿಕ ಕರ್ಮಗಳಲ್ಲಿಯೂ ಉತ್ಸರ್ಗ(ಸಾಮಾನ್ಯನಿಯಮ), ವಿಕಲ್ಪ (ಪರ್ಯಾಯನಿಯಮ), ಅಪವಾದ(ವಿಶೇಷನಿಯಮ) ಎಂಬ ಭೇದಗಳು ಇವೆ.
ಒಟ್ಟಿನಲ್ಲಿ ಕರ್ತೃವಿಗೆ ಅಧೀನವಾಗಿದ್ದುಕೊಂಡು ನಡೆಯುವ ದೇಹೇಂದ್ರಿಯ ಪ್ರಧಾನವಾದ ಕಾರ್ಯಗಳಾಗಲಿ ಹಾಗೂ ಮನಃಪ್ರಧಾನವಾದ ಉಪಾಸನೆ-ಧ್ಯಾನಾದಿಗಳಾಗಲಿ- ಎಲ್ಲವೂ ಕರ್ತೃತಂತ್ರವಾಗಿವೆ.

ವಸ್ತುತಂತ್ರ
ವಸ್ತುತಂತ್ರವೆಂದರೆ ವಸ್ತುವಿಗೆ ಅಧೀನವಾಗಿ ಅದುಇರುವಂತೆಯೇ ಉಂಟಾಗುವ ಜ್ಞಾನ. ಯಾವುದೇ ವಸ್ತುವಿನ ಜ್ಞಾನವು(ಅರಿವು) ಆ ವಸ್ತುಹೇಗಿದೆಯೋ ಹಾಗೆಯೇ ಆಗುತ್ತದೆಯೇ ವಿನಃ ಅದು ಜ್ಞಾತೃವಿನ(ತಿಳಿಯುವವನ) ಇಚ್ಛೆಯಂತೆ ಎಂದಿಗೂ ಹುಟ್ಟುವುದಿಲ್ಲ.
ಕಾಗೆಯು ಕಪ್ಪಾಗಿದೆ. ಆದ್ದರಿಂದ ನೋಡುಗನ ದೃಷ್ಟಿಗೆ ಅದು ಕಪ್ಪಾಗಿಯೇ ಕಾಣಿಸುತ್ತದೆ. ಅದು ಹೇಗಿದೆಯೋ ಹಾಗೆಯೇ ಜ್ಞಾನ ಉಂಟಾಗುತ್ತದೆಯೇ ಹೊರತು, ನೋಡುಗನ ಇಚ್ಛೆಯನ್ನು ಆಧರಿಸಿ ಅದು ಎಂದಿಗೂ ಇರುವುದಿಲ್ಲ. ನೋಡುವವನುನನಗೆಕಪ್ಪುಬಣ್ಣಇಷ್ಟವಿಲ್ಲ, ಹಾಗಾಗಿ ಕಾಗೆ ಬಿಳಿಯ ಬಣ್ಣ ಹೊಂದಿದೆ ಎಂದು ಭಾವಿಸಿ ಅದರಲ್ಲಿ ಬಿಳಿಯನ್ನು ನೋಡಲು ಪ್ರಯತ್ನಿಸಿದರೆ ಅದು ಸಾಧ್ಯವಾಗುವುದಿಲ್ಲ.  ಹೀಗೆ,  ಕಾಗೆ ಎಂಬ ವಸ್ತು ಹೇಗಿದೆಯೋ ಹಾಗೆಯೇ ಅದರ ಜ್ಞಾನ ಉಂಟಾಗುವುದರಿಂದ ಈ ಜ್ಞಾನವು ವಸ್ತುತಂತ್ರವಾಗಿದೆ.
ಯಾವ ರೀತಿ ಕ್ರಿಯೆಯು ಕರ್ತೃವಿಗೆ ಅಧೀನವಾಗಿದ್ದು ಕರ್ತೃತಂತ್ರವಾಗಿದೆಯೋ ಅದೇ ರೀತಿ ಜ್ಞಾನವು ವಸ್ತುತಂತ್ರವಾಗಿದ್ದು. ವಸ್ತುವನ್ನು ಅವಲಂಬಿಸಿ ಅದು ಹೇಗಿದೆಯೋ ಹಾಗೆಯೇ ಜ್ಞಾನಉಂಟಾಗುತ್ತದೆಯೇ ಹೊರತು ಅದು ಜ್ಞಾತ್ರೃವಿಗೆ ಅಧಿನವಾಗಿ ಬದಲಾಗುವುದಿಲ್ಲ. ವಸ್ತುವಿನ ಸ್ವರೂಪವು ಅರಿಯುವವನ ಬುದ್ಧಿಯನ್ನು ಅವಲಂಬಿಸಿದ್ದಲ್ಲ.
ಹೀಗೆ ಮಾಡಿದರೆ ಇಂಥದ್ದು ಉಂಟಾಗುತ್ತದೆ,ಅಥವಾ ಇಂಥಾದ್ದು ಪ್ರಾಪ್ತವಾಗುತ್ತದೆ- ಎಂದೆಲ್ಲ ಬೋಧಿಸುವ ವೇದಭಾಗಗಳಲ್ಲಿ ಹೇಳಿದ ಕರ್ಮಗಳು, ಉಪಾಸನೆಗಳು ಎಲ್ಲ ವಿಧಿ-ವಿಧಾನಗಳು ಹಾಗೂ ಲೌಕಿಕ ಜೀವನದ ಕಾರ್ಯನಿಯಮಗಳು ಇವುಗಳೆಲ್ಲ ಕರ್ತೃತಂತ್ರವೇ ಆಗಿವೆ. ಆದರೆ ಉಪನಿಷತ್ತುಗಳಲ್ಲಿ ಹೇಳಿದ ಬ್ರಹ್ಮಜ್ಞಾನವು ವಸ್ತುತಂತ್ರವಾಗಿದೆ. ಹೇಗೆಂದರೆ ಈ ಬ್ರಹ್ಮತತ್ವವು ನಮ್ಮೆಲ್ಲರಲ್ಲಿಯೂ ಮೊದಲಿನಿಂದಲೂ ನಮ್ಮ ಸ್ವರೂಪವೇ ಆಗಿ ನಮ್ಮೊಳಗೇ ಇದ್ದುಬಿಟ್ಟಿರುವ ವಸ್ತುವಾಗಿದೆ.  ಅದರ ಬಗೆಯ ಜ್ಞಾನವು ವಸ್ತುತಂತ್ರವೇ ಅಗಿದೆ.  ಹೀಗಾಗಿ ಆತ್ಮಜ್ಞಾನವನ್ನು ದೈಹಿಕ ಅಥವಾ ಮಾನಸಿಕ ಕ್ರಿಯೆಯಾಗಿ ಪರಿಗಣಿಸಲು ಬರುವುದಿಲ್ಲ.
ಆಕ್ಷೇಪ;
ಲೋಕದಲ್ಲಿಯ ವ್ಯವಹಾರಕ್ಕಾಗಲಿ ಅಥವಾ ವೇದದಲ್ಲಿ ಹೇಳಿದ ಕರ್ಮ-ಉಪಾಸನಾದಿಗಳಿಗೇ ಆಗಲಿ, ಮೊದಲು ಅವುಗಳ ಬಗ್ಗೆ ಜ್ಞಾನವು ಬರಲೇ ಬೇಕು. ಆದರೆ ಅವುಗಳ ಜ್ಞಾನಮಾತ್ರದಿಂದ ನಮಗೆ ಯಾವ ಪ್ರಯೋಜನವೂ ಆಗುವುದಿಲ್ಲ.  ಒಬ್ಬ ವೈದ್ಯನು ಎಲ್ಲ ಚಿಕಿತ್ಸಾಕ್ರಮಗಳನ್ನು ತಿಳಿದುಕೊಂಡು ಸುಮ್ಮನೇ ಕುಳಿತರೆ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡಿದಾಗಲಷ್ಟೇ ಆತನಿಗೆ ಆ ವಿದ್ಯೆಯ ಪ್ರಯೋಜನವಾಗುವುದು. ಹಾಗೆಯೇ ಪ್ರತಿಯೊಂದು ವ್ಯವಹಾರದಲ್ಲಿಯೂ ಇರುವುದಲ್ಲವೇ? ಆದ್ದರಿಂದ ಆತ್ಮಜ್ಞಾನವೂ ಕೂಡ ನಂತರದಲ್ಲಿ ಮಾಡಬೇಕಾಗಿರುವ ಕ್ರಿಯೆಗೆ ಅಧೀನವಾಗಿದ್ದಲ್ಲಿ ಮಾತ್ರ ಪ್ರಯೋಜನಕಾರಿಯಲ್ಲವೇ..? ಕೇವಲ ಜ್ಞಾನಮಾತ್ರದಿಂದ ಯಾವ ಪ್ರಯೋಜನವೂ ಆಗಲಾರದು ಎಂಬುದು ನಮ್ಮೆಲ್ಲರ ನಿತ್ಯಜೀವನದ ಅನುಭವಸಿದ್ಧ ಸತ್ಯವಲ್ಲವೇ? ಎಂಬ ಆಕ್ಷೇಪ ಇಲ್ಲಿ ಎದ್ದು ನಿಲ್ಲುತ್ತದೆ.
ಪರಿಹಾರ
ಒಬ್ಬನು ಮಬ್ಬುಗತ್ತಲೆಯಲ್ಲಿ ಬಿದ್ದಿರುವ ‘’ಹಗ್ಗ’’ವನ್ನು ನೋಡಿ ಅದರ ನಿಜರೂಪ ತಿಳಿಯದೇ ಅದು ‘’ಹಾವು’’ ಎಂದು ಭಾವಿಸಿ ಭಯದಿಂದ ನಡುಗುತ್ತ ನಿಂತಾಗ, ವಾಸ್ತವವನ್ನು ತಿಳಿದವನೊಬ್ಬನು ‘’ಇದುಹಾವಲ್ಲ, ಹಗ್ಗ’’ ಎಂದು ಹೇಳಿದ ಮಾತ್ರಕ್ಕೆ ಭೀತವ್ಯಕ್ತಿಯ ಭಯವು ನಿವಾರಣೆಯಾಗಿ ನಿರಾಳತೆ ಅನುಭಕ್ಕೆ ಬರುವುದು ಲೋಕದಲ್ಲಿ ಸಾಮಾನ್ಯವಾಗಿದೆ. ಆದ್ದರಿಂದ ಕೇವಲ ಜ್ಞಾನಮಾತ್ರದಿಂದ ಯಾವುದೇ ಪ್ರಯೋಜನ ಉಂಟಾಗುವುದಿಲ್ಲ ಎಂದು ಸಿದ್ಧಾಂತ ಮಾಡಲು ಬರುವುದಿಲ್ಲ. ಅದೇ ರೀತಿ ನಾವು ಒಂದು ಸ್ವಪ್ನದಲ್ಲಿದ್ದಾಗ ಅಲ್ಲಿ ದರೋಡೆಕೋರರ ಕೈಯಲ್ಲಿ ಸಿಕ್ಕಂತೆಯೋ, ಹುಲಿ ಅಥವಾ ಸಿಂಹದಂತಹ ಹಿಂಸ್ರಪಶುವಿನ ಆಕ್ರಮಣಕ್ಕೊಳಗಾಗಿರುವಂತೆಯೋ ತೋರಿದರೆ ಆಗ ನಾವು ಭಯ-ಕಂಪನಗಳಿಂದ ಕಂಗೆಟ್ಟು ಹೋಗುತ್ತೇವೆ. ಎಚ್ಚರಗೊಂಡು ನೋಡಿದರೆ ನಾವು ಯಾವುದೇ ಅಪಾಯದಲ್ಲಿ ಸಿಕ್ಕಿಬಿದ್ದಿಲ್ಲ ಎಂಬ ಅರಿವು ಉಂಟಾಗುತ್ತದೆ. ಈ ವಾಸ್ತವದ ಜ್ಞಾನಮಾತ್ರದಿಂದಲೇ ಭಯ ನಿವಾರಣೆಯಾಗಿ ಆ ಸ್ವಪ್ನದಲ್ಲಿ ತೋರಿದ ಭಯಾನಕ ಸನ್ನಿವೇಶಕ್ಕೆ ಯಾವುದೇ ಪರಿಹಾರೋಪಾಯವನ್ನು ಹುಡುಕುವ ಅಗತ್ಯವೂ ಇರುವುದಿಲ್ಲ.
ಆತ್ಮಜ್ಞಾನವು ಬಂದ ಕೂಡಲೇ ಆತ್ಮತತ್ವವೇ ಎಲ್ಲೆಲ್ಲಿಯೂ ವ್ಯಾಪಿಸಿರುವುದರ ಅನುಭ ವಬರುವುದರಿಂದ ಆತ್ಮದ ಹೊರತಾಗಿ ಬೇರೇನೂ ಉಳಿಯುವುದೇ ಇಲ್ಲ. ಆಗ ಪೂರ್ವಾಗ್ರಹದ ತಪ್ಪು ಅಭಿಪ್ರಾಯಗಳೂ, ಹೆಸರು-ರೂಪಗಳ ಆಧಾರದ ಮೇಲೆ ವಸ್ತುಗಳ ಗುರುತಿಸುವಿಕೆಯೂ ಇರುವುದಿಲ್ಲ. ಇತರರ ದೃಷ್ಟಿಯಲ್ಲಿ ಇನ್ನೊಂದೆಂಬುದು ಆತ್ಮನಲ್ಲಿದ್ದಂತೆ ತೋರಿದರೂ ಆತ್ಮಜ್ಞಾನಿಯ ದೃಷ್ಟಿಯಲ್ಲಿ ಅದೇಲ್ಲವೂ ಕೇವಲ ಹುಸಿತೋರಿಕೆಯಾಗುವುದರಿಂದ ಕರ್ತೃ-ಕ್ರಿಯೆ, ಕಾರಕ-ಫಲ ಮೊದಲಾದವುಗಳೆಲ್ಲ ಕೇವಲಾತ್ಮವೇ ಆಗಿ ಹೋಗಿರುತ್ತವೆ. ಆತ್ಮಜ್ಞಾನಿಯ ಅನುಭವದ ದೃಷ್ಟಿಯಲ್ಲಿ ಕಾಲವೇ ಇರುವುದಿಲ್ಲ. ಆದ್ದರಿಂದ ಕೇವಲ ಆತ್ಮಜ್ಞಾನ ಮಾತ್ರದಿಂದಲೇ ಮೋಕ್ಷವು ಪ್ರಾಪ್ತವಾಗುತ್ತದೆ ಎಂಬುದರಲ್ಲಿ ಸಂಶಯವೇ ಉಳಿಯುವುದಿಲ್ಲ.

ಕರೆ

ದೇಹಕಿರುವ ಹೆಸರು, ಮೆದುಳಿನಲ್ಲಿಯ ವಿದ್ಯೆ
ಅವುಗಳೆರಡರ ಒಟ್ಟು ಸುಳ್ಳು ಮುಖವಾಡ
ಎಲ್ಲ ಕಳಚಿ ಬೆತ್ತಲಾಗಿ ನಿಲ್ಲಲಾಗುವುದಿಲ್ಲ . 
ಬರಿಯ ನಾನಾಗಿ ನಾ ಸುಖಿಸಲಾಗುವುದಿಲ್ಲ 

ಸತ್ವ, ರಜ, ತಮಗಳ ಆಟ ಮನಸು ಪರದೆಯ ಮೇಲೆ
ವೃತ್ತಿ ಹಿಡಿತದಿ ಚಿತ್ತ ಮುಳು ಮುಳಗಿ ಏಳುತಿರೆ 
ಬುದ್ಧಿಯರಿವಿನ ನಿಲುಕಿನಲಿ ವಿಜ್ಞಾನವಿಲ್ಲ
ಹೊಟ್ಟೆಪಾಡಿನ ಓಟ ಹೊಟ್ಟೆಗೇ ನಿಲ್ಲುವುದಿಲ್ಲ 

ಮೂರು ಗುಣಗಳ ಚಕ್ರದಲಿ ದೇಹಗಳಿಗೆ ಅಲೆದಲೆದು
ಹೊತ್ತ ಭ್ರಮೆಗಳ ಭಾರ ಜನ್ಮ ಜನ್ಮಾಂತರದ್ದು
ಹೊರೆ ಇಳಿಸಿ ನೀರುಣಿಸೊ ದಾರಿಹೋಕನು ನೀನು
ಅಡಗಿರುವೆ ಏಕಿನ್ನೂ ದಣಿದಿರುವೆ ನಾನು