Tuesday, May 6, 2014

ಕರ್ತೃತಂತ್ರ ಹಾಗೂ ವಸ್ತು-ತಂತ್ರ

ವೇದ-ವೇದಾಂತಗಳಿಗೆ ವ್ಯಾಖ್ಯಾನ ಬರೆದ ಬಹುತೇಕ ಮಹನೀಯರು ವೇದವೆಲ್ಲವೂ ಕೂಡ‘ ವಿಧಿಪರವೇ ಅಂದರೆ ಯಜ್ಞಾದಿ ದೈಹಿಕ ಕ್ರಿಯೆಗಳ, ಹಾಗೂ ಉಪಾಸನೆಯೆಂಬ ಮಾನಸಿಕಕ್ರಿಯಾ ಸಮುಚ್ಚಯದ ‘’ವಿಧಿ-ವಿಧಾನ’’ಗಳನ್ನು ತಿಳಿಸುವುದೇ ಆಗಿದೆಎಂದು ವ್ಯಾಖ್ಯಾನಿಸಿದ್ದಾರೆ. ವಿಧಿಗೆ ಸಂಬಂಧಪಡ ದಉಪನಿಷತ್ತುಗಳನ್ನು ಕೂಡ ಉಪಾಸನಾವಿಧಿಗೆ ಒಳಪಡಿಸಿಕೊಳ್ಳಬೇಕೆಂಬುದೂ ಕೆಲವರ ಮತವಾಗಿದೆ.  ಆದ್ದರಿಂದಲೇ ಅವರುಗಳು ಆತ್ಮಜ್ಞಾನದ ಪ್ರಾಪ್ತಿಯಾದ ಬಳಿಕವೂ ಕೂಡ ಕೇವಲ ಆತ್ಮಜ್ಞಾನಪ್ರಾಪ್ತಿ ಮೋಕ್ಷಕ್ಕೆ ಸಾಕಾಗುವುದಿಲ್ಲ. ಆತ್ಮಜ್ಞಾನ ಉಂಟಾದ ಬಳಿಕ ಮೋಕ್ಷಕ್ಕಾಗಿ ಪ್ರಸಂಖ್ಯಾನ, ಉಪಾಸನೆ, ಸಾಕ್ಷಾತ್ಕಾರ, ಮನೋನಾಶ, ವಾಸನಾಕ್ಷಯ, ಪ್ರಪಂಚಪ್ರವಿಲಯ ಮುಂತಾದ ಅನೇಕಸಾಧನೆಗಳನ್ನು ಮಾಡಬೇಕೆಂದು ಪ್ರತಿಪಾದಿಸಿದ್ದಾರೆ. ಆದರೆ ಶಂಕರರು ಕೇವಲ ಆತ್ಮಜ್ಞಾನವೇ ಮೋಕ್ಷಕ್ಕೆ ಸಾಕಾಗಿದೆ- ಇನ್ನೇನೂ ಮಾಡಬೇಕಾದ ಅಗತ್ಯವಿಲ್ಲ ಎಂದು ಸಾರಿದ್ದಾರೆ. ಅವರ ಮಾತನ್ನು ಸರಿಯಾಗಿ ತಿಳಿಯಲು ಕರ್ತೃತಂತ್ರ ಹಾಗೂ ವಸ್ತು-ತಂತ್ರ ಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಕರ್ತೃತಂತ್ರ
ಕರ್ತೃ ಎಂದರೆ ಮಾಡುವವನು ಎಂದರ್ಥ. ಮಾಡುವವನ ಇಚ್ಛೆಗೆ ಅಧೀನವಾಗಿರುವ ಕ್ರಿಯೆ ಅಥವಾ ಕೆಲಸವೇ ‘’ಕರ್ತೃತಂತ್ರ’’.  ಕರ್ತವ್ಯ ಅಥವಾಕ್ರಿಯೆ – ಎಂಬುದು ಮಾಡುವವನಿಗೆ ಅಧೀನವಾಗಿಯೇ ಹುಟ್ಟುತ್ತದೆ. ಕರ್ತೃವು ಆ ಕ್ರಿಯೆಯನ್ನು ಮಾಡಬಹುದು-ಮಾಡದೇ ಇರಬಹುದು, ಅಥವಾ ಮತ್ತೊಂದು ಬಗೆಯಿಂದಲೂ ಮಾಡಬಹುದು. ಹೀಗೆ ಲೌಕಿಕ-ವೈದಿಕ ಕರ್ಮಗಳೆಲ್ಲವೂ ಕರ್ತೃತಂತ್ರವಾಗಿಯೇ ಇರುತ್ತವೆ.
ಉದಾ:- ಒಬ್ಬನು ಒಂದು ಊರಿಗೆ ಹೋಗಬೇಕಾಗಿದೆ ಎಂದಿಟ್ಟುಕೊಳ್ಳೋಣ. ಅವನು ಆ ಊರಿಗೆ. ನಡೆದುಕೊಂಡು ಹೋಗಬಹುದು. ವಾಹನದಲ್ಲಿ ಹೋಗಬಹುದು, ಅಥವಾ ಹೋಗದೆಯೂ ಇರಬಹುದು. ಹೀಗೆಯೇ ವೈದಿಕ ಕರ್ಮಗಳಲ್ಲಿಯೂ ಉತ್ಸರ್ಗ(ಸಾಮಾನ್ಯನಿಯಮ), ವಿಕಲ್ಪ (ಪರ್ಯಾಯನಿಯಮ), ಅಪವಾದ(ವಿಶೇಷನಿಯಮ) ಎಂಬ ಭೇದಗಳು ಇವೆ.
ಒಟ್ಟಿನಲ್ಲಿ ಕರ್ತೃವಿಗೆ ಅಧೀನವಾಗಿದ್ದುಕೊಂಡು ನಡೆಯುವ ದೇಹೇಂದ್ರಿಯ ಪ್ರಧಾನವಾದ ಕಾರ್ಯಗಳಾಗಲಿ ಹಾಗೂ ಮನಃಪ್ರಧಾನವಾದ ಉಪಾಸನೆ-ಧ್ಯಾನಾದಿಗಳಾಗಲಿ- ಎಲ್ಲವೂ ಕರ್ತೃತಂತ್ರವಾಗಿವೆ.

ವಸ್ತುತಂತ್ರ
ವಸ್ತುತಂತ್ರವೆಂದರೆ ವಸ್ತುವಿಗೆ ಅಧೀನವಾಗಿ ಅದುಇರುವಂತೆಯೇ ಉಂಟಾಗುವ ಜ್ಞಾನ. ಯಾವುದೇ ವಸ್ತುವಿನ ಜ್ಞಾನವು(ಅರಿವು) ಆ ವಸ್ತುಹೇಗಿದೆಯೋ ಹಾಗೆಯೇ ಆಗುತ್ತದೆಯೇ ವಿನಃ ಅದು ಜ್ಞಾತೃವಿನ(ತಿಳಿಯುವವನ) ಇಚ್ಛೆಯಂತೆ ಎಂದಿಗೂ ಹುಟ್ಟುವುದಿಲ್ಲ.
ಕಾಗೆಯು ಕಪ್ಪಾಗಿದೆ. ಆದ್ದರಿಂದ ನೋಡುಗನ ದೃಷ್ಟಿಗೆ ಅದು ಕಪ್ಪಾಗಿಯೇ ಕಾಣಿಸುತ್ತದೆ. ಅದು ಹೇಗಿದೆಯೋ ಹಾಗೆಯೇ ಜ್ಞಾನ ಉಂಟಾಗುತ್ತದೆಯೇ ಹೊರತು, ನೋಡುಗನ ಇಚ್ಛೆಯನ್ನು ಆಧರಿಸಿ ಅದು ಎಂದಿಗೂ ಇರುವುದಿಲ್ಲ. ನೋಡುವವನುನನಗೆಕಪ್ಪುಬಣ್ಣಇಷ್ಟವಿಲ್ಲ, ಹಾಗಾಗಿ ಕಾಗೆ ಬಿಳಿಯ ಬಣ್ಣ ಹೊಂದಿದೆ ಎಂದು ಭಾವಿಸಿ ಅದರಲ್ಲಿ ಬಿಳಿಯನ್ನು ನೋಡಲು ಪ್ರಯತ್ನಿಸಿದರೆ ಅದು ಸಾಧ್ಯವಾಗುವುದಿಲ್ಲ.  ಹೀಗೆ,  ಕಾಗೆ ಎಂಬ ವಸ್ತು ಹೇಗಿದೆಯೋ ಹಾಗೆಯೇ ಅದರ ಜ್ಞಾನ ಉಂಟಾಗುವುದರಿಂದ ಈ ಜ್ಞಾನವು ವಸ್ತುತಂತ್ರವಾಗಿದೆ.
ಯಾವ ರೀತಿ ಕ್ರಿಯೆಯು ಕರ್ತೃವಿಗೆ ಅಧೀನವಾಗಿದ್ದು ಕರ್ತೃತಂತ್ರವಾಗಿದೆಯೋ ಅದೇ ರೀತಿ ಜ್ಞಾನವು ವಸ್ತುತಂತ್ರವಾಗಿದ್ದು. ವಸ್ತುವನ್ನು ಅವಲಂಬಿಸಿ ಅದು ಹೇಗಿದೆಯೋ ಹಾಗೆಯೇ ಜ್ಞಾನಉಂಟಾಗುತ್ತದೆಯೇ ಹೊರತು ಅದು ಜ್ಞಾತ್ರೃವಿಗೆ ಅಧಿನವಾಗಿ ಬದಲಾಗುವುದಿಲ್ಲ. ವಸ್ತುವಿನ ಸ್ವರೂಪವು ಅರಿಯುವವನ ಬುದ್ಧಿಯನ್ನು ಅವಲಂಬಿಸಿದ್ದಲ್ಲ.
ಹೀಗೆ ಮಾಡಿದರೆ ಇಂಥದ್ದು ಉಂಟಾಗುತ್ತದೆ,ಅಥವಾ ಇಂಥಾದ್ದು ಪ್ರಾಪ್ತವಾಗುತ್ತದೆ- ಎಂದೆಲ್ಲ ಬೋಧಿಸುವ ವೇದಭಾಗಗಳಲ್ಲಿ ಹೇಳಿದ ಕರ್ಮಗಳು, ಉಪಾಸನೆಗಳು ಎಲ್ಲ ವಿಧಿ-ವಿಧಾನಗಳು ಹಾಗೂ ಲೌಕಿಕ ಜೀವನದ ಕಾರ್ಯನಿಯಮಗಳು ಇವುಗಳೆಲ್ಲ ಕರ್ತೃತಂತ್ರವೇ ಆಗಿವೆ. ಆದರೆ ಉಪನಿಷತ್ತುಗಳಲ್ಲಿ ಹೇಳಿದ ಬ್ರಹ್ಮಜ್ಞಾನವು ವಸ್ತುತಂತ್ರವಾಗಿದೆ. ಹೇಗೆಂದರೆ ಈ ಬ್ರಹ್ಮತತ್ವವು ನಮ್ಮೆಲ್ಲರಲ್ಲಿಯೂ ಮೊದಲಿನಿಂದಲೂ ನಮ್ಮ ಸ್ವರೂಪವೇ ಆಗಿ ನಮ್ಮೊಳಗೇ ಇದ್ದುಬಿಟ್ಟಿರುವ ವಸ್ತುವಾಗಿದೆ.  ಅದರ ಬಗೆಯ ಜ್ಞಾನವು ವಸ್ತುತಂತ್ರವೇ ಅಗಿದೆ.  ಹೀಗಾಗಿ ಆತ್ಮಜ್ಞಾನವನ್ನು ದೈಹಿಕ ಅಥವಾ ಮಾನಸಿಕ ಕ್ರಿಯೆಯಾಗಿ ಪರಿಗಣಿಸಲು ಬರುವುದಿಲ್ಲ.
ಆಕ್ಷೇಪ;
ಲೋಕದಲ್ಲಿಯ ವ್ಯವಹಾರಕ್ಕಾಗಲಿ ಅಥವಾ ವೇದದಲ್ಲಿ ಹೇಳಿದ ಕರ್ಮ-ಉಪಾಸನಾದಿಗಳಿಗೇ ಆಗಲಿ, ಮೊದಲು ಅವುಗಳ ಬಗ್ಗೆ ಜ್ಞಾನವು ಬರಲೇ ಬೇಕು. ಆದರೆ ಅವುಗಳ ಜ್ಞಾನಮಾತ್ರದಿಂದ ನಮಗೆ ಯಾವ ಪ್ರಯೋಜನವೂ ಆಗುವುದಿಲ್ಲ.  ಒಬ್ಬ ವೈದ್ಯನು ಎಲ್ಲ ಚಿಕಿತ್ಸಾಕ್ರಮಗಳನ್ನು ತಿಳಿದುಕೊಂಡು ಸುಮ್ಮನೇ ಕುಳಿತರೆ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡಿದಾಗಲಷ್ಟೇ ಆತನಿಗೆ ಆ ವಿದ್ಯೆಯ ಪ್ರಯೋಜನವಾಗುವುದು. ಹಾಗೆಯೇ ಪ್ರತಿಯೊಂದು ವ್ಯವಹಾರದಲ್ಲಿಯೂ ಇರುವುದಲ್ಲವೇ? ಆದ್ದರಿಂದ ಆತ್ಮಜ್ಞಾನವೂ ಕೂಡ ನಂತರದಲ್ಲಿ ಮಾಡಬೇಕಾಗಿರುವ ಕ್ರಿಯೆಗೆ ಅಧೀನವಾಗಿದ್ದಲ್ಲಿ ಮಾತ್ರ ಪ್ರಯೋಜನಕಾರಿಯಲ್ಲವೇ..? ಕೇವಲ ಜ್ಞಾನಮಾತ್ರದಿಂದ ಯಾವ ಪ್ರಯೋಜನವೂ ಆಗಲಾರದು ಎಂಬುದು ನಮ್ಮೆಲ್ಲರ ನಿತ್ಯಜೀವನದ ಅನುಭವಸಿದ್ಧ ಸತ್ಯವಲ್ಲವೇ? ಎಂಬ ಆಕ್ಷೇಪ ಇಲ್ಲಿ ಎದ್ದು ನಿಲ್ಲುತ್ತದೆ.
ಪರಿಹಾರ
ಒಬ್ಬನು ಮಬ್ಬುಗತ್ತಲೆಯಲ್ಲಿ ಬಿದ್ದಿರುವ ‘’ಹಗ್ಗ’’ವನ್ನು ನೋಡಿ ಅದರ ನಿಜರೂಪ ತಿಳಿಯದೇ ಅದು ‘’ಹಾವು’’ ಎಂದು ಭಾವಿಸಿ ಭಯದಿಂದ ನಡುಗುತ್ತ ನಿಂತಾಗ, ವಾಸ್ತವವನ್ನು ತಿಳಿದವನೊಬ್ಬನು ‘’ಇದುಹಾವಲ್ಲ, ಹಗ್ಗ’’ ಎಂದು ಹೇಳಿದ ಮಾತ್ರಕ್ಕೆ ಭೀತವ್ಯಕ್ತಿಯ ಭಯವು ನಿವಾರಣೆಯಾಗಿ ನಿರಾಳತೆ ಅನುಭಕ್ಕೆ ಬರುವುದು ಲೋಕದಲ್ಲಿ ಸಾಮಾನ್ಯವಾಗಿದೆ. ಆದ್ದರಿಂದ ಕೇವಲ ಜ್ಞಾನಮಾತ್ರದಿಂದ ಯಾವುದೇ ಪ್ರಯೋಜನ ಉಂಟಾಗುವುದಿಲ್ಲ ಎಂದು ಸಿದ್ಧಾಂತ ಮಾಡಲು ಬರುವುದಿಲ್ಲ. ಅದೇ ರೀತಿ ನಾವು ಒಂದು ಸ್ವಪ್ನದಲ್ಲಿದ್ದಾಗ ಅಲ್ಲಿ ದರೋಡೆಕೋರರ ಕೈಯಲ್ಲಿ ಸಿಕ್ಕಂತೆಯೋ, ಹುಲಿ ಅಥವಾ ಸಿಂಹದಂತಹ ಹಿಂಸ್ರಪಶುವಿನ ಆಕ್ರಮಣಕ್ಕೊಳಗಾಗಿರುವಂತೆಯೋ ತೋರಿದರೆ ಆಗ ನಾವು ಭಯ-ಕಂಪನಗಳಿಂದ ಕಂಗೆಟ್ಟು ಹೋಗುತ್ತೇವೆ. ಎಚ್ಚರಗೊಂಡು ನೋಡಿದರೆ ನಾವು ಯಾವುದೇ ಅಪಾಯದಲ್ಲಿ ಸಿಕ್ಕಿಬಿದ್ದಿಲ್ಲ ಎಂಬ ಅರಿವು ಉಂಟಾಗುತ್ತದೆ. ಈ ವಾಸ್ತವದ ಜ್ಞಾನಮಾತ್ರದಿಂದಲೇ ಭಯ ನಿವಾರಣೆಯಾಗಿ ಆ ಸ್ವಪ್ನದಲ್ಲಿ ತೋರಿದ ಭಯಾನಕ ಸನ್ನಿವೇಶಕ್ಕೆ ಯಾವುದೇ ಪರಿಹಾರೋಪಾಯವನ್ನು ಹುಡುಕುವ ಅಗತ್ಯವೂ ಇರುವುದಿಲ್ಲ.
ಆತ್ಮಜ್ಞಾನವು ಬಂದ ಕೂಡಲೇ ಆತ್ಮತತ್ವವೇ ಎಲ್ಲೆಲ್ಲಿಯೂ ವ್ಯಾಪಿಸಿರುವುದರ ಅನುಭ ವಬರುವುದರಿಂದ ಆತ್ಮದ ಹೊರತಾಗಿ ಬೇರೇನೂ ಉಳಿಯುವುದೇ ಇಲ್ಲ. ಆಗ ಪೂರ್ವಾಗ್ರಹದ ತಪ್ಪು ಅಭಿಪ್ರಾಯಗಳೂ, ಹೆಸರು-ರೂಪಗಳ ಆಧಾರದ ಮೇಲೆ ವಸ್ತುಗಳ ಗುರುತಿಸುವಿಕೆಯೂ ಇರುವುದಿಲ್ಲ. ಇತರರ ದೃಷ್ಟಿಯಲ್ಲಿ ಇನ್ನೊಂದೆಂಬುದು ಆತ್ಮನಲ್ಲಿದ್ದಂತೆ ತೋರಿದರೂ ಆತ್ಮಜ್ಞಾನಿಯ ದೃಷ್ಟಿಯಲ್ಲಿ ಅದೇಲ್ಲವೂ ಕೇವಲ ಹುಸಿತೋರಿಕೆಯಾಗುವುದರಿಂದ ಕರ್ತೃ-ಕ್ರಿಯೆ, ಕಾರಕ-ಫಲ ಮೊದಲಾದವುಗಳೆಲ್ಲ ಕೇವಲಾತ್ಮವೇ ಆಗಿ ಹೋಗಿರುತ್ತವೆ. ಆತ್ಮಜ್ಞಾನಿಯ ಅನುಭವದ ದೃಷ್ಟಿಯಲ್ಲಿ ಕಾಲವೇ ಇರುವುದಿಲ್ಲ. ಆದ್ದರಿಂದ ಕೇವಲ ಆತ್ಮಜ್ಞಾನ ಮಾತ್ರದಿಂದಲೇ ಮೋಕ್ಷವು ಪ್ರಾಪ್ತವಾಗುತ್ತದೆ ಎಂಬುದರಲ್ಲಿ ಸಂಶಯವೇ ಉಳಿಯುವುದಿಲ್ಲ.

No comments:

Post a Comment