ಅಂಕಣಗಳು›
ಪ್ರತಿಸ್ಪಂದನ | ಎಚ್.ಎಸ್.ಶಿವಪ್ರಕಾಶ್ ಆಗಮೋಕ್ತವಾಗಿ ಪ್ರಾರಂಭವಾದರೂ ಮಾದಾರ ಚನ್ನಯ್ಯ-,ದೇವರ ದಾಸಿಮಯ್ಯ -ಬಸವಾದಿ ಪ್ರಮಥರ ಮೂಲಕ ಒಂದು ವಿಶಾಲಭಿತ್ತಿ ಮತ್ತು ವ್ಯಾಪ್ತಿಯನ್ನು ಪಡೆದುಕೊಂಡ ವೀರಶೈವ ಲಿಂಗಾಯತ ಸಮಾಜದ ಸ್ವರೂಪ ಮತ್ತೆ ಚರ್ಚೆಯಲ್ಲಿದೆ. ಈಚೆಗೆ ವೀರಶೈವ ಮಹಾಸಭೆಯವರು ತಾವು ಹಿಂದೂ ಧರ್ಮದ ಭಾಗವಲ್ಲ, ತಮ್ಮದು ಒಂದು ಸ್ವತಂತ್ರ ಧರ್ಮವಾಗಿರುವುದರಿಂದ ತಮಗೆ ಪ್ರತ್ಯೇಕ ಧರ್ಮದ ಸ್ಥಾನ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ನೀಡಿದ್ದು ಈಗಾಗಲೇ ಕೇಂದ್ರ ಸರ್ಕಾರ ಈ ಮನವಿಯನ್ನು ನಿರಾಕರಿಸಿದೆ.
ಮಹಾಸಭೆಯ ವಿಚಾರವನ್ನು ಅನುಮೋದಿಸದ ಪ್ರೊ.ಚಿದಾನಂದ ಮೂರ್ತಿಯವರಂಥ ಹಿರಿಯರೂ ಕೆಲವು ಗೌರವಾನ್ವಿತ ಸಂಪ್ರದಾಯ ಪರಾಯಣ ಮಠಾಧಿಪತಿಗಳೂ ವೀರಶೈವ ಧರ್ಮದ ಪ್ರತ್ಯೇಕ ಅಸ್ತಿತ್ವವನ್ನೊಪ್ಪದೆ ಅದು ಹಿಂದೂ ಧರ್ಮದ ಒಂದು ಭಾಗವೆಂದು ಘಂಟಾಘೋಷವಾಗಿ ಸಾರಿದ್ದಾರೆ.
ಈ ಬಗ್ಗೆ ಇತ್ತೀಚೆಗೆ ನಾನೂ ಯೋಚಿಸತೊಡಗಿದ್ದೇನೆ. ಕಾರಣ ನಾನು ವೀರಶೈವ ಕುಟುಂಬವೊಂದರಲ್ಲಿ ಹುಟ್ಟಿದ್ದು ಮಾತ್ರವಲ್ಲ. ಹಾಗೆ ಹುಟ್ಟಿದ್ದರೂ ನಾನು ವೀರಶೈವ, ಬೌದ್ಧ, ಶಾಕ್ತ ಸಾಧನಾ ಕ್ರಮಗಳ ಮೂಲಕ ಮುನ್ನಡೆದು ಕಾಶ್ಮೀರ ಶೈವದರ್ಶನದ ಸ್ಪಂದಮತವನ್ನು ನನ್ನ ವಿಶ್ವಾಸಗಳ ಚೌಕಟ್ಟನ್ನಾಗಿ ನಿರ್ಮಿಸಿಕೊಂಡಿದ್ದೇನೆ.
ಈ ಬಗ್ಗೆ ಇತ್ತೀಚೆಗೆ ನಾನೂ ಯೋಚಿಸತೊಡಗಿದ್ದೇನೆ. ಕಾರಣ ನಾನು ವೀರಶೈವ ಕುಟುಂಬವೊಂದರಲ್ಲಿ ಹುಟ್ಟಿದ್ದು ಮಾತ್ರವಲ್ಲ. ಹಾಗೆ ಹುಟ್ಟಿದ್ದರೂ ನಾನು ವೀರಶೈವ, ಬೌದ್ಧ, ಶಾಕ್ತ ಸಾಧನಾ ಕ್ರಮಗಳ ಮೂಲಕ ಮುನ್ನಡೆದು ಕಾಶ್ಮೀರ ಶೈವದರ್ಶನದ ಸ್ಪಂದಮತವನ್ನು ನನ್ನ ವಿಶ್ವಾಸಗಳ ಚೌಕಟ್ಟನ್ನಾಗಿ ನಿರ್ಮಿಸಿಕೊಂಡಿದ್ದೇನೆ.
ಒಂದು ಪಕ್ಷ ನಾನು ವೀರಶೈವೇತರನಾಗಿ ಹುಟ್ಟದಿದ್ದರೂ ಈ ಸಮಸ್ಯೆ ನನ್ನನ್ನು ಕಾಡುತ್ತಿತ್ತು. ಯಾಕೆಂದರೆ ಯಾರು ಒಪ್ಪಲಿ ಬಿಡಲಿ, ವೀರಶೈವ ದೃಷ್ಟಿಯ ಅಭಿವ್ಯಕ್ತಿಯೆಂದು ಗುರುತಿಸಲಾಗಿರುವ ಕನ್ನಡ ವಚನ ವಾಙ್ಮಯವು ಕನ್ನಡ ಭಾಷೆ ಮತ್ತು ಸಂಸ್ಕೃತಿಗಳ ಒಂದು ಬಹು ಮುಖ್ಯ ಸ್ರೋತವಾಗಿದೆ. ಅದೊಂದು ಜೀವಂತ ಧಾರೆಯಾಗಿರುವ ಕಾರಣ ಇಂದೂ ಹಲವು ಮಂದಿ ವೀರಶೈವೇತರ ಚಿಂತಕರಿಗೆ, ಕಲಾವಿದರಿಗೆ, ಸಾಮಾಜಿಕ ಆಂದೋಲನಗಳಿಗೆ ಹೊಸಹೊಸ ಸಂಪನ್ಮೂಲಗಳನ್ನೂ ಅದು ಇಂದಿಗೂ ನೀಡುತ್ತಿದೆ. ಆದ್ದರಿಂದ ಈ ಬಹುಜನಾಭಿವ್ಯಕ್್ತಿ ಸಮುಚ್ಚಯದ ತಾತ್ವಿಕ ಮತ್ತು ಧಾರ್ಮಿಕ ಚೌಕಟ್ಟುಗಳನ್ನು ಅರಿತುಕೊಳ್ಳುವುದು ಜರೂರಿಯಾಗಿದೆ.
ವೀರಶೈವದ ಸ್ವರೂಪದ ಬಗ್ಗೆ ವೀರಶೈವರಲ್ಲೇ ಇಬ್ಬಗೆಯ ದೃಷ್ಟಿಗಳಿರುವುದನ್ನು ಈಗಾಗಲೇ ಸೂಚಿಸಿದ್ದೇನೆ. ವೀರಶೈವ ಮತ್ತು ಹಿಂದೂಗಳ ಸಂಬಂಧದ ಪ್ರಶ್ನೆ ಮುನ್ನೆಲೆಗೆ ಬಂದಾಗ ಅದರ ಬೆನ್ನಲ್ಲೇ ಇನ್ನೊಂದು ಪ್ರಶ್ನೆ ಏಳುತ್ತದೆ: ಹಿಂದೂಧರ್ಮದ ಕುರಿತ ಸರ್ವಾನುಮತವಾದ ವ್ಯಾಖ್ಯೆ ಯಾವುದಾದರೂ ಇದೆಯೆ?
ಹಿಂದೂ ಎಂಬುದರ ಅರ್ಥವಿರಲಿ, ಆ ಶಬ್ದವೇ ಹಾದಿ ತಪ್ಪಿಸುವಂಥದೆಂದು ಕೆಲವು ಜನ ಪ್ರಭೃತಿಗಳು ವಾದಿಸಿದ್ದಾರೆ. ಹಿಂದೂ ಎಂಬ ಶಬ್ದ ಮತ್ತು ಪರಿಕಲ್ಪನೆ ಎರಡೂ ವಸಾಹತುಕಾಲದಲ್ಲಿ ನಮ್ಮ ಮೇಲೆ ಹೇರಲ್ಪಟ್ಟವೆಂದು ಪ್ರೊ. ಬಾಲಗಂಗಾಧರ ಅವರು ಸಮರ್ಥವಾಗಿ ವಾದಿಸಿದ್ದಾರೆ. ಅದಕ್ಕೂ ಮುಂಚಿತವಾಗಿ ಕನ್ನಡದ ಮಹಾನ್ ಚಿಂತಕ-, ವಿದ್ವಾಂಸರಾದ ಶಂಬಾ ಜೋಷಿಯವರು ತಮ್ಮ ಹಲವು ವಿದ್ವತ್ಪೂರ್ಣ ಬರಹಗಳಲ್ಲಿ ಹೇಳಿದ್ದನ್ನು ಹೀಗೆ ಅಡಕಗೊಳಿಸಬಹುದು: ನಾಲ್ಕು ವೇದಗಳಲ್ಲಾಗಲಿ, ಆರು ಶಾಸ್ತ್ರಗಳಲ್ಲಾಗಲಿ, ಹನ್ನೆರಡು ಪ್ರಧಾನ ಉಪನಿಷತ್ತುಗಳಲ್ಲಾಗಲಿ, ಹದಿನೆಂಟು ಪುರಾಣಗಳಲ್ಲಾಗಲಿ, ಇಪ್ಪತ್ನಾಲ್ಕು ದಿವ್ಯಾಗಮಂಗಳಲ್ಲಾಗಲಿ, ಅಸಂಖ್ಯಾತ ತಂತ್ರಾಗಮಗಳಲ್ಲಾಗಲಿ,ಭಕ್ತಿ ವಾಙ್ಮಯದಲ್ಲಾಗಲಿ ಎಲ್ಲಿಯೂ ಗೋಚರಿಸದ ಈ ಶಬ್ದವನ್ನು ಗ್ರೀಕರು ಮೊದಲಾಗಿ ಹೊರನಾಡ ಹಲ್ಲೆಕೋರರು ಸಿಂಧೂನದಿ ಇತ್ತಲ ಕಡೆಗೆ ವಾಸಿಸುತ್ತಿದ್ದ ಜನಾಂಗದವರನ್ನು ಗುರುತಿಸಲು ಬಳಸತೊಡಗಿದರು.
ಪರಕೀಯರು ಕೊಟ್ಟ ಈ ಪದವನ್ನು ನಾವು ಅವಿಮರ್ಶಾತ್ಮಕವಾಗಿ ಒಪ್ಪಿಕೊಂಡದ್ದು ನಮ್ಮ ಸಾಮೂಹಿಕ ಮಾನಸಿಕ ಅವನತಿಯ ಒಂದು ಕುರುಹು. ಹಲವು ಕೃತಿಗಳಲ್ಲಿ ಅವರು ಮುಂದಿಟ್ಟಿರುವ ಈ ವಾದವನ್ನು ಪ್ರವಾಹಪತಿತರ ಕರ್ಮ ಹಿಂದೂ ಧರ್ಮ ಎಂಬ ಚಿಂತನಾಪ್ರಚೋದಕ ಪುಸ್ತಕದಲ್ಲಿ ವಿಶೇಷವಾಗಿ ಚರ್ಚಿಸಿದ್ದಾರೆ.
ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಹಿಂದೂ ಎಂಬ ಶಬ್ದ ಪ್ರಚಲಿತವಾಗಿದ್ದಕ್ಕೆ ಉದಾಹರಣೆಯೆಂದರೆ ‘ಹಿಂದೂರಾಯ ಸುರತ್ರಾಣ’ ಎಂಬ ಬಿರುದು ಆಗಿನ ದಾಖಲೆಗಳಲ್ಲಿ ವಿಜಯನಗರದ ಅರಸರಿಗೆ ಅನ್ವಯಿಸಲ್ಪಟ್ಟಿರುವುದು. ಆದರೆ ಆ ಕಾಲದ ಬೇರೆ ಕೃತಿಗಳಲ್ಲಿ ಉದಾಹರಣೆಗೆ ಹರಿಹರ, ರಾಘವಾಂಕ, ಕುಮಾರವ್ಯಾಸ, ಚಾಮರಸಾದಿಗಳಲ್ಲಿ-- ಈ ಪದದ ಪ್ರಯೋಗ ಕಾಣಸಿಗುವುದಿಲ್ಲ. ಹೀಗೆ ಕಾವ್ಯ-ಶಾಸ್ತ್ರಾದಿಗಳಲ್ಲಿ ನಾಪತ್ತೆಯಾಗಿರುವ ಈ ಪದವು ಇವತ್ತು ಇಷ್ಟೊಂದು ಪರವಿರೋಧ ನಿಲುವುಗಳನ್ನು ಸೃಜಿಸುತ್ತಿರುವುದನ್ನು ಕಂಡಾಗ ಅಲ್ಲಮನ ಒಂದು ಮಾತು ನೆನಪಾಗುತ್ತದೆ: ‘ಇಲ್ಲದ ಮಾಯೆಯನಹುದೆಂದು ಭ್ರಮಿಸಿದರೆ ಕಣ್ಣ ಮುಂದಿನ ಮಾಯೆಯಾಗಿ ಕಾಡಿತ್ತು ನೋಡಾ’.
ಹಲ್ಲೆಕೋರರು ಮತ್ತು ನಂತರದ ಆಡಳಿತಗಾರರು ಹೇರಿದ ಈ ಶಬ್ದವನ್ನು ನಾವು ಈ ಮಟ್ಟಿಗೆ ಸಂಭ್ರಮಿಸುತ್ತಿರು ವುದೇ ಒಂದು ದೊಡ್ಡ ತಮಾಷೆ. ಮಹಾರಾಷ್ಟ್ರದ ದಲಿತ ಗೆಳೆಯ ರೊಬ್ಬರು ನನಗೆ ಹೇಳಿದರು: ಬಾಬಾಸಾಹೇಬರ ಸ್ಫೂರ್ತಿಯಿಂದ ಬೌದ್ಧಧರ್ಮ ಸ್ವೀಕರಿಸಿದ ದಲಿತ ಜನಾಂಗದ ಹಲವರು ಜನಗಣತಿಯವರ ಬಳಿ ನೋಂದಾಯಿಸುವಾಗ ಧರ್ಮ ಎಂಬ ಕಾಲಮಿನಲ್ಲಿ ಬೌದ್ಧ ಎಂದು ಬರೆಸುತ್ತಾರೆ. ಆದರೆ ಈ ವಿಚಾರ ಜನಗಣತಿಯವರಿಗೆ ಅರ್ಥ-ವಾಗದ ಕಾರಣ ಅವರು ಅದನ್ನು ಹಿಂದೂ ಎಂದು ತಿದ್ದಿಬಿಡುತ್ತಾರೆ. ವೀರಶೈವ ಮಹಾಸಭೆಯವರು ಈಚೆಗೆ ಸಮಸ್ತ ವೀರಶೈವರಿಗೆ ತಾವು ಜನಗಣತಿಯಲ್ಲಿ ಹಿಂದೂಧರ್ಮೀಯರು ಎಂಬುದಕ್ಕೆ ಬದಲಾಗಿ ವೀರಶೈವ ಎಂದು ಬರೆಸಬೇಕೆಂದು ಕರೆ ಕೊಟ್ಟಿದ್ದರಂತೆ.
ಆದರೆ ಅದನ್ನು ಜನಗಣತಿಯವರಾಗಲಿ, ಸರ್ಕಾರವಾಗಲಿ ಅಂಗೀಕರಿಸಿಲ್ಲ ವೆಂಬುದು ಸ್ಪಷ್ಟವಾಗಿದೆ. ಇನ್ನು ಸಂವಿಧಾನದ ಮತ್ತು ಕಾನೂನಿನ ದೃಷ್ಟಿಯಿಂದ ನೋಡಿದಾಗ ಯಾರು ಮುಸ್ಲಿಂ ಮತ್ತು ಕ್ರೈಸ್ತ ಧರ್ಮೀ ಯರಲ್ಲವೋ ಅವರೆಲ್ಲರೂ ಹಿಂದೂ ಗಳೆಂದು ಒಪ್ಪಿಕೊಂಡ ಹಾಗೆ ಕಾಣುತ್ತದೆ. ಆದರೆ ಹಿಂದೂಗಳೆಂದು ಕರೆಯಲಾದ ಹಲಮುಖೀ ಬಹುಸ್ತರೀಯ ಜನಗಳಿಗೆ ಸಮಾನವಾದ ಮತ್ತು ಸಾಮಾನ್ಯವಾದ ನಂಬಿಕೆಗಳು, ಆಚರಣೆಗಳು ಇವೆಯೆ? ಆಧುನಿಕ ಭಾರತದ ನಿರ್ಮಾತೃ ಗಳಾದ ಗಣ್ಯರು ಹಿಂದೂ ಧರ್ಮದ ಬಗ್ಗೆ ಪರಸ್ಪರ ವಿರುದ್ಧವಾದ ವ್ಯಾಖ್ಯೆಗಳನ್ನು ನೀಡಿದ್ದಾರೆ. ಇವರು ಈಗಾಗಲೇ ಅಸ್ತಿತ್ವದಲ್ಲಿರುವ ಒಂದು ಧರ್ಮವನ್ನು ವ್ಯಾಖ್ಯಾನಿಸುತ್ತಿದ್ದಾರೋ ಅಥವಾ ಪರಂಪರೆಯಿಂದ ತಮಗೆ ಅನುಕೂಲವಾದದ್ದನ್ನು ಕಲೆಹಾಕಿ ಇದೇ ಹಿಂದೂ ಧರ್ಮ ಅನ್ನುತ್ತಿದ್ದಾರೋ ಎಂಬ ಅನುಮಾನ ಮೂಡುತ್ತದೆ.
ಮಹಾತ್ಮಗಾಂಧಿಯವರು ಪ್ರಶಂಸಿಸಿದ ಹಿಂದೂಧರ್ಮ ಅವರದೇ ನಿರ್ಮಾಣ. ಅಹಿಂಸೆಯೇ ಹಿಂದೂಧರ್ಮದ ಸಾರೋದ್ಧಾರವೆಂದು ತಿಳಿದಿದ್ದ ಅವರು ಯುದ್ಧಕರ್ಮ-ವನ್ನು ಬೋಧಿಸುವ ಭಗವದ್ಗೀತೆಗೂ ಅಹಿಂಸಾಪರ ವ್ಯಾಖ್ಯೆ ನೀಡಿಬಿಟ್ಟರು. ಇದಕ್ಕೆ ವಿರುದ್ಧ ದಿಶೆಯಲ್ಲಿ ಬಾಲಗಂಗಾಧರ ತಿಲಕರು ಗೀತೆಯಲ್ಲಿ ಹೋರಾಟದ ಸಂದೇಶವನ್ನು ಗುರುತಿಸಿದರು. ಆದರೆ ಹಿಂದೂಗಳೆಂದು ಕರೆಯಲಾಗುವ ಬಹುಸಂಖ್ಯಾತರಿಗೆ ಭಗವದ್ಗೀತೆ ಏನೆಂಬುದೇ ಗೊತ್ತಿಲ್ಲ. ಭಾರತದ ಅಧಿಕಾಂಶ ಆದಿವಾಸಿಗಳ ಧರ್ಮಾಚರಣೆಗಳಿಗೂ ಹಿಂದೂಗಳ ಧರ್ಮಾಚರಣೆಗಳೆಂದು ಕರೆಯಲಾಗುವ ಯಜ್ಞ, ಹವನ, ಪೂಜೆ-ಪುನಸ್ಕಾರಗಳಿಗೂ ಯಾವುದೇ ಸಂಬಂಧವಿಲ್ಲ. ದಲಿತರು ಹಿಂದೂ ಸಮಾಜದ ಭಾಗ ಖಂಡಿತಾ ಅಲ್ಲವೆಂದು ಬಾಬಾಸಾಹೇಬರು ಸೂರ್ಯ ಸ್ಪಷ್ಟವಾಗಿ ವಾದಿಸಿದರು. ಮಹಾತ್ಮ ಗಾಂಧಿಯವರು ದಲಿತರನ್ನು ಹಿಂದೂ ಸಮುದಾಯದ ಹೊರಗಿಡಲು ಎಂದೂ ತಯಾರಿರಲಿಲ್ಲ.
ಹಿಂದೂಧರ್ಮಪರ ಇರುವವರು ಹೀಗೆ ವಾದಿಸಿಯಾರು: ಹಾಗಿದ್ದರೆ ಶಿವ, ರಾಮ, ಕೃಷ್ಣ ಮುಂತಾದ ದೇವರುಗಳನ್ನು ಭಾರತದಾದ್ಯಂತ ಆರಾಧಿಸುತ್ತಾರಲ್ಲ, ಅದನ್ನೇ ಯಾಕೆ ಹಿಂದೂಧರ್ಮದ ಬುನಾದಿಯೆಂದು ಒಪ್ಪಬಾರದು? ಈ ವಾದದಲ್ಲಿ ಹಲವು ಸಂದಿಗ್ಧಗಳಿವೆ. ಬಹುತೇಕ ಆದಿವಾಸಿ ಜನಾಂಗಗಳಿಗೆ ಉದಾಹರಣೆಗೆ ನಾಗಾ ಬುಡಕಟ್ಟಿನವರಿಗೆ ಅಥವಾ ಸಂತಾಲ-ರಿಗೆ ಇದು ಅನ್ವಯಿಸುವುದೇ ಇಲ್ಲ. ಹಿಂದೂ ಪರಂಪರೆ ದೈವತಗಳನ್ನು ಒಪ್ಪಿಕೊಂಡ ಆದಿವಾಸಿಗಳು ಈ ದೇವತೆಗಳಿಗೆ ನೀಡುವ ಉದ್ದೇಶ, ಆಚರಣೆಗಳು ಪೂರ್ತಿ ಭಿನ್ನ. ಉದಾಹರಣೆಗೆ ಅಸ್ಸಾಮಿನ ರಾಭಾ ಜನಾಂಗೀಯರು ತಮ್ಮನ್ನು ಶಿವಧರ್ಮದವರೆಂದು ಕರೆದುಕೊಳ್ಳುತ್ತಾರೆ. ಆದರೆ ಅವರ ಶಿವ ಅವರ ಬುಡಕಟ್ಟು ದೇವತೆಯ ಸೋದರ.
ಅವರ ವಾರ್ಷಿಕ ವಿಧಿಗಳಲ್ಲಿ ಶಿವನಿಗೆ ಹಂದಿ ಮಾಂಸ ಮತ್ತು ಅಕ್ಕಿಕಳ್ಳುಗಳನ್ನು ಪ್ರಸಾದವಾಗಿ ನೀಡುತ್ತಾರೆ. ಶಿವನನ್ನು ತಮ್ಮ ಕುಲಮೂಲದವನೆಂದು ನಂಬುವ ಹಿಮಾಚಲಪ್ರದೇಶದ ಗದರ್ ಸಮು-ದಾಯದವರು ಸಂಸ್ಕೃತ ಪರಂಪರೆಗೆ ಭಿನ್ನವಾದ ತಮ್ಮದೇ ಆದಿವಾಸಿ ಶಿವಪುರಾಣವನ್ನು ಒಪ್ಪುತ್ತಾರೆ. ಮಣಿಮಾಃಏಶ್ವರ ಂಂದಿರದಲ್ಲಿ ನಡೆಯುವ ಅವರ ವಾರ್ಷಿಕ ವಿಧಿಗಳಲ್ಲಿ ಮಾಂಸಾಹಾರ ಅವಿಭಾಜ್ಯ ಅಂಗ. ಅವರ ಪ್ರಕಾರ ಶಿವ ತಮ್ಮ ಪಶುಪಾಲಕ ಜನಾಂಗದ ಮೂಲ ಪುರುಷ. ಛತ್ತೀಸಗಡದ ಸತನಾಮಿ ಪಂಥದವರನ್ನು- ಇವರೆಲ್ಲಾ ದಲಿತ ಜನಾಂಗದವರು ವೈಷ್ಣವರನ್ನಾಗಿ ನೋಡಲಾಗುವುದಿಲ್ಲ. ಅವರು ರಾಮಭಕ್ತರು. ಆದರೆ ಅವರ ರಾಮ ಕಬೀರಪಂಥದಲ್ಲಿರುವಂತೆ ಒಬ್ಬ ದೇವತೆಯಲ್ಲ, ಒಂದು ತತ್ವ. ರಾಮಾಯಣದ ರಾಮ ಅವರಿಗೆ ಹೊರತು. ನಿಗಮಾಗಮಾಚರಣೆಗಳನ್ನು ಪಾಲಿಸುವ ಹಿಂದೂಗಳು ಮತ್ತು ಮೇಲೆ ಹೆಸರಿಸಿದಂತಹ ಬುಡಕಟ್ಟು ಜನಾಂಗಗಳವರೂ ಒಂದೇ ಧರ್ಮಕ್ಕೆ ಸೇರಿದವರೆನ್ನಲು ಯಾವುದೇ ವಸ್ತುನಿಷ್ಠ ಆಧಾರಗಳಿಲ್ಲ.
ರಾಮಾಯಣ, ಮಹಾಭಾರತ-ಗಳನ್ನೂ ಹಿಂದೂ ಧರ್ಮದ ಸಂಕೇತಗಳೆನ್ನಲಾಗು-ವುದಿಲ್ಲ. ಯಾಕೆಂದರೆ ನಮ್ಮಲ್ಲಿ ಹಲವಾರು ಆದಿವಾಸಿ ಮತ್ತು ಜನಪದ ಧರ್ಮೀಯರು ಇಂದಿಗೂ ರಾಮಾಯಣ, ಮಹಾಭಾರತಗಳನ್ನು ನಿತ್ಯನೂತನವಾಗಿ ಸೃಜಿಸುತ್ತಿರುತ್ತಾರೆ. ಸಂಸ್ಕೃತ ರಾಮಾಯಣ- ಮಹಾಭಾರತಗಳಿಗೂ ಆದಿವಾಸಿ ಮತ್ತು ಜನಪದ ರಾಮಾಯಣ-, ಮಹಾಭಾರತಗಳಿಗೂ ಅಜಗಜಾಂತರ ವ್ಯತ್ಯಾಸ. ಉದಾಹರಣೆಗೆ ಗುಜರಾತಿನ ಭಿಲ್ ಜನಾಂಗದ ಮಹಾಭಾರತವಾಗಲಿ ಕರ್ನಾಟಕದ ಹಕ್ಕಿಪಿಕ್ಕೆ ಮಹಾಭಾರತಗಳು ಎತ್ತಿ ಹಿಡಿಯುವುದು ಪುರುಷಶೌರ್ಯವನ್ನಲ್ಲ, ಸ್ತ್ರೀ ಶೌರ್ಯವನ್ನು. ಭಿಲ್ ಮಹಾಭಾರತದಲ್ಲಿ ಅರ್ಜುನ ದ್ರೌಪದಿಯನ್ನು ಆದಿಶಕ್ತಿಯೆಂದು ಅರ್ಚಿಸುತ್ತಾನೆ.
ಅಲ್ಲದೆ ರಾಮಾಯಣ-, ಮಹಾಭಾರತದ ಪಾರಮ್ಯ ಹಿಂದೂಗಳೆಂದು ಕರೆಯಲಾಗುವ ಅನೇಕ ಪಂಥೀಯರಿಗೆ ಅಪಥ್ಯ. ಉದಾಹರಣೆಗೆ ನಾನು ಹುಟ್ಟಿದ ವೀರಶೈವ ಸಮುದಾಯದಲ್ಲಿ ರಾಮಾಯಣ-ಮಹಾಭಾರತ-ಭಗವದ್ಗೀತೆಗಳಿಗೆ ಯಾವ ಸ್ಥಾನವೂ ಇಲ್ಲ. ಇದೇ ಮಾತು ಜೈನ, ಬೌದ್ಧ ಮತ್ತು ಸಿಖ್ ಧರ್ಮೀಯರಿಗೆ ಮತ್ತು ಹಲವು ಶೈವ, ವೈಷ್ಣವ, ಶಾಕ್ತ ಪಂಥಗಳಿಗೂ ಅನ್ವಯಿಸುತ್ತದೆ.
ಒಟ್ಟಿನಲ್ಲಿ ಹಿಂದೂಧರ್ಮೀಯರೆಂದು ಆಳುವ ವರ್ಗದವರು, ಹಿಂದುತ್ವವಾದಿಗಳು, ಧರ್ಮನಿರಪೇಕ್ಷವಾದಿಗಳು, ಕ್ರಾಂತಿಕಾರಿಗಳು ಯಾರನ್ನು ಗುರುತಿಸುತ್ತಾರೋ ಅವರ ಆಚಾರಗಳಿಗೂ ಅವರ ಬಗ್ಗೆ ವ್ಯಾಖ್ಯಾನಿಸುವ ಈ ಮಹನೀಯರುಗಳ ವಿಚಾರಗಳಿಗೂ ಯಾವುದೇ ಅಂಟುನಂಟುಗಳಿಲ್ಲ. ಯಹೂದಿ ಧರ್ಮೀಯರಿಗೆ ಸ್ಪಷ್ಟವಾದ ಧರ್ಮಗ್ರಂಥಗಳ ಪರಂಪರೆಯಿದೆ. ಆ ಧರ್ಮಾನುಯಾಯಿಗಳನ್ನು ಗುರುತಿಸಲು ಬೇಕಾದ ಸ್ಪಷ್ಟ ವಸ್ತುನಿಷ್ಠ್ಟ ಆಚರಣೆಗಳು, ಸಂಸ್ಥೆಗಳು, ನಂಬಿಕೆಗಳು ಇವೆ. ಹಿಂದೂ ವಿವಾಹ ಕಾನೂನಿಗೊಳಪಡುವ ಹಲವು ಪಂಥಗಳಿಗೆ- ವೀರಶೈವರಿಗೆ, ಸಿಖ್ಖರಿಗೆ, ಕಬೀರ್ ಪಂಥೀಯರಿಗೆ- ತಮ್ಮದೇ ಆದ ಗ್ರಂಥಾವಳಿಗಳು, ಗುರುಪರಂಪರೆಗಳು ಇವೆ. ಆದರೆ ಸಮಸ್ತ ಹಿಂದೂಗಳಿಗೆ ಈ ರೀತಿಯ ಸಾಮಾನ್ಯ ಲಕ್ಷಣಗಳಿಲ್ಲ. ಶಂಕರಾಚಾರ್ಯ ಮಠಗಳನ್ನಾಗಲೀ ಅಷ್ಟಮಠಗಳನ್ನಾಗಲಿ ಮೇಲುಜಾತಿಯವರ ದೇವಸ್ಥಾನಗಳನ್ನಾಗಲಿ ಸಮಸ್ತ ಹಿಂದುಗಳ ಸಂಸ್ಥೆಗಳೆಂದು ಕರೆಯಬರುವುದಿಲ್ಲ.
ಉದಾರವಾದಿ ಹಿಂದೂಗಳು ಈ ಬಹುಕುಳತೆಯನ್ನೇ ಹಿಂದೂ ಧರ್ಮದ ಲಕ್ಷಣವೆಂದು ಕರೆದಿದ್ದಾರೆ. ಇದೇ ತರ್ಕವನ್ನು ಮೂಂಬರಿರಿಸಿ ಗಾಂಧಿ ಮಹಾತ್ಮರು ನಿಜವಾದ ಹಿಂದುವೊಬ್ಬ ನಿಜವಾದ ಕ್ರೈಸ್ತನೂ ನಿಜವಾದ ಮುಸ್ಲಿಮನೂ ಆಗಿರುತ್ತಾನೆ ಅಂದರು. ಸ್ವಾಮಿ ವಿವೇಕಾನಂದರು ತಮ್ಮ ಷಿಕಾಗೋ ಭಾಷಣದಲ್ಲಿ ಹಿಂದೂ ಧರ್ಮದ ಸಾರವೆಂಬೋಪಾದಿಯಲ್ಲಿ ಶಿವಮಹಿಮ್ನ ಸ್ತ್ರೋತ್ರದ ಋಜುಕುಟಿಲ ನಾನಾ ಪಥಜುಷಾಂ ನೃಣಾನೇಕೋ ಗಮ್ಯತ್ವಮಸಿ ನದೀನಾಂ ಸಾಗರಂ ಇವ ಎಂಬ ವಾಕ್ಯವನ್ನು ಉದಾಹರಿಸಿದರು. ಆದರೆ ಈ ವಾಕ್ಯವನ್ನು ವಿಶಾಲಾರ್ಥದಲ್ಲಿ ತೆಗೆದುಕೊಂಡರೆ ಎಲ್ಲ ಧರ್ಮಗಳೂ ಒಂದೇ ಎಂಬ ಅಭಿಪ್ರಾಯ ಬರುತ್ತದೆ. ಅಲ್ಲದೆ ಆ ಸುಂದರ ಸ್ತ್ರೋತ್ರದ ಕರ್ತೃವಾದ ಆಚಾರ್ಯ ಪುಷ್ಪದಂತ ಹಿಂದೂ ಎಂಬ ಪದವನ್ನು ಬಳಸಿಯೇ ಇಲ್ಲ.
ಆಧುನಿಕ ಪ್ರಜಾಸತ್ತಾತ್ಮಕ ವಾತಾವರಣದಲ್ಲಿ ನಮ್ಮ ಅಸ್ತಿತ್ವಗಳನ್ನು ನಾವೇ ನಿರ್ಮಿಸಿಕೊಳ್ಳುವ ಸ್ವಾತಂತ್ರ್ಯವಿದೆ. ಹಿಂದೂ ಧರ್ಮೀಯರೆಂದು ಹಾಗೆ ಕರೆಯಲ್ಪಟ್ಟವರಲ್ಲಿ ಕೆಲವರು ಆ ಹಣೆಪಟ್ಟಿಯನ್ನೇ ಇಚ್ಛಿಸಿದರೆ ಅದು ಅವರ ಇಷ್ಟ. ಆದರೆ ಈ ಹಣೆಪಟ್ಟಿ ವೀರಶೈವರಿಗಾಗಲಿ ,ಜೈನರಿಗಾಗಲಿ, ಬೌದ್ಧರಿಗಾಗಲಿ, ಕಬೀರ, -ರಾಯ್ ದಾಸ್-ಸತನಾಮೀ ಪಂಥದವರಿಗಾಗಲೀ ಒಪ್ಪಿತವಾಗುವುದೆಂದು ನನಗನಿಸುವುದಿಲ್ಲ. ಇವರೆಲ್ಲರೂ ಪ್ರತ್ಯೇಕ ಧರ್ಮಗಳಾಗಿ ಪರಿಗಣಿಸಲ್ಪಟ್ಟರೆ ದೇಶದ ಐಕ್ಯತೆಗೆ ಕುತ್ತು ಬರುವುದೆಂದೂ ಅನಿಸುವುದಿಲ್ಲ.
ಏಕಂ ಸದ್ವಿಪ್ರಾ ನಾಂ ಬಹುದಾ ವದಂತಿ (?//)ಎಂಬ ವೇದೋಕ್ತಿಯು ನಿಜವಾದರೆ ನಾವು ಒಂದು ಧರ್ಮ, ಸಂಹಿತೆ, ಆಚಾರ, ದೇವತೆಯನ್ನು ಯಾರ ಮೇಲೂ ಹೇರಬೇಕಾಗಿಲ್ಲ. ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ಬೇಕು. ಈ ನಿಟ್ಟಿನಲ್ಲಿ ಬಸವಾದಿ ಪ್ರಮಥರು ಆಗಮೋಕ್ತ ಶೈವಧರ್ಮವನ್ನು ವಿಸ್ತರಿಸಿ ಪುನಾರಚಿಸಿದ ಪಂಥಾನುಯಾಯಿಗಳಾದ ವೀರಶೈವಧರ್ಮೀಯರು ತಮ್ಮವೇ ಆದ ಸ್ಪಷ್ಟ ಆಚಾರ-ವಿಚಾರಗಳಿರುವಾಗ ಯಾರೋ ಹೇರಿದ ಅಸ್ಪಷ್ಟ ಹಿಂದೂ ಎಂಬ ಅಸ್ತಿತವವನ್ನು ಒಪ್ಪಿಕೊಳ್ಳಬೇಕಿಲ್ಲ.
ಇನ್ನಾದರೂ ವೀರಶೈವ ಧರ್ಮವನ್ನು, ಅದೇ ರೀತಿ ಕಬೀರಪಂಥ, ರಾಯ್ ದಾಸ್ ಪಂಥ, ಭೀಮಾಭೋಯಿ ಇತ್ಯಾದಿ ಪಂಥಗಳನ್ನು ಸ್ವತಂತ್ರ ಧರ್ಮಗಳೆಂದು ಗುರುತಿಸಿ ಸಮಾನತೆ ಮತ್ತು ಸ್ವಾತಂತ್ರ್ಯಗಳ ಬುನಾದಿಯ ಮೇಲೆ ವಿವಿಧತೆಯಲ್ಲಿ ಒಂದಾಗಿ ನಿಂತ ಒಟ್ಟು ಸಂಸ್ಕೃತಿ ನಿರ್ಮಾಣವಾಗಲು ನೆರವಾಗಲೆಂದು ನನ್ನ ಹಾರೈಕೆ. ಇದನ್ನೇ ರಾಷ್ಟ್ರಕವಿ ಕುವೆಂಪು ಅವರು ಸರ್ವಜನಾಂಗದ ಸುಂದರ ತೋಟ ಎಂದು ಬಣ್ಣಿಸಿದ್ದಾರೆ.
No comments:
Post a Comment