Tuesday, January 28, 2014

ಸರ್ಟಿಫಿಕೇಟ್

ನಮಗೆ ಸಿಗುವ ಸೀಮಿತ ಅನುಭವ ಮತ್ತು ಅಲ್ಪ-ಸ್ವಲ್ಪ ಮಾಹಿತಿಯ ಆಧಾರದ ಮೇಲೆಯೇ ನಾವು ನಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಂಡು ಆ ಅಭಿಪ್ರಾಯಗಳ ಮೇಲೆ ಪದ್ಮಾಸನ ಹಾಕ್ಕೊಂಡು ಕೂತ್ಕೊಂಡುಬಿಡ್ತೀವಿ. ಜಪ್ಪಯ್ಯ ಅಂದ್ರೂ ಅದರ ಮೇಲಿಂದ ಏಳೊದಿಲ್ಲ.
ನಾನು ಜ್ಯೋತಿಷ್ಯ ಶಾಸ್ತ್ರ ಓದಿಲ್ಲ.. ಜ್ಯೋತಿಷ್ಯ ನಂಬ್ತೀನಿ- ನಂಬೋದಿಲ್ಲ ಇತ್ಯಾದಿ ಇತ್ಯಾದಿ ಚರ್ಚೆಗಳಲ್ಲಿ ನಾನು ಭಾಗವಹಿಸೋದಿಲ್ಲ. ಅದನ್ನು ನಂಬಿ ಅಂತ ಯಾರಿಗೂ ಸಲಹೆನೂ ಕೊಡೋದಿಲ್ಲ. ನಂಬದೇ ಇದ್ದವರನ್ನು ತುಚ್ಛವಾಗಿಯೂ ಕಾಣೋದಿಲ್ಲ. ಮೊನ್ನೆ ಗೆಳೆಯರೊಬ್ಬರು ಇದ್ದಕ್ಕಿದ್ದ ಹಾಗೆ ಜ್ಯೋತಿಷ್ಯದ ಬಗ್ಗೆ ಮಾತು ಶುರು ಹಚ್ಕೊಂಡ್ರು.. ''ನಾನು ನಂಬೋದೇ ಇಲ್ಲ.. ಎಲ್ಲಾ ಕಳ್ಳರು.. ಜ್ಯೋತಿಷ್ಯ ಹೇಳೋ ವ್ಯಕ್ತಿ ತನ್ನ ಸ್ವಂತ ಜೀವನ ಸರಿ ಮಾಡ್ಕೊಳ್ಳೋಕಾಗಲ್ಲ, ಅವನ ಪ್ರಾಣ ಯಾವಾಗ ಹೋಗುತ್ತೋ ಅವನಿಗೇ ಗೊತ್ತಿರೋದಿಲ್ಲ.(ಲಗೇ ರಹೋ ಮುನ್ನಾಭಾಯ್ ಸಿನೆಮಾದಲ್ಲಿ ಹೇಳಿದಹಾಗೆ), ಹುಟ್ಟಿದ ಸಮಯ ಯಾರದ್ದೂ ಸರಿಯಾಗಿ ಯಾರಿಗೂ ಗೊತ್ತಿರೋದಿಲ್ಲ, ಹಿಂಗಾಗಿ ಎಲ್ಲರ ಜಾತಕಗಳೂ ತಪ್ಪಾಗಿಯೇ ಇರ್ತವೆ. etc etc.
ನಾನು ಅವರನ್ನು ''ಇದೆಲ್ಲಾ ನಿಮಗೆ ಹೇಗೆ ಗೊತ್ತಾಯ್ತು ?'' ಅಂತ ಕೇಳಿದೆ. ಅದಕ್ಕೆ ಅವರು ''ನಾನು ಟೀವಿನಲ್ಲಿ ನೋಡಿದೀನಲ್ಲ, ಜ್ಯೋತಿಷ್ಯ ಹೇಳೋರನ್ನ. ಜ್ಯೋತಿಷ್ಯದ ತುಂಬಾ ಕಾರ್ಯಕ್ರಮ ನೋಡಿದೀನಿ'' ಅಂದ್ರು. ಅವರ ಅಭಿಪ್ರಾಯಗಳಿಗೆ ಆಧಾರ ಟಿವಿಯಲ್ಲಿ ಬರುವ ಬ್ರಹ್ಮಾಂಡಸಂತತಿ ಅಂತ ಗೊತ್ತಾಯ್ತು. ಅದಕ್ಕೆ ನಾನು ''ಟೀವಿ ಯಲ್ಲಿ ಬರೋ ಕೆಲ ಯಡವಟ್ಟುಗಳನ್ನು ನೋಡ್ಕೊಂಡು ಇಡೀ ಜ್ಯೋತಿಷ್ಯ ಅನ್ನುವ ಶಾಸ್ತ್ರಕ್ಕೇ ನೀವು ''ಇದು ಸರಿಯಾಗಿಲ್ಲ'' ಅನ್ನೋ ''ಸರ್ಟಿಫಿಕೇಟ್'' ಕೊಡ್ತಾ ಇದೀರಲ್ಲ..? ಇದು ಸರೀ ನಾ..? ಹೋಗ್ಲಿ, ಜ್ಯೋತಿಷ್ಯ ಅನ್ನೋದು ಯಾವ ಗ್ರಂಥದ ಆಧಾರದ ಮೇಲೆ ನಿಂತಿದೆ..? ಅದನ್ನೆಲ್ಲಾ ಬರೆದವರು ಯಾರು ಅಂತೆಲ್ಲಾ ಗೊತ್ತಾ ನಿಮಗೆ..?'' ಅಂತ ಕೇಳಿದೆ. ಅವರಿಗೆ ಅದ್ಯಾವುದೂ ಗೊತ್ತಿರಲಿಲ್ಲ. ಜ್ಯೋತಿಷ್ಯದಲ್ಲಿ ''ಸಂಹಿತೆ, ಸಿದ್ಧಾಂತ, ಹೋರಾ'' ಎಂಬ ಮೂರು ವಿಭಾಗಗಳಿವೆ, ಅದಲ್ಲದೇ ಕಾಲಕಾಲಕ್ಕೆ ಅನೇಕ ಸಂಶೋಧಕರು ಬರೆದ ನೂರಾರು ಗ್ರಂಥಗಳಿವೆ, ಜ್ಯೋತಿಷ್ಯ ಅಂದ್ರೆ ''ನಾಲ್ಕು ಲಕ್ಷ ಶ್ಲೋಕ'' ಗಳಿರುವ ಒಂದು ದೊಡ್ಡ ಶಾಸ್ತ್ರ. ಶಾಸ್ತ್ರ ಯಾವತ್ತೂ ಶಾಸ್ತ್ರೀಯ ನಿಯಮಗಳನ್ನು ಒಳಗೊಂಡಿರುತ್ತೆ. ಅದನ್ನು ಪೂರ್ತಿಯಾಗಿ ಅಧ್ಯಯನ ಮಾಡಲಿಕ್ಕೆ ಕನಿಷ್ಠ12 ರಿಂದ 15 ವರ್ಷಗಳ ಸಮಯಾವಕಾಶ ಬೇಕು. ಅದ್ಯಾವುದೂ ಗೊತ್ತಿಲ್ಲದೇ ಕೇವಲ ಇಪ್ಪತ್ತೇಳು ನಕ್ಷತ್ರ, ಹನ್ನೆರಡು ರಾಶಿ ಇಟ್ಕೊಂಡು ಟೀವಿಯಲ್ಲಿ ರಾಶೀಫಲ ಹೇಳೋರನ್ನು ನೋಡಿಬಿಟ್ಟು ಒಂದಿಡೀ ಶಾಸ್ತ್ರವನ್ನೇ ನೀವು ''ಸರಿಯಿಲ್ಲ'' ಅನ್ನೋದು ಎಷ್ಟು ಸರಿ..? ಒಂದು ವಿಷಯದ ಬಗ್ಗೆ ನಾವು ನಿರ್ಣಯ ಕೊಡಬೇಕು ಅಂದರೆ ಅದರ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇರಬೇಕು ಅಥವಾ ಪೂರ್ತಿ ಮಾಹಿತಿ ಯಾರ ಬಳಿ ಇದೆಯೋ, ಅಂಥವರ ಬಳಿ ಚರ್ಚಿಸಿದ ಮೇಲೆ ನಮ್ಮ ಅಭಿಪ್ರಾಯ ನಿರ್ಮಾಣ ಮಾಡ್ಕೋಬೇಕಲ್ವಾ..? ಅಂದೆ. ನನ್ನ ಮಾತನ್ನು ಒಪ್ಪಿಕೊಳ್ಳಲಿಕ್ಕೆ ಅವರ ''ಇಗೋ'' ಅಡ್ಡ ಬಂತು. ಹಿಂಗಾಗಿ ಮತ್ತೇನೇನೋ ವಾದ ಮಾಡಿದರು. ಆದರೆ ಒಟ್ಟಾರೆ ಅವರ ಅಭಿಪ್ರಾಯಕ್ಕೆ ಆಧಾರವಾದ ಮಾಹಿತಿ ಮತ್ತು ಅನುಭವ ಎರಡೂ ಬಹಳ ನಗಣ್ಯವಾಗಿದ್ದವು. ಆದರೂ ತಮ್ಮ ಅಭಿಪ್ರಾಯ ಪರಮಸತ್ಯ ಅಂತಲೇ ಸಾಧಿಸಲಿಕ್ಕೆ ಅವರು ಪ್ರಯತ್ನ ಪಡ್ತಾ ಇದ್ರು.
ಅದೇ ರೀತಿ ಇನ್ನೊಬ್ಬ ಗೆಳೆಯರು ಸಿನೇಮಾಗಳ ಬಗ್ಗೆ ಮಾತಾಡುವಾಗ ''ನಾನು ಟಾಮ್ ಹಾಂಕ್ಸ್, ಲಿಯೋನಾರ್ಡೋ ಡಿಕಾಪ್ರಿಯೋ, ಕಮಲ್ ಹಾಸನ್ ಇವರನ್ನು ಮಾತ್ರ ನಟ ಅಂತ ಒಪ್ಕೊತೀನಿ. ಅವರ ಚಿತ್ರಗಳನ್ನು ಮಾತ್ರ ನೋಡ್ತೀನಿ'' ಅಂತೆಲ್ಲಾ ನಾನು ಅವರನ್ನು ಕೇಳದೇ ಇದ್ರೂ ಹೇಳ್ತಾ ಇದ್ರು. ''ಅಂದ್ರೆ ನಾನು ಅಷ್ಟು ಹೈ ಲೇವಲ್ಲಿನ ಪ್ರೇಕ್ಷಕ. ನಾನು ಅಷ್ಟು ದೊಡ್ಡ ಬುದ್ಧಿವಂತ, ಉಳಿದವರೆಲ್ಲಾ ನನ್ನ ರೇಂಜ್ ಗೆ ಸರಿ ಸಮಾನರು ಅಲ್ಲ'' ಅನ್ನೋ ಭಾವ ಅವರ ಮಾತಲ್ಲಿ ಢಾಳಾಗಿ ಇತ್ತು. ಹೀಗೆ ಆ ದೊಡ್ಡ ನಟರ ಹೆಸರು ಹೇಳುವುದರ ಮೂಲಕ ಆತ ತನ್ನ ಅಸ್ತಿತ್ವವನ್ನು ಅವರು ನನ್ನ ಮುಂದೆ ಸಾಬೀತು ಪಡಿಸಬೇಕಾಗಿತ್ತು. ಅದು ಆತನ ಸಧ್ಯದ ಅವಶ್ಯಕತೆ ಆಗಿತ್ತು. ನಿಜವಾಗಿಯೂ ಆತನಿಗೆ ಸಿನೆಮಾಗಳ ಬಗ್ಗೆ ಆಸಕ್ತಿ ಅಭಿರುಚಿ ಇದೆ ಅಂತ ನನಗೆ ಅನಿಸಲಿಲ್ಲ. ''ನಾನು ಈ ಜಗತ್ತಿನಲ್ಲಿ ಇದ್ದೀನಿ, ಮತ್ತು ನಾನು ಬಹಳ ಮಹತ್ವಪೂರ್ಣ ಅನ್ನೋದನ್ನು ನೀನು ಗುರುತಿಸಬೇಕು'' ಅನ್ನುವ ಕಾರಣಕ್ಕಾಗಿ ಇಂತಹ ನಟರ ಜೊತೆ, ಸಂಗತಿಗಳ ಜೊತೆ ತನ್ನನ್ನು Identify ಮಾಡಿಕೊಂಡು ಅದನ್ನು ನಾನು ಒಪ್ಪಬೇಕು ಅಂತ ಬಯಸುತ್ತಿದ್ದರು.
ಸ್ವಾಮಿಗಳನ್ನು, ಮಠಾಧಿಪತಿಗಳನ್ನು ಬೈಯುವುದರ ಮೂಲಕ ಕೂಡ ನಾವು ನಮ್ಮ ಅಸ್ತಿತ್ವವನ್ನು ಮತ್ತು ನಮ್ಮ ''ಸಾಚಾತನ''ವನ್ನು ಸಾಬೀತುಪಡಿಸಲಿಕ್ಕೆ ಹೋಗ್ತೀವಿ. ''ನಾನು ಆ ಸ್ವಾಮಿಗಳನ್ನು ನಂಬೋದಿಲ್ಲ ಅಥವಾ ಗೌರವಿಸೋದಿಲ್ಲ, ಅವರೆಲ್ಲ ಖದೀಮರು. ನಾನು ಇಂತಹ ಒಂದು ನಿರ್ದಿಷ್ಟ ಮಠದ ಸನ್ಯಾಸಿಗಳನ್ನು ಮಾತ್ರ ಗೌರವಿಸ್ತೇನೆ. ಯಾಕೆಂದರೆ ಈಗಿನ ಕಾಲದಲ್ಲಿ ಅವರು ಮಾತ್ರ ಸಾಚಾಗಳು'' ಅಂತ ಹೇಳುವ ಗೆಳೆಯರು ಅನೇಕರು ಇದ್ದಾರೆ. ಯಾವುದೋ ಒಬ್ಬ ಸ್ವಾಮಿಗಳಿಗೆ ಸಾಚಾತನದ ''ಸರ್ಟಿಫಿಕೇಟ್'' ನಾವೇ ಕೊಟ್ಟು, ನಾನು ಅವರನ್ನು ಮಾತ್ರ ಗೌರವಿಸ್ತೇನೆ ಅಂತ ಹೇಳುವ ಮೂಲಕ ''ನಾನು ಕೂಡ ಸಾಚಾ'' ಅಂತ ತಮ್ಮನ್ನು ತಾವು ಸಾಬೀತು ಪಡಿಸಿಕೊಳ್ಳುವ ಅನಿವಾರ್ಯತೆಗೆ ಅಂತಹ ಗೆಳೆಯರು ಬಿದ್ದಿರುತ್ತಾರೆ. ಯಾಕಂದರೆ ಯಾರಾದರೂ ಒಬ್ಬರು ಅವರನ್ನು ಅರ್ಜೆಂಟಾಗಿ ''ಇವನು ಸಾಚಾ..ಪ್ರಾಮಾಣಿಕ'' ಅಂತ ಒಪ್ಪಿಕೊಳ್ಳಬೇಕಾಗಿರುತ್ತದೆ. ಕರ್ನಾಟಕದಲ್ಲಿ ತುಂಬಾ ಫೇಮಸ್ ಆಗಿರುವ ಪ್ರವಚನಕಾರ ಆಚಾರ್ಯರೊಬ್ಬರು ಒಂದು ತುಂಬಿದ ಸಭೆಯಲ್ಲಿ ಒಬ್ಬ ಮಹಾ ತಪಸ್ವಿಯಾದ ಪೀಠಾಧಿಪತಿಗಳ ಹೆಸರನ್ನು ಉಲ್ಲೇಖಿಸಿ '' ಈ ಪೀಠ ಪರಂಪರೆಯಲ್ಲಿ ಅಥವಾ ಆಸಿದ್ಧಾಂತದ ಯತಿಗಳಲ್ಲಿ ನಾನು ಅವರನ್ನು ಒಬ್ಬರನ್ನು ಮಾತ್ರ ಒಪ್ಪಿಕೊಳ್ತೇನೆ..ಅಂತ ಅಪ್ಪಣೆ ಕೊಡಿಸಿದರು. ವಾಸ್ತವವಾಗಿ ಈ ಆಚಾರ್ಯರು ಉಲ್ಲೇಖಿಸಿದ ಆ ತಪಸ್ವಿ ಯತಿಗಳು 1954 ರಲ್ಲೇ ತೀರಿಹೋಗಿದ್ದಾರೆ. ಅವರು ತೀರಿಕೊಂಡಾಗ ಈ ಆಚಾರ್ಯರಿನ್ನೂ 16-18 ವರ್ಷದ ಬಾಲಕರಾಗಿದ್ದರು. ಆ
ಆ ಮಹಾನ್ ತಪಸ್ವಿಯಾದ ಯತಿಗಳಿಗೆ ಇವರು ಕೊಡುವ ಈ ಸರ್ಟಿಫಿಕೇಟಿನ ಅಗತ್ಯ ಖಂಡಿತ ಇಲ್ಲ ಹಾಗೂ ಅವರಿಗೆ ಸರ್ಟಿಫಿಕೇಟ್ ಕೊಡುವ ಯೋಗ್ಯತೆ ಈ ಆಚಾರ್ಯರಿಗೆ ಎಳ್ಳಷ್ಟೂ ಇಲ್ಲ. ಆದರೂ ತಮ್ಮ ಹೆಸರನ್ನು ಅಂಥ ಮಹಾತ್ಮರ ಹೆಸರಿನ ಜೊತೆ ಸೇರಿಸಿ, ಅವರನ್ನು ಮಾತ್ರ ಒಪ್ಪಿಕೊಳ್ತೇನೆ ಅಂತ ಹೇಳುವುದರ ಮೂಲಕ ಉಳಿದವರೆಲ್ಲ ನನ್ನ ಪಾಲಿಗೆ ತುಚ್ಛರು, ''ನನ್ನ ಲೇವಲ್ಲೇ ಬೇರೆ'' ಅಂತ ಹೇಳಿಕೊಳ್ಳುವುದರ ಮೂಲಕ ತಮ್ಮ ಬಾಲಬಡುಕರ ಮುಂದೆ ತಾವು ದೊಡ್ಡವರಾಗುವ ಪ್ರಯತ್ನವಲ್ಲದೇ ಮತ್ತೇನು..?

ನಿಜ. ನಮಗೆ ಕೆಲವರ ಬಗ್ಗೆ ವೈಯಕ್ತಿಕವಾಗಿ ಗೌರವವಿರುತ್ತದೆ, ಕೆಲವರ ಬಗ್ಗೆ ಇರುವುದಿಲ್ಲ. ನಮಗೂ ಆ ವ್ಯಕ್ತಿಗೂ ನಡುವೆ ಇರುವ ಸಂಬಂಧ, ನಮ್ಮ ತಿಳುವಳಿಕೆ, ಆ ವ್ಯಕ್ತಿಯ ಬಗೆಗಿನ ತಿಳುವಳಿಕೆ ಮುಂತಾದವುಗಳಿಂದಾಗಿ ನಮಗೆ ಕೆಲ ವ್ಯಕ್ತಿಗಳ ಮೇಲೆ ವಿಶೇಷವಾದ ಗೌರವ ಮೂಡಿರುತ್ತದೆ. ನಮ್ಮ ತಂದೆ ತಾಯಿಯರ ನಡುವೆಯೇ ತಂದೆಯ ಬಗ್ಗೆ ಅಥವಾ ತಾಯಿಯ ಬಗ್ಗೆ ಇಬ್ಬರಲ್ಲಿ ಒಬ್ಬರ ಬಗ್ಗೆ ಹೆಚ್ಚಿನ ಗೌರವ ನಮ್ಮಲ್ಲಿ ಇರುತ್ತದೆ. ಅವರಿಗೂ ನಮಗೂ ನಡುವಿನ ರಕ್ತ ಸಂಬಂಧದ ಹೊರತಾದ ಒಂದು ಹೊಂದಾಣಿಕೆಯಿಂದಾಗಿ ಆ ರೀತಿ ಒಬ್ಬರ ಮೇಲೆ ಹೆಚ್ಚಿನ ಶ್ರದ್ಧೆ ಮೂಡುತ್ತದೆ. ಆದರೆ ಅದನ್ನು ನಾವು ಬಹಿರಂಗವಾಗಿ ಹೇಳಿಕೊಳ್ಳಲು ಹೋಗುವುದಿಲ್ಲ. ಏಕೆಂದರೆ ನಮ್ಮಪ್ಪ ತುಂಬಾ ಗ್ರೇಟ್ ಅಂತ ಹೇಳುವ ಮಾತಿನಲ್ಲೇ ನಮ್ಮ ಅಮ್ಮ ಅಷ್ಟೇನೂ ಗ್ರೇಟ್ ಅಲ್ಲ ಅನ್ನುವ ಅರ್ಥ ಧ್ವನಿಸುತ್ತದೆ. ಹೆತ್ತವರ ಬಗೆಗೆ ನಮ್ಮಲ್ಲಿ ಅಭಿಪ್ರಾಯಗಳು ಮೂಡುವಂತೆಯೇ ಹೊರಜಗತ್ತಿನ ವ್ಯಕ್ತಿ ಮತ್ತು ಸಂಗತಿಗಳ ಬಗ್ಗೆ ಗೌರವಾದರ ಅಥವಾ ತಿರಸ್ಕಾರಗಳು ಮೂಡುತ್ತವೆ. ಆದರೆ ಅವುಗಳನ್ನು ಬಹಿರಂಗವಾಗಿ ನಾನು ಇಂಥದ್ದನ್ನು ಮಾತ್ರ ಗೌರವಿಸುತ್ತೇನೆ ಅಂತ ಹೇಳಿಕೊಳ್ಳುವುದರ ಹಿಂದೆ ಆ ವ್ಯಕ್ತಿ ಅಥವಾ ಸಂಗತಿಯ ಜೊತೆಗೆ ನಮ್ಮನ್ನು ನಾವು ಜೋಡಿಸಿಕೊಳ್ಳುವುದರ ಮೂಲಕ ನಮ್ಮ ಅಸ್ತಿತ್ವವನ್ನು ಹಾಗೂ ತಮ್ಮ ವ್ಯಕ್ತಿತ್ವದ ಪೊಳ್ಳು ಔನ್ನತ್ಯವನ್ನು ಸಾಬೀತುಪಡಿಸುವ ಉದ್ದೇಶವಿರುತ್ತದೆ ಅಷ್ಟೇ. ವೈಯಕ್ತಿಕವಾಗಿ ನಾವು ಯಾರನ್ನು ಗೌರವಿಸುತ್ತೇವೆ, ಯಾರನ್ನು ಇಲ್ಲ ಅಂತ ಬಹಿರಂಗವಾಗಿ ಹೇಳಿಕೊಳ್ಳುವ ಅಗತ್ಯ ಇರುವುದಿಲ್ಲ. ಅದು ನಮ್ಮ ಮನಸ್ಸಿನಲ್ಲಿಯೇ ಇದ್ದರೆ ಚೆಂದ.

No comments:

Post a Comment